ಮಂಗಳೂರು: ಮಂಗಳೂರಿನ ಪ್ರತಿಷ್ಟಿತ ಫಿಜಾ ನೆಕ್ಸಸ್ ಮಾಲ್, ಪಾಂಡೇಶ್ವರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪರಿಸರ ಸ್ನೇಹಿ ಗ್ರೀನ್ ಹೀರೋ ಆಫ್ ಇಂಡಿಯಾ ಎಂಬ ಖ್ಯಾತಿಯನ್ನು ಹೊಂದಿರುವ ಗುಜರಾತ್ ಸರ್ಕಾರದ ವಿಶೇಷ ರಾಜ್ಯ ಪ್ರಶಸ್ತಿ ವಿಜೇತರಾದ ಮೂಲತಃ ಸುಳ್ಯದ ಡಾ. ರಾಧಾಕೃಷ್ಣನ್ ನಾಯರ್ ಗುಜರಾತ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಮಾರಂಭ ಉದ್ಘಾಟಿಸಿದರು. ನಾಯರ್ ಸಂಘಟನೆಯು ಸಮಾಜಕ್ಕೆ ನೀಡಿದ ಕೊಡುಗೆಗಳು ಶ್ಲಾಘಿಸಿ ಪರಿಸರ ಸಂರಕ್ಷಣೆ ಮತ್ತು ಕಾಡುಗಳನ್ನು ಬೆಳೆಸುವ ಮಹತ್ವವನ್ನು ವಿವರಿಸಿದರು.
ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ (ರಿ) ಮಂಗಳೂರಿನ ಘಟಕದ ಅಧ್ಯಕ್ಷ ಮುರಳಿ. ಹೆಚ್ ಸಭಾಧ್ಯಕ್ಷತೆಯನ್ನುವಹಿಸಿ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯು ಹಲವು ದಶಕಗಳಿಂದ ಕರ್ನಾಟಕದಲ್ಲಿ ಜನಿಸಿದ ಅಥವಾ ಉದ್ಯೋಗ ನಿಮಿತ್ತ ಬಂದ ನಾಯರ್ ಬಾಂಧವರ ಸಂಘಟನೆಯಾಗಿದ್ದು ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಾ ಸ್ಥಳಿಯ ಮತ್ತು ಮಲಯಾಳಿ ಸಂಘಟನೆಗಳೊಂದಿಗೆ ಸಾಮರಸ್ಯದಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಓಣಂ ಹಬ್ಬ ಎಲ್ಲಾ ಜಾತಿ ಬಾಂಧವರನ್ನು ಒಂದುಗೂಡಿಸುವ ರಾಷ್ಟ್ರೀಯ ಸಾಮರಸ್ಯ ಮೂಡಿಸುವ ಹಬ್ಬವಾಗಿದೆ ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ರಾಜ್ಯಸಮಿತಿಯ ಅಧ್ಯಕ್ಷ ರಾಮಚಂದ್ರನ್ ಪಾಲೇರಿ, ಮುಖ್ಯ ಕಾರ್ಯದರ್ಶಿಯಾದ ಮುರಳಿಧರನ್, ಉಪಾಧ್ಯಕ್ಷ ಪಿ.ಕೆ.ಎಸ್. ಪಿಳ್ಯೆ, ಯೂನಿಯನ್ ಬ್ಯಾಂಕ್ನ ವಲಯ ಪ್ರಮುಖರಾದ ಶ್ರೀಮತಿ ರೇಣು ಕೆ.ನಾಯರ್ ಭಾಗವಹಿಸಿ ಶುಭ ಹಾರೈಸಿದರು.
ಈ ದಿನಾಚರಣೆಯ ಅಂಗವಾಗಿ 12 ರಾಜ್ಯಗಳಲ್ಲಿ 112 ಕಾಡುಗಳನ್ನು ಬೆಳೆಸಿ 20 ಲಕ್ಷಕ್ಕೂ ಹೆಚ್ಚಿನ ಮರಗಳನ್ನು ಬೆಳೆಸಿದ ಗ್ರೀನ್ ಹೀರೋ ಆಫ್ ಇಂಡಿಯಾ ಪ್ರಶಸ್ತಿ ಗಳಿಸಿದ ಡಾ.ರಾಧಾಕೃಷ್ಣನ್ ನಾಯರ್, ಅಮೋಘ ಸಾದನೆಗೈದ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ ಚೀಫ್ ಜನರಲ್ ಮ್ಯಾನೇಜರ್ ವಿನೋದ್ ಎ.ಕೆ ಮತ್ತು ಎಂ.ಆರ್.ಪಿ.ಎಲ್ನ ನಿರ್ದೇಶಕ ನಂದಕುಮಾರ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಮಂಗಳೂರಿನ ಶಾಸಕ ವೇದವ್ಯಾಸ್ ಕಾಮತ್, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸತೀಶ್ ಕುಂಪಲ, ಕಾಂಗ್ರೆಸ್ ಮುಖಂಡ, ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ, ಕಾರ್ಪೋರೇಟರ್ ವಿನಯರಾಜ್, ಇನ್ಕಮ್ ಟ್ಯಾಕ್ಸ್ ಕಮೀಷನರ್ ರಮಿತ್ ಚೆನ್ನಿತ್ತಲ, ಪ್ರಾವಿಡೆಂಟ್ ಫಂಡ್ ಕಮೀಷನರ್ ಎ.ಪಿ.ಉಣ್ಣಿಕೃಷ್ಣನ್, ಕನ್ನಡ ಮತ್ತು ತುಳು ಚಲನಚಿತ್ರದ ನಟ, ನಿರ್ದೇಶಕರಾದ ಕಾಂತಾರ ಚಿತ್ರ ಖ್ಯಾತಿಯ ಸ್ವರಾಜ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಕೇರಳ ಸಮಾಜಂನ ಅಧ್ಯಕ್ಷ ಟಿ.ಕೆ.ರಾಜನ್, ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಸಂದೇಶ್ ಎಂ, ನಾರಾಯಣ ಸಾಂಸ್ಕಾರಿಕ ವೇದಿಯ ಅನಿಲ್ ದಾಮೋದರನ್, ಮಲಯಾಳಿ ಸಮೂಹದ ಅಧ್ಯಕ್ಷ ರಿಂಜು, ಕೈರಳಿ ಕಲಾವೇದಿ ಸುರತ್ಕಲ್ನ ಅಧ್ಯಕ್ಷ ನಿಕ್ಲಾ ಬೋಸ್, ಕರಾವಳಿ ಫ್ರೆಂಡ್ಸ್ ಸರ್ಕಲ್ ಮಂಗಳೂರಿನ ಅಧ್ಯಕ್ಷ ಕೆ.ಕೆ.ರಾಧಾಕೃಷ್ಣನ್ ಭಾಗವಹಿಸಿ ಶುಭ ಕೋರಿದರು.
ಓಣಂ ಹಬ್ಬದ ಮುಖ್ಯ ಅಂಗವಾದ ಕೇರಳೀಯ ಶೈಲಿಯ ಸಸ್ಯಹಾರಿ ಓಣಂ ಸದ್ಯವು (ಓಣಂ ಔತಣ) ಕಾರ್ಯಕ್ರಮದ ವಿಶೇಷತೆಯಾಗಿತ್ತು ಮತ್ತು ಭಾಗವಹಿಸಿದ ಎಲ್ಲರು ಅಭಿನಂದಿಸುವಂತಿತ್ತು.
ಕೇರಳೀಯ ಶೈಲಿಯ ಹಲವಾರು ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಯಿತು. ಹಿಂದೂ ಸಂಸ್ಕೃತಿಯ ತಿರುವಾದಿರ ನೃತ್ಯ, ಮುಸ್ಲಿಂ ಜನಾಂಗದ ಓಪ್ಪನ ನೃತ್ಯ, ಕ್ರೈಸ್ತ ಜನಾಂಗದವರ ಮಾರ್ಗಂ ನೃತ್ಯ, ಕೇರಳದ ಪಾರಂಪರಿಕ ಹೋರಾಟ ಕಲೆ ಕಳರಿಪಯಟ್ ಒಳಗೊಂಡಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಳ್ಳುವಂತಿತ್ತು. ಓಣಂ ದಿನಾಚರಣೆಯ ಅಂಗವಾಗಿ ಸಾರ್ವಜನಿಕವಾಗಿ ಹೂವಿನ ರಂಗೋಲಿ ಸ್ಫರ್ದೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಸುಮಾರು ಇಪ್ಪತ್ತು ತಂಡಗಳು ಭಾಗವಹಿಸಿದ್ದು ಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಆಕಾರದ ಹೂವಿನ ರಂಗೋಲಿಯನ್ನು ಫಿಜಾ ನೆಕ್ಸಸ್ ಮಹಲಿನಲ್ಲಿ ಸಿಂಗರಿಸಿ ಪ್ರದರ್ಶಿಸಿದ್ದು ವಿಶೇಷತೆಯಾಗಿತ್ತು.
ಕಾರ್ಯಕ್ರಮವನ್ನು ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಕಾರ್ಯದರ್ಶಿ ವಿ.ಎಂ. ಸತೀಶನ್ ಸ್ವಾಗತಿಸಿದರು ಮತ್ತು ಜತೆ ಖಜಾಂಚಿ ಸತೀಶ್ ಕುಮಾರ್ ಆರ್ ಎಲ್ ವಂದಿಸಿದರು. ಮಾತೃಭೂಮಿ ಮಲಯಾಳಿ ದೈನಿಕದ ವರದಿಗಾರ ರಿಂಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕಿ ಶ್ರೀಮತಿ ಸಿಂಧು ಎಸ್ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ