ಅಧ್ಯಾತ್ಮ ರಾಮಾಯಣ-3: ಸೀತಾ ಸ್ವಯಂವರ, ಸೀತಾರಾಮರ ವಿವಾಹ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ


ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಹರೇ ರಾಮ  ಶ್ರೀಗುರುಭ್ಯೋ ನಮಃ

ಮಿಥಿಲೆಗೆ ಹೋಗುವ ದಾರಿಯಲ್ಲಿ ಗಂಗೆಯನ್ನು ದಾಟಬೇಕಾಗಿ ಬಂತು. ರಾಮನು ದೋಣಿಯನ್ನೇರಲು ಹೋಗುವಾಗ ಅಂಬಿಗನು ಅವನನ್ನು ತಡೆದನು. "ಒಡೆಯ ನಿನ್ನ ಪಾದದಲ್ಲಿಯಾವುದೊ ಒಂದು ಹುಡಿಯಿದೆ ಎಂದು ಕೇಳಿದೆ. ಅದು ಮುಟ್ಟಿದರೆ ಕಲ್ಲೂ ಹೆಣ್ಣಾಗುವುದಂತೆ! ನಿನ್ನ ಪಾದದ ಹುಡಿಯು ನನ್ನ ದೋಣಿಗೆ ತಾಗಿ ಅದೂ ಹೆಣ್ಣಾದರೆ ನಾನು ಬದುಕುವುದು ಹೇಗೆ? ಆದುದರಿಂದ ನಿನ್ನ ಪಾದವನ್ನು ನಾನು ತೊಳೆದ ಬಳಿಕ ನೀನು ದೋಣಿಯನ್ನೇರು-ಎಂದು ರಾಮನ ಪಾದವನ್ನು ತೊಳೆದನು. ದೋಣಿಯನ್ನೇರಿದ ಆ ಮೂವರೂ ಗಂಗೆಯನ್ನು ದಾಟಿ ಮಿಥಿಲೆಗೆ ಬಂದರು.


ಮಿಥಿಲೆಯ ರಾಜನಾದ ಜನಕನು ವಿಶ್ವಾಮಿತ್ರರನ್ನು ಸ್ವಾಗತಿಸಿ ಪೂಜಿಸಿದನು. ಬಳಿಕ ಅವರೊಡನೆ ಬಂದ ದೇವಕುಮಾರರಂತಿರುವ ರಾಮ- ಲಕ್ಷ್ಮಣರ ಪರಿಚಯವನ್ನು ಮಾಡಿಕೊಂಡನು. ವಿಶ್ವಾಮಿತ್ರರು ತಾವು ಅಯೋಧ್ಯೆಯಿಂದ ಹೊರಟ ಬಳಿಕ ಇಲ್ಲಿನ ತನಕ ಆದ ಘಟನಾವಳಿಯನ್ನು ಹೇಳಿ ರಾಮನಿಗೆ ಶಿವಧನುಸ್ಸನ್ನು ತೋರಿಸಲು ಜನಕನಿಗೆ ಹೇಳಿದರು.


ಅದಾಗಲೇ ಅಲ್ಲಿ ಅನೇಕ ರಾಜಕುಮಾರರು ಯಜ್ಞಕ್ಕಾಗಿ ಸೇರಿದ್ದರು. ಅವರಿಗೂ ನೋಡುವಂತಾಗಲೆಂದು ಜನಕನು ಶಿವಧನುಸ್ಸನ್ನು ತರಲು ಸೇವಕರಿಗೆ ಆಜ್ಞಾಪಿಸಿದನು. ಭಾರೀ ಭಾರದ ಶಿವಧನುಸ್ಸನ್ನು ಐದು  ಸಾವಿರ ಸೈನಿಕರು ಎಳೆದು ತಂದರು. ವಿಶ್ವಾಮಿತ್ರರ ಆಜ್ಞೆಯಂತೆ ರಾಮನು ಸೊಂಟಪಟ್ಟಿಯನ್ನು ಬಿಗಿದು ಎಡಗೈಯಲ್ಲಿ ಆರಾಮವಾಗಿ ಬಿಲ್ಲನ್ನೆತ್ತಿದನು! ಬಾಣವನ್ನು ಹೂಡಲೆಂದು ಬಿಲ್ಲನ್ನು ಸ್ವಲ್ಪ ಬಗ್ಗಿಸಿದಾಗ ಅದು ನಡುವಿನಿಂದಲೇ ಮುರಿದು ಬಿತ್ತು. ಆಗ ಬಹುದೊಡ್ಡ ಸದ್ದು ಇಡೀ ಮಿಥಿಲೆಗೆ ಕೇಳಿಸಿತು. ಜನಕನು ಹರ್ಷಗೊಂಡು ಸೀತೆಯನ್ನು ಸ್ವಯಂವರಕ್ಕಾಗಿ ಸ್ವಯಂವರ ಮಂಟಪಕ್ಕೆ ಕರೆತರಲು ಹೇಳಿದ. ಸರ್ವಾಲಂಕಾರ ಭೂಷಿತೆಯಾದ ಸೀತೆಯು ಸ್ವಯಂವರ ಮಂಟಪಕ್ಕೆ ಬಂದು ಒಲಿದು ಶ್ರೀರಾಮನ ಕೊರಳಿಗೆ ಹೂಮಾಲೆಯನ್ನು ಹಾಕಿದಳು. ಸೀತಾಸ್ವಯಂವರ ಕಳೆಯಿತು.



ವಿಶ್ವಾಮಿತ್ರರ ಅನುಮತಿಯನ್ನು ಪಡೆದು ಜನಕನು ಕೂಡಲೇ ಅಯೋಧ್ಯೆಗೆ ರಾಜದೂತರನ್ನಟ್ಟಿ ಮದುವೆಯ ಒಸಗೆಯನ್ನು ಕಳಿಸಿದನು. ಸಂತಸಗೊಂಡ ದಶರಥನು ವಸಿಷ್ಠರನ್ನು ಮುಂದುಮಾಡಿಕೊಂಡು ಪರಿವಾರ ಸಹಿತ ದಿಬ್ಬಣವನ್ನು ಕರೆತಂದನು. ಅವನೊಂದಿಗೆ ಭರತ ಶತ್ರುಘ್ನರೂ ಇದ್ದರು. ಜನಕನು ದಶರಥ ಮತ್ತು ಅವನ ಪರಿವಾರಕ್ಕೆ ಭವ್ಯ ಸ್ವಾಗತವನ್ನು ಕೋರಿದನು.ಒಂದು ಶುಭಮುಹೂರ್ತದಲ್ಲಿ, ವಸಿಷ್ಠ- ಶತಾನಂದರ ಪೌರೋಹಿತ್ಯದಲ್ಲಿ, ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾರಾಮ ಕಲ್ಯಾಣವು ವಿಜೃಂಭಣೆಯಿಂದ ನಡೆಯಿತು. ತನ್ನ ಇನ್ನೊಬ್ಬ ಮಗಳಾದ ಊರ್ಮಿಳೆಯನ್ನು ಲಕ್ಷ್ಮಣನಿಗೂ, ತನ್ನ ತಮ್ಮನ ಮಗಳಂದಿರಾದ ಮಾಂಡವೀ ಮತ್ತು ಶ್ರುತಕೀರ್ತಿಯರನ್ನು ಭರತ-ಶತ್ರುಘ್ನರಿಗೆ ಕೊಟ್ಟು ಮದುವೆಯನ್ನು ಮಾಡಿದನು. ಮಿಥಿಲೆಗೆ ಮಿಥಿಲೆಯೇ ಆನಂದ-ಸಡಗರಗಳಿಂದ ಮಿಂದೆದ್ದಿತು. 


ಜನಕನು ತನಗೆ ನಾರದರು ಹೇಳಿದ ಸೀತಾರಾಮರ ಜನ್ಮರಹಸ್ಯವನ್ನು, ಹುಟ್ಟಿದ ಕಾರಣವನ್ನು ವಸಿಷ್ಠ-ವಿಶ್ವಾಮಿತ್ರರಿಗೆ  ಹೇಳಿದ. ದಶರಥನು ಮಕ್ಕಳು ಸೊಸೆಯಂದಿರೊಂದಿಗೆ ಪರಿವಾರ ಸಹಿತವಾಗಿ ಅಯೋಧ್ಯೆಗೆ ಮರಳುವ ದಿನ ಬಂತು. ಎಂದೂ ಅಳದ ಸೀತೆ ತಂದೆ ಜನಕನನ್ನು ಮತ್ತು ತಾಯಂದಿರನ್ನು ಬೀಳ್ಕೊಡಲಾರದೆ ಅತ್ತಳು. ಎಲ್ಲರೂ ಸೇರಿ ಸಮಾಧಾನ ಪಡಿಸಿದರು. ಸೀತೆಗೆ ಪತಿವ್ರತಾ ಧರ್ಮವನ್ನು ಪಾಲಿಸಲು ಹೇಳುತ್ತಾ ತಾಯಂದಿರು ಕಣ್ಣೀರೊರೆಸುತ್ತಾ ಸೀತೆಯನ್ನು ಬೀಳ್ಕೊಟ್ಟರು. ಜನಕನಿತ್ತ ಬಳುವಳಿಗಳ ದೊಡ್ಡ ಹೊರೆಗಳೊಂದಿಗೆ ದಶರಥ ಮತ್ತು ಅವನ ಪರಿವಾರವು ಕೊಂಬು ಕಹಳೆ ನಗಾರಿಗಳ ನಿನಾದದೊಂದಿಗೆ ಅಯೋಧ್ಯೆಯತ್ತ ಪಯಣಿಸಿತು.


ಮಿಥಿಲೆಯಿಂದ ಹೊರಟು ಮೂರು ಯೋಜನಗಳಷ್ಟು ಮುಂದೆ ಹೋದಾಗ ದಶರಥನಿಗೆ ಒಂದಷ್ಟು ಅಪಶಕುನಗಳು ಎದುರಾದವು. ವಸಿಷ್ಠರಲ್ಲಿ ಅವುಗಳ ಕಾರಣವನ್ನು ಕೇಳುವ ಹೊತ್ತಿಗೆ ಭಾರೀ ಬಿರುಗಾಳಿಯು ಬೀಸಿತು. ಅದರೊಂದಿಗೆ ಕಾರ್ತವೀರ್ಯಾರ್ಜುನನಂತಹ ಕ್ಷತ್ರಿಯವೀರರನ್ನು ಕೆಡಹಿದ ಮಹಾತೇಜಸ್ವಿ, ತಪಸ್ವಿ ಪರಶುರಾಮನು ಕಂಡುಬಂದ. ಅವನನ್ನು ಕಂಡು ಹೆದರಿದ ದಶರಥನು ಕಾಪಾಡು ಎನ್ನುತ್ತಾ ಅವನ ಕಾಲಿಗೆರಗಿದ. ಇದನ್ನು ನಗಣ್ಯವಾಗಿ ಕಂಡ ಪರಶುರಾಮನು ರಾಮನಲ್ಲಿ- ಎಲೈ ರಾಮನೆ, ನೀನು ಹಳೆಯ ಶಿವಧನುಸ್ಸನ್ನು ಮುರಿದು ಮೆರೆಯುತ್ತಿದ್ದೀಯಾ! ನನ್ನೊಡನೆ ದ್ವಂದ್ವಯುದ್ಧಕ್ಕೆ ಸಿದ್ಧನಾಗು. ಇದೊ; ನನ್ನ ಕೈಯಲ್ಲಿರುವ ವೈಷ್ಣವ ಧನುಸ್ಸಿಗೆ ಹೆದೆಯೇರಿಸುವೆಯಾದರೆ ನಿನ್ನೊಡನೆ ಹೋರಾಡಲು ನಾನು ಸಿದ್ಧ- ಎನ್ನುತ್ತಾ ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ರಾಮನಿಗಿತ್ತನು.


ರಾಮನು ಕೂಡಲೇ ವೈಷ್ಣವ ಧನುಸ್ಸಿಗೆ ಹೆದೆಯೇರಿಸಿ ಬಾಣ ಹೂಡಿ ಪರಶುರಾಮನಿಗೆ- ಎಲೈ ಬ್ರಾಹ್ಮಣನೇ, ನಾನೀಗ ಹೂಡಿದ ಬಾಣವನ್ನು ಎಲ್ಲಿಗೆ ಗುರಿಯಾಗಿಸಲಿ? ನಿನ್ನ ಪುಣ್ಯಲೋಕವನ್ನು ಗುರಿಯಾಗಿಸಲೇ ಅಥವಾ ನಿನ್ನ ಕಾಲುಗಳನ್ನೇ? ಯಾವುದಾದರೊಂದು ಗುರಿ ನೀಡಲೇಬೇಕು. ಯಾಕೆಂದರೆ ರಾಮಬಾಣವು ಎಂದೂ ವ್ಯರ್ಥವಾಗದು- ಎಂದನು. ಪರಶುರಾಮನು ಕಳೆಗುಂದಿದನು. ಅವನ ತೇಜಸ್ಸು ರಾಮನಲ್ಲಿ (ರಾಮನ ರೂಪದಲ್ಲಿರುವ ಮಹಾವಿಷ್ಣುವಿನಲ್ಲಿ) ಲೀನವಾಯಿತು. ಪರಶುರಾಮನು ರಾಮನಲ್ಲಿ- ನಾನು ಪುಣ್ಯಲೋಕಗಳ ಪ್ರಾಪ್ತಿಗಾಗಿ ಯಾವ ಯಾವ ಪುಣ್ಯಕರ್ಮಗಳನ್ನು ಮಾಡಿರುವೆನೋ, ಅವೆಲ್ಲವೂ ನಿನ್ನ ಬಾಣಕ್ಕೆ ಗುರಿಯಾಗಲಿ. ಹೇ ರಾಮ, ನಿನಗೆ ನಮಸ್ಕಾರವಿರಲಿ- ಎಂದನು.


ಬಳಿಕ ಶ್ರೀರಾಮನಿಗೆ ಪ್ರದಕ್ಷಿಣೆ ಬಂದು ಅವನ ಆಣತಿಯನ್ನು ಪಡೆದು ಮಹೇಂದ್ರಪರ್ವತಕ್ಕೆ ತಪಸ್ಸಿಗಾಗಿ ತೆರಳಿದನು. ದಶರಥನು ಪರಿವಾರಸಹಿತ ಅಯೋಧ್ಯೆಯನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸಂಭ್ರಮದಿಂದ ಸೇರಿದನು.


ಬಾಲಕಾಂಡಕ್ಕೆ ಮಂಗಳ 


(ಸಶೇಷ...)

- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top