ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ಗುಹನ ಶೃಂಗಬೇರಪುರದಿಂದ ರಾಮನು ಭರದ್ವಾಜರ ಆಶ್ರಮದತ್ತ ಹೊರಟುಹೋದ ಮೇಲೆ ಸುಮಂತ್ರನು ರಥದಲ್ಲಿ ಅಯೋಧ್ಯೆಗೆ ಬಂದನು. ರಥದಿಂದಿಳಿದು ಮೋರೆ ಕಾಣದಂತೆ ಬಟ್ಟೆ ಮುಚ್ಚಿಕೊಂಡು ಕೌಸಲ್ಯೆಯ ಅರಮನೆಗೆ ಬಂದನು. ದಶರಥನನ್ನು ಕಂಡು ನಡೆದ ವಿಷಯಗಳನ್ನು ಹೇಳಿದ. ದಶರಥನು ಕೇಳಿದುದಕ್ಕೆ ರಾಮ-ಸೀತೆಯರ ಸಂದೇಶವನ್ನು ಹೇಳಿದ. ತಂದೆ-ತಾಯಂದಿರು ನಮಗಾಗಿ ದುಃಖಿಸದಿರುವಂತೆ ರಾಮ ಹೇಳಿದುದನ್ನೂ ಹೇಳಿದ. ದಶರಥನ ಅಳುವು ಹೆಚ್ಚಾಯಿತು. ತನ್ನ ತಪ್ಪಿನಿಂದಲೇ ಹೀಗಾಯಿತೆಂದು ತನ್ನನ್ನು ತಾನು ಹೀಗಳೆದುಕೊಂಡು ದುಃಖಿಸಿದಾಗ ಕೌಸಲ್ಯೆಯು ಅಳುತ್ತಾ ಗದರಿದಳು. ಆಗ ದಶರಥನು ತಾನು- ಯೌವನದಲ್ಲಿದ್ದಾಗ ಬೇಟೆಗೆ ಹೋದದ್ದು, ಕೊಡವನ್ನು ನೀರಿನಲ್ಲಿ ಮುಳುಗಿಸುತ್ತಿರುವಾಗ ಬಂದ ಶಬ್ದವನ್ನು ಕಾಡುಪ್ರಾಣಿಯು ನೀರು ಕುಡಿಯುವ ಶಬ್ದವೆಂದು ತಪ್ಪಾಗಿ ಭಾವಿಸಿ ಶಬ್ದವೇಧಿ ಬಾಣಪ್ರಯೋಗ ಮಾಡಿದ್ದು, ಅದು ವೃದ್ಧ; ಅಬಲ ತಂದೆ-ತಾಯಿಯರ ನೀರಡಿಕೆಯನ್ನು ನೀಗಿಸಲು ನೀರು ತರಲೆಂದು ಬಂದ ಏಕಮಾತ್ರ ಪುತ್ರ ಯುವತಪಸ್ವಿಗೆ (ಶ್ರವಣ ಕುಮಾರ) ತಾಗಿ ಅವನು ಅಸುನೀಗಿದ್ದು, ಅವನಿಗಾಗಿ ಕಾದಿದ್ದ ಅವನ ತಂದೆ-ತಾಯಿಯರು ಮಗನ ಅಗಲುವಿಕೆಯನ್ನು ತಾಳಲಾರದೆ ಅವನೊಂದಿಗೇ ತನ್ನ ನೆರವಿನಿಂದ ಚಿತೆಯೇರಿದ್ದು, ಸಾಯುವ ಹೊತ್ತಿನಲ್ಲಿ 'ನಿನಗೂ ಪುತ್ರಶೋಕದಿಂದ ಸಾವು ಬರಲಿದೆ' ಎಂದು ಶಪಿಸಿದ್ದು- ಈ ಘಟನೆಗಳನ್ನು ಕೌಸಲ್ಯೆಗೆ ಹೇಳಿದನು. ಬಳಿಕ ಕೌಸಲ್ಯೆಗೆ- ನನ್ನ ಅಂತ್ಯಕಾಲ ಬಂತು. ಹೇ ರಾಮಾ, ಹಾ ಲಕ್ಷ್ಮಣಾ, ಹಾ ಸೀತೇ ಕೈಕೇಯಿಯಿಂದಾಗಿ ಆದ ನಿಮ್ಮ ಅಗಲುವಿಕೆಯಿಂದ ನಾನೀಗ ಮರಣ ಹೊಂದುತ್ತಿದ್ದೇನೆ- ಎನ್ನುತ್ತ ಅಸುನೀಗಿದನು; ಸ್ವರ್ಗಸ್ಥನಾದನು. ರಾಣಿಯರು ಅಳತೊಡಗಿದರು. ಅಯೋಧ್ಯೆಯು ಶೋಕದಲ್ಲಿ ಮುಳುಗಿತು.
ವಸಿಷ್ಠರಿಗೆ ವಿಷಯ ತಿಳಿಯಿತು. ಮಂತ್ರಿಗಳೊಡಗೂಡಿ ಕೌಸಲ್ಯೆಯ ಅರಮನೆಗೆ ಬಂದರು. ದಶರಥನ ಶವವನ್ನು ಎಣ್ಣೆಯ ದೋಣಿಯಲ್ಲಿರಿಸಿದರು. ಭರತ- ಶತ್ರುಘ್ನರನ್ನು ಕರೆತರಲು ರಾಜದೂತರನ್ನು ಕೇಕಯ ರಾಜನ ರಾಜಧಾನಿಗೆ ಅಟ್ಟಿದರು. ಅವರು- ಶೀಘ್ರವಾಗಿ ಅಯೋಧ್ಯೆಗೆ ಬರಲು ಗುರುವಾಜ್ಞೆಯಾಗಿದೆ.- ಎಂದು ವಸಿಷ್ಠರು ಹೇಳಿದುದನ್ನಷ್ಟೇ ಹೇಳಿ ಭರತ- ಶತ್ರುಘ್ನರನ್ನು ಕರೆದುಕೊಂಡು ಬಂದರು.
ಭರತನು ಶೋಕತಪ್ತ, ಕಳಾಹೀನ ನಗರವನ್ನು ಗಮನಿಸುತ್ತಾ ಅಳುಕಿನಿಂದ ನೇರವಾಗಿ ತನ್ನ ತಾಯಿಯ ಅರಮನೆಗೆ ಹೋದನು. ಅಲ್ಲಿ ತಂದೆ- ತಾಯಿಯರು ಒಟ್ಟಿಗೆ ಸಿಗುತ್ತಾರೆಂಬ ವಿಶ್ವಾಸ ಅವನದಾಗಿತ್ತು. ಆದರೆ ಅವನಿಗೆ ಸಿಕ್ಕಿದ್ದು ತಾಯಿ ಕೈಕೇಯಿಯು ಮಾತ್ರ. ಆಕೆಯ ಬಾಯಿಯಿಂದ ತಂದೆ ಮೃತನಾದ ಸುದ್ದಿಯನ್ನು ಕೇಳಿ ಶೋಕದಿಂದ ಕುಸಿದು ಬಿದ್ದ. ಸಾಯುವ ಸಂದರ್ಭದಲ್ಲಿ ರಾಮನಿಗಾಗಿ ಹಲುಬುತ್ತಾ, ಅವನ ಹೆಸರು ಹೇಳುತ್ತಾ ಮೃತಪಟ್ಟದುದರ ಕಾರಣವನ್ನು ಕೇಳಿ ನೋವು-ಸಂಕಟ- ಶೋಕಗಳನ್ನು ತಾಳಲಾರದೆ ತಾಯಿ ಕೈಕೇಯಿಯ ಮೇಲೆ ಉರಿದು ಬಿದ್ದ. ಕೈಕೇಯಿಯನ್ನು ಪಾಪಿ, ದ್ರೋಹಿ, ಕ್ರೂರಿ ಎಂದೆಲ್ಲಾ ಜರೆದು ತಾನು ತನ್ನನ್ನು ಕೊಂದುಕೊಳ್ಳುವುದಾಗಿ ಹೇಳಿದ.
ಕೈಕೇಯಿಯನ್ನು ತೊರೆದು ದುಃಖಿತೆ ಕೌಸಲ್ಯೆಯ ಬಳಿಗೆ ಅಳುತ್ತಳುತ್ತಾ ಹೋದ. ಆಕೆಯ ದುಃಖವನ್ನು ನೋಡಲಾರದೆ ಕುಸಿದು ಬಿದ್ದು ಕ್ಷಮಿಸು ಅಮ್ಮಾss ಎಂದು ಪ್ರಾರ್ಥಿಸಿದನು. ತನ್ನ ನಿರಪರಾಧಿತ್ವವನ್ನು ಹೇಳಿದ. ಆಣೆ- ಪ್ರಮಾಣಗಳ ಮೂಲಕ ಕೌಸಲ್ಯೆಯನ್ನು ಸಮಾಧಾನ ಪಡಿಸಿದ. ಭರತನಲ್ಲಿಗೆ ವಸಿಷ್ಠರು ಮಂತ್ರಿಗಳೊಂದಿಗೆ ಬಂದರು. ಅವನನ್ನು ಸಾಂತ್ವನಗೊಳಿಸುತ್ತಾ ಸೃಷ್ಟಿ-ಸ್ಥಿತಿ-ಲಯ ಚಕ್ರಗಳಿಗೆ ಸಿಲುಕಿದ ಜೀವಿಗಳ ಪಾಡನ್ನು ವಿವರಿದರು.ಮುಂದೆ ಮಾಡಲಿರುವ ಉತ್ತರಕ್ರಿಯೆಗಳನ್ನು ನೆನಪಿಸಿದರು. ಭರತನ ಕರ್ತವ್ಯವನ್ನು ಸೂಚಿಸಿದರು. ಭರತನು ವಸಿಷ್ಠರ ಸಮಯೋಚಿತ ಮಾತುಗಳಿಂದ ಮನಸ್ಸಿಗೆ ಸಮಾಧಾನವನ್ನು ತಂದುಕೊಂಡು ಕರ್ತವ್ಯದತ್ತ ಚಿತ್ತ ಹರಿಸಿದನು. ವಸಿಷ್ಠರ ಮಾರ್ಗದರ್ಶನದಲ್ಲಿ ಚಕ್ರವರ್ತಿಗೆ ಉಚಿತವಾದ ರೀತಿಯಲ್ಲಿ ದಶರಥನ ಸದ್ಗತಿ ಕಾರ್ಯಗಳನ್ನು ನೆರವೇರಿಸಿದನು. ಭರತನು ತನ್ನ ಅರಮನೆಯಲ್ಲಿ ವಸಿಷ್ಠ, ಶತ್ರುಘ್ನ, ಮಂತ್ರಿಗಳೊಂದಿಗೆ ರಾಮಧ್ಯಾನದಲ್ಲಿ ಇರತೊಡಗಿದನು. ಕೈಕೇಯಿಗೆ ಅತ್ತ ಗಂಡನು ಮೃತನಾಗಿ ಇಲ್ಲವಾದರೆ ಇತ್ತ ಮಗನು ಇದ್ದೂ ಇಲ್ಲದಂತಾದನು. ರಾಮನಿಲ್ಲದೆ ನಾನಿರಲಾರೆ ಎಂದು ನಿರ್ಧರಿಸಿದ ಭರತನು ರಾಮನನ್ನು ಮರಳಿ ಅಯೋಧ್ಯೆಗೆ ಕರೆತರಲು ರಾಮನಿರುವ ವನಕ್ಕೆ ಹೋಗಲು ನಿರ್ಧರಿಸಿದನು.
(ಸಶೇಷ...)
- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ