ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮೂಡುಬಿದಿರೆ- ಮೂಲ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಧಿಕೃತವಾಗಿ ನಡೆಸುವ ಸರಕಾರಿ ಕಾರ್ಯಕ್ರಮಗಳು, ಯೋಜನೆ ಅನುಷ್ಠಾನಗಳು, ಸಾರ್ವಜನಿಕ ಸಂಪರ್ಕ ಸಭೆಗಳು ಸೇರಿದಂತೆ ಬಹುತೇಕ ಸಂದರ್ಭಗಳಲ್ಲಿ ಕ್ಷೇತ್ರದ ಶಾಸಕರಾದ ತಮ್ಮನ್ನು ಆಹ್ವಾನಿಸದೇ ಏಕಪಕ್ಷೀಯವಾಗಿ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಜನಪ್ರತಿನಿಧಿಯನ್ನು ಅವಮಾನಿಸುತ್ತಿದ್ದಾರೆ. ಇದರಿಂದ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಗಂಭೀರ ಆರೋಪ ಮಾಡಿದರು.
ಇಂದು (ಸೆ.6) ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಅಧಿಕೃತ ಸರಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡದಿರುವುದನ್ನು ಖಂಡಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಬಿಜೆಪಿ ಶಾಸಕರನ್ನು ಹಾಗೂ ಅವರ ಕ್ಷೇತ್ರಗಳನ್ನು ಕಡೆಗಣಿಸುತ್ತಿದ್ದು, ಆಡಳಿತ ಯಂತ್ರವನ್ನು ಕಾಂಗ್ರೆಸ್ ಪಕ್ಷದ ಭಾಗವಾಗಿ ನಡೆಸಿಕೊಳ್ಳುತ್ತಿದೆ. ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಸಾಂವಿಧಾನಿಕವಾಗಿ ಶಾಸಕರಿಗೆ ಒದಗಿಸಲ್ಪಟ್ಟ ಹಕ್ಕುಬಾಧ್ಯತೆಗಳು ಮತ್ತು ಕ್ಷೇತ್ರದಲ್ಲಿನ ಯಾವುದೇ ಸರಕಾರಿ ಸಭೆ ಮತ್ತು ಸಮಾರಂಭಗಳನ್ನು ಶಾಸಕರ ಅಧ್ಯಕ್ಷತೆ ಅಥವಾ ಉಪಸ್ಥಿತಿಯಲ್ಲಿ ನಡೆಸುವುದು ಸಂವಿಧಾನಬದ್ಧ ನಡೆಯಾಗುತ್ತದೆ. ಶಾಸಕರ ಹಕ್ಕುಬಾಧ್ಯತೆಗಳನ್ನು ಅಧಿಕಾರಿ ವರ್ಗ ನಿರ್ಲಕ್ಷಿಸುವಂತಿಲ್ಲ. ಶಾಸಕಾಂಗದ ಘನತೆ ಗೌರವಗಳನ್ನು ಕಾಪಾಡುವ ನೈತಿಕ ಹೊಣೆಯೂ ಅಧಿಕಾರಿ ವರ್ಗದವರ ಆದ್ಯ ಕರ್ತವ್ಯ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೂಡುಬಿದಿರೆ-ಮೂಲ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಆರ್ಪಿಎಲ್ 4ನೇ ಹಂತದ ನಿರ್ವಸಿತ ಫಲಾನುಭವಿಗಳಿಗೆ ಒದಗಿಸಿಕೊಡುವ ಪರೊಹಾರ ಸೌಲಭ್ಯಗಳು, ಇತರ ಸಮಸ್ಯೆಗಳ ಕುರಿತು ಸಭೆ ಏರ್ಪಡಿಸಿದ್ದು ತಮ್ಮ ಗಮನಕ್ಕೂ ತಾರದೆ ಎರಡು ಬಾರಿ ಜಿಲ್ಲಾಧಿಕಾರಿಗಳು ತಮ್ಮದೇ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ ಎಂದು ಶಾಸಕರು ದೂರಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ತುಳು ಪಿಲಿಕುಳೋತ್ಸವ ಹಾಗೂ ಜಿಲ್ಲೆಯ ಅತ್ಯಂತ ಪ್ರಸಿದ್ಧಿಪಡೆದ ಜನಪದ ಕ್ರೀಡೆಯಾಗಿರುವ ಕಂಬಳ ಉತ್ಸವವನ್ನು ಜರುಗಿಸುವ ಕುರಿತು ಒಂದು ವಾರದ ಹಿಂದೆ ಪೂರ್ವಭಾವಿ ಸಭೆಯನ್ನ ತಮ್ಮ ಅಧ್ಯಕ್ಷತೆಯಲ್ಲೇ ನಡೆಸಿದ್ದಾರೆ. ಸೆ.4ರಂದು ಭೂಮಿಪೂಜೆ ಕೂಡ ತಮ್ಮದೇ ಅಧ್ಯಕ್ಷತೆಯಲ್ಲಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮಗಳಿಗೆ ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ನಿಯಮಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಶಾಸಕ ಕೋಟ್ಯಾನ್ ಹರಿಹಾಯ್ದರು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಸಾರ್ವಜನಿಕರಿಗೆ, ಸ್ಥಳೀಯರಿಗೆ ಬಹಳಷ್ಟು ಅನಾಹುತದ ಸಮಸ್ಯೆಗಳಾದವು. ನಾನು ಸ್ವತಃ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಸ್ಥಳೀಯ ಪಟ್ಟಣ ಪಂಚಾಯತ್ ಮತ್ತು ಏರ್ಪೋರ್ಟ್ ಅಧಿಕಾರಿಗಳನ್ನು ಕರೆದು ಸಭೆ ಮಾಡಿ ನನ್ನನ್ನು ಆಹ್ವಾನಿಸದೆ ಅವಮಾನಿಸಿದ್ದಾರೆ. ನನ್ನ ಕ್ಷೇತ್ರ ವ್ಯಾಪ್ತಿಯ ಸಸಿಹಿತ್ಲು ಬೀಚ್ ನಲ್ಲಿ ಇಂಟರ್ನ್ಯಾಷನಲ್ ಸರ್ಫಿಂಗ್ ಏರಿಯಾ ಅಭಿವೃದ್ಧಿ ಕುರಿತ ಸಭೆ, ಸರ್ಫಿಂಗ್ ಕ್ರೀಡಾಚಟುವಟಿಕೆ ಕಾರ್ಯಕ್ರಮಗಳನ್ನು ನಡೆಸಿದ್ದರೂ ಶಾಸಕನಾದ ನನ್ನನ್ನು ನಿರ್ಲಕ್ಷಿಸಿದ್ದಾರೆ. ಅಲ್ಲದೆ ಈ ಬಗ್ಗೆ ನನಗೆ ಮಾಹಿತಿಗಳನ್ನೂ ನೀಡಲ್ಲ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ದಕ. ಜಿಲ್ಲಾಧಿಕಾರಿಗಳು ಪಕ್ಷ ರಾಜಕಾರಣವನ್ನು ಪೋಷಿಸುವ ಮೂಲಕ ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ತಾರದೆ ಕಾಂಗ್ರೆಸ್ ಮುಖಂಡರನ್ನು ಮಾತ್ರ ಆಹ್ವಾನಿಸಿ ಸಭೆ ನಡೆಸುತ್ತಿದ್ದಾರೆ. ಇಂತಹ ಹಲವು ಉದಾಹರಣೆಗಳು ಇದ್ದು, ನನ್ನ ಹಕ್ಕು ಬಾಧ್ಯತೆಗಳನ್ನು ಜಿಲ್ಲಾಧಿಕಾರಿಗಳು ಉಲ್ಲಂಘಿಸುವ ಮೂಲಕ ಉದ್ದೇಶಪೂರ್ವಕ ಅವಮಾನ ಮಾಡುತ್ತಿದ್ದಾರೆ ಎಂದು ಶಾಸಕ ಕೋಟ್ಯಾನ್ ಟೀಕಿಸಿದರು.
ಈ ಕುರಿತು ವಿಧಾನಸಭಾಧ್ಯಕ್ಷರಿಗೆ ದೂರು ನೀಡಿದ್ದು, ತಮ್ಮ ಹಕ್ಕುಬಾಧ್ಯತೆಗಳ ಗೌರವಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಉಮಾನಾಥ ಕೋಟ್ಯಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರದ ಶಾಸಕ ಡಾ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಪಕ್ಷದ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಉಮಾನಾಥ ಕೋಟ್ಯಾನ್ ಅವರಿಗಾದ ಅವಮಾನದ ಪ್ರಕರಣಗಳು ತಮಗೂ ಆಗಿವೆ ಎಂದು ಡಾ ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ದನಿಗೂಡಿಸಿದರು.
ಜಿಲ್ಲಾಧಿಕಾರಿಗಳ ಮೂಲಕ ಸರಕಾರವೇ ಬಿಜೆಪಿ ಶಾಸಕರನ್ನು ಕಡೆಗಣಿಸಲು ಹುನ್ನಾರ ನಡೆಸಿದ್ದು, ಇದರ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಮೂವರೂ ಶಾಸಕರು ಎಚ್ಚರಿಕೆ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ