ಅಧ್ಯಾತ್ಮ ರಾಮಾಯಣ-23: ಬಾಲದ ಬೆಂಕಿಯಿಂದ ಲಂಕೆಯ ಸುಟ್ಟ ಹನುಮ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 

 


ಚಿತ್ರ: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಇಂದ್ರಜಿತುವು ಹನುಮನನ್ನು ಭರ್ಜರಿಯಾಗಿ ಎದುರಿಸಿದ. ಅವನ ಬಾಣಗಳನ್ನು ತಪ್ಪಿಸಲು ಹನುಮನು ಅಗಳಿಯೊಂದಿಗೆ ಆಗಸಕ್ಕೆ ನೆಗೆದ. ಹನುಮನ ತಲೆ, ಎದೆ, ಕಾಲು ಮತ್ತು ಬಾಲಗಳಿಗೆ ಇಂದ್ರಜಿತುವಿನ ಬಾಣಗಳು ತಾಗಿದವು. ಹನುಮನು ಅಗಳಿ (ಲೋಹಸ್ತಂಭ)ಯೊಡನೆ ಇಂದ್ರಜಿತುವಿನ ಮೇಲೆ ಪ್ರತಿದಾಳಿ ಮಾಡಿ ಅವನ ರಥವನ್ನು ಪುಡಿಗೈದು, ಸಾರಥಿಯನ್ನು ಕೊಂದ. ಇಂದ್ರಜಿತುವು ಮತ್ತೊಂದು ರಥವನ್ನೇರಿ ಬ್ರಹ್ಮಾಸ್ತ್ರದ ಮೂಲಕ ಹನುಮನನ್ನು ಬಂಧಿಸಿ ರಾವಣನ ಬಳಿಗೆ ಕರೆದೊಯ್ದ.


ಬ್ರಹ್ಮಾಸ್ತ್ರದ ಬಂಧನ ಒಂದು ಕ್ಷಣಕಾಲ ಮಾತ್ರವಿತ್ತು. ತಾನು ಬ್ರಹ್ಮಾಸ್ತ್ರದಿಂದ ಮುಕ್ತನಾಗಿದ್ದುದು ಗೊತ್ತಾದರೂ ಬಂಧಿತನಂತೆ ನಟಿಸುತ್ತಾ, ಪುರಜನರಿಂದ ಚಚ್ಚಿಸಿಕೊಳ್ಳುತ್ತಾ, ಹೆದರಿದವನಂತೆ ಕಾಣಿಸುತ್ತಾ ರಾವಣನೆದುರಿಗೆ ಹನುಮನು ಬಂದ. ರಾವಣನ ಆಣತಿಯ ಮೇರೆಗೆ ಮಂತ್ರಿ ಪ್ರಹಸ್ತನು ಹನುಮನನ್ನು ಯಾರು? ಏನು? ಎತ್ತ... ಎಂದು ವಿಚಾರಿಸಿದನು. ಆಗ ಹನುಮನು ಸೀತೆಯನ್ನು ಹುಡುಕುತ್ತ ಬಂದ ಪ್ರಭು ಶ್ರೀರಾಮನ ಬಂಟನೆಂದು ತನ್ನನ್ನು ಪರಿಚಯಿಸಿದನು. ಬ್ರಹ್ಮಾಸ್ತ್ರದಿಂದ ಬಿಡುಗಡೆ ಹೊಂದಿದ್ದರೂ ನಿನಗೆ ರಾಮನ ಸಾಮರ್ಥ್ಯವನ್ನೂ, ಹಿತವಚನವನ್ನೂ ಹೇಳಲು ಬಂದೆ ಎಂದನು. ಅದರೊಂದಿಗೆ ರಾವಣನ ಎದುರು ರಾಮನ ಗುಣಗಾನವನ್ನೂ ಮಾಡಿದ. ರಾಮನಿಗೆ ಶರಣಾಗಲು ಹೇಳಿದಾಗ ರಾವಣನಿಗೆ ಹನುಮನ ಮೇಲೆ ಭಾರೀ ಕೋಪ ಬಂದು ಅವನನ್ನು ಕತ್ತರಿಸಿ ಕೊಂದು ಹಾಕಲು ರಕ್ಕಸರಿಗೆ ಆಜ್ಞೆಯನ್ನಿತ್ತನು. ಆಗ ವಿಭೀಷಣನು-" ರಾಜನೇ! ಈ ವಾನರದೂತನನ್ನು ಕೊಲ್ಲಬಾರದು. ನೀನು ಕೊಂದರೆ ರಾಮನಿಗೆ ನೀನಿತ್ತ ಎಚ್ಚರಿಕೆಯನ್ನು ಮುಟ್ಟಿಸುವವರು ಯಾರು? ವಧೆಗೆ ಬದಲಾಗಿ ಬೇರೆ ಶಿಕ್ಷೆಯನ್ನು ಕೊಡು" ಎಂದು ರಾವಣನಲ್ಲಿ ವಿನಂತಿಸಿದನು.


ಅದಕ್ಕೊಪ್ಪಿದ ರಾವಣನು ಹನುಮನ ಬಾಲಕ್ಕೆ ಬಟ್ಟೆಯನ್ನು ಸುತ್ತಿ, ಬೆಂಕಿಯಿಟ್ಟು ಊರಿನಲ್ಲಿ ಸುತ್ತಾಡಿಸವಂತೆ ಹೇಳಿದ. ಶಿಕ್ಷೆ ಜಾರಿಯಾಯಿತು. ಹನುಮನ ಬಾಲಕ್ಕೆ ಬಟ್ಟೆಕಟ್ಟತೊಡಗಿದರು! ಕಟ್ಟಿದಷ್ಟೂ ಬಾಲ ಬೆಳೆಯುತ್ತಿತ್ತು! "ಹನುಮನ ಬಾಲದಂತೆ" ಎನ್ನುವ ಗಾದೆಯೇ ಹುಟ್ಟುವಂತೆ ಬೆಳೆಯಿತು! ಬಾಲ ಬೆಳೆಯುತ್ತಾ...ಇತ್ತು! ಬಾಲಕ್ಕೆ (ಲಂಕೆಗೆ?) ಬೆಂಕಿಯಿಟ್ಟರು. ಊರಿನ ಬೀದಿಯಲ್ಲಿ ಮೆರವಣಿಗೆಯನ್ನು ಮಾಡಿದರು. ಹನುಮನು ರಕ್ಕಸರ ಕೈಕೊಡವಿ; ಒಮ್ಮೆಲೇ ಬೆಳೆಬೆಳೆದು; ಸುಡುವ ಬಾಲದ ಸಹಿತ ಗೋಪುರದಲ್ಲಿ ಕುಳಿತನು,ಅಲ್ಲಿಗೆ ಬೆಂಕಿಯಿಕ್ಕಿದನು! ಗೋಪುರದಿಂದ ಮನೆಗೆ, ಮನೆಯಿಂದ ಅರಮನೆಗೆ, ಅರಮನೆಯಿಂದ ನೆರೆಮನೆಗೆ... ಮನೆಮನೆಗೆ ಹೀಗೆ ಬೆಂಕಿಯಿಡುತ್ತಾ ಹೋದನು. ವಿಭೀಷಣನ ಮನೆಯೊಂದನ್ನು ಬಿಟ್ಟು ಲಂಕೆಯಲ್ಲಿರುವ ಇತರ ಎಲ್ಲರ ಮನೆಗಳನ್ನು ಹನುಮನ ಬಾಲದ ಬೆಂಕಿ ಉರಿಸಿತು. ಲಂಕೆಗೆ ಲಂಕೆಯೇ ಹೊತ್ತಿ ಉರಿಯ ತೊಡಗಿತು! "ಅಂಕೆ ತಪ್ಪಿದ ಕಪಿಯು ಲಂಕೆ ಸುಟ್ಟಿತು"ಎನ್ನುವ ಗಾದೆಯೂ ಹುಟ್ಟಿತು!! ತನಗೆ ಸಾಕು ಎನ್ನಿಸಿದಾಗ ಕಡಲಿಗೆ ಹಾರಿ ಬೆಂಕಿಯನ್ನು ನಂದಿಸಿದನು. ಬಾಲಕ್ಕೆ ಬಿದ್ದ ಬೆಂಕಿಯು ತನ್ನ ಮಗನನ್ನು ಸುಡದಂತೆ ವಾಯುದೇವನು ತಂಪಾಗಿ ಬೀಸುತ್ತಿದ್ದನು.



ಅದರೊಂದಿಗೆ ಸೀತೆಯ ಪ್ರಾರ್ಥನೆಯೂ ಸೇರಿತ್ತು! ರಾಮನಾಮ ಸ್ಮರಣೆಯಿಂದ ತಾಪತ್ರಯದ ಬೆಂಕಿಯನ್ನೇ ದಾಟುವವರಿಗೆ ಈ ಪ್ರಾಕೃತದ ಬೆಂಕಿಯು ಯಾವ ಲೆಕ್ಕ!?


ಲಂಕೆಯನ್ನು ತೊರೆಯುವ ಮೊದಲು ಸೀತೆಯನ್ನು ಭೇಟಿಯಾಗಿ ತೆರಳಲು ಅಪ್ಪಣೆಯನ್ನು ಬೇಡಿದನು. "ಶ್ರೀರಾಮನು ಹತ್ತಸಾವಿರ ಕೋಟಿ ವಾನರೊಂದಿಗೆ ಬಂದು, ರಾವಣನನ್ನು ವಧಿಸಿ ನಿನ್ನನ್ನು ಕೊಂಡೊಯ್ಯುವನು"-ಎಂದು ಹೇಳಿದ. "ನೀನು ನನ್ನ ಹೆಗಲಮೇಲೇರಿ ಬರುವೆಯಾದರೆ ಕ್ಷಣಮಾತ್ರದಲ್ಲಿ ರಾಮನೊಡನೆ ನಿನ್ನನ್ನು ಸೇರಿಸಿ ಬಿಡುವೆನು"- ಎಂದೂ ಹೇಳಿದ. ಆದರೆ ಸೀತೆಯು" ರಾಮನು ಬಂದು, ರಾವಣನನ್ನು ಯುದ್ಧದಲ್ಲಿ ಕೊಂದು ನನ್ನನ್ನು ಕರೆದೊಯ್ದನಾದರೆ ಅವನಿಗೆ ಶಾಶ್ವತ ಕೀರ್ತಿಯು ಉಂಟಾಗುವುದು.ಆದ್ದರಿಂದ ನೀನು ಹೊರಡು. ಶುಭವಾಗಲಿ" ಎಂದು ಹರಸಿ ಹನುಮನನ್ನು ಬೀಳ್ಕೊಟ್ಟಳು. ಸೀತಾಮಾತೆಗೆ ಮೂರುಬಾರಿ ಪ್ರದಕ್ಷಿಣೆ ಬಂದು, ನಮಸ್ಕರಿಸಿದ ಹನುಮನು ಲಂಕೆಯ ಪರ್ವತವನ್ನೇರಿ, ಹಾರುವಾಗ ಅದನ್ನು ನೆಲಸಮ ಮಾಡಿದನು! ಬಳಿಕ ಗರ್ಜಿಸುತ್ತಾ, ವೇಗವಾಗಿ ಹಾರುತ್ತಾ  ತನ್ನವರನ್ನು ಸೇರಿದನು.


"ದೃಷ್ಟಾ ಸೀತಾ ಮಯಾ ಲಂಕಾ ಧರ್ಷಿತಾ ಚ ಸಕಾನನಾ।

ಸಂಭಾಷಿತೋ ದಶಗ್ರೀವಸ್ತತೋsಹಂ ಪುನರಾಗತ॥

ಸೀತೆಯನ್ನು ಕಂಡು,ಲಂಕೆಯನ್ನು ಲಗಾಡಿ ಕೊಟ್ಟು,ರಾವಣನನ್ನು ಮಾತನಾಡಿಸಿ ನಾನು ಹಿಂದಿರುಗಿ ಬಂದಿರುತ್ತೇನೆ. "ಒಂದೇ ಉಸಿರಿನಲ್ಲಿ- ಒಂದೇ ವಾಕ್ಯದಲ್ಲಿ ಹೇಳುವಂತೆ, ಹನುಮನು ತನ್ನ ಸಾಹಸವನ್ನು ಹೇಳಿದ. ಇದು ಸುಂದರಕಾಂಡದ ಸುಂದರವಾದ ಸಾರವೂ ಹೌದು!! ಕಪಿಗಳ ಆನಂದಕ್ಕೆ ಪಾರವೇ ಇಲ್ಲ! ತಮ್ಮದೇ ಆದ ರೀತಿಯಲ್ಲಿ ಹನುಮನನ್ನು ಮುಟ್ಟಿ, ತಟ್ಟಿ, ತಬ್ಬಿ, ಮುತ್ತಿಕ್ಕಿ, ಕುಣಿದು-ಕುಪ್ಪಳಿಸಿ ಆನಂದಿಸಿದರು! ಕೂಡಲೇ ಎಲ್ಲರು ರಾಮ- ಸುಗ್ರೀವರಿರುವ ಪ್ರಸ್ರವಣಪರ್ವತದತ್ತ ಹೊರಟರು.


ಹಸಿದಿದ್ದ ವಾನರರಿಗೆ ದಾರಿಯಲ್ಲಿ ಸುಗ್ರೀವನ ಮಧುವನವು ಕಂಡುಬಂತು. ಅದರಲ್ಲಿರುವ ಹಣ್ಣುಹಂಪಲುಗಳನ್ನು ತಿಂದು, ಜೇನನ್ನು ಕುಡಿಯಲು ಅಂಗದನ ಅನುಮತಿಯನ್ನು ಕೇಳಿದರು. ಹನುಮನ ಕಾರ್ಯಸಾಧನೆಯ ಸಂತೋಷವನ್ನು ಅನುಭವಿಸಲು ಅಂಗದನು ಕಪಿಗಳಿಗೆ ಮಧುವನದಲ್ಲಿ ತಿಂದು-ಕುಡಿಯಲು ಅನುಮತಿಸಿದನು. ತಿಂದು-ಕುಡಿದು ಹೊಟ್ಟೆ ತುಂಬುವ ಹೊತ್ತಿಗೆ ಕಪಿಗಳು ಥೇಟ್! ಮಂಗಗಳಾದರು! ಕಾವಲಿನವರೊಂದಿಗೆ ಪೆಟ್ಟು-ಕುಟ್ಟೂ ಆಯಿತು. ಮಧುವನ ಮತ್ತೊಂದು ಲಂಕೆಯಂತಾಯಿತು! ಸುಟ್ಟು ಅಲ್ಲ!! ಸುತ್ತಿಸುತ್ತಿ, ನೆಗೆನೆಗೆದು! ಅದರ ಮುಖ್ಯಸ್ಥ- ಸುಗ್ರೀವನ ಮಾವ ದಧಿಮುಖನು ಸುಗ್ರೀವನಿಗೆ ದೂರಿತ್ತನು. ಸುಗ್ರೀವನಿಗೆ ಹನುಮನ ಯಶಸ್ಸಿನ ಸುಳಿವು ಸಿಕ್ಕಿತು. ಕೂಡಲೇ ವಾನರವೀರರನ್ನು ಕರೆದು ತರಲು ಹೇಳಿದ.


ಹನುಮನು ಅಂಗದನ ನೇತೃತ್ವದಲ್ಲಿ ಆಗಸದಲ್ಲಿ ಹಾರುತ್ತಾ ಸುಗ್ರೀವನಿರುವಲ್ಲಿಗೆ ಬಂದನು. ಹನುಮನು ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ 'ಲಂಕೆಗೆ ಹೋಗಿ ತಿರುಗಿಬಂದ' ವರೆಗಿನ ಎಲ್ಲಾ ವೃತ್ತಾಂತಗಳನ್ನು ವಿವರಿಸಿದನು. ನೆರೆದವರೆಲ್ಲರೂ ಮೈಯೆಲ್ಲಾ ಕಣ್ಣಾಗಿಸಿ- ಕಿವಿಯಾಗಿಸಿ ಹನುಮನ  ಸಾಹಸಯಾತ್ರೆಯ ಕಥನವನ್ನು ಕೇಳಿದರು, ಹನುಮನನ್ನು ಕೊಂಡಾಡಿದರು! ಸಂತಸಗೊಂಡ ಶ್ರೀರಾಮನು-" ಎಲೈ ಹನುಮಂತಾ! ದೇವತೆಗಳಿಂದಲೂ ಮಾಡಲಾಗದ ಕೆಲಸವನ್ನು ನೀನು ಮಾಡಿರುವೆ.ಇದಕ್ಕೆ ಬದಲಾಗಿ ನಾನು ಯಾವ ಪ್ರತ್ಯುಪಕಾರವನ್ನು ನಿನಗೆ ಮಾಡಲಿ? ಇದೋ ಈಗ ನಿನಗೆ ನನ್ನ ಸರ್ವಸ್ವವನ್ನೂ ಅರ್ಪಿಸುವೆನು"- ಎನ್ನುತ್ತಾ ಹನುಮನನ್ನು ಬರಸೆಳೆದು ಬಿಗಿದಪ್ಪಿದನು. ಹನುಮನು ಶ್ರೀರಾಮನ ಪರಮಭಕ್ತನ ಸ್ಥಾನವನ್ನು ಪಡೆದನು.


ಸುಂದರಕಾಂಡಕ್ಕೆ ಮಂಗಳ


 ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top