ಉಜಿರೆ: ಪ್ರತಿಯೊಬ್ಬರೂ ತಮ್ಮ ಜೀವನವನ್ನು ಪ್ರೇರಣೆಯೊಂದಿಗೆ ಮುನ್ನಡೆಸಬೇಕು. ಅದರೊಂದಿಗೆ ಜೀವನದಲ್ಲಿ ಗುರಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಉಜಿರೆಯ ಎಸ್.ಡಿ.ಎಂ. ಐ.ಟಿ. ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚೇತನ್ ರಾವ್ ಹೇಳಿದರು.
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಜು. 24 ರಂದು ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘ ‘ಸ್ಪೆಕ್ಟ್ರಾ’ ಉದ್ಘಾಟನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
“ಗುರಿಯನ್ನು ಸಾಧಿಸಲು ನಿರ್ದಿಷ್ಟ ಸಮಯವನ್ನು ಹೊಂದಿಸಬೇಕು. ಆ ಸಮಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ವಿಷಯದ ಬಗೆಗೆ ಕೌಶಲವನ್ನು ನಾವಾಗಿಯೇ ಹೆಚ್ಚಿಸಿಕೊಳ್ಳಬೇಕು. ಆ ಕೌಶಲಕ್ಕೆ ನಾವು ಹೆಚ್ಚಿನ ಸಮಯ ವ್ಯಯಿಸಿದಾಗ ಆ ಕಾರ್ಯದಲ್ಲಿ ಉತ್ತಮರಾಗಲು ಸಾಧ್ಯ” ಎಂದು ಅವರು ಕಿವಿಮಾತು ಹೇಳಿದರು.
“ಒಬ್ಬ ವ್ಯಕ್ತಿಯು ಬೆಳೆಯಬೇಕೆಂದರೆ ಅವನು ತನಗೆ ಒದಗಿದ ಅವಕಾಶವನ್ನು ಬಳಸಬೇಕು. ಅವಕಾಶಗಳಲ್ಲಿ ಸರಿ-ತಪ್ಪಿನ ಲೆಕ್ಕಾಚಾರ ಇರುವುದಿಲ್ಲ, ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದು ನಮ್ಮ ಕೈಯಲ್ಲೇ ಇರುತ್ತದೆ” ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಭೌತಶಾಸ್ತ್ರ ವಿಭಾಗವು ಸಕ್ರಿಯ ಹಾಗೂ ಅತ್ಯಂತ ಕ್ರಿಯಾಶೀಲ ವಿಭಾಗವಾಗಿದೆ. ವಿಭಾಗದಲ್ಲಿ ವಿದ್ಯಾರ್ಥಿಗಳ ಸಹಭಾಗಿತ್ವವು ಮುಖ್ಯವಾಗುತ್ತದೆ, ಹಾಗೆಯೇ ಅದು ವಿಭಾಗದ ಏಳಿಗೆಗೆ ಕಾರಣವಾಗುತ್ತದೆ ಎಂದರು.
'ಸ್ಪೆಕ್ಟ್ರಾ' ಇದು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಒಳ್ಳೆಯ ವೇದಿಕೆಯಾಗಿದೆ. ಹಾಗಾಗಿ ಈ ವೇದಿಕೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಅಗತ್ಯ ಎಂದರು.
ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು.ಉಪ ಪ್ರಾಂಶುಪಾಲ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್, 'ಸ್ಪೆಕ್ಟ್ರಾ' ಅಸೋಸಿಯೇಶನ್ ಅಧ್ಯಕ್ಷ ಅಜಯ್ ಕೃಷ್ಣ, ಉಪಾಧ್ಯಕ್ಷೆ ಸುನೇಹಾ ಬೇಗಂ, ಕಾರ್ಯದರ್ಶಿ ಗಿರೀಶ್ ಕೃಷ್ಣ, ಪ್ರಾಧ್ಯಾಪಕರಾದ ನಮ್ರತಾ ಜೈನ್, ಅಪೇಕ್ಷಾ ಜೈನ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ