ಭಾರತೀಯ ಸಂಸ್ಕೃತಿಯ ಜೀವಾಳ ಗಮಕ ಕಲೆ: ಎಡನೀರು ಶ್ರೀಗಳು

Upayuktha
0

ಎಡನೀರು: "ಗಮಕ ಕಲೆ ಅತ್ಯಂತ ಪ್ರಾಚೀನವಾದುದು. ಹಿಂದೆ ರಾಜಾಶ್ರಯವಿದ್ದ ಕಾಲದಲ್ಲಿ ಇದು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಭಾರತೀಯ ಸಂಸ್ಕೃತಿಯನ್ನು ಜನರಿಗೆ ಯಥಾವತ್ತಾಗಿ ಪರಿಚಯಿಸುವುದಕ್ಕೆ ಇದು ಬಹಳ ಉತ್ತಮವಾದ ಮಾಧ್ಯಮ. ಗಮಕ ಕಲಾಪರಿಷತ್ತು ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳು ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪರ್ವಕಾಲದಲ್ಲಿ ವಿಶೇಷವಾಗಿ ರಾಮಾಯಣದ ಪುಣ್ಯಕಥೆಯನ್ನು ಪ್ರಚಾರಗೊಳಿಸಿ ಜನರಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ. ಇದು ಭಾರತೀಯ ಸಂಸ್ಕೃತಿಯ ಜೀವಾಳವೂ ಹೌದು" ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಅಭಿಪ್ರಾಯ ಪಟ್ಟರು.  


ಅವರು ದೀಪಬೆಳಗಿಸಿ ಈ ವರ್ಷದ "ಗಮಕ ಶ್ರಾವಣ" ದ ಸರಣಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀ ಮಠದ ಚಾತುರ್ಮಾಸ್ಯ ಸಭಾಂಗಣದಲ್ಲಿ ನಿನ್ನೆ ನೆರವೇರಿಸಿ ಆಶೀರ್ವಚನ ನೀಡಿದರು. 


ಸಮಾರಂಭದ ಅಧ್ಯಕ್ಷತೆಯನ್ನು ಗಮಕಕಲಾ ಪರಿಷತ್ತಿನ ಅಧ್ಯಕ್ಷರಾದ ಟಿ. ಶಂಕರನಾರಾಯಣ ಭಟ್ಟರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರೂ ಶ್ರೀ ಮಠದ ಆಡಳಿತಾಧಿಕಾರಿಗಳೂ ಆಗಿರುವ ರಾಜೇಂದ್ರ ಕಲ್ಲೂರಾಯರು "ಭಾರತೀಯ ಸಂಸ್ಕೃತಿಯನ್ನು ಸಾರುವ ಮಹಾಕಾವ್ಯಗಳನ್ನು  ಸಾಧ್ಯವಿದ್ದಷ್ಟೂ ಪ್ರಚಾರಗೊಳಿಸಬೇಕು" ಎಂದು ಕರೆಯನ್ನಿತ್ತರು.  


"ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಅವಳಿ ಪುತ್ರರಾದ ಕುಶ ಲವರು ಜನಿಸಿದುದು ಶ್ರಾವಣ ಮಾಸದಲ್ಲಿ. ಅವರು ಆದಿ ಗಮಕಿಗಳು ಎಂಬ ನಂಬಿಕೆ ನಮ್ಮದು. ಆದುದರಿಂದ ಅವರ ದಿವ್ಯಸ್ಮರಣೆಗೋಸ್ಕರವಾಗಿ ಶ್ರಾವಣ ಮಾಸದಲ್ಲಿ ನಾಡಿನ ವಿವಿಧ ಸಾಂಸ್ಕೃತಿಕ ಕೇಂದ್ರಗಳಲ್ಲಿ ಗಮಕ ಶ್ರಾವಣ ಎಂಬ ಹೆಸರಿನಲ್ಲಿ ರಾಮಾಯಣ ಮಹಾಕಾವ್ಯದಿಂದಾಯ್ದ ಭಾಗಗಳ ವಾಚನ ವ್ಯಾಖ್ಯಾನಗಳನ್ನು ನಡೆಸುತ್ತಾ ಬರುತ್ತಿದ್ದೇವೆ" ಎಂದು ಸಿರಿಗನ್ನಡ ವೇದಿಕೆಯ ಅಧ್ಯಕ್ಷರೂ ಗಮಕ ಪರಿಷತ್ತಿನ ಕಾರ್ಯದರ್ಶಿಯೂ ಆಗಿರುವ ವಿ.ಬಿ. ಕುಳಮರ್ವ ಪ್ರಸ್ತಾವನೆಯಲ್ಲಿ ತಿಳಿಸಿದರು. 


ಈ ಸಂದರ್ಭದಲ್ಲಿ ತೊರವೆ ರಾಮಾಯಣದಿಂದಾಯ್ದ ಶ್ರೀ ರಾಮ ಜನನದ ಭಾಗವನ್ನು ಗಮಕಿಗಳಾದ ನಿವೃತ್ತ ಮುಖ್ಯೋಪಾಧ್ಯಾಯ ಡಾ. ಶಶಿರಾಜ ನೀಲಂಗಳ ಸುಶ್ರಾವ್ಯವಾಗಿ ವಾಚನ ಮಾಡಿದರು. ನಿವೃತ್ತ ಶಿಕ್ಷಕರಾದ ಗಮಕಿ ಶ್ರೀಹರಿ ಭಟ್ ಪೆಲ್ತಾಜೆ ಮನೋಜ್ಞವಾಗಿ ವ್ಯಾಖ್ಯಾನ ಮಾಡಿದರು. 


ನಿವೃತ್ತ ಸರಕಾರೀ ಅಧಿಕಾರಿಗಳಾದ ಶ್ರೀ ಜಯನಾರಾಯಣ ತಾಯನ್ನೂರು ಸ್ವಾಗತ ಹಾಗೂ ಧನ್ಯವಾದಗಳನ್ನಿತ್ತರು. ವಿ.ಬಿ. ಕುಳಮರ್ವರು ಭಾಮಿನೀ ಷಟ್ಪದಿಯಲ್ಲಿ ರಚಿಸಿದ ಗಮಕ ಗೀತೆಯನ್ನು ಡಾ.ಶಶಿರಾಜ ನೀಲಂಗಳ ಹಾಡಿ ಪ್ರಾರ್ಥನೆ ಮಾಡಿದರು. 


ನಿವೃತ್ತ ಜಿಲ್ಲಾವಿದ್ಯಾಧಿಕಾರಿ ಶ್ರೀಮತಿ ಲಲಿತಾಲಕ್ಷ್ಮೀ ಕುಳಮರ್ವ, ನಿವೃತ್ತ ಸರಕಾರೀ ಅಧಿಕಾರಿ ಗಣೇಶ ಪ್ರಸಾದ ಪಾಣೂರು, ಶಾಮಭಟ್ ಪೇರಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top