ಶಾಶ್ವತವಾಗಿ ನಮ್ಮ ನೆರವಿಗೆ ಬರುವುದು ಧರ್ಮ ಮಾತ್ರ: ರಾಘವೇಶ್ವರ ಶ್ರೀ

Upayuktha
0

ಗೋಕರ್ಣ: ರೂಪ, ವಿದ್ಯೆ, ಬಲ, ಪರಾಕ್ರಮ ಯಾವುದೂ ಅಂತ್ಯದ ಕಾಲದಲ್ಲಿ ನಮ್ಮ ನೆರವಿಗೆ ಬರುವುದಿಲ್ಲ. ಪರಲೋಕ ಯಾತ್ರೆಯಲ್ಲಿ ನಮ್ಮ ನೆರವಿಗೆ ಬರುವುದು ಧರ್ಮ ಮಾತ್ರ. ಅದು ನಮ್ಮ ಪರಮಸ್ನೇಹಿತನಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 22ನೇ ದಿನವಾದ ಭಾನುವಾರ ಉತ್ತರ ಬೆಂಗಳೂರು ಮಂಡಲದ ಭಿಕ್ಷಾಸೇವೆ ಸ್ವೀಕರಿಸಿ, ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಬದುಕಿನಲ್ಲಿ ನಾವು ಎಷ್ಟು ಸರಿ ಇದ್ದೆವು ಎನ್ನುವುದಷ್ಟೇ ಪ್ರಮುಖವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಭಾರತೀಯರು ಎಂದೂ ಸಾವಿಗೆ ಅಂಜುವವರಲ್ಲ; ಅತಿಥಿಗಳನ್ನು ನಾವು ಪ್ರತೀಕ್ಷೆ ಮಾಡುವಂತೆ ಜೀವನದಲ್ಲಿ ತಮ್ಮ ಕರ್ತವ್ಯವನ್ನು ಪೂರೈಸಿ ಸಾವಿನ ಪ್ರತೀಕ್ಷೆಯಲ್ಲಿರುವ ಮಹಾತ್ಮರು ನಮ್ಮಲ್ಲಿದ್ದಾರೆ. ಇದಕ್ಕೆ ಧರ್ಮರಾಯನ ಮಹಾಪ್ರಸ್ಥಾನ ಅತ್ಯುತ್ತಮ ನಿದರ್ಶನ ಎಂದರು.


ಶಾಪಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾವ ಶಾಪ ಕೂಡಾ ಕೆಟ್ಟದಲ್ಲ; ಅದು ಒಳ್ಳೆಯದಕ್ಕೆ ಮುನ್ಸೂಚನೆ. ಋಷಿಮುನಿಗಳು, ಮಹಾತ್ಮರು ಶಾಪ ನೀಡಿದರೂ ಅದರ ಪರಿಣಾಮ ಉತ್ತಮವಾಗಿರುತ್ತದೆ. ಅದು ನಾವು ಮಾಡಿದ ತಪ್ಪಿಗೆ ಚಿಕಿತ್ಸಕ ರೂಪದಲ್ಲಿರುತ್ತದೆ ಎಂದು ವಿಶ್ಲೇಷಿಸಿದರು.


ಅಣಿಮಾಂಡವ್ಯನ ಶಾಪದಿಂದಾಗಿ ಯಮ, ಧರ್ಮರಾಯ ಹಾಗೂ ವಿಧುರನ ರೂಪದಲ್ಲಿ ಮನುಷ್ಯನಾಗಿ ಜನ್ಮಿಸುತ್ತಾನೆ. ಸಾಮಾನ್ಯವಾಗಿ ಸತ್ವಗುಣದಲ್ಲಿ ಸಮಾಜಕ್ಕೆ ಅಭಿರುಚಿ ಇಲ್ಲ; ರಜೋಗುಣ ತಮೋಗುಣಗಳಲ್ಲಿಯೇ ಸಮಾಜಕ್ಕೆ ಹೆಚ್ಚಿನ ಆಸಕ್ತಿ. ಆದರೆ ಧರ್ಮರಾಯನದ್ದು ಪರಿಪೂರ್ಣ ಸಾತ್ವಿಕ ಪಾತ್ರ. ಆದರೆ ಕೊನೆಗೂ ಗೆಲ್ಲುವುದು ಸತ್ವಗುಣ. ಆತ ಅಜಾತಶತ್ರು. ಅಂತಿಮವಾಗಿ ಗೆಲ್ಲುವುದು ಸತ್ವಗುಣ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.


ಮಹಾಭಾರತದ ಕೊನೆಗೆ ಶ್ರೀಕೃಷ್ಣ ಪರಂಧಾಮಗೈದು ಯಾದವರು ಬಹುತೇಕ ನಾಶವಾದ ಸುದ್ದಿ ತಿಳಿದ ಧರ್ಮರಾಯ ಮಹಾಪ್ರಸ್ಥಾನದ ನಿರ್ಧಾರ ಕೈಗೊಂಡ. ನಾವು ಮಾಡಬೇಕಾದ ಕಾರ್ಯವನ್ನೆಲ್ಲ ಪೂರೈಸಿದ ಬಳಿಕ ಉತ್ತರದ ಕಡೆಗೆ ನಡೆದುಕೊಂಡು ಹೋಗುವುದು ಮಹಾಪ್ರಸ್ಥಾನ. ಯಾದವರಿಗೆ ವಜ್ರನನ್ನು ದೊರೆಯಾಗಿ, ಪಾಂಡವರ ಸೈನ್ಯಕ್ಕೆ ಪರೀಕ್ಷಿತನನ್ನು ರಾಜನಾಗಿಸಿ, ಕೃಪನನ್ನು ಗುರುವಾಗಿಸಿ, ಎಲ್ಲರ ಯೋಗಕ್ಷೇಮದ ಹೊಣೆಯನ್ನು ಸುಭದ್ರೆಗೆ ವಹಿಸಿ ಪಾಂಡವರು ಮಹಾಪ್ರಸ್ಥಾನಕ್ಕೆ ತೆರಳುತ್ತಾರೆ ಎಂದು ವಿವರಿಸಿದರು.


ಪಾಂಡವರು ಹರ್ಷಚಿತ್ತರಾಗಿದ್ದರೆ ಇಡೀ ಸಾಮ್ರಾಜ್ಯ ಶೋಕಿಸುತ್ತಿದೆ. ಶ್ವಾನಸಹಿತವಾದ ಯಾನದಲ್ಲಿ ಬಹುದೂರದವರೆಗೆ ಹಲವು ಮಂದಿ ಪ್ರಜೆಗಳೂ ಹಿಂಬಾಲಿಸುತ್ತಾರೆ. ಕೃಪ, ಯುಯುತ್ಸು ಹಸ್ತಿನಾವತಿಗೆ ಮರಳಿದ. ಪಾಂಡವರು ಯೋಗಯುಕ್ತರಾಗಿ, ತ್ಯಾಗಧರ್ಮಯುಕ್ತರಾಗಿ ಭೂಪ್ರದಕ್ಷಿಣೆ ಮಾಡುತ್ತಾರೆ. ಪೂರ್ವ, ದಕ್ಷಿಣ ಪಶ್ಚಿಮ ದಿಕ್ಕನ್ನು ಮುಗಿಸಿ ಉತ್ತರಾಭಿಮುಖವಾಗಿ ಸಾಗಿದರು. ಹಿಮಾಲಯ ದಾಟಿ ಮೇರುಪರ್ವತ ಕಾಣುತ್ತಾರೆ. ಆಗ ದ್ರೌಪತಿಯ ಅಂತ್ಯವಾಗುತ್ತದೆ ಎಂದರು.


ಯಾವ ಪಾಪವನ್ನೂ ಮಾಡದ ದ್ರೌಪದಿ ಯೋಗಭ್ರಷ್ಟಳಾಗಿ ಬೀಳಲು ಕಾರಣವೇನು ಎಂದು ಅರ್ಜುನ ಪ್ರಶ್ನಿಸಿದಾಗ, ಪರಮ ಪತಿವ್ರತೆಯಾದರೂ ಅರ್ಜುನನ ಪರ ಪಕ್ಷಪಾತ ಹೊಂದಿದ್ದರ ಫಲವಾಗಿ ಹೀಗಾಯಿತು ಎಂದು ಧರ್ಮರಾಯ ಹೇಳುತ್ತಾನೆ. ಬಳಿಕ ಶಾಸ್ತ್ರಜ್ಞಾನವಿದ್ದರೂ ಗರ್ವ ಹೊಂದಿದ್ದ ಕಾರಣಕ್ಕೆ ಸಹದೇವ, ರೂಪದ ಬಗೆಗಿನ ಅಭಿಮಾನದಿಂದ ನಕುಲ, ಒಂದು ಹಗಲಿನಲ್ಲಿ ಎಲ್ಲ ಯೋಧರನ್ನು ಗೆಲ್ಲುತ್ತೇನೆ ಎಂದು ಆಡಿದ್ದು ಸುಳ್ಳಾದ ಕಾರಣಕ್ಕೆ ಅರ್ಜುನ, ಅಗತ್ಯಕ್ಕಿಂತ ಹೆಚ್ಚು ತಿಂದ ಕಾರಣಕ್ಕೆ ಭೀಮ ಯೋಗಭ್ರಷ್ಟರಾಗುತ್ತಾರೆ ಎಂದು ಬಣ್ಣಿಸಿದರು.


ಎಲ್ಲರೂ ಯೋಗಭ್ರಷ್ಟರಾಗಿ ಜೀವಂತ ಸ್ವರ್ಗಕ್ಕೇರಲು ಸಾಧ್ಯವಾಗಲಿಲ್ಲ. ಸತ್ತು ಸ್ವರ್ಗ ಸೇರಬೇಕಾಯಿತು. ಆದರೆ ಧರ್ಮದ ಕಾರಣದಿಂದ ಧರ್ಮರಾಯ ಮಾತ್ರ ಸದೇಹ ಸ್ವರ್ಗಾರೋಹಣ ಮಾಡಲು ಸಾಧ್ಯವಾಯಿತು ಎಂದರು.


ವಿದ್ಯಾನಂದ ಬಳಿ ಸುಮಾರು 13 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳಿಸಿದ ಜಲಮಂಡಲವನ್ನು ಅರ್ಕೋಡ್ಲು ಗಣೇಶ ಅನಾವರಣಗೊಳಿಸಿದರು.


ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಹೆಗಡೆ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಜಿ.ಜಿ.ಹೆಗಡೆ ತಲೆಕೇರಿ, ಉತ್ತರ ಬೆಂಗಳೂರು ಮಂಡಲ ಕಾರ್ಯದರ್ಶಿ ಕೆ.ಬಿ.ರಾಮಮೂರ್ತಿ, ಯುವಪ್ರಧಾನ ಕೇಶವಪ್ರಕಾಶ್ ಮುಣ್ಚಿಕಾನ, ಮಾತೃಪ್ರಧಾನರಾದ ವೀಣಾ ಜಿ.ಪುಳು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಆರ್ಯ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top