ಮೈಸೂರಿನಲ್ಲಿ ನೆಲೆಸಿರುವ ಬಹುಮುಖ ಪ್ರತಿಭೆ ವಿದುಷಿ ಡಾ. ದೀಪಿಕಾ ಪಾಂಡುರಂಗಿರವರು ದಾಸ ಸಾಹಿತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಗಾಗಿ ಶ್ರಮಿಸುತ್ತಿರುವ ಧನ್ಯಜೀವಿಗಳು. ಎಂ.ಕಾಂ, ಎಂ.ಎ, ಪಿ.ಹೆಚ್ ಡಿ ಪದವೀಧರರಾಗಿ, ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ಬಂಗಾರ ಪದಕ ವಿಜೇತೆ, 'ದಾಸ ಸಾಹಿತ್ಯದಲ್ಲಿ ಅಷ್ಟಾಂಗ ಯೋಗದೊಳಗಿನ ಶಾಸ್ತ್ರ ಪ್ರಕ್ರಿಯೆಗಳು ಮತ್ತು ಅಧ್ಯಾತ್ಮ ಪ್ರಕ್ರಿಯೆಗಳು' ಎಂಬ ಸಂಶೋಧನಾ ಪ್ರಬಂಧಕ್ಕೆ ಫ್ಲೋರಿಡಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪುರಸ್ಕೃತರು. ಉತ್ತಮ ನಿರೂಪಕಿಯಾಗಿ, ಲೇಖಕಿಯಾಗಿ ನಾಡಿನ ಸಾಂಸ್ಕೃತಿಕ ಲೋಕದ ದಿಗ್ಗಜರ ಅಭಿಮಾನಕ್ಕೆ ಪಾತ್ರರಾಗಿರುವ ದೀಪಿಕಾ ಪಾಂಡುರಂಗೀ ರವರ ಲೇಖನಿಯಿಂದ ಮೂಡಿ ಬಂದಿರುವ ಕೃತಿ ಹರಿಕಥಾಮೃತಸಾರ ಕೈಪಿಡಿ.
ಹರಿಕಥಾಮೃತಸಾರ ವೇದಾಂತ ತತ್ವಗಳ ಖನಿ, ಹರಿ ಕರುಣೆಯನ್ನು ಸರ್ವತೋಮುಖವಾಗಿ ಹೊರಹೊಮ್ಮುವ ಬತ್ತದ ಕಾರಂಜಿ, ಮುಕ್ತಿಮಂದಿರಕ್ಕೆ ಕೊಂಡೊಯ್ಯುವ ಪುಷ್ಪಕ ವಿಮಾನ, ಬಿಂಬವನ್ನು ಕಾಣಿಸಿ ಕೊಡುವ ಕೈಗನ್ನಡಿ. ಹರಿಕಥಾಮೃತಸಾರದ ರಸಾಸ್ವಾದನೆಯಿಂದ ಅನಿರ್ವಚನೀಯ ಆನಂದವನ್ನು ಅನುಭವಿಸಿದ ಅನುಭವಿಗಳಷ್ಟೋ ಮಂದಿ, ಪ್ರಸ್ತುತ ದೀಪಿಕಾ ಪಾಂಡುರಂಗೀ ರವರು ಸಹ ಈ ದಿವ್ಯ ಗ್ರಂಥಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿ, ಅನೇಕ ಸಾಧನೋಪಯೋಗಿ ವಿಷಯಗಳನ್ನು ತಿಳಿದಿರೋಣ ಎಂಬ ಶೀರ್ಷಿಕೆಯಲ್ಲಿ ವಿವರಿಸಿ, ದಾಸ ಸಾಹಿತ್ಯ ಅಭಿಮಾನಿಗಳಿಗೆ ದಾರಿದೀಪವಾಗಿ ಬೆಳಗಿರುವರು ಎಂದು ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಗೌರವ ನಿರ್ದೇಶಕ ಕೆ ಅಪ್ಪಣ್ಣಾಚಾರ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ದಾಸ ಕೂಟವನ್ನು- ಹರಿದಾಸ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದ ದ್ವಿತೀಯ ಘಟ್ಟದ ದಾಸ ಶ್ರೇಷ್ಠ ಶಿರೋಮಣಿ ಮಾನವೀಯ ಮಹಾತಪಸ್ವಿ ಜಗನ್ನಾಥದಾಸರ ಕಿರೀಟ ಕೃತಿಯೇ ಹರಿಕಥಾಮೃತಸಾರ. ಇದು ತತ್ವಗಳ ರಸಾಯನ, ಭಕ್ತಿ ಜ್ಞಾನದ ಅಮೃತ ಸಿಂಚನ, ಭಾಮಿನಿ ಷಟ್ಪದಿಯ ಛಂದಸ್ಸಿನಲ್ಲಿ 32 ಸಂಧಿಗಳಲ್ಲಿ ಪ್ರಕಟವಾಗಿರುವ ಈ ಗ್ರಂಥದಲ್ಲಿಯ ಅಪೂರ್ವವಿಷಯ ವೈವಿಧ್ಯತೆ ಪ್ರಬುದ್ಧ ವಿಚಾರ ಮಂಡನೆಯಿಂದ ಕನ್ನಡ ತತ್ವಕಾವ್ಯಗಳ ಪರಂಪರೆಯಲ್ಲಿ ಶ್ರೇಷ್ಠ ಕಾವ್ಯವೆನಿಸಿ ಕನ್ನಡ ಭಾಷೆಯ ಸಾಧ್ಯತೆ- ಸಾಮರ್ಥ್ಯ ಹಾಗೂ ಸಿದ್ದಿಗಳ ಕೀರ್ತಿ ಕಲಶ. ಕನ್ನಡ ಕಾವ್ಯ ಗ್ರಂಥ ಒಂದಕ್ಕೆ ಸಂಸ್ಕೃತ ವ್ಯಾಖ್ಯಾನ ಬರೆದಿರುವ ಐತಿಹಾಸಿಕ ಹಿರಿಮೆಗೆ ಭಾಜನವಾಗಿದೆ.
ವೇದವ್ಯಾಸ ಪ್ರಣೀತ ಮಹಾ ಶಾಸ್ತ್ರಗಳ ಜ್ಞಾನ ವಾರಿಧಿಗೆ ಜನಪದ ಕಾಳಜಿ ಆಶಯ ಹಾಗೂ ಕಾಯಕ ನಡೆದದ್ದು ಈ ಕೃತಿಯ ಮೂಲಕ. ಶಬ್ದಾರ್ಥ ಸೌಂದರ್ಯ, ಲಯನಾದ ಮಾಧುರ್ಯ, ಶಾಸ್ತ್ರಾರ್ಥ ಗಾಂಭೀರ್ಯ ಪುರಾಣ ಪ್ರಾಚುರ್ಯಗಳ ಕೈಹಿಡಿದು ನಡೆಸಬಲ್ಲ ದೈವಿ ಸನ್ನಿಧಾನಯುಕ್ತ ಹೃದಯಂಗಮವಾಗಬಲ್ಲ ಕಾವ್ಯ ರಚನಾ ಕೌಶಲ್ಯ ಜಗನ್ನಾಥದಾಸರದು. ಉತ್ಕೃಷ್ಟ ಕೃತಿಯ ಸಾರ್ವಕಾಲಿಕ ಸತ್ಯ ಸ್ವರೂಪದ ತತ್ವಗಳನ್ನು ಸರಳ ಸಹಜ ಶೈಲಿಯಲ್ಲಿ ದೀಪಿಕಾರವರು ನಿರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯ. ಶ್ರೀನಿವಾಸನ ಪರಮಾನುಗ್ರಹಕ್ಕೆ ಪಾತ್ರರಾದ ಒಂದು ಸಹಸ್ರ ಶ್ರೀನಿವಾಸ ಕಲ್ಯಾಣ ನಡೆಸಿದ ಪುಣ್ಯಚೇತನ ಶ್ರೀವಾರಿ ಫೌಂಡೇಶನ್ ಅಧ್ಯಕ್ಷ ಎಸ್. ವೆಂಕಟೇಶಮೂರ್ತಿರವರು ಈ ಕೃತಿ ಬೆಳಕು ಕಾಣಲು ಕಾರಣರು. ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಮುನ್ನುಡಿಯೆಂಬ ಹೊನ್ನುಡಿ ಈ ಕೃತಿಗೆ ಶೋಭೆ ನೀಡಿದೆ.
ಶ್ರೀಮತಿ ದೀಪಿಕಾ ಮೂಲತಃ ಸಂಗೀತ ವಿದ್ವನ್ಮಣಿ. ಉತ್ತರಾದಿ ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಪೂರ್ವಾಶ್ರಮದ ವಂಶಸ್ಥರು, ಮೈಸೂರು ಅರಮನೆಯ ಸಂಗೀತ ವಿದ್ವಾಂಸರಾಗಿದ್ದ ಕೆ. ವಾಸುದೇವಾಚಾರ್ಯರ ಮನೆತನಕ್ಕೆ ಸೇರಿದವರು ನಾದೋಪಾಸನೆಯಿಂದ ಉಂಟಾಗುವ ಭಾವ ಹಾಗೂ ಅರ್ಥ ವೈವಿಧ್ಯೆಗಳ ಅಪಾರ ಸಾಧ್ಯತೆಗಳನ್ನು ಅರಿತವರು, ಜಗನ್ನಾಥದಾಸರ ತತ್ವ ಚಿಂತನೆಗಳ ಗೂಡಾರ್ಥದ ಅದ್ಭುತಗಳನ್ನು ಅಬಾಲ ವೃದ್ಧರು ಅರ್ಥ ಮಾಡಿಕೊಳ್ಳುವ ಹಾಗೆ ಬರೆದಿರುವ ಈ ಕೃತಿ ಹರಿಭಕ್ತಿ ಕೋಶದ ಸುಕೃತಿಯಂತಿದೆ.
ಪುಸ್ತಕದ ಹೆಸರು: ಹರಿಕಥಾಮೃತಸಾರ ಕೈಪಿಡಿ
ಲೇಖಕರು: ವಿದುಷಿ ಡಾ. ದೀಪಿಕಾ ಪಾಂಡುರಂಗಿ, ಮೈಸೂರು
ಪ್ರಕಾಶಕರು: ಎಸ್. ವೆಂಕಟೇಶಮೂರ್ತಿ, ಅಧ್ಯಕ್ಷರು, ಶ್ರೀವಾರಿ ಫೌಂಡೇಶನ್, ಬೆಂಗಳೂರು
ಪುಟ: 224 ಬೆಲೆ : 150
ಪ್ರತಿಗಳಿಗೆ : 99018 57570
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ