ದಾರಿದೀಪ-12: ನಿಜವಾದ ವೀರ ಯಾರು?

Upayuktha
0



ಸ್ವಾಮಿ ವಿವೇಕಾನಂದರು ಹೇಳುವ ಹಾಗೆ ಜಗತ್ತನ್ನ ಗೆದ್ದು ಮಹಾನ್ ಸಾಮ್ರಾಟನಾಗಿ ಬಲಾಢ್ಯವಾದ ಸಾಮ್ರಾಜ್ಯ ಕಟ್ಟಿದವನು ವೀರನಲ್ಲ. ಬದಲಾಗಿ ತನ್ನ ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಸಾಧಿಸಿ ಅವುಗಳ ಇಚ್ಛೆಯಂತೆ ನಡೆಯದೆ ಯಾರು ದೃಢವಾಗಿ ನಿಂತಿರುತ್ತಾನೆಯೋ ಅವನೇ ನಿಜವಾದ ವೀರ. ಒಬ್ಬ ವ್ಯಕ್ತಿಯು ಹೆಂಡತಿ ಮಕ್ಕಳನ್ನು ಬಿಟ್ಟು ಸನ್ಯಾಸಿಯಾಗಿ ಕಾಶಿಗೆ ಹೋಗಿರುತ್ತಾನೆ. ಸುಮಾರು ಮೂವತ್ತು ವರ್ಷ ಧ್ಯಾನ ತಪಸ್ಸು ಮಾಡುತ್ತಾನೆ. ಒಂದು ದಿನ ಊರ ಜನರ ಜೊತೆಗೂಡಿ ಆತನ ಹೆಂಡತಿಯು ಕಾಶಿಯ ಯಾತ್ರೆಗೆ ಬಂದಿರುತ್ತಾಳೆ. ಊರ ಜನರು ಅಲ್ಲಿರುವ ಮಹಾತ್ಮರಿಗೆ ನಮಸ್ಕಾರ ಮಾಡುತ್ತಿರುವಾಗ ಅವಳೂ ನಮಸ್ಕಾರ ಮಾಡುತ್ತಾಳೆ. ಆಗ ಅವನಿಗೆ ಅರಿವಾಗುತ್ತದೆ- ಇವಳು ನನ್ನ ಹೆಂಡತಿ ಎಂದು. ಅವಳನ್ನ ಕೇಳುತ್ತಾನೆ ಮಕ್ಕಳು ಹೇಗಿದ್ದಾರೆ? ನೀನು ಹೇಗಿರುವೆ ಎಂದು. ಅವಳಿಗೆ ಇವರ್ಯಾರು ಎನ್ನೋದು ತಿಳಿಯುವುದಿಲ್ಲ. ಮಹಾತ್ಮರೆ ಯಾರು ನೀವು ಎಂದಾಗ ನಾನು ನಿನ್ನ ಗಂಡ ಎಂದನು. ಆಗ ಅವಳು ಹೇಳಿದಳು- ಕಾಶಿಗೆ ಬಂದು ತಪಸ್ಸು ಮಾಡಿದರು ಇನ್ನೂ ನಿನ್ನ ಮೋಹದ ಆಸೆಗಳು ತೀರಿಲ್ಲ. ಇಂದ್ರಿಯಗಳು ಅದೇ ಸಂಸಾರದ ಚಿಂತೆಯಲ್ಲಿವೆ. ಹೊರಟು ನನ್ನ ಜೊತೆಗೆ ಮನೆಗೆ ಬನ್ನಿ. ನೀವು ತಪಸ್ಸು ಮಾಡಿದ್ದು ವ್ಯರ್ಥವೇ ಎಂದಳು.

ಎಲ್ಲವನ್ನು ಬಿಟ್ಟು ತ್ಯಾಗ ಮಾಡಿ ಬಂದು ಸನ್ಯಾಸತ್ವ ಸ್ವೀಕರಿಸಿ ಕಾಶಿಯಲ್ಲಿ ಸುಮಾರು ವರ್ಷ ತಪಸ್ಸು ಮಾಡಿದವನ ಪರಿಸ್ಥಿತಿ ಹೀಗಿರಬೇಕಾದರೆ ಇನ್ನು ದಿನನಿತ್ಯ ನಾನು ಸಂಸಾರದ ಮಧ್ಯೆ ಇರುವಾಗ ಇನ್ನು ನಮ್ಮ ಪಾಡೇನು? ನೀರು ಮತ್ತು ಇಂದ್ರಿಯಗಳಲ್ಲಿ ಸಾಮಾನ್ಯವಾಗಿ ಒಂದು ಹೋಲಿಕೆ ಇದೆ. ನೀರು ಯಾವಾಗಲೂ ಕೆಳಮುಖವಾಗೇ ಹರಿಯುತ್ತದೆ, ಹಾಗೆ ಇಂದ್ರಿಯಗಳು ಕೆಳಮುಖವಾಗಿ ಜಾರುತ್ತವೆ. ನಾವು ನೀರನ್ನು ಯಂತ್ರದ ಸಹಾಯದಿಂದ ಮೇಲೆತ್ತಿ ಸಂಗ್ರಹಿಸಿದರೆ ಅದರ ಪ್ರಚ್ಛನ್ನ ಶಕ್ತಿ ಅಧಿಕವಾಗಿರುತ್ತದೆ. ಹಾಗೆ ಜಾರಿ ಹೋಗುತ್ತಿರುವ ನಮ್ಮ ಇಂದ್ರಿಯಗಳನ್ನು ಮಹಾತ್ಮರ ನುಡಿಗಳೆಂಬ ಯಂತ್ರದಿಂದ ಮೇಲಕ್ಕೆತ್ತಿದರೆ ಅದರಿಂದ ಮಹಾಜ್ಞಾನ ಶಕ್ತಿಯೇ ಉತ್ಪಾದನೆ ಆಗುತ್ತದೆ.


ಹಳ್ಳಿಗಳಲ್ಲಿ ಹಗ್ಗ ಜಗ್ಗುವ ಆಟ ನಡೆಯುತ್ತದೆ. ಅದರಲ್ಲಿ ಒಂದೇ ಹಗ್ಗವನ್ನು ಎರಡು ತಂಡಗಳು ಜಗ್ಗುತ್ತಿರುತ್ತವೆ. ಯಾವ ತಂಡವು ಹಗ್ಗವನ್ನು ತಮ್ಮೆಲ್ಲ ಶಕ್ತಿಯನ್ನು ಉಪಯೋಗಿಸಿ ಜೋರಾಗಿ ಎಳೆಯುತ್ತದೆಯೋ ಆ ತಂಡ ವಿಜಯವಾಗುತ್ತದೆ. ಇನ್ನು ಯಾವ ತಂಡ ಹಗ್ಗವನ್ನು ಸರಳವಾಗಿ ಹೊರಬಿಡುತ್ತದೆಯೋ ಅದು ಸೋಲುತ್ತದೆ. ಹಾಗೆ ಒಂದೇ ಹಗ್ಗದಂತೆ ಒಂದೇ ತರನಾದ ಇಂದ್ರಿಯಗಳನ್ನು ಯಾರು ತನ್ನೆಲ್ಲಾ ಶಕ್ತಿಯನ್ನ ಉಪಯೋಗಿಸಿ ತನ್ನೆಡೆಗೆ ಎಳೆದು ನಿಲ್ಲಿಸಿರುತ್ತಾನೆಯೋ ಅವನು ಯೋಗಿಯಾಗುತ್ತಾನೆ, ಬದುಕು ಗೆಲ್ಲುತ್ತಾನೆ, ಇನ್ನು ಯಾವ ವ್ಯಕ್ತಿಯೂ ಅವುಗಳನ್ನು ಸರಳವಾಗಿ ಹೊರಚಾಚಲು ಬಿಡುತ್ತಾನೆಯೋ ಆತ ದುಃಖಿಯಾಗುತ್ತಾನೆ. ಅವನಿಗೆ ಬದುಕು ಘೋರವೆನಿಸುತ್ತದೆ. ಇಂದ್ರಿಯಗಳ ಸುಖ ಕ್ಷಣಿಕವಾದದ್ದು. ಇಲಿಗೂ ಹಾವಿನ ಬುಟ್ಟಿಯನ್ನ ಕಚ್ಚುವಾಗ ಸುಖವೆನಿಸತ್ತದೆ, ಒಳಗೆ ಏನೋ ಸಿಗಬಹುದೆಂದು ಆನಂದವಾಗುತ್ತದೆ. ಆದರೆ ಆ ಬುಟ್ಟಿ ಕಡೆದು ತಾನಾಗೇ ಹೋಗಿ ಹಾವಿಗೆ ಆಹಾರವಾಗುತ್ತದೆ. ಹಾಗೆ ಇಂದ್ರಿಯಗಳ ಒಳಗೆ ಸುಖ ಇದೆ ಎಂದು ಹೊರಟರೆ ಅಲ್ಲಿ ಕೊನೆಗೆ ಸಿಗುವುದು ದುಃಖವೇ ಆಗಿರುತ್ತದೆ. 


-ಶ್ರೀರಾಮಕೃಷ್ಣ ದೇವರು 

ಶ್ರೀ ಷಣ್ಮುಖಾರೂಢ  ಮಠ.ವಿಜಯಪುರ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top