ಅಧ್ಯಾತ್ಮ ರಾಮಾಯಣ-2: ಮುನಿ ವಿಶ್ವಾಮಿತ್ರರ ಯಜ್ಞ ರಕ್ಷಣೆ, ಅಹಲ್ಯೋದ್ಧರಣ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ


ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಹರೇ ರಾಮ  ಶ್ರೀಗುರುಭ್ಯೋ ನಮಃ 

ಯೋಧ್ಯೆಯಲ್ಲಿ ದಶರಥನ ಮಗನಾಗಿ ಮಹಾವಿಷ್ಣುವಿನ ರಾಮಾವತಾರವಾದ್ದು ವಿಶ್ವಾಮಿತ್ರರ ಅರಿವಿಗೆ ಬಂತು. ಅವನ ದರ್ಶನಕ್ಕಾಗಿ ಅಯೋಧ್ಯೆಗೆ ಆಗಮಿಸಿದರು. ತನ್ನ ಅರಮನೆಗೆ ಆಗಮಿಸಿದ ಮಹರ್ಷಿಗಳಾದ ವಿಶ್ವಾಮಿತ್ರರನ್ನು ದಶರಥನು ವಸಿಷ್ಠರೊಡಗೂಡಿ ಸ್ವಾಗತಿಸಿದನು. ಅಭಿವಂದಿಸಿ, ಪೂಜಿಸಿ ತನ್ನಿಂದ ಯಾವ ಸೇವೆಯಾಗಬೇಕು? ಅಪ್ಪಣೆ ಮಾಡಿ, ನಡೆಸಿಕೊಡುವೆನು ಎಂದು ಪ್ರಾರ್ಥಿಸಿದನು. ಆಗ ವಿಶ್ವಾಮಿತ್ರರು ತಾವು ಕೈಗೊಂಡಿರುವ ಯಜ್ಞಕ್ಕೆ ಅಡ್ಡಿ, ಆತಂಕಗಳನ್ನು ತಂದೊಡ್ಡುತ್ತಿರುವ ಸುಬಾಹು-ಮಾರೀಚರನ್ನು ನಿವಾರಿಸಲು ರಾಮ-ಲಕ್ಷ್ಮಣರನ್ನು ನನ್ನೊಂದಿಗೆ ಕಳುಹಿಸಿಕೊಡು ಎಂದರು.


ರಾಕ್ಷಸರನ್ನೆದುರಿಸಲು ಎಳೆಯರನ್ನು ಕಳಿಸಲು ದಶರಥನು ಹಿಂದೇಟು ಹಾಕಿದನು. ಹಾಗೆಂದು ಮಹರ್ಷಿಗಳಾದ ವಿಶ್ವಾಮಿತ್ರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಅವರ ಅಸಮಾಧಾನವನ್ನು ಎದುರುಹಾಕಿಕೊಳ್ಳಲೂ ಬಯಸದಾದನು. ಈ ಇಕ್ಕಟ್ಟಿನಿಂದ ಪಾರುಮಾಡಲು ವಸಿಷ್ಠರ ಸಲಹೆಯನ್ನು ವಿನಂತಿಸಿದನು.


ವಸಿಷ್ಠರು- ರಾಜಾ ಅತಿರಹಸ್ಯವಾದ ಸಂಗತಿಯೊಂದನ್ನು ನಿನಗೆ ಹೇಳುವೆನು. ಇದು ಹೊರಗೆಲ್ಲೂ ಹೋಗಕೂಡದು. ರಾಮನು ರಾವಣನ ವಿನಾಶಕ್ಕಾಗಿ ಅವತರಿಸಿದ ವಿಷ್ಣುವಿನ ಮಾನವಾವತಾರ. ನೀನು ಕಶ್ಯಪನ ಅವತಾರವಾದರೆ ಕೌಸಲ್ಯೆಯು ಅದಿತಿಯ ಅವತಾರ.ನಿಮ್ಮ ಪ್ರಾರ್ಥನೆಯನ್ನು ಮನ್ನಿಸಿ ಮಹಾವಿಷ್ಣುವು ನಿಮ್ಮ ಮಗನಾಗಿ ಜನಿಸಿದ್ದಾನೆ. ಅವನ ಯೋಗಮಾಯೆಯು ಸೀತೆಯಾಗಿ ಜನಕನ ಮಗಳಾಗಿ ಜನಿಸಿದ್ದಾಳೆ. ಅವರಿಬ್ಬರನ್ನು ಒಂದುಗೂಡಿಸಲೆಂದೇ ವಿಶ್ವಾಮಿತ್ರರು ಒಂದು ನೆವದೊಂದಿಗೆ ಬಂದಿರುವರು. ರಾಮಣನ ವಧೆಗೆ ಸೀತಾ-ರಾಮರು ಒಗ್ಗೂಡುವ ಅಗತ್ಯವಿದೆ. ರಾಮ-ಲಕ್ಷ್ಮಣರನ್ನು ನಿಶ್ಚಿಂತೆಯಿಂದ  ವಿಶ್ವಾಮಿತ್ರರೊಂದಿಗೆ ಕಳಿಸಿಕೊಡು ಎಂದರು. ಮರುಕ್ಷಣವೇ ದಶರಥನು ಅವರಿಬ್ಬರನ್ನು ಕರೆದು ವಿಶ್ವಾಮಿತ್ರರೊಂದಿಗೆ ಕಳಿಸಿಕೊಟ್ಟನು. ವಿಶ್ವಾಮಿತ್ರರೊಂದಿಗೆ ರಾಮ- ಲಕ್ಷ್ಮಣರು ಶಸ್ತ್ರಸಜ್ಜಿತರಾಗಿ ಹೊರಟರು.ದಾರಿಯಲ್ಲಿ ವಿಶ್ವಾಮಿತ್ರರು ಹಸಿವು-ಬಾಯಾರಿಕೆಗಳನ್ನು ನೀಗಿಸುವ "ಬಲಾ-ಅತಿಬಲಾ"ಎಂಬ ಎರಡು ವಿದ್ಯೆಗಳನ್ನು ಬೋಧಿಸಿದರು. 


ರಾಮ- ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಗಂಗೆಯನ್ನು ದಾಟಿ ಮುಂದೆ ಹೋಗುತ್ತಿದ್ದಾಗ ಕಾಮರೂಪಿಯಾದ ನರಹಂತಕಿ ದುಷ್ಟ ರಾಕ್ಷಸಿ ತಾಟಕೆಯು ಎದುರಾದಳು. ವಿಶ್ವಾಮಿತ್ರರ ಆಣತಿಯಂತೆ ಹೆಣ್ಣೆಂದು ನೋಡದೆ ರಾಮನು ಅವಳನ್ನು ಬಾಣಗಳಿಂದ ಸಂಹರಿಸಿದ. ಅವಳು ಶಾಪಗ್ರಸ್ತ ಯಕ್ಷಸ್ತ್ರೀಯಾಗಿದ್ದಳು. ರಾಮನಿಂದ ಶಾಪಮುಕ್ತಳಾದ ತಾಟಕೆಯು ಸುಂದರ ಯಕ್ಷಿಯಾಗಿ ಬದಲಾಗಿ ರಾಮನಿಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ತನ್ನ ಲೋಕಕ್ಕೆ ತೆರಳಿದಳು. ರಾಮನ ಕಾರ್ಯದಿಂದ ಅತ್ಯಂತ ಸಂತೋಷಗೊಂಡ ವಿಶ್ವಾಮಿತ್ರರು ಕೂಡಲೇ ಅವನನ್ನು ಪ್ರೀತಿಯಿಂದ ಆಲಂಗಿಸಿ ಕಿವಿಯಲ್ಲಿ ಗುಟ್ಟಾಗಿ  ರಹಸ್ಯಮಂತ್ರಗಳಿಂದ ಕೂಡಿದ ಎಲ್ಲ ಅಸ್ತ್ರಸಮೂಹವನ್ನು ಬೋಧಿಸಿದರು. 


ತಾಟಕಾವನದಿಂದ ಹೊರಟ ಆ ಮೂವರೂ ಸಿದ್ಧ-ಚಾರಣರಿಂದ ಸೇವಿಸಲ್ಪಡುವ ಸಿದ್ಧಾಶ್ರಮಕ್ಕೆ ಬಂದರು. ರಾಮನು ವಿಶ್ವಾಮಿತ್ರರಲ್ಲಿ ಯಜ್ಞದೀಕ್ಷೆಯನ್ನು ಕೈಗೊಳ್ಳುವಂತೆ ವಿನಂತಿಸಿ ತಮ್ಮನೊಡನೆ ಯಜ್ಞರಕ್ಷಣೆಗೆ ಕಾವಲು ಕುಳಿತನು. ಯಜ್ಞವು ಆರಂಭವಾಯಿತು. ಇದನ್ನು ತಿಳಿದ ಸುಬಾಹು- ಮಾರೀಚರು ರಕ್ತ-ಮಾಂಸಗಳನ್ನು ಸುರಿಸುತ್ತಾ ಯಜ್ಞವನ್ನು ಹಾಳುಮಾಡಲು ಧಾವಿಸಿ ಬಂದರು. ಶ್ರೀರಾಮನು ಬಿಲ್ಲಿಗೆ ಎರಡು ಬಾಣಗಳನ್ನು ಒಮ್ಮೆಲೇ ಹೂಡಿ ಅವರಿಬ್ಬರ ಮೇಲೆ ಪ್ರಯೋಗಿಸಿದನು. ಒಂದು ಬಾಣವು ಮಾರೀಚನನ್ನು ನೂರುಯೋಜನ ದೂರದಲ್ಲಿರುವ ಸಮುದ್ರದಲ್ಲಿ ಕೆಡವಿದರೆ ಮತ್ತೊಂದು ಸುಬಾಹುವನ್ನು ಸುಟ್ಟುಹಾಕಿತು. ನಿರ್ವಿಘ್ನವಾಗಿ ಯಜ್ಞ ಪರಿಸಮಾಪ್ತಿಯಾಯಿತು. ವಿಶ್ವಾಮಿತ್ರರು ತುಸಂತೋಷಗೊಂಡರು. ರಾಮ-ಲಕ್ಷ್ಮಣರಿಗೆ ಅನೇಕ ಕಥೆಗಳನ್ನು ಹೇಳಿ ಅವರ ಅರಿವನ್ನು ಹೆಚ್ಚಿಸಿದರು. 


ವಿಶ್ವಾಮಿತ್ರರು ರಾಮ-ಲಕ್ಷ್ಮಣರೊಂದಿಗೆ ಜನಕರಾಜನ ಮಹಾಯಜ್ಞ ಹಾಗು ಶಿವಧನುಸ್ಸನ್ನು ನೋಡಲು ಮಿಥಿಲೆಗೆ ಹೊರಟರು. 


ಮಿಥಿಲೆಯ ದಾರಿಯಲ್ಲಿ ಗಂಗಾನದಿಯ ದಡದಲ್ಲಿರುವ ಪವಿತ್ರವಾದ ಗೌತಮಾಶ್ರಮಕ್ಕೆ ಆಗಮಿಸಿದರು. ಅದು ಜೀವಶೂನ್ಯವಾದ ಆಶ್ರಮವಾಗಿರುವುದನ್ನು ಕಂಡ ರಾಮನು ವಿಶ್ವಾಮಿತ್ರರಲ್ಲಿ ಅದಕ್ಕಿರುವ ಕಾರಣವನ್ನು ಕೇಳಿದನು. ವಿಶ್ವಾಮಿತ್ರರು ಸತಿ ಅಹಲ್ಯೆಯ ವ್ಯಥೆಯ ಕಥೆಯನ್ನು ಹೇಳಿದರು- ಅಹಲ್ಯೆ ಮಹರ್ಷಿಗಳಾದ ಗೌತಮರ ಪತ್ನಿ. ತ್ರಿಲೋಕಸುಂದರಿ. ಅವಳ ಸೌಂದರ್ಯಕ್ಕೆ ಸ್ವರ್ಗಾಧಿಪತಿ ಇಂದ್ರನೂ ಮಾರುಹೋದನು. ಅವಳು ಮಹರ್ಷಿ,ಮಹಾತಪಸ್ವಿ ಗೌತಮರ ಪತ್ನಿಯೆಂದು ತಿಳಿದಿದ್ದರೂ ಆಕೆಯನ್ನು ಪಡೆಯಲೇಬೇಕೆಂಬ ಕಾಮಾತುರತೆಯಿಂದ ಗೌತಮರಿಲ್ಲದ ವೇಳೆಯಲ್ಲಿ ಅವರ ವೇಷದಲ್ಲಿ ಗೌತಮಾಶ್ರಮವನ್ನು ಪ್ರವೇಶಿಸಿದರು. ಅಹಲ್ಯೆಗೆ ಈತ ಗೌತಮರ ರೂಪದಲ್ಲಿ ಬಂದ ದೇವೇಂದ್ರನೆಂದು ಗೊತ್ತಾದರೂ ಅವನಿಗೆ ತನ್ನನ್ನು ತಾನು ತೆರೆದಳು. ಅಲ್ಪಕಾಲದ ಸುಖಕ್ಕಾಗಿ ಇಂದ್ರ-ಅಹಲ್ಯೆಯರು ಪತಿತರಾದರು. ತನ್ನ ವಾಂಛೆಯನ್ನು ತೀರಿಸಿ ಇಂದ್ರನು ಹೊರಡುವ ವೇಳೆಗೆ ನಿಜವಾದ ಗೌತಮರು ಆಗಮಿಸಿದರು. ಅಸಲಿಯ ಎದುರು ನಕಲಿ ಸೋತಿತು. ಆಘಾತಗೊಂಡ ಗೌತಮರು ಕೋಪಗೊಂಡು ಇಂದ್ರನಿಗೆ"ನೀನು ಯೋನಿಲಂಪಟನಾದ ಕಾರಣ ಮೈಗಣ್ಣನಾಗುವಂತೆ (ಮೈಯೆಲ್ಲಾ ಕಣ್ಣಿರುವಂತೆ) ಶಾಪಕೊಟ್ಟರು. ಅಹಲ್ಯೆಗೆ ನಿರಾಹಾರಳಾಗಿ ಹಗಲಿರುಳು ತಪಸ್ಸು ಮಾಡುತ್ತಾ ಶಿಲಾತಪಸ್ವಿನಿಯಾಗಿರುವಂತೆ ಶಪಿಸಿದರು. ಕ್ರೋಧವಳಿದು ಅಹಲ್ಯೆಯ ಪಶ್ಚಾತ್ತಾಪದ ದಯನೀಯ ಸ್ಥಿತಿಯನ್ನು ಕಂಡು ಮರುಗಿದರು. ಸಾವಿರ ವರ್ಷಗಳ ಬಳಿಕ ಇಲ್ಲಿಗೆ ಲಕ್ಷ್ಮಣನೊಂದಿಗೆ ಬರುವ ಶ್ರೀರಾಮನ  ಪಾದಸ್ಪರ್ಶದಿಂದ ನಿನಗೆ ಶಾಪವಿಮೋಚನೆಯಾಗಿ ನನ್ನನ್ನು ಮರಳಿ ಸೇರುವೆಯೆಂದು ಹೇಳಿ ತಪಸ್ಸಿಗಾಗಿ ತೆರಳಿದರು. ಈಗ ನಿನ್ನ ಆಗಮನವನ್ನು ನಿರೀಕ್ಷಿಸುತ್ತಾ ತಪಸ್ಸುಗೈಯುತ್ತಿರುವ, ಪಶ್ಚಾತ್ತಾಪಾಗ್ನಿಯಿಂದ ಪರಿಶುದ್ಧಳಾದ ಅಹಲ್ಯೆಯನ್ನು ಉದ್ಧರಿಸು"- ಎಂದು ವಿಶ್ವಾಮಿತ್ರರು ಶ್ರೀರಾಮನಿಗೆ ಹೇಳಿದರು.


ಶ್ರೀರಾಮನು ಅಹಲ್ಯೆಯತ್ತ ನಡೆದನು. ಅವನ ಪಾದಸ್ಪರ್ಶದಿಂದ  ಅಹಲ್ಯೆಯು ಶಾಪದಿಂದ ಮುಕ್ತಳಾದಳು. ಶ್ರೀರಾಮನು ತನ್ನ ಪರಿಚಯವನ್ನು ಹೇಳಿ ನಮಿಸಿದನು. ಶ್ರೀರಾಮನು ಮಹಾವಿಷ್ಣುವಿನಂತೆಯೇ ಅವಳ ಕಂಗಳಿಗೆ ಕಂಡುಬಂದನು. ಅವನನ್ನು ದರ್ಶಿಸಿದೊಡನೆಯೇ ಸ್ತೋತ್ರವು ಅವಳ ಮುಖಾರವಿಂದದಿಂದ ಹರಿಯತೊಡಗಿತು.


ಯತ್ಪಾದಪಂಕಜಪರಾಗಪವಿತ್ಫಗಾತ್ರಾ 

ಭಾಗೀರಥೀ ಭವವಿರಿಂಚಿಮುಖಾನ್ ಪುನಾತಿ।

ಸಾಕ್ಷಾತ್ಸಏವ ಮಮ ದೃಗ್ವಿಷಯೋ ಯದಾಸ್ತೇ 

ಕಿಂ ಮನ್ಯತೇ ಮಮ ಪುರಾಕೃತಭಾಗಧೇಯಮ್॥

ಹರಿಯ ಅಡಿಯ ಧೂಳಿನಿಂದ ಗಂಗೆ ಶುದ್ಧಳಾದಳು 

ಅಜನು ಹರನು ಗಂಗೆಯಿಂದ ಪರಮ ಶುದ್ಧರಾದರು।

ಅಂಥ ಪರಮಪುರುಷನನ್ನು ಕಂಡು ಧನ್ಯಳಾದೆನು 

ಇಂಥ ಪೂರ್ವಪುಣ್ಯವನ್ನು ಎಂತು ನಾನು ಹೊಗಳಲಿ?॥ (ಭಾವಾನುವಾದ)


ಅಹಲ್ಯೋದ್ಧರಣವಾಯಿತು. ಗೌತಮರ ಆಗಮನವಾಯಿತು. ಅಹಲ್ಯೆ-ಗೌತಮರ ದಾಂಪತ್ಯಜೀವನ ಮರಳಿ ಸಾರ್ಥಕತೆಯತ್ತ ಮುನ್ನಡೆಯಿತು.


ರಾಮ- ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಮಿಥಿಲಾನಗರಕ್ಕೆ ತೆರಳಿದರು.


(ಸಶೇಷ...)

- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top