ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ವೈಷ್ಣವ ಸಂಪ್ರದಾಯದ ದಾಸ ಪಂಥದ ಅತ್ಮೋದ್ಧಾರಕ ಹರಿದಾಸ ಸಾಹಿತ್ಯವು ತನ್ನದೇ ಆದ ವೈಶಿಷ್ಟ್ಯಗಳಿಂದ ಆಕರ್ಷಣೀಯವಾಗಿದೆ. ಒಂದು ವರ್ಗಕ್ಕೆ ಮಾತ್ರ ಸೀಮಿತವಾಗದೆ ಅರಮನೆ- ಗುರು ಮನೆಗಳಲ್ಲಿ ಹಾಯ್ದು ಸಾಮಾನ್ಯ ಜನರ ಮನೆ ಮನಗಳನ್ನು ಹೊಕ್ಕು ಭಕ್ತಿಯ ಮೂಲಕ ಮುಕ್ತಿಯನ್ನು ಸೂರೆ ಗೊಳ್ಳಬೇಕೆಂದು ಬಯಸಿದ ಹರಿದಾಸರು,ತಮ್ಮ ಸುತ್ತಲಿನ ಸಮಾಜವನ್ನು ಅರಿತುಕೊಳ್ಳಲು ಹಾಗೂ ಉನ್ನತೀಕರಿಸಲು ಮಾಡಿದ ಪ್ರಾಮಾಣಿಕ ಪ್ರಯತ್ನ ಅವರ ಕೃತಿಗಳಲ್ಲಿ ಕಾಣುತ್ತದೆ.
ಹರಿದಾಸರೆಂದರೆ ಕೇವಲ ಹಾಡುಗಳನ್ನು ಹಾಡುತ್ತಾ ತಮ್ಮ ಹೊಟ್ಟೆಪಾಡಿಗಾಗಿ ಜೀವಿಸಿದವರಲ್ಲ. ಪರಮಾತ್ಮನ ಅನುಗ್ರಹಕ್ಕಾಗಿ ಭಕ್ತರ ಅಭಿವೃದ್ಧಿಗಾಗಿ ಮುಡುಪಾಗಿಟ್ಟ ಸುಜೀವಿಗಳು. ಶಾಂತಿ ಸೌಹಾರ್ದತೆಯನ್ನು ಬಿಂಬಿಸುವಲ್ಲಿ ಮೊದಲಿಗರು. ಇಲ್ಲಿ ಧರ್ಮ -ಭಕ್ತಿ -ನೀತಿ -ನಿಯಮ,ವೃತ -ದೀಕ್ಷೆ, ಸಾಮಾಜಿಕ ಕಳಕಳಿ ಸದಾಚಾರ ಸದ್ವಿಚಾರಗಳಿಂದ ಮಾನವರ ನಿತ್ಯ ಬದುಕಿಗೆ ಪ್ರತಿ ಹಂತದಲ್ಲಿಯೂ ಮಾರ್ಗದರ್ಶನ ನೀಡುವ ಸಾಹಿತ್ಯದ ಗುಣ ಹರಿದಾಸ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿದೆ.
ತಾತ್ವಿಕತೆ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಈ ಎರಡನ್ನು ಸರಿದೂಗಿಸಿ ನಡೆಯಲು ದಾಸರ ಕೀರ್ತನೆಗಳು ದಾರಿದೀಪಗಳಾಗಿವೆ. ಮಾನವನ ಮನಸ್ಸು ಧ್ರುತಿಗೆಟ್ಟಾಗ ಅವನನ್ನು ಮರುಕಳಿಸುವ ಸಂಜೀವಿನಿಯೇ ದಾಸರ ಪದಗಳು .
ಹರಿದಾಸ ಮನೆತನಕ್ಕೆ ಸೇರಿ ಪ್ರಸಿದ್ಧಿಯನ್ನು ಪಡೆದ ರಾಯಚೂರಿನ ಕಸ್ಬೆ ಮನೆತನವು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಪಾಂಡುರಂಗರಾವ್ ಕಸ್ಬೇರವರು ಪಾಂಡುವಿಠಲ ಎಂಬ ಅಂಕಿತದಿಂದ ಅನೇಕ ಪದ ಪದ್ಯ ಸುಳಾದಿಗಳನ್ನು ರಚಿಸಿ ದಾಸ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಅದೇ ಮನೆತನದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಮುಖ ಶಿಷ್ಯರಾದ ಶ್ರೀನಿವಾಸ ರಾವ್ ಕಸ್ಬೇರವರ ಧರ್ಮಪತ್ನಿ ವಿದ್ಯಾ ಕಸಬೇರವರು ಯುಎಸ್ಎ -ಫ್ಲೋರಿಡಾ ಯೋಗ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಮೂಲಕ ಹಿರಿಯ ಹರಿದಾಸ ಸಾಹಿತ್ಯ ವಿದ್ವಾಂಸ,ನಿವೃತ್ತ ಪ್ರಾಚಾರ್ಯ ಡಾ ಅನಂತಪದ್ಮನಾಭರಾವ್ ಇವರ ಮಾರ್ಗದರ್ಶನದಲ್ಲಿ 'ವ್ಯಕ್ತಿತ್ವ ವಿಕಸನಕ್ಕೆ ಹರಿದಾಸರ ಪದಗಳು' ಎಂಬ ಶೀರ್ಷಿಕೆಯ ಮೂಲಕ ತಮ್ಮ ಪಿ ಎಚ್ ಡಿ ಪ್ರಬಂಧವನ್ನು ಸಮರ್ಪಿಸಿ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಸೇಡಂ ನವರಾದ ವಿದ್ಯಾ ರವರು ಕನ್ನಡ ಮತ್ತು ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು, ಕೆಲಕಾಲ ಟಿಟಿಡಿಯ ಧಾರ್ಮಿಕ ಪ್ರಚಾರ ಸಮಿತಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಸದ್ಯ ಮಂತ್ರಾಲಯ ಪ್ರಭುಗಳ ಸೇವಾ ನಿರತರಾಗಿದ್ದಾರೆ.
ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ ಹಾಗೂ ಜೀವನೋತ್ಸಾಹವನ್ನು ಆಪ್ತವಾಗಿ ಬೆಳೆಸುತ್ತಾ ಹತಾಶೆಯನ್ನು ದೂರ ಮಾಡಲು ಯತ್ನಿಸಿದವರು ಹರಿದಾಸರು. ವ್ಯಕ್ತಿತ್ವ ವಿಕಾಸಕ್ಕೆ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಉನ್ನತೀಕರಣಕ್ಕೆ ಅವರು ಕಂಡುಕೊಂಡಿದ್ದು ಭಕ್ತಿ ಮಾರ್ಗ ಮತ್ತು ನೀತಿ ಮಾರ್ಗ.ಈ ಹಿನ್ನೆಲೆಯಲ್ಲಿ ದಾಸರು ನೀಡಿದ ಸಂದೇಶಗಳು ಕೇವಲ ಸಂದೇಶಗಳಾಗಿಯೇ ಉಳಿಯದೆ ಸಾತ್ವಿಕ ಬದುಕಿಗೆ ಮಾರ್ಗದರ್ಶಕ ಸೂತ್ರಗಳಾಗಿ ಇಂದಿಗೂ ಪ್ರಸ್ತುತವಾಗಿದೆ. ಹರಿದಾಸರ ಅಂತರಾವಲೋಕನ ಮತ್ತು ಆತ್ಮಶೋಧನೆ ಕೃತಿಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವುದು ಈ ಪ್ರಬಂಧದ ಒಂದು ವೈಶಿಷ್ಟ್ಯ.
ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಅನೇಕ ಗುಣಗಳಲ್ಲಿ ಲೋಕ ನೀತಿ ಆತ್ಮಶುದ್ಧಿ ಶರಣಾಗತಿ ಈ ಎಲ್ಲವೂ ದಾಸ ಸಾಹಿತ್ಯದಲ್ಲಿದೆ ದಾಸ ಸಾಹಿತ್ಯದ ಸಾಗರ ದಲ್ಲಿ ಚಿಂತನಶೀಲರಾಗಿ ವಿಹರಿಸಿ ಹೆಕ್ಕಿ ತೆಗೆದ ಮುತ್ತು ಮಾಣಿಕ್ಯಗಳ ರಾಶಿಯ ಸುಂದರ ಹೂಮಾಲೆ ಇದಾಗಿದೆ. ಅವರು ತೋರಿರುವ ಒಳನೋಟಗಳು ವಿಮರ್ಶೆಗಳು ವಿದ್ವಾಂಸರ ವಿಮರ್ಶಕರ ಗಮನವನ್ನು ಸೆಳೆಯುತ್ತವೆ.
ಕೃತಿಯ ಹೆಸರು: ವ್ಯಕ್ತಿತ್ವ ವಿಕಾಸನಕ್ಕೆ ಹರಿದಾಸರ ಪದಗಳು
ಲೇಖಕರು ಡಾ ವಿದ್ಯಾ ಕಸ್ಬೇ
ಪ್ರಕಾಶಕರು:ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ರಾಘವೇಂದ್ರ ಕಾಲೋನಿ, ಚಾಮರಾಜಪೇಟೆ ಬೆಂಗಳೂರು
ಪು: 274 ಬೆಲೆ: ರೂ.275
ಪ್ರತಿಗಳಿಗೆ ಸಂಪರ್ಕಿಸಿ 94490 79111
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ