ಕಡುಲೋಭದಿಂದೆ ದುರ್ಗುಣಮನ್ಯವುಂಟೆ ಇದು ಶ್ರೀಮನ್ ನಿಜಗುಣ ಶಿವಯೋಗಿಗಳು ಕೈವಲ್ಯ ಪದ್ಧತಿಯಲ್ಲಿ ರಚಿಸಿದ ಅಚ್ಚಗನ್ನಡದ ಸಾಲು. ಕಡುಲೋಭ ಎಂದರೆ ಅತಿಯಾದ ಆಸೆ, ಸಂಪತ್ತಿನ ಮೋಹ, ಎಲ್ಲಾ ಐಶ್ವರ್ಯವೂ ತನಗೆ ಮಾತ್ರ ದಕ್ಕಬೇಕೆನ್ನುವ ಇಚ್ಚೆ ಇದನ್ನು ಹೊಂದಿದವನು ದುರ್ಗುಣಿಯಾಗಿರುತ್ತಾನೆ. ಅವನ ಈ ಗುಣದಿಂದ ತನಗೂ ಏನು ಲಾಭವಾಗದು ಸಮಾಜಕ್ಕೂ ಪ್ರಯೋಜನವಿಲ್ಲ, ಅತಿಯಾದ ಲೋಭದಾಸೆಗಿಂತ ಹೀನಗುಣ ಮತ್ತೊಂದಿಲ್ಲ.
ಉಣ್ಣದೊಡವೆಯಗಳಿಸಿ
ಮಣ್ಣೊಳಗೆ ಬಚ್ಚಿಟ್ಟು
ಚೆನ್ನಾಗಿ ನೆಲಸಾರಿಸಿ
ಬಾಯೊಳಗೆ ಮಣ್ಣು ಹಾಕಿಕೊಂಡ ಸರ್ವಜ್ಞ.
ಇಲ್ಲಿ ಸರ್ವಜ್ಞನು ನಮ್ಮನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾನೆ. 'ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರವಶ'. ನಮಗೆ ಸಾಧ್ಯವಾದಷ್ಟು ದಾನ ಪರೋಪಕಾರಗಳನ್ನು ಮಾಡಬೇಕು. ಇಟ್ಟು ಕೊರಗುವುದಕಿಂತ ಕೊಟ್ಟು ಆನಂದಿಸಬೇಕು ನೀನು ಮಾಡಿದ ದಾನದಿಂದ ಬಂದ ಪುಣ್ಯ ಮಾತ್ರ ನಿನ್ನ ಜೊತೆಗೆ ಇರಬಲ್ಲದು.ಯಾವತ್ತಿಗೂ ಕೊಟ್ಟದ್ದು ಕೆಟ್ಟಿತೆನಬೇಡ. ನಾವು ಎಷ್ಟೇ ಜಿಪುಣತನದಿಂದ ಸಂಪಾದಿಸಿದ ಸಂಪತ್ತು ಶಾಶ್ವತವಾದದ್ದಲ್ಲ ಅದು ಗಾಳಿಗೆ ಹಚ್ಚಿಟ್ಟ ದೀಪದಂತೆ ಯಾವ ಕ್ಷಣದಲ್ಲಿ ಬೇಕಾದರೂ ಆರಿಹೋಗಬಹುದು.
ನದಿಯ ನೀರು ಸದಾಕಾಲ ಹರಿಯುವುದೇ! ಅದು ಸ್ಥಿರವಾಗಿ ನಿಲ್ಲದು ಆ ನೀರಿನ ಕಮಲದ ಮೇಲೆ ನಿಂತ ಲಕ್ಷ್ಮಿಯು ಚಂಚಲೇ ಅವಳು ಒಂದು ಕಡೆ ಸ್ಥಿರವಾಗಿ ಇರಲಾರಳು ನಮ್ಮ ಹತ್ತಿರ ಇರುವಾಗಲೇ ಅವಳನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಕಡುಲೋಭದಿಂದ ಯಾವ ಪ್ರಯೋಜನವೂ ಇಲ್ಲ ಅರ್ಥಶಾಸ್ತ್ರದಲ್ಲಿ ಬರುವ ಬೇಡಿಕೆ ರೇಖೆಯಲ್ಲಿ ಮೂರ್ಖ ಹಾಗೂ ಜಿಪುಣನನ್ನು ಒಂದೇ ರೀತಿಯಾಗಿ ಗುರುತಿಸುತ್ತಾರೆ. ಒಂದೊಂದು ಸಮಯದಲ್ಲಿ ಮೂರ್ಖನೆ ಜಿಪುಣರಿಗಿಂತ ಎಷ್ಟು ವಾಸಿಯಾದವನು.
ಒಂದು ಬಾರಿ ಒಬ್ಬ ಜಿಪುಣ ಶ್ರೀಮಂತನು ತನಗೆ ತುಪ್ಪದ ಉಂಡಿಯನ್ನು ತಿನ್ನಬೇಕೆನಿಸಿತು ಅದೇ ಸಮಯಕ್ಕೆ ಆತನ ಹೆಂಡತಿಯು ತವರೂರಿಗೆ ಹೋದಳು. ಗಂಡ ಹೆಂಡತಿಯರಿಬ್ಬರೇ ಇರುವುದರಿಂದ ಆಗ ಮನೆಯೊಳಗೆ ಇವನೊಬ್ಬನೇ ಉಳಿದುಕೊಂಡ ತುಪ್ಪದ ಉಂಡಿಗೆ ಬೇಕಾದ ಸಾಮಗ್ರಿಗಳನ್ನು ಪಕ್ಕದ ಮನೆಯ ಹುಡುಗನ ಕಡೆಗೆ ದುಡ್ಡು ಕೊಟ್ಟು ಅಂಗಡಿಯಿಂದ ತರಿಸಿಕೊಂಡ ಆ ಹುಡುಗ ಕೇಳಿದ ಸಾಹುಕಾರರೇ ನಾನು ನಿಮ್ಮ ಕೆಲಸ ಮಾಡಿದ್ದೇನೆ ನನಗೂ ಉಂಡಿಕೊಡಿ ಎಂದಾಗ ಆ ಜಿಪುಣ ಸಾಹುಕಾರನಿಗೆ ಕೊಡುವ ಮನಸಿರಲಿಲ್ಲ ಈ ಹುಡುಗ ಮಾತ್ರ ಬಿಡುತ್ತಿಲ್ಲ ಆಗ ಶ್ರೀಮಂತ ಒಂದು ಸ್ಪರ್ಧೆ ಇಟ್ಟ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಎಲ್ಲ ಉಂಡಿ ಎಂದ. ಆಗ ಹುಡುಗನು ಒಪ್ಪಿಕೊಂಡ. ಸ್ಪರ್ಧೆ ಏನೆಂದರೆ ಯಾರು ಮಲಗಿ ದೊಡ್ಡ ಕನಸನ್ನು ಕಾಣುತ್ತಾರೋ ಅವರಿಗೆ ಗೆಲುವು. ಇಬ್ಬರೂ ಮಲಗಿದರೂ ಕೆಲವು ಹೊತ್ತಿನ ನಂತರ ಎದ್ದರು ಹುಡುಗ ಕೇಳಿದ ಶ್ರೀಮಂತರೇ ನಿಮ್ಮ ಕನಸನ್ನು ಹೇಳಿ ಆಗ ಶ್ರೀಮಂತನು ನಾನು ಈ ದೇಶದ ಪ್ರಧಾನಿಯಾಗಿದ್ದೆ ಎಲ್ಲರಿಗೂ ನಾನೇ ಮುಖ್ಯಸ್ಥ ನಾನು ಹೇಳಿದಂತೆ ಎಲ್ಲವೂ ನಡೆಯುತ್ತಿತ್ತು ಇದು ನನ್ನ ಕನಸು ಎಂದ.
ಶ್ರೀಮಂತ ಕೇಳಿದ, ಬಾಲಕನೇ ನಿನ್ನ ಕನಸನ್ನು ಹೇಳು. ಆಗ ಬಾಲಕ ಹೇಳಿದ- ಶ್ರೀಮಂತರೇ ನನಗೆ ಕನಸಿನಲ್ಲಿ ದೇಹದೊಳಗೆ ಭೂತ ಹೊಕ್ಕಿತು. ಅದು ನನ್ನನ್ನ ಎಚ್ಚರಗೊಳಿಸಿ ಮಾಡಿಟ್ಟ ಉಂಡೆಯ ಕಡೆಗೆ ಕರೆದುಕೊಂಡು ಬಂದು ಎಲ್ಲವನ್ನು ತಿಳಿಸಿ ಬಿಟ್ಟಿತು ಎಂದನು. ಆಗ ಶ್ರೀಮಂತ ಮಾಡಿಟ್ಟ ಉಂಡೆಯ ಪಾತ್ರೆಯನ್ನು ನೋಡಿದ ಎಲ್ಲವೂ ಖಾಲಿಯಾಗಿತ್ತು. ಹುಡುಗ ಹೇಳಿದ, ಸಾಹುಕಾರರೇ ಇದು ನನ್ನ ತಪ್ಪಲ್ಲ. ಅದು ಭೂತದ ಕೆಲಸ ಎಂದು ಮನೆಗೆ ಓಡಿಹೋದ. ಒಂದು ವೇಳೆ ಆ ಶ್ರೀಮಂತನು ಮೊದಲೇ ಆ ಹುಡುಗನಿಗೆ ಒಂದು ಉಂಡೆಯನ್ನು ನೀಡಿದ್ದರೆ ತನಗೆ ಇನ್ನುಳಿದ ಉಂಡೆಗಳು ಸಿಗುತ್ತಿದ್ದವು. ಆದರೆ ಅತಿಯಾದ ಜಿಪುಣತನದಿಂದ ಎಲ್ಲವೂ ತನಗೆ ದಕ್ಕಬೇಕೆನ್ನುವ ಆಸೆಯಿಂದ ಇರುವುದನ್ನು ಕಳೆದುಕೊಂಡ ಅದಕ್ಕಾಗಿ ಬಚ್ಚಿಡುವುದಕ್ಕಿಂತ ಬಿಚ್ಚಿಡುವುದು ಒಳಿತು .
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ