ದೀಪಾವಳಿ ಇನ್ನೇನು ಬಂದೇ ಬಿಟ್ಟಿತು. ಎಲ್ಲೆಡೆ ಸಡಗರ ಸಂಭ್ರಮದ ವಾತಾವರಣ. ಮಣ್ಣಿನ ಹಣತೆ ಕೊಳ್ಳಲು, ಇನ್ನೂ ವಿದ್ಯುದೀಪ ಕೊಳ್ಳಲು, ಆಕಾಶ ಬುಟ್ಟಿ ಕೊಳ್ಳಲು ಜನರ ಸಂತೆ ಎಲ್ಲೆಡೆ.
ಮನೆಯಲ್ಲಿ ಸಿಹಿ ತಿಳಿಸು, ಇನ್ನಿತರ ತಯಾರಿ ಮಾಡುವುದು ನಡೆದಿದೆ.
ಯಾಕೆ ಈ ದೀಪಾವಳಿ ಆಚರಣೆ?
ದೀಪಾವಳಿ, ಹೆಸರೇ ಹೇಳುವಂತೆ ಎಲ್ಲೆಡೆ ದೀಪಗಳ ಬೆಳಗಿ ಸಂತೋಷದಿಂದ ದೇವರ ಪೂಜೆ ಆರತಿ, ಮಾಡಿ, ಆಚರಣೆ ಮಾಡುವುದು.
ಶ್ರೀರಾಮನು ಲಂಕಾಧಿಪತಿ ರಾವಣನನ್ನು ಕೊಂದು, 14 ವರ್ಷದ ವನವಾಸ ಮುಗಿಸಿ ತಿರುಗಿ ಅಯೋಧ್ಯೆಗೆ ಮರಳುತ್ತಾನೆ.
ಅವನು ರಾವಣನನ್ನು ಸೋಲಿಸಿದ್ದು ವಿಜಯದಶಮಿಯಂದು, ಅದಕ್ಕಾಗಿ ವಿಜಯದಶಮಿಯನ್ನು ವಿಜಯದ ಸಂಕೇತವಾಗಿ ಆಚರಿಸುತ್ತಾರೆ.ತಿರುಗಿ ಅಯೋಧ್ಯೆಗೆ ಬಂದದ್ದು ದೀಪಾವಳಿಯಂದು. ರಾಮನ ದಾರಿಯನ್ನೇ ಎದುರು ನೋಡುತ್ತಿದ್ದ, ಕೌಶಲ್ಯೆ, ಭರತ, ಸಮಸ್ತ ಪ್ರಜೆಗಳಿಗೆ ಬಹಳ ಸಂತೋಷ ಉಂಟಾಯಿತು.
ರಾಮನ ಆಗಮನದಿಂದ ಇಡೀ ದೇಶವೇ ಬೆಳಕಾಗಲಿ ಎಂದು ಭರತ ತನ್ನ ಪ್ರಜೆಗಳಿಗೆ ಆಜ್ಞೆ ಮಾಡಿದ. ಅದಕ್ಕಾಗಿ ಎಲ್ಲ ಕಡೆ ದೀಪ ಹಚ್ಚಿ ನಲಿದು, ಶ್ರೀರಾಮನನ್ನು ಅಯೋಧ್ಯೆ ಜನರು ಸ್ವಾಗತಿಸಿದರು.
ಆದರ್ಶ ಪುರುಷ ರಾಮನನ್ನು ಪ್ರಜೆಗಳು ದಾರಿಯಲ್ಲಿ ಎಲ್ಲ ಕಡೆ ಬೆಳಕಿರುವಂತೆ ಮಾಡಿ ಸ್ವಾಗತ ಮಾಡಿ ಆನಂದಿಸಿ ಅಭಿನಂದನೆ ಸಲ್ಲಿಸಿದರು. ಮುಂದೆ ಕೆಲವು ದಿನಗಳಲ್ಲೇ ಶ್ರೀರಾಮನ ಪಟ್ಟಾಭಿಷೇಕವಾಯಿತು ಶ್ರೀರಾಮ ರಾಜ್ಯ ಪುನಃ ಪ್ರತಿಷ್ಠಾಪನೆ ಆಯಿತು.
ಇನ್ನೊಂದು ಪುರಾಣದ ಪ್ರಕಾರ, ಶ್ರೀಕೃಷ್ಣನು ನರಕಾಸುರ ಎಂಬ ಅಸುರನನ್ನು ಸಂಹರಿಸಿ, ದೀಪಾವಳಿ ಚತುರ್ದಶಿಯಂದು ನಸುಕಿನಲ್ಲಿ ಬರುತ್ತಾನೆ. ಅವನ ಪಟ್ಟದ ರಾಣಿಯಾದ ರುಕ್ಮಿಣಿ, ಇತರ ರಾಣಿಯರೊಂದಿಗೆ ಸೇರಿ ಶ್ರೀಕೃಷ್ಣನಿಗೆ ಆರತಿ ಮಾಡಿ ತೈಲಾಭ್ಯಂಜನ ಮಾಡಿಸುತ್ತಾರೆ. ಅದರ ದ್ಯೋತಕವಾಗಿ ಮನೆ ಮನೆಗಳಲ್ಲಿ ಅದಕ್ಕಾಗಿ ನಸುಕಲ್ಲೇ ಆರತಿ ಮಾಡುತ್ತಾರೆ.
ಪಾಂಡವರು ಪಗಡೆ ಅಡಿ ರಾಜ್ಯ ಸೋತು ಇನ್ನೆಲ್ಲ ಸಂಪತ್ತನ್ನು ಸೋಲುತ್ತಾರೆ. ಮುಂದೆ ವನವಾಸ, ಅಜ್ಞಾತವಾಸ ಮುಗಿಸಿ ಆಮೇಲೆ ದುರ್ಯೋಧನ ರಾಜ್ಯ ಮರಳಿ ಕೊಡಲು ಒಪ್ಪದಾದಾಗ ಯುದ್ಧ ಮಾಡಿ ಕೌರವರನ್ನು ಸೋಲಿಸಿ ತಮ್ಮ ರಾಜ್ಯ ಪಡೆಯುತ್ತಾರೆ.
ಮನರಂಜನೆ ಆಟವಾಗಿ ಪಗಡೆ ಆಟವೂ ಚಾಲ್ತಿಯಲ್ಲಿದೆ. ಮನೆ ಮನೆಗಳಲ್ಲಿ ಅಂಗಡಿಗಳಲ್ಲಿ ಧನಲಕ್ಷ್ಮೀಯನ್ನು ಪೂಜಿಸಿ ಸೌಭಾಗ್ಯ, ಸಿರಿತನ ಬೇಡುತ್ತಾರೆ.
ಭಾವ ಬಿದಿಗೆ ಇನ್ನೊಂದು ವಿಶೇಷ ದಿನ. ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೇಟಿ ನೀಡಿ ಅವಳ ಅತಿಥ್ಯ, ಉಡುಗೊರೆ ಸ್ವೀಕರಿಸುತ್ತಾನೆ, ತಂಗಿಗೆ ಆಶೀರ್ವಾದ ಮಾಡುತ್ತಾನೆ. ಈ ದಿನ ಸಂತೋಷದಿಂದ ನರಕದಲ್ಲಿ ಇದ್ದ ಜೀವರನ್ನು ನರಕ ಪಾಶದಿಂದ ಬಿಡುಗಡೆಗೊಳಿಸುತ್ತಾನೆ. ಆ ದ್ಯೋತಕವಾಗಿ ಈ ದಿನದಂದು ತಂಗಿ ಅಣ್ಣನನ್ನು ಕರೆದು ಹಬ್ಬದ ಊಟ ಮಾಡಿಸಿ ಉಡುಗೊರೆ ಕೊಟ್ಟು, ಆರತಿ ಮಾಡಿ ತವರಿನ ಸಂಬಂಧ ಗಟ್ಟಿಗೊಳಿಸುತ್ತಾಳೆ, ಮರುದಿನ ಅಕ್ಕನ ತದಿಗೆ ಇದ್ದಾಗ ಅಣ್ಣ ತನ್ನ ತಂಗಿ, ಅಕ್ಕಂದಿರನ್ನು ಕರೆದು ಆತಿಥ್ಯ ನೀಡುತ್ತಾನೆ, ಹೀಗೇ ಅಣ್ಣತಂಗಿಯರು ಪರಸ್ಪರ ಭೇಟಿಯಾಗಿ ಸಂತೋಷದಿಂದ ಹಬ್ಬ ಆಚರಿಸುತ್ತಾರೆ.
ಹೀಗೇ ದೀಪಾವಳಿ ಮನೆಯಲ್ಲಿ ಅಲ್ಲದೇ ಮನದಲ್ಲೂ ಬೆಳಕು ತುಂಬಿ ಕತ್ತಲೆಯನ್ನು ಹೋಗಲಾಡಿಸಿ ಸಂತೋಷ ತರುತ್ತದೆ.
- ರೇಖಾ ಮುತಾಲಿಕ್, ಬಾಗಲಕೋಟ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ