ಮೂಡುಬಿದಿರೆ: ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನದ ಜೊತೆ ಸಂಘಟನಾತ್ಮಕ ವಾಗಿ ಒಂದುಗೂಡಿದರೆ ಯಾವುದೇ ಕಾರ್ಯದಲ್ಲಿಯೂ ಯಶಸ್ಸು ಪಡೆದುಕೊಳ್ಳಲು ಸಾಧ್ಯ. ಮೂಡುಬಿದಿರೆ ತುಳುಕೂಟದ ಸದಸ್ಯರು ಈ ನಿಟ್ಟಿನಲ್ಲಿ ಮಾಡಿದ ಸಾಧನೆ ಪ್ರಶಂಸನೀಯ ಎಂದು ಖ್ಯಾತ ವಕೀಲರು ಹಾಗೂ ಮೂಡುಬಿದಿರೆ ತುಳುಕೂಟದ ಗೌರವಾಧ್ಯಕ್ಷರೂ ಆಗಿರುವ ಎಂ. ಬಾಹುಬಲಿ ಪ್ರಸಾದ್ ಅವರು ತಿಳಿಸಿದರು.
ಅಖಿಲ ಭಾರತ ತುಳು ಒಕ್ಕೂಟ(ರಿ.) ಮಂಗಳೂರು ಇದರ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ‘ಜಾನಪದ ಉಚ್ಛಯ – 2024 ನಮ್ಮ ತುಳುನಾಡ್ ಕಲಾ ಪಂಥ’ ಸ್ಪರ್ಧೆಯಲ್ಲಿ ಐವತ್ತು ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದ ಮೂಡುಬಿದಿರೆ ತುಳುಕೂಟದ ಸದಸ್ಯರು ಮತ್ತು ಕಲಾವಿದರ ತಂಡಕ್ಕೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತುಳುಕೂಟದ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಅವರು ಕೂಡಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು. ಕಲಾಪಂಥದ ಸ್ಪರ್ಧೆಯಲ್ಲಿ ಒಟ್ಟು ಹದಿಮೂರು ತಂಡಗಳು ಭಾಗವಹಿಸಿದ್ದು ಮೂಡುಬಿದಿರೆ ತುಳುಕೂಟದ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಇಪ್ಪತ್ತು ನಿಮಿಷಗಳ ಅವಧಿಯ ಈ ಪ್ರದರ್ಶನದ ಸಾಹಿತ್ಯ, ಪರಿಕಲ್ಪನೆ ಮತ್ತು ನಿರ್ದೇಶನದ ಹೊಣೆ ಹೊತ್ತು ಅದರ ಯಶಸ್ಸಿಗಾಗಿ ಶ್ರಮಿಸಿದ ಪ್ರಶಾಂತ್ ಕೈಕಂಬ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರದರ್ಶನದಲ್ಲಿ ಪಾಲ್ಗೊಂಡ ಮೂವತ್ತಕ್ಕೂ ಹೆಚ್ಚಿನ ಸದಸ್ಯರು ಮತ್ತು ಕಲಾವಿದರನ್ನು ಪ್ರಮಾಣಪತ್ರದೊಂದಿಗೆ ಸತ್ಕರಿಸಲಾಯಿತು. ತುಳುಕೂಟದ ಅಧ್ಯಕ್ಷರಾದ ತೋಡಾರುಗುತ್ತು ಧನಕೀರ್ತಿ ಬಲಿಪರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಒಗ್ಗಟ್ಟಿನಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರನ್ನು, ಸಹಕರಿಸಿದ ಸರ್ವರನ್ನೂ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಈಗಾಗಲೇ ಇದರ ಪ್ರದರ್ಶನಕ್ಕೆ ಹಲವು ಕಡೆಗಳಿಂದ ಬೇಡಿಕೆ ಬಂದಿದ್ದು ಮುಂದೆ
ಪ್ರದರ್ಶನ ನೀಡುವಲ್ಲಿ ಎಲ್ಲರ ಸಹಕಾರ ನಿರೀಕ್ಷಿಸುವುದಾಗಿಯೂ ತಿಳಿಸಿದರು.
ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿ ಕೆ.ವೇಣುಗೋಪಾಲ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು| ನಿಷ್ಕಾ ರೈ ಅವರ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀಮತಿ ಚೇತನಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ ಜಿನೇಂದ್ರ ಹೆಗ್ಡೆ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ