ಉಡುಪಿ ಪತ್ರಕರ್ತರ ಸಂಘದಿಂದ ‘ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ’ ಚರ್ಚಾ ಕಾರ್ಯಕ್ರಮ

Upayuktha
0


ಉಡುಪಿ: ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಅದರ ತಪ್ಪಲಿನಲ್ಲಿ ಭೂಕುಸಿತ ದುರಂತಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟಗಳ ಮೇಲೆ ಹೆಚ್ಚುತ್ತಿರುವ ಯಂತ್ರಗಳ ದಾಳಿಯಾಗಿದೆ ಎಂದು ಮಣಿಪಾಲದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ. ಉದಯಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾದ ಕೃತಕ ನೆರೆ ಹಾವಳಿ-ಬೆಂಕಿ ದುರಂತ- ಭೂಕುಸಿತ: ಚರ್ಚೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.


ಅತ್ಯಂತ ಹೆಚ್ಚು ಮಳೆ ಬೀಳುವ ಎತ್ತರ ಪ್ರದೇಶವಾಗಿರುವ ಪಶ್ಚಿಮ ಘಟ್ಟಗಳಲ್ಲಿ ಇಂದು ಮರಗಳ ನಾಶದಿಂದ ಮಳೆ ನೀರು ಭೂಮಿಯ ಒಳಗೆ ತುಂಬಾ ಸುಲಭವಾಗಿ ಪ್ರವೇಶಿಸುತ್ತಿದೆ. ಹೇರಳವಾಗಿ ಒಳಗಡೆ ಹೋದ ಈ ನೀರು ಹೊರಗಡೆ ಬರಲೇಬೇಕು. ಪಶ್ಚಿಮಘಟ್ಟಗಳ ರಚನೆಯಲ್ಲಿ ತುಂಬಾ ಸ್ತರಭಂಗಗಳಿವೆ. ಆ ಜಾಗದಲ್ಲಿ ಪ್ರಚೋದನೆಯಾದರೆ ಭೂಕಂಪ ಆಗುವ ಸಾಧ್ಯತೆ ಜಾಸ್ತಿ. ಈ ಮಳೆಯ ನೀರು ಅಂತರ್‌ಜಲವಾಗಿ ಒಳಗಡೆ ಹೋದಾಗ ಅಂತಹ ಸಂದರ್ಭ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳ ಮಳೆಗಾಲದಲ್ಲಿ ಪಶ್ಚಿಮಘಟ್ಟದಲ್ಲಿ ಕೇಳುತ್ತಿರುವ ಸ್ಪೋಟಗಳ ಶಬ್ದವೇ ಸ್ತರಭಂಗ ಆಗಿದೆ. ಇದಕ್ಕೆ ನೇರವಾಗಿ ಬೀಳುವ ಅಂತರ್‌ಜಲ ಕೂಡ ಒತ್ತಡವನ್ನು ಕೊಡುತ್ತದೆ. ಆಗ ವಯನಾಡಿನಲ್ಲಿ ಆಗಿರುವಂತಹ ದುರಂತಗಳು ಸಂಭವಿಸುತ್ತವೆ ಎಂದರು.


ಭೂಮಿಯ ರಚನೆಯ ಅಧ್ಯಯನ ಮಾಡದೆ ಗುಡ್ಡಗಳನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಕೊರೆದ ಪರಿಣಾಮ ಅಂಕೋಲದ ಶಿರೂರಿನಲ್ಲಿ ಆಗಿರುವಂತಹ ದುರಂತಗಳು ಸಂಭವಿಸುತ್ತವೆ. ಭೂಮಿಯ ಮೇಲೆ ಇರುವ ಮುರಕಲ್ಲು ಬಹಳಷ್ಟು ಗಟ್ಟಿಮುಟ್ಟಾಗಿರುತ್ತದೆ. ಅದರ ಕೆಳಗಿನ ಪದರದಲ್ಲಿ ಇರುವುದು ಕೇವಲ ಜೇಡಿ ಮಣ್ಣು. ಇದು ಬಹಳಷ್ಟು ಅಪಾಯವಾಗಿದೆ. ಮಣಿಪಾಲದಲ್ಲಿಯೂ ಅವೈಜ್ಞಾನಿಕವಾಗಿ ಮುರಕಲ್ಲು ಕೊರೆಯಲಾಗುತ್ತದೆ. ಮಾನವ ನಿರ್ಮಿತ ಭೂಕುಸಿತಗಳು ಆಗದಂತೆ ತಡೆಯುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಸರಕಾರ ಭೂಮಿಯನ್ನು ಕೊರೆಯಲು ಕಾನೂನಾತ್ಮಕವಾದ ನಿಯಮಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದರು.


ಇಡೀ ಅತೀ ಸೂಕ್ಷ್ಮ ಜೈವಿಕ ಜೀವ ಜಂತುಗಳಿರುವ ಹಾಟ್ ಸ್ಪಾಟ್ ಆಗಿದೆ. ಇಂತಹ ಜೀವವೈವಿಧ್ಯ ಇರುವ ಪ್ರದೇಶದಲ್ಲಿ ಇಂತಹದು ಮಾಡುವುದು ಸರಿಯಲ್ಲ. ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕೋಟ್ಯಂತರ ರೂ ಖರ್ಚು ಮಾಡಿ ಒಮ್ಮೆ ಸುರಂಗ ಮಾಡಿದಾಗ ಅಂತರ್ಜಲ ಟನೆಲ್ ಬರುತ್ತದೆ. ಕೆಳಗಡೆ ಸೋಮೇಶ್ವರದಲ್ಲಿ ಹೊಳೆಯ ನಿರ್ಮಾಣವಾಗುತ್ತದೆ. ನೀರು ಖಾಲಿಯಾಗುವವರೆಗೆ ಹೊಳೆ ಇರುತ್ತದೆ. ಆ ನೀರು ಖಾಲಿ ಆದಾಗ ಬಲಿ ಜೀವವೈವಿಧ್ಯ ನಾಶವಾಗುತ್ತದೆ. ಅಲ್ಲಿ ಟನಲ್ ಮಾತ್ರ ಉಳಿಯುತ್ತದೆ. ಜೀವವೈವಿಧ್ಯ ಸರ್ವನಾಶವಾಗುತ್ತದೆ ಎಂದರು.

 

ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಮಾತನಾಡಿ, ನಗರದಲ್ಲಿ ಸರಾಗವಾಗಿ ಮಳೆಯ ನೀರು ಹರಿದು ಹೋಗುವ ತೋಡನ್ನು ಮುಚ್ಚಿ ಕಟ್ಟಡ ಕಟ್ಟಿದ ಪರಿಣಾಮವಾಗಿ ಈ ಬಾರಿ ಗುಂಡಿಬೈಲು ಪರಿಸರದಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಕಳೆದ 15 ವರ್ಷಗಳಲ್ಲಿ ಈ ಬಾರಿ ಅತೀಹೆಚ್ಚು ಮಳೆ ಸುರಿದಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಯಾವುದೇ ಪ್ರಾಣಾಪಾಯಗಳು ಉಂಟಾಗಿಲ್ಲ ಎಂದು ತಿಳಿಸಿದರು. ಉಡುಪಿ ಬೆಳೆಯುತ್ತಿರುವ ನಗರವಾಗಿದ್ದು, ಭವಿಷ್ಯದಲ್ಲಿ ವ್ಯವಸ್ಥಿತವಾಗಿ ಉಳಿಯಬೇಕಾದರೆ ಮಳೆ ನೀರು ಹರಿದು ಹೋಗಲು ತೋಡಿನ ವ್ಯವಸ್ಥೆ ಮಾಡಿ ಕಟ್ಟಡ ನಿರ್ಮಿಸಬೇಕು. ಇದರಿಂದ ಮಾತ್ರ ಕೃತಕ ನೆರೆಯಿಂದ ಉಡುಪಿ ನಗರವನ್ನು ಕಾಪಾಡಲು ಸಾಧ್ಯ ಎಂದು ಹೇಳಿದರು.


ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಮಾತನಾಡಿ, ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಅವಘಡಗಳಿಗೆ ಸಂಬಂಧಿಸಿ 340 ಕರೆಗಳನ್ನು ಮತ್ತು 92 ರಕ್ಷಣಾ ಕರೆಗಳನ್ನು ಸ್ವೀಕರಿಸಲಾಗಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ನೆರೆ ಸಂಭವಿಸಿದ್ದು, ಒಟ್ಟು 181 ಮಂದಿಯನ್ನು ನಮ್ಮ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.


ಪ್ರತಿ 50 ಸಾವಿರ ಜನಸಂಖ್ಯೆಗೆ ಅಥವಾ 40 ಕಿ.ಮೀ. ಒಂದು ಅಗ್ನಿಶಾಮಕ ಠಾಣೆ ಇರಬೇಕು. ಅಷ್ಟು ಅಗ್ನಿಶಾಮಕ ಠಾಣೆಗಳು ನಮ್ಮಲ್ಲಿ ಇಲ್ಲ. ಆದುದರಿಂದ ಪ್ರತಿಯೊಬ್ಬರು ಬೆಂಕಿಯ ಮುಂಜಾಗ್ರತೆ ಹಾಗೂ ರಕ್ಷಣೆ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಇದರಿಂದ ಆದಷ್ಟು ಹಾನಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಅಗ್ನಿ ಅವಘಡಗಳು ಸಂಭವಿಸಲು ನಿರ್ಲಕ್ಷವೇ ಕಾರಣ. ಅಗ್ನಿ ಅವಘಡಗಳು ಸಂಭವಿಸಿದಾಗ ಪ್ರತಿಕ್ರಿಯೆ ಸಮಯ ಕೇವಲ ಮೂರು ನಿಮಿಷ. ಅದರೊಳಗೆ ಪ್ರತಿಕ್ರಿಯಿಸದಿದ್ದರೆ ಜೀವ ಹಾಗೂ ಸೊತ್ತು ಹಾನಿ ಸಾಕಷ್ಟು ಆಗಬಹುದು ಎಂದು ಹೇಳಿದರು.


ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top