ಸಹೋದರ - ಸಹೋದರಿಯ ಉತ್ತಮ ಸಂಬಂಧವನ್ನು ನಿರ್ಮಾಣ ಮಾಡುವ ರಕ್ಷಾ ಬಂಧನ ಹಬ್ಬ !

Upayuktha
0


ಸನಾತನ ಧರ್ಮದಲ್ಲಿ ರಕ್ಷಾಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 2024 ರಲ್ಲಿ ರಕ್ಷಾಬಂಧನವನ್ನು ಸೋಮವಾರ, ಅಗಸ್ಟ್ 19 ರಂದು ಆಚರಿಸಲಾಗುವುದು. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿ, ಪ್ರೀತಿಯ ಪ್ರತೀಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದವನ್ನೂ ನೀಡುತ್ತಾರೆ. 


ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ರಕ್ಷಾಬಂಧನದಿಂದ ಸಹೋದರ-ಸಹೋದರಿಯರ ನಡುವೆ ಪ್ರೀತಿ ಹೆಚ್ಚಾಗುವುದರೊಂದಿಗೆ ಅವರ ನಡುವೆ ಇರುವ ಕೊಡು-ಕೊಳ್ಳುವ ಲೆಕ್ಕಾಚಾರ ಕಡಿಮೆಯಾಗುತ್ತದೆ. ಈ ಹಬ್ಬವು ಇಬ್ಬರಿಗೂ ಈಶ್ವರನತ್ತ ಪ್ರಯಾಣಿಸುವ ಅವಕಾಶ ಒದಗಿಸುತ್ತದೆ.


ರಕ್ಷಾ ಬಂಧನದ ಇತಿಹಾಸ

ಪ್ರಾಚೀನ ಕಾಲದಲ್ಲಿ ಯಮುನಾ ದೇವತೆಯು ಯಮನ ಮಣಿಕಟ್ಟಿನ ಸುತ್ತಲೂ ದಾರವನ್ನು ಕಟ್ಟಿದಳು ಮತ್ತು ಆಗ ಯಮದೇವರು ಅವಳನ್ನು ಸಾವಿನಿಂದ ರಕ್ಷಿಸುವ ಭರವಸೆ ನೀಡಿದನು.


ಮಕರ ಸಂಕ್ರಾಂತಿಯಂದು ಕೃಷ್ಣನು ಕಬ್ಬು ಅರೆಯುವಾಗ ತನ್ನ ಕಿರುಬೆರಳನ್ನು ಕತ್ತರಿಸುತ್ತಾನೆ. ಅವನ ರಾಣಿ ರುಕ್ಮಿಣಿ ತಕ್ಷಣವೇ ಬ್ಯಾಂಡೇಜ್‌ಗಳನ್ನು ಪಡೆಯಲು ತನ್ನ ಸಹಾಯಕಳನ್ನು ಕಳುಹಿಸಿದಳು. ಅಷ್ಟರಲ್ಲಿ ಇಡೀ ಘಟನೆಯನ್ನು ನೋಡುತ್ತಿದ್ದ ದ್ರೌಪದಿ ತನ್ನ ಸೀರೆಯನ್ನು ಸ್ವಲ್ಪ ಕತ್ತರಿಸಿ ತನ್ನ ಬೆರಳಿನಿಂದ ರಕ್ತವನ್ನು ನಿಲ್ಲಿಸಿದಳು. ಪ್ರತಿಯಾಗಿ, ಅಗತ್ಯವಿದ್ದಾಗ ಕೃಷ್ಣ ಅವಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದನು. ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ಬಂದು ಅವಳ ರಕ್ಷಣೆ ಮಾಡಿದನು.


ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಪಾತಾಳದಿಂದ ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು.


ಇಂದ್ರ ಮತ್ತು ದೈತ್ಯರ ನಡುವೆ ೧೨ ವರ್ಷಗಳಿಂದ ಘೋರ ಯುದ್ಧ ನಡೆದಿತ್ತು. ದೈತ್ಯರು ಗೆಲ್ಲುತ್ತಿದ್ದರು, ಇಂದ್ರನ ಶಕ್ತಿ ಕುಸಿಯುತ್ತಿತ್ತು. ಇಂದ್ರನು ಯುದ್ಧದಿಂದ ಹಿಂದೆ ಸರಿದು ತನ್ನ ಜೀವ ಉಳಿಸಿಕೊಳ್ಳುವ ವಿಚಾರ ಮಾಡುತ್ತಿದ್ದನು. ಇದನ್ನು ನೋಡಿದ ಇಂದ್ರಾಣಿಯು ಗುರು ಬೃಹಸ್ಪತಿಗೆ ಶರಣಾದಳು. ಗುರುಗಳು ಇಂದ್ರಾಣಿಯನ್ನು ಉದ್ದೇಶಿಸಿ, “ನೀನು ನಿನ್ನ ಪಾತಿವ್ರತ್ಯದ ಬಲದ ಮೇಲೆ ಇಂದ್ರನು ವಿಜಯಿಯಾಗಿ ಸುರಕ್ಷಿತನಾಗಿ ಬರಲಿ ಎಂಬ ಸಂಕಲ್ಪ ಮಾಡಿ, ಇಂದ್ರನ ಬಲಗೈಯ ಮಣಿಕಟ್ಟಿಗೆ ಒಂದು ದಾರ ಕಟ್ಟಿದರೆ ಇಂದ್ರನು ಈ ಯುದ್ಧವನ್ನು ಖಂಡಿತವಾಗಿಯೂ ಗೆಲ್ಲುವನು” ಎಂದು ಹೇಳಿದರು. ಇಂದ್ರಾಣಿಯು ಇದೇ ರೀತಿ ಮಾಡಿದಳು ಮತ್ತು ಇಂದ್ರನು ದೈತ್ಯರ ಮೇಲೆ ಜಯ ಸಾಧಿಸಿದನು.


ಪ್ರಾಚೀನ ಕಾಲದ ರಾಖಿ : ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಗಂಟು ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ. ಇದನ್ನು ರೇಷ್ಮೆಯ ದಾರದಿಂದ ಕಟ್ಟುತ್ತಿದ್ದರು.


ರಕ್ಷಾಬಂಧನವನ್ನು ಆಚರಸುವ ಯೋಗ್ಯ ಪದ್ದತಿ !

* ಈ ದಿನ ಸಹೋದರನು ಸಹೋದರಿಯ ಮನೆಗೆ ಹೋಗಬೇಕು.

* ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗಿ, ನಿರಪೇಕ್ಷವಾಗಿ ರಾಖಿ ಕಟ್ಟಬೇಕು

* ಸಹೋದರಿಯು ಸಹೋದರನಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.

* ಸಹೋದರನು ಸಹೋದರಿಗೆ ಸಾತ್ತ್ವಿಕ ಉಡುಗೊರೆಯನ್ನು ನೀಡಬೇಕು.

* ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.

* ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.

* ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ ‘ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ’, ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.

* ರಕ್ಷಾಬಂಧನದಂದು ರಾಖಿ ಕಟ್ಟಿಸಿಕೊಂಡು ಸಹೋದರನು ಸಹೋದರಿಗೆ ಏನಾದರೂ ಉಡುಗೊರೆ ನೀಡುತ್ತಾನೆ. ಇದರಿಂದ ಇಬ್ಬರಿಗೂ ಪರಸ್ಪರರ ನೆನಪಾಗುತ್ತದೆ.

ಈ ರೀತಿಯಲ್ಲಿ ರಕ್ಷಾ ಬಂಧನವನ್ನು ಆಚರಣೆಯನ್ನು ಮಾಡಬೇಡಿ

* ಸಹೋದರನಿಗೆ ಅಸಾತ್ತ್ವಿಕ, ಚೈನಾ ನಿರ್ಮಿತ ಅಥವಾ ದೇವತೆಗಳ ಚಿತ್ರವಿರುವ ರಾಖಿ ಕಟ್ಟಬೇಡಿ. ದೇವರ ಚಿತ್ರ ಇರುವ ರಾಖಿಯು ಉಪಯೋಗಿಸಿದ ನಂತರ ಬೀಸಾಡಲಾಗುತ್ತದೆ.

* ಸಹೋದರಿಯು ‘ತನಗೆ ಇದು ಬೇಕು, ಅದು ಕೊಡಿಸಬೇಕು’ ಎಂಬ ಅಪೇಕ್ಷೆ ಇಟ್ಟುಕೊಳ್ಳಬಾರದು

* ಅಶುಭ ಅಥವಾ ಭದ್ರಾಕಾಲದಲ್ಲಿ ರಾಖಿ ಕಟ್ಟಬೇಡಿ

* ಶನಿಯಂತೆಯೇ ಶನಿಯ ಸಹೋದರಿಯಾದ ಭದ್ರೆಯ ದೃಷ್ಟಿಯಿಂದ ಹಾನಿಯುಂಟಾಗುತ್ತದೆ. ಭದ್ರೆಯ ಕುದೃಷ್ಟಿಯಿಂದ ಕುಲಕ್ಕೆ ಹಾನಿಯುಂಟಾಗುವ ಸಾಧ್ಯತೆಯಿದೆ. ಆದುದರಿಂದ ಭದ್ರಾಕಾಲದಲ್ಲಿ ರಾಖಿಯನ್ನು ಕಟ್ಟಬಾರದು. ರಾವಣನು ಭದ್ರಾಕಾಲದಲ್ಲಿ ಸೂರ್ಪನಖಿಯಿಂದ ರಾಖಿ ಕಟ್ಟಿಸಿಕೊಂಡನು, ಆದುದರಿಂದ ಅದೇ ವರ್ಷ ಅವನ ಸಂಪೂರ್ಣ ಕುಲದ ನಾಶವಾಯಿತು ಎಂಬ ನಂಬಿಕೆಯಿದೆ.


ರಾಖಿ ಕಟ್ಟುವುದರ ಹಿಂದಿರುವ ಉದ್ದೇಶ

ಇಂದು ಎಲ್ಲ ಕಡೆ ಮಹಿಳೆಯರ ಮೇಲೆ ಲೈಂಗಿಕ ದೌಜನ್ಯ, ಕಿರುಕುಳ ನಡೆಯುತ್ತಿರುವ ಈ ಸಂದರ್ಭದಲ್ಲಿ ರಕ್ಷಾಬಂಧನವು ಯುವಕ-ಯುವತಿಯರಿಗೆ ಇದರಿಂದ ಹೊರಬರಲು ಇರುವ ಒಂದು ವ್ರತವಿದ್ದಂತೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ, ಯಾರಾದರೊಬ್ಬ ಯುವಕನು ಯಾರಾದರೊಬ್ಬ ತರುಣಿಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಇದರಿಂದ ಯುವತಿಯ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ. ಸಹೋದರ-ಸಹೋದರಿಯ ಈ ಪವಿತ್ರ ಬಂಧನವು ಯುವಕ-ಯುವತಿಯರನ್ನು ಲೈಂಗಿಕ ವಿಕಾರಗಳ ಕೂಪದಲ್ಲಿ ಬೀಳುವುದರಿಂದ ತಪ್ಪಿಸಲು ಸಮರ್ಥವಾಗಿದೆ. ಈ ನಿರ್ಮಲ ಪ್ರೇಮದ ಮುಂದೆ ಕಾಮ-ಕ್ರೋಧವು ಶಾಂತವಾಗುತ್ತದೆ. ರಕ್ಷಾಬಂಧನದ ಈ ಹಬ್ಬವು ಇಬ್ಭಾಗವಾಗಿರುವ ಸಮಾಜವನ್ನು ಒಗ್ಗೂಡಿಸುವ ಒಂದು ಸಂಧಿಯಾಗಿದೆ. ಇದರಿಂದ ಕುಟುಂಬದಲ್ಲಿರುವ ಕಲಹ ಶಾಂತವಾಗುತ್ತದೆ. ಮನಸ್ತಾಪ ದೂರವಾಗುತ್ತದೆ ಮತ್ತು ಸಾಮೂಹಿಕ ಸಂಕಲ್ಪಶಕ್ತಿ ಕಾರ್ಯನಿರತವಾಗುತ್ತದೆ.


ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 






إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top