ಉಜಿರೆ: ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ‘ಸಮರ್ಪಣ 2024’ ಇಂದು ಜರಗಿತು. ಅಧ್ಯಾಪಕರನ್ನು ವಿದ್ಯಾರ್ಥಿಗಳು ಚೆಂಡೆವಾದನ ತಂಡದೊಂದಿಗೆ ಇಂದ್ರಪ್ರಸ್ಥ ಸಭಾಂಗಣಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದರು. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಆತ್ಮಾವಲೋಕನ ಮಾಡಿಕೊಂಡು ತಮ್ಮ ವ್ಯಕ್ತಿತ್ವ ವಿಕಸನದ ಜೊತೆ ಸಕಾರಾತ್ಮಕ, ರಚನಾತ್ಮಕ, ಸೃಜನಾತ್ಮಕವಾಗಿ ಬೆಳವಣಿಗೆ ಹೊಂದಬೇಕು ಎಂದರು.
“ಭಾರತೀಯ ಸಂಸ್ಕೃತಿಯಲ್ಲಿ ತುಂಬಾ ಮೌಲ್ಯಗಳಿವೆ. ಅವುಗಳಲ್ಲಿ ಉಪಕಾರ ಸ್ಮರಣೆಯೂ ಒಂದಾಗಿದೆ. ಈ ದಿನ ಶಿಕ್ಷಕರನ್ನು ಗೇಲಿ, ಅಪಹಾಸ್ಯ ಮಾಡುವ ದಿನವಲ್ಲ. ಬದಲಿಗೆ ಶಿಕ್ಷಕರಿಗೆ ಗೌರವ ಹಾಗೂ ಕೃತಜ್ಞತೆ ನೀಡುವ ದಿನ. ಅಧ್ಯಾಪಕರು ಹೇಳಿದ ಸಲಹೆ, ಸೂಚನೆಗಳನ್ನು ಎಷ್ಟು ಪಾಲಿಸುತ್ತೇವೆ ಎಂದು ವಿದ್ಯಾರ್ಥಿಗಳು ಅವಲೋಕನ ಮಾಡಿಕೊಳ್ಳ ಬೇಕು” ಎಂದು ಅವರು ಕಿವಿಮಾತು ಹೇಳಿದರು.
“ಮಾಹಿತಿ ನಮ್ಮ ಬೆರಳ ತುದಿಯಲ್ಲಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನಾಗುತ್ತಿದೆ ಎಂದು ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಆದರೆ ಕಲಿಯುವಿಕೆ ಎನ್ನುವುದು ತಾಂತ್ರಿಕವಾಗಿದ್ದಲ್ಲ. ಇದು ಎರಡು ಜೀವಂತ ವ್ಯಕ್ತಿಗಳ ಸಂದರ್ಶನವಾಗಿದೆ. ಇದರಲ್ಲಿ ಜೀವನ ಶಿಕ್ಷಣವನ್ನು ನೀಡಬೇಕು ಹಾಗೂ ಜೀವನದಲ್ಲಿ ಮುಂದೆ ಬರುವ ಸಮಸ್ಯೆಯನ್ನು ಎದುರಿಸುವ ಆತ್ಮಸ್ಥರ್ಯವನ್ನು ನೀಡಬೇಕು” ಎಂದರು. ಉಪ ಪ್ರಾಂಶುಪಾಲ ಎಸ್. ಎನ್. ಕಾಕತ್ಕರ್ ಮಾತನಾಡಿ, ಭಾರತೀಯ ಸಂಸ್ಕೃತಿ ವಿಭಿನ್ನ. ಅದರಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನವಿದೆ. ಭಾರತದಲ್ಲಿ ಗುರುವನ್ನು ದೇವರ ಸಮಾನವೆಂದು ಭಾವಿಸುತ್ತಾರೆ. ಇದು ಬೇರೆಲ್ಲೂ ಕಾಣದ ಸಂಸ್ಕೃತಿ ಎಂದರು.
“ಗುರು ಹಾಗೂ ಶಿಕ್ಷಕನ ನಡುವೆ ವ್ಯತ್ಯಾಸವಿದೆ. ನಮಗೆ ಯಾರು ಪ್ರೇರಣೆ ನೀಡುತ್ತಾನೋ ಅವನು ಗುರು. ಪ್ರಕೃತಿ ನಮ್ಮ ಮೊದಲ ಗುರು. ಜೀವನ ಮೌಲ್ಯ, ಪ್ರೇರಣೆ, ಶಿಕ್ಷೆಯೊಂದಿಗೆ ಶಿಕ್ಷಣ ನೀಡುವವನು ಶಿಕ್ಷಕ” ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ, ಅತ್ಯುತ್ತಮ ಆಡಳಿತ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ 2024ನೇ ಸಾಲಿನ 'ಅಧ್ಯಾಪಕ ಭೂಷಣ' ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಆಡಳಿತ ಕುಲಸಚಿವೆ ಡಾ. ಶಲೀಪ್ ಎ.ಪಿ., ಪರೀಕ್ಷಾಂಗ ಕುಲಸಚಿವೆ ನಂದಾ ಕುಮಾರಿ, ಕಲಾ ನಿಕಾಯದ ಡೀನ್ ಡಾ. ಶ್ರೀಧರ್ ಭಟ್, ವಿಜ್ಞಾನ ನಿಕಾಯದ ಡೀನ್ ಸವಿತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮನೋರಂಜನೆ ಕಾರ್ಯಕ್ರಮಗಳ ಮೂಲಕ ರಂಜಿಸಿದರು.
ವಿದ್ಯಾರ್ಥಿಗಳಾದ ಕಿಶೋರ್, ದೀಕ್ಷಿತಾ, ಸಿಂಚನ ಕಲ್ಲೂರಾಯ ಶಿಕ್ಷಕರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು ಮತ್ತು ಶಿಕ್ಷಕರಿಗೆ ವಿದ್ಯಾರ್ಥಿಗಳು ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಲಾ ಸಂಘದ ಅಧ್ಯಕ್ಷ ಆಮೀರ್ ಸ್ವಾಗತಿಸಿದರು. ಸೀಮಾ ಜಹಾಂಗೀರ್ ವಂದಿಸಿದರು. ವೈದೇಹಿ ಹಾಗೂ ವೀಕ್ಷಾ ಎಸ್. ವಿ. ಕಾರ್ಯಕ್ರಮ ನಿರೂಪಿಸಿದರು. ಮನೋರಂಜನಾ ಕಾರ್ಯಕ್ರಮವನ್ನು ಸೃಜನ್, ಸುಜಿತ್ ಹಾಗೂ ಮಾನಸ ಅಗ್ನಿಹೋತ್ರಿ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ