ಹಾಸನ: ಶಾಲೆಯೇ ದೇವಾಲಯ, ಮಕ್ಕಳೇ ದೇವರು. ಶಿಕ್ಷಕರೇ ಮಕ್ಕಳೆಂಬ ದೇವರನ್ನು ಪೂಜಿಸುವ ಅರ್ಚಕರು. ವಸ್ತುವೊಂದಕ್ಕೆ ಬೆಲೆ ಕಟ್ಟುವಂತೆ, ಶಾಲೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಶಿಕ್ಷಕ ವೃತ್ತಿಯು ಪ್ರಾಮಾಣಿಕ ಸೇವೆಯನ್ನು ಬೇಡುತ್ತದೆ. ಇಂತಹ ಸೇವೆಯಲ್ಲಿನ ಉತ್ಪನ್ನವೇ ವಿದ್ಯಾರ್ಥಿಗಳಾಗಿದ್ದು ಇಂದು ಸಾವಿರಾರು ವಿದ್ಯಾರ್ಥಿಗಳು ಸಾವಿರಾರು ಕೋಟಿ ಬೆಲೆ ಬಾಳುವಂತೆ ತಮ್ಮ ಸ್ವಾವಲಂಬನೆಯ ಜೀವನ ರೂಪಿಸಿಕೊಂಡಿದ್ದಾರೆ ಎಂದು ಜಿಲ್ಲಾ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣ ಗೌಡ ಹೇಳಿದರು.
ನಗರದ ಸ್ವಾಭಿಮಾನಿ ಭವನದಲ್ಲಿ ಜಿಲ್ಲಾ ಉಪನಿರ್ದೇಶಕರ ಕಛೇರಿ ವತಿಯಿಂದ ಏರ್ಪಪಡಿಸಿದ್ದ ಬೆಟ್ಟದಂತೆ ನಿಂತು ಬಡಮಕ್ಕಳ ಕಾದ ಅಕ್ಷರಸಂತ ಜೆ.ಬಿ. ತಮ್ಮಣ್ಣಗೌಡರ ವಯೋ ನಿವೃತ್ತಿಯ ಹೃದಯ ಸ್ಪರ್ಶಿ ಬೀಳ್ಕೊಡುಗೆ ಸಮಾರಂಭದಲ್ಲಿ ನೆರೆದಿದ್ದ ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣ ಸೇವೆಯೇ ನನ್ನ ನಿತ್ಯ ಪೂಜೆಯಾಗಿದ್ದು, ಶಿಕ್ಷಕ ವೃತ್ತಿ ಮತ್ತು ಶಿಕ್ಷಣಾಧಿಕಾರಿ ಹುದ್ದೆಯಲ್ಲಿ ಮಾಡಿದ ಸೇವೆ ಸಂತೃಪ್ತಿಯನ್ನು ತಂದಿದೆ. ಈ ಹಿನ್ನೆಲೆಯಲ್ಲಿ ಸಹಕರಿಸಿದ ಸರ್ವರಿಗೂ ಅನಂತ ಧನ್ಯವಾದಗಳನ್ನು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಹೆಚ್.ಕೆ. ಪಾಂಡುರವರು ಸಮಾರಂಭವನ್ನು ಉದ್ದೇಶಿಸಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಜೆ.ಬಿ. ತಮ್ಮಣ್ಣಗೌಡರು ಒಳ್ಳೆಯ ವ್ಯಕ್ತಿತ್ವದ ಮನುಷ್ಯರು. ತಮ್ಮ ಸೇವಾವಧಿಯಲ್ಲಿ ಜಾತಿ ಬೇಧ, ಮೇಲು ಕೀಳುಗಳೆಂಬ ತಾರತಮ್ಯ ಮಾಡದೆ ಎಲ್ಲರನ್ನು ಸಮಾನವಾಗಿ ಕಂಡವರು. ನಿವೃತ್ತಿಯ ನಂತರದ ಬದುಕಿನಲ್ಲಿ ಭಗವಂತನನು ಆಯಸ್ಸು ಆರೋಗ್ಯವನ್ನು ನೀಡಲೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ಬೋಧಕೇತರ ಮತ್ತು ಲಿಪಿಕ ನೌಕರರ ಸಂಘದ ಅಧ್ಯಕ್ಷ ಜಯರಾಮ್, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣೇಗೌಡ, ವಿಷಯ ಪರಿವೀಕ್ಷಕರಾದ ಶೇಖರೇಗೌಡ ಮತ್ತು ಸ್ವ ಇಚ್ಚೆಯಿಂದ ಆಗಮಿಸಿದ ಹಳೆಯ ವಿದ್ಯಾರ್ಥಿಗಳು ಜೆ.ಬಿ. ತಮ್ಮಣ್ಣ ಗೌಡರ ಕುರಿತು ಮಾತನಾಡಿದರು.
ಅಲ್ಲದೇ ಆಲೂರು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡರವರು, ಸಕಲೇಶಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪರವರು, ಹಾಸನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ರವರು, ಜಿಲ್ಲಾ ಡಯಟ್ ನ ಹಿರಿಯ ಉಪನ್ಯಾಸಕ ರಂಗನಾಥ್ ರವರು ಉಪನ್ಯಾಸಕ ಸಿ. ಕೃಷ್ಣೇಗೌಡ, ಹೆಚ್.ಎನ್. ತಮ್ಮಣ್ಣಗೌಡ, ಸೋಮಶೇಖರ್ ಮತ್ತು ಉಪನಿರ್ದೇಶಕರ ಕಛೇರಿಯ ಎಲ್ಲಾ ಸಿಬ್ಬಂದಿಗಳು, ಜಿಲ್ಲೆಯ ಶಿಕ್ಷಕ ಸಮೂಹ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸನ್ಮಾನಿಸಿ, ಗೌರವಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ