ಘಟನೆ-1
10.9.1935ರಂದು ಮೈಸೂರಿನಲ್ಲಿ ಖಾಸಗಿಯಾಗಿ ಆರಂಭವಾದ ಮೈಸೂರು ಅಕಾಶವಾಣಿ 2015ರಲ್ಲಿ ತನ್ನ 80ನೇ ವರ್ಷದ ಆಚರಣೆ ಮಾಡಿತು. ಈ ಸಂದರ್ಭದಲ್ಲಿ 1950ರ ದಶಕದ ಆರಂಭದಲ್ಲಿಯ ಒಂದು ಘಟನೆ ಇಲ್ಲಿ ನೆನಪು ಮಾಡಿಕೊಡುತ್ತಿದ್ದೇನೆ. 50ರ ದಶಕದ ಆರಂಭದಲ್ಲಿ "ಪೃಥ್ವೀ ಥಿಯೇಟರ್ಸ್" ಮೈಸೂರಿಗೆ ಆಗಮಿಸಿತು. ಸುಮಾರು 6 ಅಡಿ ಎತ್ತರದ, ಬಾರೀ ಗಾತ್ರದ, ಪೃಥ್ವೀರಾಜ್ಕಪೂರ್ ಈ ಕಂಪನಿಯ ಮಾಲೀಕರು ಹಾಗೂ ಮುಖ್ಯನಾಯಕ ಪಾತ್ರಧಾರಿಗಳು, ಅವರ ಮಕ್ಕಳಾದ ರಾಜಕಪೂರ್, ಶಶಿಕಪೂರ್, ಹರೆಯದವರಾಗಿ ಈ ಕಂಪನಿಯಲ್ಲಿ ನಾಟಕ ಆಡುತ್ತಿದ್ದರು. ಆಗ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಹೆಚ್ಚಿನ ನಾಟಕಗಳು, ಪ್ರತಿ ಭಾನುವಾರ, ರಾತ್ರಿ 8 ರಿಂದ ಒಂದು ಗಂಟೆ ಕಾಲ, ನೇರ ಪ್ರಸಾರವಾಗುತ್ತಿತ್ತು, ಆಗ ಎನ್.ಎಸ್. ವಾಮನ್ ಅವರ ನಿರ್ದೇಶನದ ನಾಟಕಗಳು ಜನಪ್ರಿಯವಾಗಿದ್ದವು.
ಮೈಸೂರು ಆಕಾಶವಾಣಿ, ಆಗ ಶಾರ್ಟ್ವೇವ್ ಇದ್ದುದರಿಂದ, ಅಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡದಷ್ಟು ದೂರದಿಂದ, ಶೋತೃಗಳ ಮೆಚ್ಚುಗೆ ಪತ್ರ ಬರುತ್ತಿದ್ದುದು ಆಗಿನ ಹೆಗ್ಗಳಿಕೆ!. ವಾಮನ್ ಅವರ ನಾಟಕದ ಹುಚ್ಚು, ಪೃಥ್ವಿರಾಜ್ ಅವರ ನಾಟಕ ನೋಡಿದ್ದಷ್ಟಕ್ಕೇ ಸೀಮಿತವಾಗದೇ, ತಾವು ಕಂಡು ಕೇಳಿದ, ಮೆಚ್ಚಿದ, ಶಾಕುಂತಲಾ ನಾಟಕವನ್ನು, ಬಾನುಲಿ ಮೂಲಕ ಶ್ರೋತೃಗಳಿಗೆ ಕೇಳಿಸಲು, ಆಸೆಪಟ್ಟರು. ಮಿತ್ರರೊಂದಿಗೆ ಹೋಗಿ, ಪೃಥ್ವಿರಾಜ್ ಅವರನ್ನು ಹೋಗಿ ಕಂಡು, ಮಾತನಾಡಿ, ಒಪ್ಪಿಸಿದರು. ಒಂದು ದಿನ ಮಧ್ಯಾಹ್ನ 2-30 ರಿಂದ, ವಿಶೇಷ ಪ್ರಸಾರದಲ್ಲಿ 'ಶಾಕುಂತಲಾ' ಹಿಂದೀ ನಾಟಕದ ಬಾನುಲಿ ಪ್ರಸಾರ ನಿಗದಿಯಾಯಿತು.
ಅಂದು ಸ್ಟುಡಿಯೋದಲ್ಲಿ ಸಡಗರವೋ ಸಡಗರ. ಆದರೆ ಮಧ್ಯಾಹ್ನ 2.10ರಿಂದ 2.12 ಗಂಟೆಯಾದರೂ ಕಲಾವಿದರ ತಂಡದ ಪತ್ತೆಯೇ ಇಲ್ಲ. ವಾಮನ್ ಅವರಿಗೆ ಆತಂಕ, ದುಗುಡ, 2.15 ಆಯಿತು. ಇನ್ನೂ ಬರಲಿಲ್ಲವೇ? ಕಾರಣ ತಿಳಿಯದೇ ಚಡಪಡಿಸಿದರು. 2.20. ಕಾರುಗಳ ಸಾಲು ಬಂದವು. ಸರಸರ ಕಲಾವಿದರು ಇಳಿದರು. ಸ್ಟೂಡಿಯೋಗೆ ಧಾವಿಸಿದರು. 20.25 ಕಲಾವಿದರು ವಾದ್ಯಗಾರರು, ಸಂಗೀತಗಾರರು. ಸ್ಟೂಡಿಯೋದ ಮೈಕಿನ ಮುಂದೆ ಅಜಾನುಬಾಹು ಪೃಥ್ವಿರಾಜ್ ಕ್ಷಣಕಾಲ ಕಣ್ಮುಚ್ಚಿ ರಂಗದೇವತೆಯನ್ನು ಪ್ರಾರ್ಥಿಸಿದರು. ಉಳಿದವರೆಲ್ಲಾ ಅವರ ಪಾದಮುಟ್ಟಿ ನಮಸ್ಕರಿಸಿದರು. 2.30ಕ್ಕೆ, ಆರಂಭವಾದ ಶಾಕುಂತಲಾ ಸತತ ಎಡೆಬಿಡದೆ 3 ಗಂಟೆಗಳ ಕಾಲ, ಪ್ರಸಾರವಾಯಿತು. ನಾಟಕಾಭಿಮಾನಿ ಶ್ರೋತೃಗಳಿಗೆ, ಕಲಾರಸಿಕರಿಗೆ, ಬಾನುಲಿ ಅಲೆಗಳ ಮೇಲೆ ತೇಲಿಬಂದ ಈ ನಾಟಕ, ಕರ್ಣರಸಾಯನವಾಯಿತು. ಒಂದೇ ಮೈಕು. ಅದಕ್ಕೆ ಹೊಂದಿಕೊಂಡು, ಎಲ್ಲರ ಓಡಾಟ ಎಲ್ಲರ ಧ್ವನಿ ಸ್ವಷ್ಟವಾಗಿ ಕೇಳಿ ಬರುವಂತೆ, ಪಾತ್ರಗಳ ಆಗಮನ-ನಿರ್ಗಮನ.
ಆ ಸಂದರ್ಭದಲ್ಲಿ ಯಾರೋ ಕಲಾ ರಸಿಕರು, ಪೃಥ್ವಿರಾಜ್ ಕಪೂರ ಅವರನ್ನು ಅಪ್ಪಿ ತಪ್ಪಿ, 'ಇವರು ರಾಜಕಪೂರ ಅವರ ತಂದೆ' ಎಂದು ನುಡಿದರು. ತಕ್ಷಣ ಪೃಥ್ವಿರಾಜ್ ನಗುನಗುತ್ತಲೇ ನುಡಿದರು. "ಅಲ್ಲ ಅಲ್ಲ. ರಾಜಕಪೂರ ನನ್ನ ಮಗ" ಎಂದು.
ಘಟನೆ-2
1950ರ ದಶಕದ ಆರಂಭದ ಒಂದು ದಿನ. ಮೈಸೂರಿನ ಟೌನ್ ಹಾಲ್ ತುಂಬಿದೆ. ಶಾಕುಂತಲಾ ನಾಟಕ ನಡೆದಿದೆ. ಪೃಥ್ವೀ ಥಿಯೇಟರ್ಸ್ನ ಮಾಲೀಕರು, ಹಾಗೂ ಕಲಾವಿದ ಪೃಥ್ವಿರಾಜ್ ಕಪೂರ ದುಷ್ಯಂತನ ಪಾತ್ರದಲ್ಲಿ. ಸೂಜಿ ಬಿದ್ದರೂ, ಕೇಳಿಸುವಷ್ಟು ನಿಶ್ಯಬ್ದ. ಕಂಪನಿಯ ಇಂಜಿನಿಯರ್, ಉತ್ತಮ ಧ್ವನಿ ವ್ಯವಸ್ಥೆ ಮಾಡಿದ್ದರು. ನಾಟಕದ ರಸನಿಮಿಷಗಳು. ಶಾಕುಂತಲೆ, ದುಷ್ಯಂತರ ಏಕಾಂತ, ಪಿಸುಧ್ವನಿಯ ಪ್ರಣಯದ ಮಾತುಗಳು. ರಂಗದ ಮೇಲೆ ಕಲಾವಿದರು ಪೃಥ್ವಿರಾಜ್ ಹಾಗೂ ಸಹ ನಟಿ. ಪ್ರೇಕ್ಷಕ ಗೃಹದಲ್ಲಿ, ಪ್ರೇಕ್ಷಕರು ನಾಟಕದಲ್ಲಿ ತಲ್ಲೀನರಾಗಿ, ರಸಾಸ್ವಾದನೆ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಧ್ವನಿ "ಸ್ವಲ್ಪ ಜೋರಾಗಿ ಮಾತಾಡೋ ಅದಕ್ಕೆ ಏನು ಕಷ್ಟ" ಎಂದು ಕೂಗಿತು.
ರಸಿಕರ ರಸಸಮಾಧಿಗೆ ಭಂಗ, ಕಲಾವಿದರ ತನ್ಮಯತೆಯ ಅಭಿನಯಕ್ಕೂ ಭಂಗ. ಏನೆಂದು ದಿಟ್ಟಿಸಿದರು, ಮಾಲೀಕರೂ, ಹಾಗೂ ಕಲಾವಿದರಾಗಿದ್ದ ದುಷ್ಯಂತನ ಪಾತ್ರದ ಪೃಥ್ವಿರಾಜ್. "ಅವರಿಗೆ ಅಲ್ಲಿವರೆಗೆ ಕೇಳಿಸುತ್ತಿಲ್ಲ ಜೋರಾಗಿ ಮಾತಾಡಿ" ಎಂದಿತಂತೆ ಒಂದು ಧ್ವನಿ. ಯಾರೋ ಇದನ್ನು ಭಾಷಾಂತರಿಸಿದರು. ತಕ್ಷಣ ಪರದೆ ಬಿತ್ತು ಮೈಕಿನ ಮುಂದೆ ಬಂದು ಗುಡುಗಿತು, ಆ ಕಲಾಸಿಂಹ.
"ಮೈಸೂರಿನ ಪ್ರಿಯ ಕಲಾರಸಿಕರೇ. ಶಾಕುಂತಲಾ ನಾಟಕದ ದೃಶ್ಯದ ನೈಜತೆಯಂತೆ, ಏಕಾಂತದಲ್ಲಿರುವ ಪ್ರೇಮಿಗಳು, ಹೀಗೇ ಮಾತಾಡಬೇಕು ಹೊರತು, ಕಿರುಚಲು, ಇವು ರಸ್ತೆ ರೋಮಿಯೋ ಪಾತ್ರಗಳಲ್ಲ. ಅಲ್ಲದೇ, ನಮ್ಮ ಕಂಪನಿಯ ನಿಷ್ಣಾತ ಕುಶಲ ಇಂಜಿನಿಯರ್, ಹಲವಾರು ಬಾರಿ ಪರೀಕ್ಷಿಸಿ, ಉತ್ತಮ ಧ್ವನಿ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ ನಿಶ್ಯಬ್ದವಾಗಿದ್ದರೆ, ಕೊನೆಯವರೆಗೆ, ಕೊನೆಯ ಸೀಟಿನವರೆಗೆ, ಸ್ವಷ್ಟ ಹೇಳಿಸುತ್ತದೆ. ಆದರೆ ಈ ಮಿತ್ರರು ಬೇಕು ಬೇಕೆಂದೇ ಕುಡಿದು ಬಂದ ಮತ್ತಿನಲ್ಲಿ, ಹೀಗೆ ಹೇಳುತ್ತಿದ್ದಾರೆ.
ಇದರಿಂದ ಕಲಾ ಸಂಸ್ಕೃತಿಗೆ ಅಪಚಾರವಾಗಿದೆ. ಮೈಸೂರು, ಅರಮನೆ, ಗುರುಮನೆಗಳಿಂದ ಕೂಡಿ, ನಾಟಕ, ಸಂಗೀತ, ನೃತ್ಯ ಕಲೆಗಳಿಗೆ, ಸಂಸ್ಕೃತಿಗೆ, ಮನ್ನಣೆ ನೀಡುವ ನಾಡು. ಇಲ್ಲಿ ನಾಟಕವಾಡಿ, ಮೆಚ್ಚುಗೆ ಪಡೆವ ಅಕಾಂಕ್ಷೆಯಿಂದ ಬಂದಿದ್ದೇವೆ. ನೀವು ಸಹಕರಿಸಿದರೆ, ನಾವು ನಾಟಕ ಆಡಬಹುದಷ್ಟೇ! ಈಗ ನೀವೇ ಹೇಳಿ. ನಿಮಗೆ ನಾಟಕ ಇಷ್ಟವಾಗಿಲ್ಲವೇ? ಬೇಡ ಎನ್ನಿ. ಈ ಘಳಿಗೆ, ನಿಮ್ಮ ಕೋರಿಕೆ ಮನ್ನಿಸಿ, ನಮ್ಮ ನಾಟಕ ನಿಲ್ಲಿಸಿ, ನಿಮ್ಮ ಟಿಕೇಟ್ ಹಣ ನಿಮಗೆ ವಾಪಸ್ಸು ಕೊಡುತ್ತೇವೆ". ತಕ್ಷಣ ಮೈಸೂರಿನ ಅಂದಿನ ರಸಿಕ ಜನ ಜೋರಾಗಿ ಕೂಗಿದರು. "ನಾಟಕ ನಿಲ್ಲಿಸಬೇಡಿ ಮುಂದುವರೆಸಿ" ಎಂದು. ಕಲಾರಸಿಕರು, ತಾವೇ ಆ ಕುಡುಕ ವ್ಯಕ್ತಿಯನ್ನು ಹೊರತಳ್ಳಿ, ಬಾಗಿಲು ಹಾಕಿದರು. ನಂತರ ನಾಟಕ ಅತ್ಯಂತ ನಿಶ್ಯಬ್ದ ವಾತಾವರಣದಲ್ಲಿ ಮುಂದುವರೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ