ಹಳ್ಳಿಯ ಕಡೆಗೆ ಒಂದು ಗಾದೆ ಮಾತಿದೆ ಇದೆ "ಹಸಿದ ಹೊಟ್ಟೆಯಲ್ಲಿದ್ದರೂ ಪರವಾಗಿಲ್ಲಾ ಮತ್ತೊಬ್ಬರ ಹಂಗಿನಲ್ಲಿರಬಾರದು "ಇದನ್ನೇ ಶ್ರೀಮನ್ ನಿಜಗುಣ ಶಿವಯೋಗಿಗಳು ತಮ್ಮ ಕೈವಲ್ಯ ಪದ್ಧತಿಯ ನೀತಿಕ್ರಿಯೇಚರ್ಯ ಸ್ಥಲದ ಪದ್ಯವೊಂದರಲ್ಲಿ ಧರೆಗೆಯಾಚನೆಯಿಂದ ಲಘುತರಮುಂಟೆ? ಎಂದು ಹೇಳುತ್ತಾರೆ. ಅಂದರೆ ಈ ಭೂಮಿಯ ಮೇಲೆ ಮತ್ತೊಬ್ಬರ ಎದುರು ಕೈ ಒಡ್ಡಿ ಬೇಡುವುದಕ್ಕಿಂತ ಹಗುರವಾದದ್ದು ಮತ್ಯಾವ ಸಂಗತಿಯೂ ಇಲ್ಲ. ಪಾಲಕರಿಗೆ ಕಾಡಿಬೇಡಿ ಪೀಡಿಸುವ ಮಕ್ಕಳಿಗಿಂತ ಏನನ್ನು ಬೇಡದೆ ಇರುವ ಮಕ್ಕಳ ಮೇಲೆ ಬಹಳ ಪ್ರೀತಿ, ತಾಯಿ ಕೈಯಲ್ಲಿದ್ದ ವಸ್ತುವನ್ನು ಕಸಿದು ತಿನ್ನುವ ಮಗುವಿಗಿಂತ ತಾನು ಕೊಟ್ಟಾಗಲೇ ತಿನ್ನುವ ಮಗುವಿನ ಮೇಲೆ ಹೆಚ್ಚಿನ ಮಮಕಾರವಿರುತ್ತದೆ. ಅದಕ್ಕಾಗಿ ಅವಳು ಯಾರಿಗೂ ಕಾಣದಂತೆ ಅವನಿಗೆ ಮಾತ್ರ ಎಲ್ಲವನ್ನು ತೆಗೆದಿಟ್ಟು ತಿನ್ನಿಸುತ್ತಾಳೆ.
ಹಾಗೆ ಭಗವಂತನು ಬೇಡುವ ಭಕ್ತನಿಗಿಂತ, ಭಕ್ತಿ ಮಾಡಿ ಏನನ್ನು ಬೇಡದೆ ಇರುವ ಭಕ್ತನ ಮೇಲೆ ಹೆಚ್ಚಿನ ಒಲವು. ಒಬ್ಬ ಬಾಲಕ ಗುರುಕುಲಕ್ಕೆ ಹೋಗಿ ಹತ್ತು ವರ್ಷ ಶಿಕ್ಷಣವನ್ನು ಪೂರೈಸಿ ಯುವಕನಾಗಿ ತನ್ನೂರಿಗೆ ಮರಳಿ ಬಂದಿರುತ್ತಾನೆ ಅಷ್ಟರಲ್ಲಿ ಇವನ ಬಾಲ್ಯದ ಗೆಳೆಯ ಆ ಸಾಮ್ರಾಜ್ಯದ ರಾಜನಾಗಿದ್ದನು ಆ ರಾಜನಿಗೆ ಎನಿಸುತ್ತದೆ ನನ್ನ ಗೆಳೆಯನಿಗೆ ಏನಾದರೂ ಜೀವನೋಪಾಯಕ್ಕೆ ಕೊಡಬೇಕೆಂದು ಅವನನ್ನು ಕರೆಸಿ ನಿನಗೆ ಏನು ಬೇಕು ಬೇಡು ಎನ್ನುತ್ತಾನೆ. ಆಗ ಯುವಕ ಹೇಳುತ್ತಾನೆ, ರಾಜರೇ ನನಗೆ ನನ್ನ ಗುರುಗಳು ಬೇಡುವುದನ್ನು ಕಲಿಸಿಲ್ಲ. ಬದಲಿಗೆ ಕಾಯಕ ಮಾಡಿ ಬದುಕುವ ಕೌಶಲ್ಯ ಕಲಿಸಿದ್ದಾರೆ ಎಂದಾಗ ರಾಜನೇ ಮೂಕವಿಸ್ಮಿತನಾಗುತ್ತಾನೆ.
ಇಲ್ಲಿವರೆಗೂ ನಾನು ಏನಾದರೂ ಬೇಕಾದರೆ ಬೇಡಿಯನ್ನುವುದಕ್ಕಿಂತ ಮೊದಲೇ ಎಲ್ಲರೂ ಬೇಡಿ ಪಡೆಯುತ್ತಿದ್ದರು. ಆದರೆ ಈತ ನಾನೇ ಕೊಡಲು ಹೋದರು ಬೇಡ ಎನ್ನುತ್ತಿರುವಾಗ ಇವನಿಗಿಂತ ಉತ್ತಮವಾದ ಮಂತ್ರಿ ಸಿಗುವುದಿಲ್ಲ ಎಂದು ಮಂತ್ರಿಪದವಿಗೆ ನೇಮಿಸಿದ. ಬೇಡದೆ ಇರುವುದು ಉತ್ತಮ ಸ್ಥಾನಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಮತ್ತೊಬ್ಬರ ಎದುರು ಕೈವಟ್ಟುವಾಗ ನಾವು ಸಣ್ಣವರಾಗುತ್ತೇವೆ. ಒಬ್ಬ ರಾಜಕಾರಣಿ ತಾನು ಐಷಾರಾಮಿ ಮನೆಯಲ್ಲಿ ಬದುಕಿ AC ಕಾರಲ್ಲಿ ತಿರುಗಾಡುತ್ತಿದ್ದರು. ವೋಟು ಬೇಡಲು ನಮ್ಮ ಮನೆಯ ಬಾಗಿಲಿಗೆ ಬರಬೇಕು.
ನಂತರ ಐದು ವರ್ಷ ಅಧಿಕಾರ ಕೊಟ್ಟ ಮೇಲೆ ನಾವು ಅವನನ್ನು ಏನಾದರೂ ಬೇಡಬೇಕೆಂದು ಹೋದರೆ ದಿನವಿಡೀ ನಾಯಿಯ ಹಾಗೇ ಅವನ ಮನೆಯ ಬಾಗಿಲಲ್ಲಿ ನಿಲ್ಲಬೇಕು ಪ್ರಜೆಯೇ ಪ್ರಭು ಎನ್ನುತ್ತಾರೆ ಆ ಪ್ರಭು ಬೇಡಲೂ ಹೋದರೆ ಇದೇ ಪರಿಸ್ಥಿತಿ. ಒಂದು ದೇಶ ಇನ್ನೊಂದು ದೇಶದ ಬಳಿ ಸಾಲಕ್ಕಾಗಿ ಕೈವಡ್ಡಿ ನಿಂತರೆ ಆದೇಶಕ್ಕೆ ಯಾರು ಗೌರವ ಕೊಡಲಾರರು. ನಮ್ಮ ಇಂದಿನ ಯುವಕರು ವರದಕ್ಷಿಣೆಯನ್ನು ಬೇಡಿ ತಮ್ಮನ್ನೇ ಮಾರಿಕೊಳ್ಳುತ್ತಿರುವರು ಮತ್ತೊಬ್ಬರು ನೀಡಿದ ದುಡ್ಡಿನಲ್ಲಿ ಬದುಕುವ ಗುಲಾಮರಾಗಿರುವರು. ಕೆಲವು ಅಧಿಕಾರಿಗಳು 10 ರೂಪಾಯಿ ಲಂಚದ ಆಸೆಗಾಗಿ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿರುವರು. ಬದುಕು ಸ್ವಾಭಿಮಾನದಿಂದ ಸಾಗಬೇಕು ಆಗ ಮಾತ್ರ ಅದಕ್ಕೊಂದು ಗೌರವ.
ಶ್ರೀ ರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ.ವಿಜಯಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ