ಶ್ರೀ ಗುರುಭ್ಯೋ ನಮಃ ಹರಿ: ಓಂ
ಶ್ರೀ ವರಮಹಾಲಕ್ಷ್ಮಿ ವ್ರತದ ಬಗ್ಗೆ ಎರಡು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.
ಯಾವುದಾದರೂ ವ್ರತ ಮಾಡುತ್ತೇವೆ ಅಂದರೆ ಮೊದಲು ಆ ದೇವತೆಗಳ ಮಹಿಮೆಗಳನ್ನು ತಿಳಿದುಕೊಂಡು ಸ್ವಲ್ಪ ಮಟ್ಟಿಗಾದರೂ ಅರ್ಥಮಾಡಿಕೊಂಡು ಮಾಡಬೇಕು. ಇಲ್ಲಿ ವರಮಹಾಲಕ್ಷ್ಮಿ ವ್ರತ ಎಂದರೆ ಜಗಜ್ಜನನಿಯಾದ ಆಕೆಯ ಬಗ್ಗೆ ಎಷ್ಟು ಹೇಳಿದರು ಅದು ಸ್ವಲ್ಪ ಮಾತ್ರವೇ ಆಗುತ್ತದೆ, ಪರಮಾತ್ಮ ಮತ್ತು ಲಕ್ಷ್ಮೀದೇವಿ ಇಬ್ಬರು ಅಕ್ಷರ ಪುರುಷರು ಅಂದರೆ ದೇಹ ನಾಶವಿಲ್ಲದವರು ಬ್ರಹ್ಮ ದೇವರಿಂದ ಮೊದಲುಗೊಂಡು ತೃಣ ಜೀವ ಪರ್ಯಂತ ಎಲ್ಲರೂ ಕ್ಷರ ಪುರುಷರು ಅಂದರೆ ದೇಹ ನಾಶ ಉಳ್ಳವರು. ಆದರೆ ಜಗಜ್ಜನನಿಯಾದ ಮಹಾಲಕ್ಷ್ಮಿಗೆ ದೇಹ ನಾಶವಿಲ್ಲ. ಅವಳು ನಿತ್ಯ ಮುಕ್ತಳು. ಆದ್ದರಿಂದ ಮಹಾಲಕ್ಷ್ಮಿಗೆ ಸಮನ ಎಂದು ಹೆಸರು. ದೇಶತ: ಕಾಲತಃ ಪರಮಾತ್ಮನಿಗೆ ಸಮ ಗುಣದಲ್ಲಿ ಪರಮಾತ್ಮನ ಅಧೀನಳು ಆದ್ದರಿಂದ ಅವಳು ಪರಮಾತ್ಮನಿಗೆ ಸಮ ನ. ಅಚಿಂತ್ಯಾತ್ಮಕ ಗುಣವುಳ್ಳ ಪರಮಾತ್ಮನ ಸೇವೆಯನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಛತ್ರ ಚಾಮರ ವ್ಯಜನ ಪರ್ಯಂಕ ಎಲ್ಲವೂ ತಾನೇ ಆಗಿ ಪರಮಾತ್ಮನ ಸೇವೆಯನ್ನು ಪೂರ್ಣವಾಗಿ ಮಾಡಿ ಆನಂದ ಹೊಂದುತ್ತಾಳೆ. ಪ್ರಳಯ ಕಾಲದಲ್ಲಿ ಎಲ್ಲವೂ ನಾಶವಾದರೂ, ಶ್ರೀ ರೂಪವು ಜಲವಾಗಿ ಭೂ ರೂಪವು ಆಲದ ಎಲೆಯಾಗಿ ದುರ್ಗಾ ರೂಪವು ಕತ್ತಲಾಗಿ ಮತ್ತು ಲಕ್ಷ್ಮಿ ದೇವಿಯು ಹಲವು ಆಭರಣಗಳಾಗಿ ಪರಮಾತ್ಮನ ಜೊತೆಯಲ್ಲಿಯೇ ಇರುತ್ತಾಳೆ. ಜಗತ್ ಜನನಿಯಾದ ಮಹಾಲಕ್ಷ್ಮಿ ಪೂಜೆ ಮಾಡಬೇಕಾದರೆ ನಮಗೆ ಇವೆಲ್ಲದರ ಬಗ್ಗೆ ಕಿಂಚಿತ್ತಾದರೂ ಜ್ಞಾನ ಇರಬೇಕು.
ವರಮಹಾಲಕ್ಷ್ಮಿ ವ್ರತದ ಮಹತ್ವ:
ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ಆಗಿರುತ್ತದೆ. ಈ ವ್ರತ ಮಾಡಬೇಕಾದರೆ ತುಳಸಿಯ ಬೃಂದಾವನದ ಹತ್ತಿರ ಯಮುನಾ ಪೂಜೆಯನ್ನು ಮಾಡಬೇಕು ಯಾವುದೇ ವ್ರತವನ್ನು ನದಿ ತೀರದಲ್ಲಿ ಆಚರಿಸುವುದು ಉತ್ತಮ. ಆದರೆ ಈಗಿನ ದೇಶಕಾಲ ಪರಿಸ್ಥಿತಿಯಲ್ಲಿ ನದಿ ತೀರದಲ್ಲಿ ಮಾಡುವುದು ಅಸಾಧ್ಯವೆಂದು ತಿಳಿದು ಯನ್ಮೂಲೇ ಸರ್ವತೀರ್ಥಾನಾಂ ಯನ್ಮದ್ಯೇ ಮಧ್ಯೆ ಸರ್ವ ದೇವತಾ ಎಂಬಂತೆ ಸಕಲ ತೀರ್ಥಗಳ ಸನ್ನಿಧಾನವುಳ್ಳ ತುಳಸಿ ಬೃಂದಾವನದ ಸಮೀಪ ಯಮುನಾ ಕಲಶವನ್ನು ಸ್ಥಾಪಿಸಿ ಗಂಗಾ ಯಮುನಾ ಗೋದಾವರಿ ಮೊದಲಾದ ನದಿ ದೇವತೆಗಳನ್ನು ಕಲಶದಲ್ಲಿ ಆವಾಹಿಸಿ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ನಂತರ ಆ ಕಲಶವನ್ನು ತೆಗೆದುಕೊಂಡು ಬಂದು ಮನೆಯ ಬಾಗಿಲಲ್ಲಿ ಅಕ್ಕಿ ಬೆಲ್ಲ ತುಂಬಿದ ಪಡಿಯನ್ನು ಕಲಶದಿಂದ ಮುಂದಕ್ಕೆ ಉರುಳಿಸಿ ಬಲಗಾಲು ಮುಂದಿಟ್ಟುಕೊಂಡು ಮನೆ ಒಳಗಡೆ ಪ್ರವೇಶಿಸಬೇಕು. ಆ ಕಲಶವನ್ನು ಅಲಂಕೃತವಾದ ಮಂಟಪದಲ್ಲಿ ಇಟ್ಟು ಅದರ ಪಕ್ಕದಲ್ಲಿ ಮತ್ತೊಂದು ಕಳಶವನ್ನು (ವರಮಹಾಲಕ್ಷ್ಮಿ) ಇಟ್ಟು ಪೀಠ ಪೂಜೆ ಮಾಡಿ ಅದರಲ್ಲಿ ಲಕ್ಷ್ಮೀನಾರಾಯಣರನ್ನು ಪ್ರತಿಷ್ಠಾ ಸೂಕ್ತದಿಂದ ಆವಾಹಿಸಬೇಕು. ನಂತರ ನವ ದೋರ ಸ್ಥಾಪನೆ ಮಾಡಬೇಕು. ದಾರದಲ್ಲಿ 9 ಅಥವಾ 12 ಗ್ರಂಥಿಗಳನ್ನು ಮಾಡಿ ಆ ಗ್ರಂಥಿಗಳಲ್ಲಿ ಲಕ್ಷ್ಮಿ ನಾರಾಯಣರ ನಾಮಗಳಿಂದ ಪೂಜಿಸಬೇಕು. ನಂತರ ದೇವಿಗೆ ಒಂದು ದಾರವನ್ನು ಅರ್ಪಿಸಬೇಕು.
ಪೂಜೆಯನ್ನು ಮಾಡಿ ಪರಿಮಳ ಪತ್ರ ಮತ್ತು ಪುಷ್ಪಗಳಿಂದ ಅರ್ಚನೆಯನ್ನು ಮಾಡಿ ಲಕ್ಷ್ಮಿ ನಾರಾಯಣರ ಕಲಶಕ್ಕೆ ಅರಿಶಿಣ ಕುಂಕುಮ ಗಂಧ ಹತ್ಯತೆಗಳಿಂದ ಪೂಜಿಸಿ ಸೌಭಾಗ್ಯ ದ್ರವ್ಯಗಳನ್ನು ಅರ್ಪಿಸಿ ಕುಂಕುಮ ಅರ್ಚನೆಯನ್ನು ಮಾಡಿ ಪಂಚ ಭಕ್ಷಗಳನ್ನು ಯಥಾ ಶಕ್ತಿ ನೈವೇದ್ಯವನ್ನು ಮಾಡಬೇಕು. ಮಂಗಳಾರತಿಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಪೂಜೆಯನ್ನು ಭಗವಂತನಿಗೆ ಸಮರ್ಪಿಸಬೇಕು ಹಾಡುಗಳನ್ನು ಹೇಳಿ ಆರತಿಯನ್ನು ಮಾಡಬೇಕು.
ಈ ವರ್ಷ ಹರಿದಿನವಾದ ಏಕಾದಶಿ ದಿನದಂದು ವ್ರತ ಬಂದಿರುವುದರಿಂದ ಆ ದಿನ ಪೂಜೆಯನ್ನು ಮಾತ್ರ ಮಾಡಿ ಮಾರನೆಯ ದಿನವಾದ ದ್ವಾದಶಿ ದಿನದಂದು ಶೋಡಷೋಪಚಾರಗಳಿಂದ ಪೂಜೆಯನ್ನು ಮಾಡಿ ನೈವೇದ್ಯವನ್ನು ಸಮರ್ಪಣೆ ಮಾಡಿ ದಂಪತಿಗಳ ಪೂಜೆಯನ್ನು ಮಾಡಿ ದಾರವನ್ನು ಕಟ್ಟಿಕೊಂಡು ಮರದ ಬಾಗಿನ ಮತ್ತು ವಾಯನ ದಾನವನ್ನು ಕೊಡಬೇಕು. ದಂಪತಿಗಳಿಗೆ ಭೋಜನವನ್ನು ಮಾಡಿಸಿ ನಂತರದಲ್ಲಿ ನಾವು ಭೋಜನವನ್ನು ಮಾಡಬೇಕು.
ಈ ವ್ರತವು ಸ್ತ್ರೀಯರ ಸೌಭಾಗ್ಯಕ್ಕೆ ಮೂಲ ಕಾರಣವಾದ್ದರಿಂದ ಪ್ರತಿಯೊಬ್ಬ ಮುತ್ತೈದೆಯರು ಆಚರಿಸಲೇಬೇಕು ಇದರಿಂದ ಸೌಭಾಗ್ಯ ವೃದ್ಧಿಯಾಗುತ್ತದೆ.
ಕಲಶದ ವಿಚಾರ:
ಕಲಶದ ತಂಬಿಗೆಯಲ್ಲಿ ಪಂಚ ಫಲಗಳನ್ನು ಮತ್ತು ಮಂಗಳ ದ್ರವ್ಯಗಳನ್ನು ಹಾಕಿ ಅದರ ಮೇಲೆ ಮಾವಿನ ಚಿಗುರುಗಳಿಂದ ಅಲಂಕರಿಸಿ ಅದರ ಮೇಲೆ ಅಲಂಕರಿಸಿದ ತೆಂಗಿನಕಾಯಿಯನ್ನು ಇಡಬೇಕು. ಕೆಲವರು ತೆಂಗಿನಕಾಯಿಗೆ ಲಕ್ಷ್ಮಿಯ ಮುಖವಾಡವನ್ನು ಇರಿಸಿ ಅಲಂಕಾರವನ್ನು ಮಾಡುತ್ತಾರೆ. ಮತ್ತೆ ಕೆಲವರು ತೆಂಗಿನಕಾಯಿಗೆ ಅರಿಶಿಣ ಹಚ್ಚಿ ಕುಂಕುಮದಿಂದ ತಿಲಕವಿಟ್ಟು ಪೂಜಿಸುತ್ತಾರೆ. ಇದನ್ನು ಪೂಜೆ ಮಾಡುವವರೂ ತಮ್ಮ ಮನೆ ಸಂಪ್ರದಾಯದಂತೆ ಮಾಡಬೇಕು.
ನಾವು ಏನೇ ಪೂಜೆ ಮಾಡಿದರೂ ಪರಮಾತ್ಮನು ಲಕ್ಷ್ಮಿ, ವಾಯುದೇವರು ಮತ್ತು ತತ್ವಾಭಿನಮಾನಿ ದೇವತೆಗಳ ದ್ವಾರ ಮಾಡಿಸುತ್ತಾನೆ ಎಂದು ಭಾವೀಸಬೇಕು. ನಾನು ಮಾಡಿದೆ ಎನ್ನದೆ ನಿನ್ನ ಪೂಜೆ ನೀನೇ ನಮ್ಮಿಂದ ಮಾಡಿಸಿದೆ ಎಂಬ ಭಾವದಿಂದ ಸಮರ್ಪಿಸಿದರೆ ಪರಮಾತ್ಮನ ಅನುಗ್ರಹವಾಗಿ ಮೋಕ್ಷಕ್ಕೆ ಕಾರಣೀಭೂತವಾಗುತ್ತದೆ.
ಶ್ರೀಕೃಷ್ಣಾರ್ಪಣಮಸ್ತು
ನಾಹಂ ಕರ್ತಾ ಹರಿ: ಕರ್ತಾ
ಹೇಮಾಮಾಲಿನಿ ಶ್ರೀಧರಾಚಾರ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ