ಜವಾಬ್ದಾರಿ ಅದೆಷ್ಟೋ ಮಧ್ಯಮ ವರ್ಗದ ಜನರ ಆಸೆ, ಆಕಾಂಶೆಗಳನ್ನು ದೂರ ತಳ್ಳೋ ಪದ. ಜವಾಬ್ದಾರಿ ಎಂಬುದು ಹೆಗಲೇರಿದಾಗ ಜೊತೆಗಿರುವವರನ್ನು ಕೂಡ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ. ಮಧ್ಯಮ ವರ್ಗದ ಜೀವನ ಸಾಗಿಸೋ ಪ್ರತಿಯೋರ್ವನಿಗೂ ಅದರ ಕಷ್ಟವೇನೆಂದು ಅರಿತಿರುವುದು, ಆದರೂ ನಗುತ್ತಾ ಜೀವನ ಸಾಗಿಸುವರಯ್ಯ.
ಎಲ್ಲರಲ್ಲಿಯೂ ಒಂದು ಸಣ್ಣ ಮಟ್ಟದ ಪ್ರತಿಭೆ ಎಂಬುದು ಇದ್ದೇ ಇರುತ್ತದೆ, ಆದರೇ ಈ ಜವಾಬ್ದಾರಿ ಎಂಬ ನಿಯಮದಲ್ಲಿ ಅದು ಬಂಧಿಯಾಗಿದೆ ಅಷ್ಟೇ. ಜವಾಬ್ದಾರಿಯನ್ನು ಕನವರಿಸಿದಾಗ ಬೆವರುತ್ತೆ, ಕೈ ಕಾಲು ನಡಗುತ್ತದೆ, ಧ್ವನಿ ತೊದಲುತ್ತದೆ, ಇಷ್ಟೇ ಯಾಕೆ ಬಹು ಮಂದಿ ನಿನ್ನನ್ನು ಹಿಯ್ಯಾಳಿಸುವವರು ಇದ್ದರು ಕೂಡ ಕುಟುಂಬದ ಕಷ್ಟ ಕಾರ್ಪಣ್ಯದ ಮುಂದೆ ಎಲ್ಲವೂ ಶೂನ್ಯವಾಗುವುದು.
ತಂದೆ ದುಡಿಯುತ್ತಿರುವಾಗ ನೂರು ರೂಪಾಯಿ ಸಹ ಲೆಕ್ಕವಿಡುತ್ತಿರಲಿಲ್ಲ ಇರಲಿಲ್ಲ ಆದರೇ ಯಾವಾಗ ಸ್ವತಃ ನಾವೇ ಸಂಪಾದನೆ ಮಾಡಲು ಪ್ರಾರಂಭ ಮಾಡುತ್ತೇವೋ ಆ ಸಂದರ್ಭದಲ್ಲಿ ಒಂದು ರೂಪಾಯಿ ಕೂಡ ಲೆಕ್ಕ ಹಾಕುತ್ತೇವೆ, ಆವಾಗ ತಿಳಿಯುವುದು ತಂದೆ - ತಾಯಿಯ ಬೆವರ ಹಾನಿಯ ಬೆಲೆ ಏನೆಂದು. ಎಂತಹ ವಿಪರ್ಯಾಸ ಎಂದರೆ ಕೆಲವರು ಹೆತ್ತವರ ಸಂಪಾದನೆಯಲ್ಲಿ ಮೇರೆಯುವಷ್ಟು ಪುಣ್ಯವೇ ಮಾಡಿರುವುದಿಲ್ಲ, ಹೊರತಾಗಿ ಅವರು ಮಾಡಿರುವ ಸಾಲ ತೀರಿಸಲು ಒದ್ದಾಡುತ್ತಿರುವ ನತದೃಷ್ಟ ಹಣೆಬರಹದವರಾಗಿದ್ದಾರೆ.
ಆದರೇ ನೆನಪಿರಲಿ ಅವರು ಮಾಡಿರೋ ಸಾಲ ನಮ್ಮ ಜೀವನಕ್ಕಾಗಿ ಹೊರತು ಅವರ ಜೀವನಕ್ಕಲ್ಲ. ಜವಾಬ್ದಾರಿ ಎಂಬುದಕ್ಕೆ ವಯಸ್ಸಿನ ಇತಿ-ಮಿತಿ ಇಲ್ಲ, ನಾವು ಪಡೆದ ಶಿಕ್ಷಣ, ನಮ್ಮ ಕನಸು, ಪ್ರೀತಿ, ಭಾವನೆ, ಆಸೆ ಎಲ್ಲವನ್ನು ಪರಿತ್ಯಾಗ ಮಾಡುವ ಸಮಯ ಸೃಷ್ಟಿಯಾಗುತ್ತದೆ.
ಕನಸುಗಳು ನನಸಾಗುವ ಮುನ್ನವೇ ಕಷ್ಟವೆಂಬ ಬಲೆಗೆ ಸಿಲುಕಿ ಬಲಿಯಾಗುತ್ತಿದೆ. ಕುವೆಂಪುರವರು ಹೇಳುತ್ತಾರೆ "ಈ ಬದುಕಿನ ಅತಿ ದೊಡ್ಡ ಗುರಿ ಬದುಕುವುದು ಎಂದು" ಆದರೆ ಈ ಬದುಕನ್ನು ಯಾವ ರೀತಿ ಬದುಕಬೇಕೆಂದು ಜವಾಬ್ದಾರಿ ಎಂಬುದು ತಿಳಿಸುತ್ತದೆ.
- ಧನ್ಯಶ್ರೀ ಕೆ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು