ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ
ರಾಮನು ತನ್ನ ಮನದಲ್ಲಿ- "ನಾನು ಸೀತೆಯನ್ನು ಅಗ್ನಿಯಲ್ಲಿರಲು ಹೇಳಿ, ಪರ್ಣಕುಟೀರದಲ್ಲಿ ಮಾಯಾಸೀತೆಯಿರುವುದನ್ನು ಲಕ್ಷ್ಮಣನಿಗೆ ಹೇಳಲಿಲ್ಲ. ನಿಜವಾದ ಸೀತೆಯು ಸುರಕ್ಷಿತವಾಗಿರುವುದು ನನಗೆ ಗೊತ್ತಿದ್ದರೂ ಈಗ ಇವನನ್ನು ಮರಳುಮಾಡುವುದಕ್ಕೆ, ರಾವಣನ ಲಂಕೆಯನ್ನು ಸೇರಿ ರಾಕ್ಷಸರನ್ನು ನಾಶಪಡಿಸಲಿಕ್ಕೆ ಸಾಮಾನ್ಯ ಮನುಷ್ಯನಂತೆ ದುಃಖ ಪಡುವೆನು." ಎಂದು ಚಿಂತಿಸಿ ಲಕ್ಷ್ಮಣನಲ್ಲಿ- " ನೀನು ಯಾಕೆ ಸೀತೆಯನ್ನು ಬಿಟ್ಟುಬಂದೆ? ಜನಕಜೆಯನ್ನು ರಾಕ್ಷಸರು ಈಗಾಗಲೇ ಹೊತ್ತು ಒಯ್ದಿರಬಹುದು ಅಥವಾ ತಿಂದಿರಬಹುದು. ನೀನು ಅವಳನ್ನು ಬಿಟ್ಟುಬಂದು ತಪ್ಪು ಮಾಡಿದೆ ಲಕ್ಷ್ಮಣ"- ಎಂದನು. ಲಕ್ಷ್ಮಣನು ನಡೆದ ಸಂಗತಿ, ಮಾತುಕತೆಗಳನ್ನು ಹೇಳಿ ತನ್ನ ಅಸಹಾಯಕತೆಯನ್ನು ರಾಮನಿಗೆ ತಿಳಿಹೇಳಿದನು. ಆದರೆ ರಾಮನು ಅದಕ್ಕೊಪ್ಪದೆ ಹೆಂಗಸರ ಮಾತನ್ನು ಕೇಳಿ ನೀನು ಸೀತೆಯನ್ನು ಬಿಟ್ಟು ಬಂದುದು ತಪ್ಪೆಂದೇ ಹೇಳಿದನು. ಇಬ್ಬರೂ ಪರ್ಣಕುಟೀರಕ್ಕೆ ಧಾವಿಸಿದರು. ಸೀತೆ ಕಾಣೆ. ರಾಮನ ಊಹೆ ನಿಜವಾಯಿತು. ಸೀತೆಯನ್ನು ಕೂಗಿ ಕೂಗಿ ಕರೆದ. ಅವಳು ಹೋಗಿರಬಹುದಾದ ಕಡೆಗಳಲ್ಲಿ ಹುಡುಕಿದರೂ ಕಾಣಸಿಗಲಿಲ್ಲ. ರಾಮನು ಅತಿದುಃಖಿತನಾಗಿ ಅವಳ ಬಗೆಗೆ ವನದೇವತೆಗಳಲ್ಲಿ, ಗಿಡ- ಮರಗಳಲ್ಲಿ, ಮೃಗ-ಪಕ್ಷಿಗಳಲ್ಲಿ ಸೀತೆಯೆಲ್ಲಿ? ನೀವು ಕಂಡಿರಾ? ಎಂದು ಕೇಳಿದ. ಮಾಯಾತೀತನು ಮಾಯೆಯನ್ನಾಶ್ರಯಿಸಿ ಹುಲುಮಾನವನಂತೆ ಮಾಯಾಸೀತೆಗಾಗಿ ಹಲುಬಿದನು. ಪಾಪ! ಲಕ್ಷ್ಮಣ, ತಾನು ಮಾಡದ ತಪ್ಪಿಗೆ ಪಶ್ಚಾತ್ತಾಪದಿಂದ ಬೆಂದು ಹೋಗುತ್ತಿದ್ದನು. ಅಣ್ಣನ ದುಃಖದಿಂದ ಕರಗಿಹೋಗಿದ್ದನು.
ಅಣ್ಣ- ತಮ್ಮಂದಿರು ಹೀಗೆಯೇ ಮುಂದುವರೆಯುತ್ತಿದ್ದಾಗ ರಾವಣನ ಖಡ್ಗಾಘಾತದಿಂದ ನೆಲಕ್ಕುರುಳಿ ಬಿದ್ದ ಜಟಾಯುವನ್ನು ಕಂಡರು. ಜಟಾಯುವೆಂದರಿಯದೆ ಬೇರಾವುದೋ ಪ್ರಾಣಿಯಾಗಿರಬಹುದೆಂದು ಸೀತೆಯನ್ನು ಇದೇ ಕೊಂದಿರಬಹುದೆಂಬ ತಪ್ಪು ಕಲ್ಪನೆಯಿಂದ ರಾಮನು ಅದನ್ನು ಕೊಲ್ಲಲು ಹೊರಟನು. ಆಗ ಜಟಾಯುವು - " ರಾಮ, ನಾನು ಜಟಾಯು. ಸೀತೆಯನ್ನು ರಾವಣನು ಕದ್ದೊಯ್ಯುತ್ತಿರುವಾಗ ಅವನನ್ನು ತಡೆದು ಯುದ್ಧ ಮಾಡಿದೆ. ನನ್ನ ಕರ್ಮದಿಂದ ಸಾಯುವ ಸ್ಥಿತಿಗೆ ಬಂದಿದ್ದೇನೆ. ನನ್ನ ಕಡೆ ನೋಡು. ನಾನೀಗ ಪ್ರಾಣ ಬಿಡಲಿಚ್ಛಿಸುವೆನು"- ಎಂದು ರೋದಿಸಿದನು.
ರಾಮನು ಜಟಾಯುವಿನತ್ತ ಧಾವಿಸಿ ಅವನನ್ನಪ್ಪಿ ನನ್ನ ಹೆಂಡತಿಯನ್ನು ಕೊಂಡೊಯ್ದವರಾರು? ಎಂದು ಅಳುತ್ತ ಕೇಳಿದ. ಜಟಾಯುವು ಬಹಳ ಸಂಕಟದಿಂದ ನಡೆದ ಘಟನೆಯನ್ನು ಹೇಳಿ, ರಾವಣನು ತನ್ನ ರಥದಲ್ಲಿ ದಕ್ಷಿಣದತ್ತ ಸೀತೆಯನ್ನು ಕೊಂಡೊಯ್ದಿದ್ದಾನೆ. ನಾನೀಗ ಸಾಯುತ್ತಿದ್ದೇನೆ. ನಿನ್ನನ್ನು ಕಾಣುತ್ತಾ ಸಾಯುವುದರಿಂದ ನಾನು ಖಂಡಿತವಾಗಿಯೂ ಮುಕ್ತನಾಗುತ್ತೇನೆ. ಶ್ರೀರಾಮನ ಎದುರಿನಲ್ಲಿಯೇ ಜಟಾಯುವಿನ ಅಂತ್ಯವಾಯಿತು. ರಾಮ- ಲಕ್ಷ್ಮಣರು ಜಟಾಯುವಿನ ಅಂತ್ಯಕ್ರಿಯೆಯನ್ನು ಬಂಧುಗಳ ಅಂತ್ಯಕ್ರಿಯೆಯನ್ನು ನಡೆಸುವಂತೆ ನಡೆಸಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರು. ಜಟಾಯುವು ದಿವ್ಯದೇಹಧಾರಿಯಾಗಿ ಶ್ರೀರಾಮನನ್ನು ಸ್ತುತಿಸುತ್ತಾ ವೈಕುಂಠದಿಂದ ಬಂದ ವಿಮಾನವನ್ನೇರಿದನು. ವಿಷ್ಣುಲೋಕವನ್ನು ಸೇರಿ ವಿಷ್ಣುವಿನ ಸಾರೂಪ್ಯವನ್ನು ಹೊಂದಿದನು.
ಸೀತಾನ್ವೇಷಣೆಯಲ್ಲಿ ಕಾಡಿನಲ್ಲಿ ಮುಂದಕ್ಕೆ ಹೋಗುವಾಗ ರಾಮ- ಲಕ್ಷ್ಮಣರು ಅವರಿಗೆ ಅರಿವಿಲ್ಲದೆ ಕಬಂಧನೆಂಬ ರಾಕ್ಷಸನ ಬಾಹುಗಳಲ್ಲಿ ಬಂಧಿತರಾದರು. ಅವನು ತಲೆ-ಕಾಲುಗಳಿಲ್ಲದೆ ಎದೆಯಲ್ಲೇ ಮುಖವಿದೆ. ತನ್ನೆರಡು ಕೈಗಳಿಗೆ ಸಿಕ್ಕಿದುದನ್ನು ಹಾಗೆಯೇ ತಿಂದುಬಿಡುತ್ತಿದ್ದನು. ಕಬಂಧನ ಬಾಹುಗಳಿಂದ ಬಿಡುಗಡೆ ಹೊಂದಿದವರೇ ಇಲ್ಲ! ಇದೀಗ ರಾಮ- ಲಕ್ಷ್ಮಣರ ಸರದಿ! ಲಕ್ಷ್ಮಣನ ಸಲಹೆಯಂತೆ ಅಣ್ಣ - ತಮ್ಮ ಸೇರಿ ಕಬಂಧನ ಬಾಹುಗಳೆರಡನ್ನೂ ಕತ್ತರಿಸಿ ಹಾಕಿದರು. ಕಬಂಧನಿಗೆ ಅಚ್ಚರಿ! ಯಾಕೆಂದರೆ ಸಾಮಾನ್ಯ ಮಾನವರಿಂದ ಈ ಕೆಲಸ ಅಸಾಧ್ಯ. ಅವನು ರಾಮನಲ್ಲಿ ನೀವು ಯಾವ ದೇವತೆಗಳೆಂದು ಕೇಳಿದ. ಆಗ ರಾಮನು ಚುಟುಕಾಗಿ ತನ್ನ ಪರಿಚಯದೊಂದಿಗೆ ವನವಾಸದ ವಿಚಾರ ಹಾಗೂ ಸೀತಾಪಹರಣದ ಸಂಗತಿಯನ್ನು ಹೇಳಿದ. ಕಬಂಧನ ಬಗೆಗೆ ಕೇಳಿದಾಗ ಅವನು- ನಾನು ಗಂಧರ್ವರಾಜ. ಬ್ರಹ್ಮನಿಂದ ಅಮರತ್ವದ ವರವನ್ನು ಪಡೆದಿದ್ದೆ. ಇದರಿಂದ ಕೊಬ್ಬಿದ ನಾನು ಅಷ್ಟಾವಕ್ರನೆಂಬ ಮುನಿಯನ್ನು ಅಪಹಾಸ್ಯ ಮಾಡಿದೆ. ಅವರು ರಾಕ್ಷಸನಾಗುವಂತೆ ಶಾಪವಿತ್ತರು. ಅವರ ಶಾಪದೊಂದಿಗೆ ದೇವೇಂದ್ರನ ವಜ್ರಾಯುಧದ ಆಘಾತದಿಂದಾದ ನನ್ನ ಈಗಿನ ದೇಹಸ್ಥಿತಿಯ ಫಲವನ್ನೂ ಅನುಭವಿಸುತ್ತಿದ್ದೇನೆ. ನನ್ನ ಕೆಟ್ಟ ಕಾರ್ಯದಿಂದ ಪಶ್ಚಾತ್ತಾಪ ಪಟ್ಟಾಗ ಅವರೇ ನನಗೆ ನಿನ್ನಿಂದ ಶಾಪಮುಕ್ತಿಯಾಗುವುದೆಂದರು.
ಅಂದಿನಿಂದ ಈ ಕಾಡಿನಲ್ಲಿದ್ದುಕೊಂಡು ಎರಡು ಯೋಜನಗಳಷ್ಟು ಉದ್ದಗಲಕ್ಕೆ ನನ್ನ ಬಾಹುಗಳನ್ನು ಚಾಚಿ ಅವುಗಳಿಗೆ ಸಿಕ್ಕಿದ ಪ್ರಾಣಿಗಳನ್ನು ತಿಂದು ಬದುಕುತ್ತಿದ್ದೇನೆ. ನೀವೀಗ ನನ್ನನ್ನು ಕಟ್ಟಿಗೆಗಳಿಂದ ಸುಡುತ್ತಿರುವ ದೊಡ್ಡ ಹೊಂಡದಲ್ಲಿ ನನ್ನನ್ನು ಹಾಕಿ ಸುಟ್ಟುಬಿಡಿ. ಆಗ ನಾನು ನನ್ನ ಮೊದಲಿನ ರೂಪವನ್ನು ಪಡೆಯುತ್ತೇನೆ. ಬಳಿಕ ನಿನ್ನ ಹೆಂಡತಿಯನ್ನು ಪಡೆಯುವ ಉಪಾಯವನ್ನು ಹೇಳುತ್ತೇನೆ"- ಎಂದನು. ರಾಮ- ಲಕ್ಷ್ಮಣರು ಅವನು ಹೇಳಿದಂತೆಯೇ ಮಾಡಿದರು. ಕಬಂಧನು ಸತ್ತು ತನ್ನ ಪೂರ್ವರೂಪವನ್ನು ಪಡೆದನು. ರಾಮನನ್ನು ನೋಡುತ್ತಾ ಅವನ ಪೂರ್ವರೂಪವಾದ ಮಹಾವಿಷ್ಣುವನ್ನು ಸ್ತುತಿಸಿದನು. ಮಹಾವಿಷ್ಣುವಿನ ವಿರಾಡ್ರೂಪವನ್ನು ವರ್ಣಿಸಿ ಸ್ತುತಿಸಿದನು. ಕೊನೆಗೆ, ಇನ್ನೆಂದೂ ನಿನ್ನ ಮಾಯೆಯು ನನ್ನನ್ನು ಮುಸುಕದಂತೆ ಹರಸು ಎಂದು ಪ್ರಾರ್ಥಿಸಿದನು. ರಾಮನು ಅವನ ಪ್ರಾರ್ಥನೆಯನ್ನು ಈಡೇರಿಸಿ ಅವನನ್ನು ಸನಾತನವಾದ ಪರಂಧಾಮಕ್ಕೆ ಹೋಗುವಂತೆ ಹೇಳಿದನು. ಕಬಂಧನು ಪರಂಧಾಮಕ್ಕೆ ತೆರಳುವ ಮುನ್ನ ಸೀತಾನ್ವೇಷಣೆಗೆ ಸಹಾಯಕವಾಗಲು ಅಲ್ಲಿ ಪಕ್ಕದ ಆಶ್ರಮದಲ್ಲಿರುವ ರಾಮಭಕ್ತೆ ಶಬರಿಯನ್ನು ಕಾಣಲು ಹೇಳಿದನು. ಕಬಂಧನು ವಿಮಾನವನ್ನೇರಿ ವಿಷ್ಣುಲೋಕಕ್ಕೆ ಹೋದನು.
ರಾಮ- ಲಕ್ಷ್ಮಣರು ಶಬರಿಯ ಆಶ್ರಮದತ್ತ ಹೆಜ್ಜೆಹಾಕಿದರು.
ಮುಂದುವರಿಯುವುದು....
- ವಿಶ್ವ ಉಂಡೆಮನೆ, ಬೆಳ್ತಂಗಡಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ