ಬೆಂಗಳೂರು: ನವಂಬರ್ 9 ರಿಂದ 11ರವರೆಗೆ ಉಡುಪಿಯಲ್ಲಿ ವಿಜಯದಾಸರ ಆರಾಧನಾ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಸಹಯೋಗದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ದಾಸ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಬೆಂಗಳೂರು ಬಸವನಗುಡಿ ಪುತ್ತಿಗೆ ಮಠ ಗೋವರ್ಧನ ಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು.
ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ ಬಿ ಗೋಪಾಲ್ ಆಚಾರ್ ರವರು ಉಡುಪಿಯಿಂದ ಆಗಮಿಸಿ ಕಾರ್ಯಕ್ರಮದ ರೂಪರೇಷೆ ಯನ್ನು ವಿವರಿಸುತ್ತಾ ರಾಜಾಂಗಣದಲ್ಲಿ ಪರಮ ಪೂಜ್ಯ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಉದ್ಘಾಟನೆ, ಬೇಲಿ ಮಠದ ಪೂಜ್ಯ ಶಿವಾನುಭವ ಶಿವಮೂರ್ತಿ ಮಹಾಸ್ವಾಮಿಗಳಿಂದ ದಿಕ್ಸೂಚಿ ಭಾಷಣ, ದೇಶದ ನಾನಾ ಭಾಗಗಳಿಂದ ಆಗಮಿಸುವ ವಿದ್ವಾಂಸರಿಂದ ವಿಜಯದಾಸರು ವರ್ಣಿಸಿದ ಉಡುಪಿಯ ಶ್ರೀ ಕೃಷ್ಣ ಎಂಬ ವಿಚಾರದ ಕುರಿತು ಪ್ರಬಂಧ ಮಂಡನೆ, ದಾಖಲೆಯ ವಿಜಯದಾಸರ ಕೀರ್ತನೆಗಳ ಸಹಸ್ರ ಕಂಠ ಗಾಯನ, ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ರಾಜ್ಯದ ನಾನಾ ಭಾಗಗಳಲ್ಲಿರುವ ದಾಸ ಸಾಹಿತ್ಯ ಪ್ರಸಾರಣೆಯಲ್ಲಿ ತೊಡಗಿರುವ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹರಿದಾಸ ವಾಹಿನಿ ಮಾಸಪತ್ರಿಕೆ ಸಂಪಾದಕ, ಖ್ಯಾತ ಹರಿದಾಸ ಸಂಶೋಧಕ ಮತ್ತು ದ್ವೈತ ವೇದಾಂತ ರಿಸರ್ಚ್ ಫೌಂಡೇಶನ್ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತ ಅನೇಕ ಗ್ರಂಥಗಳನ್ನು ರಚಿಸಿ ವಿದ್ವನ್ಮಾನ್ಯರಾಗಿರುವ ಡಾ ಎ ಬಿ ಶಾಮಾಚಾರ್ಯರವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಯಾಗಿರುವ ವಿಷಯವನ್ನು ಘೋಷಿಸಿ ಅವರನ್ನು ಗೌರವಿಸಲಾಯಿತು.
ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಟಿ ವಾದಿರಾಜ, ಅಂತಾರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನ ಕಾರ್ಯಕಾರಿ ಸಮಿತಿಯ ಕೆ.ಆರ್ ಗುರುರಾಜ ರಾವ್, ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ನಿರ್ದೇಶಕ ಡಾ. ಪರಶುರಾಮ ಬೆಟಗೇರಿ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ವಿದುಷಿ ಡಾ ವಾರುಣಿ ಜಯತೀರ್ಥ, ಪತ್ರಕರ್ತ ಸುಧೀಂದ್ರರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

