ಅಧ್ಯಾತ್ಮ ರಾಮಾಯಣ-28: ಕುಂಭಕರ್ಣ, ಇಂದ್ರಜಿತುವಿನ ಹನನ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 



ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ನುಮನು ದ್ರೋಣಗಿರಿಯೊಂದಿಗೆ ಬಂದ! ವೈದ್ಯ ಸುಷೇಣ ಉಳಿದ ಕೆಲಸಗಳನ್ನು ಮಾಡಿದ. ಲಕ್ಷ್ಮಣ ಎಚ್ಚೆತ್ತ! ವಾನರವೀರರೂ ಪುನರ್ಜನ್ಮ ಪಡೆದರು. ಹನುಮನು ಪರ್ವತವನ್ನು ಮರಳಿ ಕ್ಷೀರ ಸಾಗರದಲ್ಲಿಟ್ಟು ಬಂದ!


ಇತ್ತ ಲಂಕೆಯಲ್ಲಿ ರಾವಣನು ಕುಂಭಕರ್ಣನನ್ನು ಅರೆನಿದ್ದೆಯಿಂದ ಬಹು ಪ್ರಯಾಸಪಟ್ಟು ಎಚ್ಚರಿಸಿದ. ಯುದ್ಧಕ್ಕೆ ಹೋಗುವ ಮೊದಲು ಮತ್ತೊಮ್ಮೆ ಸೀತಾ-ರಾಮರ ಮೂಲರೂಪವನ್ನು ರಾವಣನಿಗೆ ಹೇಳಿದ. ಆದರೆ ರಾವಣನಿಗೆ ತಮ್ಮನ ಮೇಲೆ ಸಿಟ್ಟು ಬಂತೇ ವಿನಾ ವಿವೇಚಿಸುವ ಮನಸ್ಸು ಬರಲಿಲ್ಲ. ಕುಂಭಕರ್ಣ ಯುದ್ಧಕ್ಕೆ ಕೋಟೆಯ ಗೋಡೆಯನ್ನು ದಾಟಿ ನಡೆದ. ಕೈಯಲ್ಲಿ ಮುದ್ಗರದ ಆಯುಧವನ್ನು ಹಿಡಿದುಕೊಂಡು ಕಪಿಸೇನೆಯ ಮಧ್ಯೆ ತಿರುಗುತ್ತಾ, ಮುದ್ಗರವನ್ನು ಬೀಸುತ್ತಾ ಸಾವಿರ ಸಾವಿರ ಸಂಖ್ಯೆಯಲ್ಲಿ ಕಪಿಗಳನ್ನು ಕೊಲ್ಲುತ್ತಾ ತಿನ್ನುತ್ತಾ ಮುನ್ನುಗ್ಗಿ ಬರುವಾಗ ವಾನರರು ಹೆದರಿ ಓಡತೊಡಗಿದರು.


ಆಗ ವಿಭೀಷಣನು ಗದೆಯೊಂದಿಗೆ ಅಣ್ಣನನ್ನು ಎದುರಿಸಿದನು. ಕುಂಭಕರ್ಣನ ಪಾದಗಳಿಗೆ ಮಣಿದನು. ಕುಂಭಕರ್ಣನು ವಿಭೀಷಣನನ್ನು ತಬ್ಬಿಕೊಂಡು 'ಚಿರಂಜೀವಿಯಾಗಿ ಬಾಳು' ಎಂದು ಹರಸಿ ತನ್ನೆದುರು ನಿಲ್ಲದೆ ರಾಮನತ್ತ ಹೋಗಲು ಹೇಳಿದ. ವಿಭೀಷಣನು ಕಣ್ಣೀರಿನೊಂದಿಗೆ ರಾಮನ ಬಳಿಗೆ ಬಂದ. ರಾಮನು ವಾನರರ ಮಾರಣಹೋಮವನ್ನು ಸಹಿಸದಾದನು. ಕುಂಭಕರ್ಣನ ಮೇಲೆ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು. ಆಗ ಅವನ ಮುದ್ಗರ ಹಿಡಿದ ಬಲಗೈಯು ಭುಜದಿಂದಲೇ ತುಂಡಾಗಿ ಭೂಮಿಗೆ ಬಿತ್ತು. ಅದರಡಿಗೆ ಅನೇಕ ಕಪಿವೀರರು ಬಿದ್ದರು.


ಕುಂಭಕರ್ಣನು ಮರವೊಂದನ್ನು ಹಿಡಿದುಕೊಂಡು ಮತ್ತೂ ಮುನ್ನುಗ್ಗಿ ಬಂದಾಗ ಐಂದ್ರಾಸ್ತ್ರದಿಂದ ಎಡಗೈಯನ್ನು ತುಂಡರಿಸಿದನು. ಆದರೂ ಕುಂಭಕರ್ಣನು ರಾಮನನ್ನು ಹೊಡೆಯಲೆಂದು ಓಡೋಡಿ ಬರುತ್ತಿದ್ದ. ರಾಮನು ಎರಡು ಅರ್ಧಚಂದ್ರಾಕೃತಿಯ ಬಾಣಗಳಿಂದ ಅವನ ಕಾಲುಗಳನ್ನು ಕತ್ತರಿಸಿದಾಗ ಅವುಗಳು ಲಂಕೆಯ ಬಾಗಿಲಲ್ಲಿ ಹೋಗಿ ಬಿದ್ದವು. ಮತ್ತೂ ಅವನು ಬಾಯ್ದೆರೆದುಕೊಂಡು ತೆವಳುತ್ತಾ ಬರುವ ಪ್ರಯತ್ನಮಾಡುತ್ತಿರುವಾಗ ಐಂದ್ರಾಸ್ತ್ರದಿಂದ ಅವನ ತಲೆಯನ್ನು ಕತ್ತರಿಸಿ ಹಾಕಿದನು. ಅವನ ತಲೆಯು ಲಂಕೆಯ ಬಾಗಿಲಲ್ಲಿ ಬಿದ್ದು ಬಾಗಿಲನ್ನೇ ಮುಚ್ಚಿದರೆ ದೇಹವು ಕಡಲಿಗೆ ಬಿತ್ತು! ಕಡಲು ಅವನ ನೆತ್ತರಿನಿಂದ ಕೆಂಪುಸಮುದ್ರದಂತೆ ಕಂಡಿತು. ತಮ್ಮನ ಸಾವು ರಾವಣನನ್ನು ಸಂಕಟಕ್ಕೆ ದೂಡಿತು. ಕುಂಭಕರ್ಣನ ಸಾವು ಅವನಿಂದ ತುಂಬಾ ತೊಂದರೆಗೊಳಪಟ್ಟ ದೇವತೆಗಳು ಸಂಭ್ರಮಿಸುವಂತೆ ಮಾಡಿತು.



ರಾವಣನ ನೆರವಿಗೆ ಮಗ ಮೇಘನಾದ- ಇಂದ್ರಜಿತು ಬಂದ. ತಂದೆಯಲ್ಲಿ "ನಾನು ನಿಕುಂಭಿಳಾ ಗುಹೆಗೆ ಹೋಗಿ ಹೋಮ ಮಾಡಿ ನೂತನರಥ- ಶಸ್ತ್ರಗಳೊಂದಿಗೆ ಹೋಗಿ ಯುದ್ಧಮಾಡುತ್ತೇನೆ" ಎಂದು ಹೇಳಿ ತಂದೆಗೆ ನಮಸ್ಕರಿಸಿ ತೆರಳಿದ. ಈ ವಿಷಯ ವಿಭೀಷಣನಿಗೆ ಗೊತ್ತಾಯಿತು. ಹೋಮವು ಪೂರ್ಣಗೊಂಡರೆ ದೇವತೆಗಳೂ ಅವನ ಹತ್ತಿರ ಸುಳಿಯಲಾರರು. ರಾಮನಿಗೆ ವಿಷಯವನ್ನು ಹೇಳಿದ. ಹೋಮವನ್ನು ಅರ್ಧದಲ್ಲಿಯೇ ತಡೆದು ಅವನು ಯುದ್ಧಕ್ಕೆ ಬರುವಂತೆ ಮಾಡಿದರೆ ಅವನನ್ನು ಸೋಲಿಸಬಹುದು ಎಂದನು. ರಾಮನು ನಾನೇ ಬರುತ್ತೇನೆ ಎಂದಾಗ ವಿಭೀಷಣನು-" ಈ ರಾಕ್ಷಸನನ್ನು ಲಕ್ಷ್ಮಣನ ಹೊರತು ಬೇರೆ ಯಾರೂ ಕೊಲ್ಲಲಾರರು. ಯಾಕೆಂದರೆ 'ಹನ್ನೆರಡು ವರ್ಷಗಳ ಕಾಲ ನಿದ್ರಾಹಾರಗಳನ್ನು ತೊರೆದವನಿಂದ ಮಾತ್ರ ನೀನು ಸಾಯುವೆ' ಎಂಬ ವರವನ್ನು ಬ್ರಹ್ಮನಿಂದ ಇವನು ಪಡೆದಿದ್ದಾನೆ. ಲಕ್ಷ್ಮಣನೊಬ್ಬನೇ ಇಂತಹ ಸಾಧಕನಾಗಿರುವನು. ಅವನನ್ನು ಕಳಿಸು"- ಎಂದು ಹೇಳಲು ರಾಮನು ತಮ್ಮನನ್ನು ಹರಸಿ ಬೀಳ್ಕೊಟ್ಟನು.


ಲಕ್ಷ್ಮಣನೊಂದಿಗೆ ಜಾಂಬವಂತ ಮತ್ತು ಅಂಗದನೇ ಮೊದಲಾದ ವೀರರು ಸೇರಿದರು. ಅವರು ಇಂದ್ರಜಿತುವನ್ನು ಸುತ್ತುವರೆದಿದ್ದ ರಕ್ಕಸರನ್ನು ಸದೆಬಡಿಯಲು ಹೊರಟಾಗ ಇಂದ್ರಜಿತುವಿನ ಹೋಮಕ್ಕೆ ಅಡಚಣೆಯು ಬಂತು. ಲಕ್ಷ್ಮಣನು ಯುದ್ಧಕ್ಕೆ ಬಂದಿರುವುದನ್ನು ಲಘುವಾಗಿ ಪರಿಗಣಿಸಿದ ಅವನು ಹೋಮವನ್ನು ಅರ್ಧದಲ್ಲಿ ನಿಲ್ಲಿಸಿದ. ನೂತನ ರಥ, ಧನುಸ್ಸುಗಳೊಂದಿಗೆ ಲಕ್ಷ್ಮಣನನ್ನು ಎದುರಿಸಿದನು. ಲಕ್ಷ್ಮಣನಿಗೆ ಹನುಮನೇ ರಥ! ತನಗೆದುರಾದ ಚಿಕ್ಕಪ್ಪ ವಿಭೀಷಣನನ್ನು ಮೇಘನಾದನು ಹೀಯಾಳಿಸಿದನು, ಕಡೆಗಣಿಸಿದನು. ಲಕ್ಷ್ಮಣನತ್ತ ರಥವನ್ನು ಹರಿಸಿ ಅವನ ಮೇಲೆ ಬಾಣಗಳ ಸುರಿಮಳೆಯನ್ನು ಕರೆದನು. ಪರಸ್ಪರ ಬಾಣಗಳ ಪ್ರಯೋಗವನ್ನು ಮಾಡುತ್ತಾ ಒಬ್ಬರು ಇನ್ನೊಬ್ಬರನ್ನು ಸೋಲಿಸಲು ಯತ್ನಿಸುತ್ತಿದ್ದರು. ಇಬ್ಬರ ರಕ್ಷಾಕವಚಗಳೂ ತುಂಡಾಗಿ ಪುಡಿಪುಡಿಯಾಗಿ ನೆಲಕ್ಕೆ ಬಿದ್ದವು. ಮೇಘನಾದನ ಸಾರಥಿ-ರಥಗಳನ್ನು ಲಕ್ಷ್ಮಣನು ನಾಶಮಾಡಿದನು. ಮೇಘನಾದನು ಮತ್ತೊಂದು ರಥವನ್ನೇರಿ ಬಂದು ದಾಳಿಯಿಟ್ಟಾಗ ಲಕ್ಷ್ಮಣನು ತನ್ನ ಕೈಗೆ ಐಂದ್ರಾಸ್ತ್ರವನ್ನು ತೆಗೆದುಕೊಂಡು, ಬಿಲ್ಲಿಗೆ ಜೋಡಿಸಿ, ಶ್ರೀರಾಮನ ಪಾದಗಳನ್ನು ಸ್ಮರಿಸುತ್ತಾ-"

ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ।

ತ್ರಿಲೋಕ್ಯಾಮಪ್ರತಿದ್ವಂದ್ವಸ್ತದೇನಂ ಜಹಿ ರಾವಣಿಮ್॥


ದಶರಥನಂದನ ಶ್ರೀರಾಮನು ಧರ್ಮಾತ್ಮನೂ, ಸತ್ಯಸಂಧನೂ, ಮೂರು ಲೋಕಗಳಲ್ಲಿಯೂ ಎದುರಾಳಿಗಳಿಲ್ಲದವನೂ ಆಗಿದ್ದರೆ ಎಲೈ ಬಾಣವೇ! ನೀನು ರಾವಣನ ಪುತ್ರನನ್ನು ಕೊಂದುಬಿಡು"- ಎನ್ನುತ್ತ ಬಾಣವನ್ನು ಪ್ರಯೋಗಿಸಿದನು. ಅದು ಮೇಘನಾದನ ಶಿರವನ್ನು ಕತ್ತರಿಸಿ ನೆಲಕ್ಕೊರಗಿಸಿತು. ಕುಂಭಕರ್ಣನ ಸಾವಿನಿಂದ ಸೋತಿದ್ದ ರಾವಣನು ಮಗ ಮೇಘನಾದನ ಸಾವಿನಿಂದ ಸಾಯಲು ಬಾಕಿಯಾದ. 


ತಂದೆ ರಾವಣ ಮಗನ ಸಾವಿನಿಂದ ನೊಂದ,ಬೆಂದ, ಅತ್ತ. ತಾಯಿ ಮಂಡೋದರಿಯು ಅನಾಥೆಯಾದಳು. ನಾಥ ರಾವಣನಿದ್ದೂ ಅವಳಿಗೆ ತಾನು ಸುರಕ್ಷಿತಳೆಂಬ ಭಾವನೆ ಇದ್ದಿರಲಿಲ್ಲ! ಈಗ ಮಗನಿಲ್ಲದ ತಾಯಿಯಾದಳು. ದೇವತೆಗಳು ಲಕ್ಷ್ಮಣನ ಮೇಲೆ ಹೂಮಳೆಗರೆದರು! ವಾನರವೀರರು ಜೈಶ್ರೀರಾಮ್ ಘೋಷಣೆಯೊಂದಿಗೆ ನಲಿದಾಡಿದರು. ಅಣ್ಣ ರಾಮ; ತಮ್ಮ ಲಕ್ಷ್ಮಣನನ್ನು ತಬ್ಬಿ ನೆತ್ತಿಯನ್ನು ಚುಂಬಿಸಿ ಆನಂದದ ಕಣ್ಣೀರಿನ ಧಾರೆಯನ್ನು ಹರಿಸಿದ. ಸೀತೆಯನ್ನು ಮರಳಿ ಪಡೆಯಲು ಇನ್ನೊಂದು ಮೆಟ್ಟಿಲು ಉಳಿದಿತ್ತು. ರಾವಣನು ತಾನೇ ಯುದ್ಧಕ್ಕೆ ಸಿದ್ಧನಾಗಿ ಆ ಮೆಟ್ಟಿಲಿಗೆ ರಾಮನನ್ನು ಏರಿಬರುವಂತೆ ಮಾಡಿದ. 


ಅತ್ತೆಯ ಮೇಲಿನ ಕೋಪ ಕೊತ್ತೆಯ ಮೇಲೆ! ಮಗನ ಸಾವಿನ ಕೋಪವನ್ನು ಸೀತೆಯ ಮೇಲೆ ತೀರಿಸಲು ರಾವಣನು ಹೊರಟನು. ಆಕೆಯನ್ನು ಕೊಲ್ಲಲೆಂದೇ ಹೊರಟಾಗ ರಾವಣನ ಬುದ್ಧಿವಂತ ಮಂತ್ರಿಯಾದ ಸುಪಾರ್ಶ್ವನು ರಾವಣನಲ್ಲಿ-" ಎಲೈ ದಶಕಂಠ! ನೀನು ಕುಬೇರನ ಸೋದರ,ವೇದವಿದ್ಯಾಪಾರಂಗತ. ಕರ್ಮನಿಷ್ಠ. ಅಂತಹ ನೀನು ಸ್ತ್ರೀವಧೆಯನ್ನು ಮಾಡುವುದು ಉಚಿತವೇ? ನಮ್ಮೆಲ್ಲರನ್ನು ಒಗ್ಗೂಡಿಸಿ ನೀನು ಯುದ್ಧದಲ್ಲಿ ರಾಮ- ಲಕ್ಷ್ಮಣರನ್ನು ಕೊಂದು ಬೇಗನೆ ಸೀತೆಯನ್ನು ವಶಪಡಿಸಿಕೋ"- ಎಂದನು.


ರಾವಣನು ಮಂತ್ರಿಯ ಮಾತಿಗೆ ಒಪ್ಪಿದನು. ಅರಮನೆಗೆ ಬಂದನು. ಎಲ್ಲರೊಂದಿಗೆ ಚರ್ಚಿಸಿದ. ಶುಕ್ರಾಚಾರ್ಯರ ಸಲಹೆ ಹಾಗೂ ಅವರು ಉಪದೇಶಿಸಿದ ಮಂತ್ರದೊಂದಿಗೆ ರಾಮನನ್ನು ಸಂಹರಿಸಲು ವಿಶೇಷ ಹೋಮವನ್ನು ಮಾಡಲು ನಿಶ್ಚಯಿಸಿದನು. ಅದಕ್ಕಾಗಿ ಅರಮನೆಯ ಗುಪ್ತವಾದ ನೆಲಮಾಳಿಗೆಗೆ ಇಳಿದನು. ಮೂರುಲೋಕಗಳನ್ನು ನಡುಗಿಸಿದ ರಾವಣನ ಕಾವಲಿಗೆ ರಾಕ್ಷಸರ ಬಹುಸುತ್ತುಗಳ ರಕ್ಷಣಾಕೋಟೆ! ಹೋಮವು ಆರಂಭವಾಯಿತು! ಅಳಿವಿನ ಸುಳಿವನ್ನು ಹೋಮಧೂಮವು ನೀಡಿತು! ವಿಭೀಷಣನು ಇದನ್ನು ಗಮನಿಸಿದನು. 


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top