ಹರಿದಾಸರು ಮತ್ತು ಗಮಕಿಗಳ ಕೃಪೆಯಿಂದ ಭಾಗವತ ಪುರಾಣದ ಕೆಲವು ಭಾಗಗಳು ಜನಪ್ರಿಯವಾಗಿದ್ದರೂ, ತತ್ವಪೂರ್ಣವಾದ ಈ ಮಹಾಕಾವ್ಯದ ಸಂಪೂರ್ಣ ಕೃತಿಗಳು ದೊರಕುವುದು ಬಹಳ ಅಪರೂಪವೇ ಸರಿ. ಅದರಲ್ಲೂ ಸರಳ ಸುಂದರ ಮನೋಜ್ಞ ಪದ್ಯರೂಪದ ಕನ್ನಡ ಭಾವಾನುವಾದ! ಕನ್ನಡ ಸಾಹಿತ್ಯಕ್ಕೆ ಶ್ರೀ ವರದರಾಜ ಅಯ್ಯಂಗಾರ್ಯರ ಕಾಣಕೆ ಅದ್ಭುತವಾದದ್ದು. ಸಕಲ ಭಾಗವತರು ಅವರಿಗೆ ಚಿರ ಋಣಿಗಳು.
ಅಷ್ಟಾದಶ ಮಹಾಪುರಾಣಗಳಲ್ಲಿ ಭಾಗವತಕ್ಕೆ ಶ್ರೇಷ್ಠಸ್ಥಾನವಿರಲು ಅನೇಕ ಕಾರಣಗಳಿವೆ. ವಿಷ್ಣುವಿನ ಪೂರ್ಣಾವತಾರವಾದ ಶ್ರೀಕೃಷ್ಣಚರಿತೆಯನ್ನು ಈ ಗ್ರಂಥದಲ್ಲಿರುವಂತೆ ಬೇರೆಲ್ಲೂ ವಿಸ್ತರಿಸಿಲ್ಲ. ಹರಿಗುಣ ಸ್ತುತಿ, ಶರಣಜನ ಸಂಕೀರ್ತನೆ, ಅವತಾರಗಳ ಮಹಿಮೆ, ಹಾಗೂ ಪ್ರೇಮ, ಭಕ್ತಿ, ವೈರಾಗ್ಯ ಯೋಗಗಳ ನಿರೂಪಣೆ ಈ ಗ್ರಂಥದಲ್ಲಿ ವಿಶೇಷ.
ರಾಮಾಯಣದಷ್ಟು ಇಲ್ಲದಿದ್ದರೂ ಸಾಕಷ್ಟು ವೈವಿಧ್ಯಮಯವಾಗಿ ಬಂದಿದೆ. ಹಳಗನ್ನಡದಲ್ಲಿ ಪಂಪಭಾರತ, ಜಗನ್ನಾಥವಿಜಯ ಮುಂತಾದ ಕೃತಿಗಳೂ, ಕನ್ನಡ ಭಾಗವತ ಶ್ರೀಕೃಷ್ಣ ಪರೀಕ್ಷಣಂ ಮುಂತಾದ ನಡುಗನ್ನಡ ಕೃತಿಗಳೂ, ಹೊಸಗನ್ನಡದಲ್ಲಿ ಶ್ರೀಹರಿಚರಿತೆ, ಶ್ರೀಭಗವಚ್ಚರಿತೆ ಮುಂತಾದ ಕಾವ್ಯಗಳೂ ಪ್ರಸಿದ್ಧವಾಗಿವೆ. ಖಂಡರೂಪದ ಕವಿತೆ, ನೀಳ್ಗಾವ್ಯ, ರೂಪಕಗಳೂ, ಕೀರ್ತನೆಗಳೂ ಧಂಡಿಯಾಗಿವೆ. ಆದರೆ ಚಾಟು ವಿಠಲನಾಥನ ಕನ್ನಡ ಭಾಗವತದಂತೆಯೇ ಸಮಗ್ರವಾಗಿ ಸಂಸ್ಕೃತ ಭಾಗವತವನ್ನು ಕನ್ನಡಕ್ಕೆ ಪದ್ಯರೂಪದಲ್ಲಿ ಪಂಚ ಛಂದಸ್ಸುಗಳಲ್ಲಿ (ರಗಳೆ, ತ್ರಿಪದಿ, ಚೌಪದಿ, ವೃತ್ತ, ಷಟ್ಪದಿ) ಕನ್ನಡಕ್ಕೆ ತಂದವರು 20ನೇ ಶತಮಾನದಲ್ಲಿ ಭಕ್ತಕವಿ ಕೆ.ವಿ. ವರದರಾಜಯ್ಯಂಗಾರ್ ಒಬ್ಬರೇ ಎಂದರೆ ಅತಿಶಯೋಕ್ತಿಯಲ್ಲ.
ಕನ್ನಡದಲ್ಲಿ, 20ನೇ ಶತಮಾನ ಮಹಾಕಾವ್ಯಗಳ ಯುಗದಲ್ಲಿ ಸಾಮಾಜಿಕ, ಧಾರ್ಮಿಕ, ಪೌರಾಣಿಕ, ಐತಿಹಾಸಿಕ ಮಹಾಕಾವ್ಯಗಳು ಸುಮಾರು 40 ಕ್ಕಿಂತ ಹೆಚ್ಚಾಗಿ ಪ್ರಕಟವಾಗಿವೆ. ಇದರಲ್ಲಿ ಒಂದು ವಿಶೇಷವೆಂದರೆ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಛಂದಸ್ಸಿನಲ್ಲಿದೇ, 20ಕ್ಕೂ ಹೆಚ್ಚಿನ ಮಹಾಕಾವ್ಯಗಳು ರಚಿತವಾಗಿವೆ. ಮಹಾಛಂದಸ್ಸನ್ನು ಬಿಟ್ಟು ಬೇರೆ ಛಂದಸ್ಸಿನಲ್ಲಿ ರಚಿಸಿರುವ ಮಹಾಕಾವ್ಯಗಳಲ್ಲಿ ಸಾಕಷ್ಟು ಕೃತಿಗಳು ಏಕ ಛಂದಸ್ಸಿನಲ್ಲಿ ರಚಿತವಾಗಿದ್ದರೆ ಎಲ್ಲೋ ಕೇಲವೇ ಕೆಲವು ಮಹಾಕಾವ್ಯಗಳು ವಿವಿಧ ಛಂದಸ್ಸುಗಳಲ್ಲಿ ರಚಿತವಾಗಿವೆ. ಕನ್ನಡಕ್ಕೊಂದು ವಿಶಿಷ್ಟ ಕೊಡುಗೆ ಆಗಿದೆ. ವರದರಾಜಯ್ಯಂಗಾರ್ ಅವರು ಸಂಸ್ಕೃತ-ಕನ್ನಡಗಳಲ್ಲಿ ಉಭಯ ಭಾಷಾ ವಿಶಾರದರಾಗಿದ್ದು ಈಗಾಗಲೇ ಭಜಗೋವಿಂದಂ, ಶ್ರೀಕೃಷ್ಣಕರ್ಣಾಮೃತ, ಈಶಾವಾಸ್ಯೋಪನಿಷತ್ತು, ಧನ್ಯಾಷ್ಟಕ ಮುಂತಾದ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ್ದಾರೆ.
ಕೃತಿ: ಸಂಪೂರ್ಣ ಕನ್ನಡ ಭಾಗವತ (ಎರಡು ಸಂಪುಟ)
ಪ್ರಕಾಶಕರು /ಲೇಖಕರು: ಶ್ರೀ ಕೆ.ವಿ. ವರದರಾಜ ಅಯ್ಯಂಗಾರ್
ವಿವರಗಳಿಗೆ ದೂರವಾಣಿ : 9632461250
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ