ಹಾಸನ: ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಾವಿನ್ಯಯುತ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಶಾಲೆಯಲ್ಲಿ ನಿರ್ಮಾಣಗೊಂಡಿರುವ ಸಮಾಜ ವಿಜ್ಞಾನ ವಸ್ತುಸಂಗ್ರಹಾಲಯವು ವಿಭಿನ್ನ ರೀತಿಯ ವಿನೂತನ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳನ್ನು ಕ್ರಿಯಾಶೀಲತೆಯಿಂದ ಕೂಡಿರುವಂತೆ ಈ ವಸ್ತುಸಂಗ್ರಹಾಲಯವು ಪ್ರೇರೇಪಿಸುತ್ತದೆ ಎಂದು ಜಿಲ್ಲಾ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣಗೌಡ ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಪ್ರಧಾನ (ಗಂಧದ ಕೋಠಿ) ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಅವರು ಸಮಾಜ ವಿಜ್ಞಾನ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿದರು. ವಸ್ತುಸಂಗ್ರಹಾಲಯದಲ್ಲಿ ವ್ಯಕ್ತಿಗಳ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಭಾರತ ದೇಶವನ್ನು ಆಳ್ವಿಕೆ ಮಾಡಿದ ಹಲವಾರು ಚಕ್ರವರ್ತಿಗಳ ಚಿತ್ರಪಟಗಳು ಇತಿಹಾಸವನ್ನು ಮತ್ತೊಮ್ಮೆ ಓದುವಂತೆ ಪ್ರೇರೇಪಿಸುತ್ತವೆ. ಜಗತ್ತಿನ ನಾಗರೀಕತೆಗಳ ಚಿತ್ರಪಟಗಳು, ವಿವಿಧ ಸಾಮ್ರಾಜ್ಯಗಳ ಚಿತ್ರಪಟಗಳು, ಸಾಹಿತಿಗಳ ಚಿತ್ರಪಟಗಳು, ಕವಿಗಳ ಚಿತ್ರಪಟಗಳನ್ನು ಇಲ್ಲಿ ಪ್ರದರ್ಶಿಸಲಾಗಿದ್ದು ಇವು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತವೆ.
ಅತಿ ಮುಖ್ಯವಾಗಿ ಈ ಸಮಾಜವಿಜ್ಞಾನ ವಸ್ತುಸಂಗ್ರಹಾಲಯದಲ್ಲಿ ನಾಣ್ಯಗಳ ಪ್ರದರ್ಶನವನ್ನು ಇಡಲಾಗಿದೆ. ಇತಿಹಾಸಕ್ಕೆ ಈ ನಾಣ್ಯಗಳು ಪ್ರಮುಖ ಆಧಾರವಾಗಿವೆ. ಇವುಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು. ಗ್ಲೋಬ್, ವಿವಿಧ ರೀತಿಯ ಮಣ್ಣುಗಳು, ವಿಶ್ವದ ವಿವಿಧ ಖಂಡಗಳ ನಕಾಶೆಗಳನ್ನು ಪ್ರದರ್ಶಿಸಲಾಗಿದೆ. "ಸಿರಿನುಡಿ" ಎಂಬ ಲೇಖನ ಮಾಲಿಕೆಯನ್ನು ಪ್ರದರ್ಶಿಸಲಾಗಿದ್ದು ಈ ಲೇಖನಗಳು ಮಕ್ಕಳ ಜ್ಞಾನಕ್ಕೆ ಒರೆ ಹಚ್ಚಿ ಜ್ಞಾನವನ್ನು ವಿಕಾಸಗೊಳಿಸುವತ್ತ ಸ್ಪೂರ್ತಿನೀಡುತ್ತದೆ. ಈ ನಿಟ್ಟಿನಲ್ಲಿ ವಸ್ತುಸಂಗ್ರಹಾಲಯವು ಹೆಚ್ಚು ಕಾರ್ಯನಿರ್ವಹಿಸುತ್ತದೆ. ಇಲ್ಲಿನ ಸಮಾಜ ವಿಜ್ಞಾನ ವಸ್ತುಸಂಗ್ರಹಾಲಯವು ಸಮಾಜ ವಿಜ್ಞಾನ ಶಿಕ್ಷಕರಾದ ಕೆ.ಎನ್. ಚಿದಾನಂದ ಮತ್ತು ಮತ್ತೊರ್ವ ಸಮಾಜ ವಿಜ್ಞಾನ ಶಿಕ್ಷಕರಾದ ಚಿದಾನಂದ ರವರ ಮಾರ್ಗದರ್ಶನದಲ್ಲಿ ಮೂಡಿಬಂದಿದ್ದು, ಇದೊಂದು ಚಿಕ್ಕ ಪ್ರಯತ್ನವಾದರೂ ಮಕ್ಕಳಲ್ಲಿ ಬಹುದೊಡ್ಡ ಚಿಂತನೆಗೆ ದಾರಿ ಮಾಡಿಕೊಡುತ್ತದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿ ಶಿಕ್ಷಕರ ಪರಿಶ್ರಮವನ್ನು ಶ್ಲಾಘಿಸಿದರು.
ನಂತರ ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರಗತಿಯ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಗುಣಮಟ್ಟದ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಅಧ್ಯಯನ ಮಾಡಿ ಎ+ ಮತ್ತು ಎ ಶ್ರೇಣಿಗಳಲ್ಲಿ ಉತ್ತೀರ್ಣವಾಗುವ ಮೂಲಕ ಶಾಲೆಯ ಉತ್ತಮ ಗುಣಮಟ್ಟದ ಫಲಿತಾಂಶ ಸಾಧನೆಗೆ ಕಾರಣವಾಗಬೇಕು. ಪ್ರಧಾನ ಶಾಲೆಯಲ್ಲಿ ಒಳ್ಳೆಯ ಕಲಿಕಾ ವಾತಾವರಣವಿದ್ದು ಉತ್ತಮ ಶಿಕ್ಷಕರಿಂದ ಕೂಡಿದೆ. ಶಾಲೆಯ ಉಪಪ್ರಾಂಶುಪಾಲರಾದ ಮಂಜುನಾಥ್ ರವರ ಕಾರ್ಯವೈಖರಿ ಮತ್ತು ಸಹಕಾರ ಕ್ರಿಯಶೀಲತೆಯಿಂದ ಕೂಡಿದ್ದು ಉತ್ತಮವಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಉಪಪ್ರಾಂಶುಪಾಲರಾದ ಮಂಜುನಾಥ್, ಹೆಚ್. ಪಿ. ಮಂಜುಳ, ಎ.ವಿ.ಗೀತಾರಾಣಿ, ಕೆ. ಎನ್. ಚಿದಾನಂದ, ಎಸ್. ಕೆ. ಪೂರ್ಣಿಮಾ, ಪಿ. ಮಧು, ಚಿದಾನಂದ, ಸತ್ಯನಾರಾಯಣ ಮುರಳಿ ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ