ಪುತ್ತೂರು: ಇಂದು ಗ್ರಾಮೀಣ ಭಾಗದಿಂದ ಅಂತರಾಷ್ಟೀಯ ಮಟ್ಟದವರೆಗೂ ಆಟಿ ತಿಂಗಳ ಆಚರಣೆ ಗಳನ್ನು ಆಚರಿಸುತ್ತ ಬರುತ್ತಿದ್ದಾರೆ. ತುಳುನಾಡಿನಲ್ಲಿ ತುಳುವರು ಆಟಿ ತಿಂಗಳಿನ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳನ್ನು ಆಚರಿಸುವುದಿಲ್ಲ. ಆಟಿ ಕೆಲೆಂಜ ಮನೆಮನೆಗೆ ಬರುತ್ತಾನೆ. ಈ ಮೂಲಕ ಊರಿಗೆ ಬಂದ ಮಾರಿ ಕಳೆಯುತ್ತಾನೆ ಎಂಬುವುದು ಜನರ ನಂಬಿಕೆ ಎಂದು ವಕೀಲ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ ತುಳು ಸಂಘ, ಪ್ರಾಚೀನ ವಸ್ತುಗಳ ಪ್ರದರ್ಶನ ಕೇಂದ್ರ, ರೋವರ್ಸ್ ರೇಂಜರ್ಸ್ ಘಟಕ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಆಟಿಯಲ್ಲಿ ವಿವಿಧ ತಿನಿಸು, ಖಾದ್ಯಗಳನ್ನು ಮಾಡಿ ತಿನ್ನುತ್ತಾರೆ. ಹಿಂದಿನ ಕಾಲದಲ್ಲಿ ಈ ತಿಂಗಳ ಸಂಧರ್ಭದಲ್ಲಿ ಹಿರಿಯರು ಬಹಳ ಕಷ್ಟವನ್ನು ಅನುಭವಿಸುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೆ. ಮೊದಲಿದ್ದ ಕಷ್ಟ ಈಗ ಇಲ್ಲ. ವೈಜ್ಞಾನಿಕ ತಂತ್ರಜ್ಞಾನದ ಕಾರಣ ದಿಂದಾಗಿ ನಾವು ಬದುಕುವ ಶೈಲಿಯು ಬದಲಾಗುತ್ತಾ ಸಾಗಿದೆ. ಇಂದು ಹೊಲ ಗದ್ದೆಗಳು ಕಣ್ಮರೆ ಯಾಗುತ್ತಿದೆ. ಇದರಿಂದ ತುಳುನಾಡಿನ ಜನಜೀವನ ಶೈಲಿ, ಆಚರಣಾ ಪದ್ಧತಿಗಳು ಇವೆಲ್ಲವೂ ಮೂಲೆಗೆ ಸೇರುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಈ ಸಂದರ್ಭದಲ್ಲಿ ಮಾತನಾಡುತ್ತಾ, ಜುಲೈ ತಿಂಗಳಿನ ಕೊನೆಯಲ್ಲಿ ಆಟಿ ತಿಂಗಳು ಪ್ರಾರಂಭಗೊಳ್ಳುತ್ತದೆ. ಈ ಸಮಯದಲ್ಲಿ ಕೃಷಿಕರು ಬೇಸಾಯದಲ್ಲಿ ತೊಡಗಿಕೊಂಡರೆ, ಸ್ವಾಮೀಜಿಗಳು ಚಾತುರ್ಮಾಸ್ಯ ವ್ರತಗಳಲ್ಲಿ ತೊಡಗಿ ಕೊಳ್ಳುತ್ತಾರೆ. ಆಟಿ ತಿಂಗಳಿನಲ್ಲಿ ಕೇವಲ ವೈವಿಧ್ಯಮಯವಾದ ತಿನಿಸುಗಳನ್ನು ತಿನ್ನುವುದು ಮಾತ್ರವಲ್ಲದೇ, ತುಳುನಾಡಿನ ಆಚರಣೆಗಳ ಮಹತ್ವ ಹಾಗೂ ಸಾಂಪ್ರದಾಯಿಕ ಆಟಗಳು, ಪಾಡ್ದನಗಳ ಬಗೆಗೂ ಕೂಡ ನಾವು ತಿಳಿದುಕೊಳ್ಳಬೇಕು. ಇಂದು ನಮ್ಮ ಕಾಲೇಜಿನಲ್ಲಿ ತುಳು ಸಂಘವು ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ತುಳುನಾಡು ಹಾಗೂ ಇಲ್ಲಿನ ಆಚರಣೆಗಳನ್ನು ತಿಳಿಸುವ ಕಾರ್ಯ ಮಾಡಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ಕಾಲೇಜಿನ ವಿಶೇಷಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಉಪಸ್ಥಿತರಿದ್ದರು. ತುಳು ಸಂಘದ ಸಂಯೋಜಕಿ ಹಾಗೂ ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್ ಸ್ವಾಗತಿಸಿ, ತುಳು ಸಂಘದ ಅಧ್ಯಕ್ಷ ಆಶಿಶ್ ಆಳ್ವ ವಂದಿಸಿ, ತೃತೀಯ ಬಿಬಿಎ ವಿಭಾಗದ ವಿದ್ಯಾರ್ಥಿನಿ ತನಿಷಾ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ