ಎನ್ಡಿಎ ಸರಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ದೇಶವು ಕೇವಲ ಅಭಿವೃದ್ಧಿಯ ಟ್ರೇಲರ್ನ್ನು ಮಾತ್ರ ನೋಡಿದೆ.
ಇನ್ನೂ ಅಭಿವೃದ್ಧಿಯ ಪೂರ್ಣ ಚಿತ್ರಣ ಬಾಕಿ ಇದೆ ಎಂದಿದ್ದರು. ಇದೇ ವೇಳೆ 2047ರ ಗುರಿಯಾದ ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕುವ ಸಲುವಾಗಿ ಭಾರತೀಯ ಆರ್ಥಿಕತೆಯಲ್ಲಿ ಸಾಕಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದರು. ಈ ನಿಟ್ಟಿನಲ್ಲಿ ಇಂದು ಮಂಡನೆಯಾಗಲಿರುವ ಬಜೆಟ್ ದೇಶದ ಜನತೆಯಲ್ಲಿ ಬಹಳ ಕುತೂಹಲ ಮೂಡಿಸಿದೆ.
ಪ್ರತಿ ಬಾರಿ ಬಜೆಟ್ ಮಂಡನೆಯಾಗುವಾಗ ಪ್ರತಿಯೊಬ್ಬರೂ ಕಾತರತೆಯಿಂದ ತಮಗೆ ಅನುಕೂಲಕರ ಬದಲಾವಣೆಯನ್ನು ತರುತ್ತದೆ ಎಂದೇ ಕಾಯುತ್ತಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಲೋಕಸಭೆಯಲ್ಲಿ 2024-25 ರ ಹಣಕಾಸು ವರ್ಷದ ಬಜೆಟನ್ನು ಮಂಡಿಸಲು ಸಿದ್ಧತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮೇಲೆ ವಿವಿಧ ವಲಯಗಳ ನಿರೀಕ್ಷೆ ಹೆಚ್ಚಾಗಿದೆ. ಇದೇ ರೀತಿ ಜನಸಾಮಾನ್ಯರು ಕೂಡ ಅನೇಕ ನಿರೀಕ್ಷೆಗಳನ್ನು ಈ ಬಜೆಟ್ ಮೇಲೆ ಇಟ್ಟುಕೊಂಡಿದ್ದಾರೆ. ಅವುಗಳ ಪೈಕಿ ಎಲ್ಲರ ಗಮನ ಸಂಭಾವ್ಯ ತೆರಿಗೆ ಸುಧಾರಣಾ ಕ್ರಮಗಳ ಮೇಲೆ ಇದೆ ಎಂಬುದು ವಾಸ್ತವ. ಸರಳವಾಗಿ ಹೇಳಬೇಕು ಎಂದರೆ ಆದಾಯ ತೆರಿಗೆ ಮಿತಿ ಹೆಚ್ಚಳದ ಕಡೆಗೆ ಗಮನ ನೆಟ್ಟಿದೆ.
ಈ ಸಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಸರ್ಕಾರ ಇನ್ನಷ್ಟು ಹೆಚ್ಚಿಸಬಹುದು ಎಂಬ ಕುರಿತು ಊಹಾಪೋಹಗಳು ಕೂಡ ಹುಟ್ಟಿಕೊಂಡಿವೆ. ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ, ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ಸೇರಿದಂತೆ ಹತ್ತು ಹಲವು ಭಾರಿ ನಿರೀಕ್ಷೆಗಳು ಗರಿಗೆದರಿವೆ.
ಆದರೆ, ನಿರ್ಮಲಾ ಅವರ ಲೆಕ್ಕಾಚಾರ ಏನೆಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.ಆರ್ಥಿಕ ಸಮೀಕ್ಷೆ ಸಂಸತ್ತಿನ ಮುಂಗಾರು ಅಧಿವೇಶನ ನಿನ್ನೆ (ಜುಲೈ 22) ಆರಂಭವಾಗಿದೆ. ಮೊದಲ ದಿನ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 522 ಪುಠಗಳ ಆರ್ಥಿಕ ಸಮೀಕ್ಷೆ ಯನ್ನು (Economic Survey 2023 -24) ಮಂಡಿಸಿದ್ದು, 2024-25 ರ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಜಿಡಿಪಿ 6.5 ಮತ್ತು 7 ರಷ್ಟು ಬೆಳೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಜಿಡಿಪಿ ಬೆಳವಣಿಗೆಯು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಸ್) ಅಂದಾಜಿಸಿದ ಶೇ.7ರ ಬೆಳವಣಿಗೆಗೆ ಹೊಂದಿಕೆಯಾಗುತ್ತಿರುವುದು ಗಮನ ಸೆಳೆದಿದೆ. ಭಾರತದ ನೈಜ ಜಿಡಿಪಿಯು ಕಳೆದ ಹಣಕಾಸು ವರ್ಷ (FY24)ದಲ್ಲಿ ಶೇಕಡ 8.2 ರಷ್ಟು ಬೆಳವಣಿಗೆ ದಾಖಲಿಸಿದೆ.
ಸತತ ಮೂರನೇ ವರ್ಷಕ್ಕೆ ಶೇಕಡ 7 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿರುವ ಭಾರತದ ಅರ್ಥ ವ್ಯವಸ್ಥೆಯು ಸ್ಥಿರ ಬಳಕೆ ಬೇಡಿಕೆ ಮತ್ತು ಸ್ಥಿರವಾಗಿ ಹೂಡಿಕೆಯ ಬೇಡಿಕೆಯಿಂದ ಪ್ರೇರಿತವಾಗಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸಿದೆ.
ಜಾಗತಿಕ ಸವಾಲುಗಳ ನಡುವೆ ಭಾರತೀಯ ಆರ್ಥಿಕತೆಯು ಪ್ರಬಲವಾಗಿದೆ. ಆರ್ಥಿಕತೆಯು ಸತತ ಮೂರನೇ ವರ್ಷಕ್ಕೆ ಶೇಕಡ 7 ಕ್ಕಿಂತ ಹೆಚ್ಚು ಬೆಳವಣಿಗೆ ದಾಖಲಿಸಿತು. ಭಾರತೀಯ ಕಾರ್ಮಿಕ ಮಾರುಕಟ್ಟೆಯ ಸೂಚಕಗಳು ಕಳೆದ ಆರು ವರ್ಷಗಳಲ್ಲಿ ಸುಧಾರಿಸಿದೆ, ನಿರುದ್ಯೋಗ ದರವು 2022-23 ರಲ್ಲಿ ಶೇಕಡಾ 3.2 ಕ್ಕೆ ಇಳಿಕೆಯಾಗಿದೆ. ಹೆಚ್ಚುತ್ತಿರುವ ಉದ್ಯೋಗಿಗಳನ್ನು ಪೂರೈಸಲು ಅಥವಾ ಅವರಿಗೆ ಕೆಲಸ ಒದಗಿಸಲು ಭಾರತೀಯ ಆರ್ಥಿಕತೆಯು ಕೃಷಿಯೇತರ ವಲಯದಲ್ಲಿ 2030 ರವರೆಗೆ ವಾರ್ಷಿಕವಾಗಿ ಸುಮಾರು 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ