ನಾಗರ ಪಂಚಮಿ ಹಬ್ಬವನ್ನು ಕರ್ನಾಟಕ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿವರ್ಷವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನವನ್ನು (ಪಂಚಮಿ) ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ. ಈ ದಿನ ನಾಗನಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿ ಆಗುವಂತೆ ನಾಗದೇವನನ್ನು ಬೇಡುವುದು ವಾಡಿಕೆ. ಈ ದಿನ ಶೇಷ ನಾಗ (ಆದಿಶೇಷ) ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸೆಂದು ನಾಗ ದೇವರಲ್ಲಿ ಬೇಡಿಕೊಂಡು ಜನರು ಹಾಲು ಮತ್ತು ಅರಶಿನ ಕುಂಕುಮ ಮತ್ತು ನೈವೇದ್ಯವನ್ನು ನಾಗನಿಗೆ ಅರ್ಪಿಸುತ್ತಾರೆ. ಈ ಹಬ್ಬವು ಅಣ್ಣ ತಂಗಿ ಇಬ್ಬರೂ ಸೇರಿ ಪೂಜಿಸುವ ಹಬ್ಬವೆಂಬ ಪ್ರತೀತಿಯೂ ಇದೆ.
ನಾಗದೇವರು ಮೋಹ ನಿಯಂತ್ರ ಮತ್ತು ಮೋಹ ಸೃಷ್ಟಿಕರ್ತನೂ ಹೌದು. ನಾಗದೇವರು ಮಹಾ ಚೈತನ್ಯದ (ವಿಷ್ಣುವಿನ) ಸಂಕರ್ಷಣಾ ಶಕ್ತಿಯಾಗಿದೆ. ಸಂಕರ್ಷಣಾ ಶಕ್ತಿ ಎಂದರೆ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವ ಶಕ್ತಿ. ಈ ನಾಗದೇವರ ನಾಯಕ ಸುಬ್ರಹ್ಮಣ್ಯ ದೇವರಾಗಿದ್ದು, ಇವನನ್ನು ದೇವ ಸೇನಾನಿ ಎನ್ನುತ್ತಾರೆ. ದೇವ ಎಂದರೆ ದೇವತೆಗಳು, ಬೆಳಕು, ಜ್ಞಾನ ಎಂದರ್ಥ. ಪಂಚಮಿಯ ದಿನ ನಾಗದೇವರನ್ನು ಆರಾಧಿಸುವ ಮೂಲಕ ಶಕ್ತಿಯನ್ನು ಸಂಪನ್ನಗೊಳಿಸಿ, ಮೋಹಗಳ ನಿಯಂತ್ರಣ ಮಾಡಿಕೊಳ್ಳುವ ಉದ್ದೇಶವೂ ನಾಗರ ಪಂಚಮಿಯ ಆಚರಣೆಯ ಹಿನ್ನೆಲೆಯಲ್ಲಿ ಇದೆ.
ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ಯಥೇಚ್ಛ ಮಳೆ ಬೀಳುವ ದಿನಗಳಲ್ಲಿ. ಈ ಅವಧಿಯಲ್ಲಿ ರೈತನ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಅವಧಿಯಲ್ಲಿ ಕೀಟ, ಮಿಡತೆ ಮತ್ತು ಹುಳುಹುಪ್ಪಟೆಗಳ ಹಾವಳಿ ಅಧಿಕವಾಗಿದ್ದು, ರೈತ ಬೆಳೆದ ಬೆಳೆಗಳನ್ನು ತಿನ್ನಲು ಬರುವ ಇಲಿ ಹೆಗ್ಗಣಗಳಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ರೈತನು ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ನಡೆಸುವ ಪೂಜೆಯೇ ನಾಗರ ಪಂಚಮಿ.
ನಾಗರಪಂಚಮಿಯ ದಿನ ಬೆಳಗ್ಗೆ ಬೇಗನೇ ಎದ್ದು, ನಾಗನ ಕಟ್ಟೆಯನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸುತ್ತಾರೆ. ನಂತರ ಕಟ್ಟೆಯ ಮೇಲೆ ಮಣೆಯನ್ನು ಇಟ್ಟು ಅದರಲ್ಲಿ ಅರಿಶಿನ ಅಥವಾ ರಕ್ತಚಂದನದಿಂದ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು, ಎಳನೀರು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸುತ್ತಾರೆ.ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಅತಿಸೂಕ್ಷ್ಮ ದೈವೀಕಣಗಳು. ಜಗತ್ತಿನ ಎಲ್ಲಾ ಜೀವಜಂತುಗಳು ಒಂದಲ್ಲಾ ಒಂದು ರೀತಿಯಲ್ಲಿ ಪರಸ್ಪರ ಪೂರಕವಾಗಿದ್ದು, ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ 'ಭಗವಂತನು ಅವುಗಳ ಮೂಲಕ ಸತ್ಕಾರ್ಯಗಳನ್ನು ಮಾಡುತ್ತಿದ್ದಾನೆ' ಎಂಬ ವಿಶಾಲ ದೃಷ್ಟಿಕೋನವಿದೆ.
ಸರ್ಪಯಜ್ಞವನ್ನು ನಿಲ್ಲಿಸಿದ ದಿನ: ಪುರಾಣದ ಪ್ರಕಾರ ಜನಮೇಜಯ ರಾಜನು ತನ್ನ ತಂದೆಯಾದ ಪರೀಕ್ಷಿತ ರಾಜನ ಸಾವಿಗೆ ಕಾರಣ ಸರ್ಪವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನೇ ನಾಶ ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸಿದನು. ಋಷಿಗಳು ಹೋಮವನ್ನು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಭಸ್ಮವಾಗತೊಡಗಿದವು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿ ಜರತ್ಕಾರು ಬಳಿ ತೆರಳಿ ತಮ್ಮನ್ನು ಜನಮೇಜಯ ರಾಜನ ಹೋಮದಿಂದ ರಕ್ಷಿಸುವಂತೆ ಬೇಡಿಕೊಂಡವು. ಸರ್ಪಗಳ ಮನವಿಯಂತೆ ಜರತ್ಕಾರು ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡಿದಳು. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಾಗಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಮಾಡುತ್ತಿರುವ ಸರ್ಪಯಜ್ಞವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬೋಧಿಸಿದನು. ಆಸ್ತಿಕನ ಮಾತಿಗೆ ಬೆಲೆಕೊಟ್ಟ ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದನು. ಈ ಯಾಗವನ್ನು ನಿಲ್ಲಿಸಿದ ದಿನವನ್ನೇ ನಾಗರ ಪಂಚಮಿಯೆಂದು ಆಚರಿಸಲಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಈ ನಾಗರ ಪಂಚಮಿಯ ದಿನದಂದು ಭಕ್ತಿ ಮತ್ತು ಶ್ರದ್ಧೆಯಿಂದ, ನಾಗ ದೇವರ ಸೇವೆ ಮಾಡುವ ಉದ್ದೇಶವನ್ನು ಅರಿತು, ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಆರಾಧನೆ ಮಾಡಬೇಕು. ನಾಗದೇವರಿಗೆ ಹಾಲುಬಾಯಿ (ಅಕ್ಕಿ ಹಲ್ವಾ), ಪಂಚಾಮೃತ, ಹಣ್ಣು ಕಾಯಿ, ಅನ್ನ ನೈವೇದ್ಯ, ಕ್ಷೀರ ಪಾಯಸ ಇತ್ಯಾದಿ ಸಮರ್ಪಣೆ ಮಾಡಬಹುದು. ನಾಗದೇವರಿಗೆ ಕೆಂಪು ಹೂವನ್ನು ಹೊರತುಪಡಿಸಿ ಇತರ ಹಳದಿ, ಶ್ವೇತ ವರ್ಣಗಳ ಪರಿಮಳಯುಕ್ತ ಹೂವುಗಳ ಅರ್ಚನೆ ಮಾಡಬೇಕು. ನಾಗನಿಗೆ ಆಶ್ಲೇಷಾ ನಕ್ಷತ್ರವು ವಿಶೇಷವಾಗಿದ್ದು, ಈ ದಿನ ಕೆಲವೆಡೆ ನಾಗ ತಂಬಿಲ, ಆಶ್ಲೇಷಾ ಬಲಿ, ತನು ತರ್ಪಣಾದಿಗಳು ಸಂಪ್ರದಾಯಬದ್ಧವಾಗಿ ನಡೆಯುತ್ತವೆ. ನಾಗರಪಂಚಮಿಯ ದಿನ ಏನನ್ನೂ ಕತ್ತರಿಸಬಾರದು ಅಥವಾ ಕೊಯ್ಯಬಾರದು, ಮತ್ತು ಏನನ್ನೂ ಎಣ್ಣೆಯಲ್ಲಿ ಕರಿಯಬಾರದು. ಒಲೆಯ ಮೇಲೆ ತವೆಯನ್ನು ಇಡಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಅದೇ ರೀತಿ ನಾಗರ ಪಂಚಮಿಯ ದಿನ ಭೂಮಿಯನ್ನು ಅಗೆಯಬಾರದು ಎಂಬ ನಂಬಿಕೆಯೂ ಇದ್ದು, ಈ ದಿನ ನಾಗರನಿಗೆ ಯಾವುದೇ ಉಪಟಳವಾಗಬಾರದು ಎಂದು ರೈತರು ಗದ್ದೆಯನ್ನು ಉಳುವುದಿಲ್ಲ.
ತಮ್ಮ ಪತಿಯ ದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಹಾಗೂ ನಾಗ ದೋಷ ನಿವಾರಣೆಗೆ ಮಹಿಳೆಯರು ನಾಗರ ಪೂಜೆಯನ್ನು ಮಾಡುತ್ತಾರೆ. ರಾಹು ಮತ್ತು ಕೇತುವಿನ ದೋಷಗಳು ಇದ್ದಲ್ಲಿ ನಾಗನನ್ನು ಪೂಜೆ ಮಾಡುವುದರಿಂದ ಅದು ದೂರಾಗುತ್ತದೆ ಮತ್ತು ಸಂತಸ ಧನ ಪ್ರಾಪ್ತಿ ಉಂಟಾಗುತ್ತದೆ. ಹಾವಿನ ಕನಸುಗಳು ಇಲ್ಲವೇ ಹಾವಿನ ಬಗ್ಗೆ ಭಯವನ್ನು ಜನರು ಹೊಂದಿದ್ದರೆ ಅದು ದೂರಾಗುತ್ತದೆ. ನಾಗನ ಪೂಜೆಯಿಂದ ಹೆಂಗಳೆಯರಿಗೆ ಕಂಕಣ ಭಾಗ್ಯ ಮತ್ತು ವಿವಾಹಿತರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದ್ದು, ನಾಗಾರಾಧನೆಯು ಪ್ರಾಕೃತಿಕ ಅಂಶಗಳನ್ನೂ ಒಳಗೊಂಡಿದೆ.
- ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
*******
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ