ಬಹಳಷ್ಟು ಜನರು ಮೇಲಿನ ವಿಷಯದ ಬಗ್ಗೆ ತರಹೆವಾರಿ ಕಲ್ಪನೆಗಳನ್ನು ಹೊಂದಿ, ಯಾವುದು ಮಡಿ, ಯಾವುದು ಮೈಲಿಗೆ ಎಂಬುದರ ಕುರಿತಾಗಿ ಜಿಜ್ಞಾಸೆಯನ್ನು ಮಾಡುತ್ತ ಕುಳಿತಿರುತ್ತಾರೆ. ಅವರಿಗೆ ಇದೊಂದು ಬಗೆಹರೆಯಲಾರದ ಪ್ರಶ್ನೆಯಾಗಿ ಕಾಡುತ್ತಿರುತ್ತದೆ. ಕೆಲವೊಂದು ಸಂದರ್ಭದಲ್ಲಿ ಮಡಿ ಎಂದುಕೊಂಡಿರುವುದು ಮೈಲಿಗೆಯಾಗಿ ನಿರ್ಧರಿತವಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಮೈಲಿಗೆ ಎಂದುಕೊಂಡಿರುವುದು ಮಡಿಯಾಗಿ ಪರಿವರ್ತಿತವಾಗುತ್ತದೆ....!
ಇರಲಿ, ಮುಖ್ಯವಾಗಿ ಇದು ಹೇಗಿರುವುದೆಂದರೆ: ಶುದ್ಧ, ಸ್ವಚ್ಛ ಎಂಬುದು ಮಡಿಯಾಗಿಯೂ, ಅಶುದ್ಧ, ಅಸ್ವಚ್ಛ-ಹೊಲಸು-ಗಲೀಜು ಎಂಬುದು ಮೈಲಿಗೆಯಾಗಿಯೂ ಪರಿಭಾವಿಸಲಾಗುತ್ತದೆ. ಇದು ಕಣ್ಣಿಗೆ ಕಾಣುವ ಇರುವ ಸ್ಥಿತಿಯಾದರೂ, ಪರಿಭಾವ ಎಂಬ ಶಬ್ದದಲ್ಲಿ ಪರಿ ಎಂದರೆ ಸುತ್ತುವರೆದುಕೊಂಡಿರುವ, ಆವರಿಸಿಕೊಂಡಿರುವ, ಮತ್ತು ಭಾವ ಎಂದರೆ ಭಾವನೆ ಎಂಬುದರ ಮೇಲೆಯೂ ಎಷ್ಟೋ ಸಲ ಈ ಮಡಿ-ಮೈಲಿಗೆಯ ಸ್ಥಿತಿ ನಿರ್ಧರಿತವಾಗುತ್ತದೆ. ಅಲ್ಲದೆ, ಎಷ್ಟೋ ಸಲ ಈ ಪರಿಭಾವ ಅನೇಕ ಸಮುದಾಯಗಳಲ್ಲಿ ಸಂಪ್ರದಾಯಗಳಾಗಿ ಬದಲಾಗಿ ಹೋಗುತ್ತವೆ. ಕೆಲ ಕಾಲಾನಂತರ ಮೂಲ ಭಾವಗಳು ಕದಡಿ ಹೋಗಿ, ಕೇವಲ ಅರ್ಥಹೀನ ಕಂದಾಚಾರಗಳಾಗಿ ಬದಲಾವಣೆ ಹೊಂದುತ್ತವೆ; ಮತ್ತು ಈ ಆಚರಣೆಗಳು ಪ್ರಸ್ತುತ ಜನಾಂಗಕ್ಕೆ ವಿವರಿಸಲಾಗದ ಕಗ್ಗಂಟಾಗಿ ಮೌಲ್ಯ ಕಳೆದುಕೊಳ್ಳುತ್ತವೆ. ಮತ್ತಷ್ಟು ವಿಶ್ಲೇಷಣೆ ಮಾಡದೇ ಸಾಮಾನ್ಯವಾಗಿ ಹೇಳಬೇಕೆಂದರೆ : ಸ್ವಚ್ಛ ಶುದ್ಧ ಎಂಬುದು ಮಡಿ, ಅಸ್ವಚ್ಛ ಅಶುದ್ಧ ಎಂಬುದು ಮೈಲಿಗೆ ಎಂಬುದಾಗಿ ಪರಿಗಣಿಸುವಾ.
ಕೆಲವರಿಗೆ ದಿನನಿತ್ಯವೂ ಸ್ನಾನಾನಂತರ ಬಟ್ಟೆ ಬದಲಾಯಿಸುವದೇ ಮಡಿ, ಇಲ್ಲವಾದರೆ ಹಳೆಯ ಹಿಂದಿನ ದಿನದ ಬಟ್ಟೆ ಧರಿಸಿದರೆ ಮೈಲಿಗೆ, ಕೆಲವರು ಹಿಂದಿನ ದಿನದ ಮಲಿನ ಬಟ್ಟೆಯ ಮೇಲೆಯೇ ಸುವಾಸಿಕಗಳನ್ನು ಹಾಕಿಕೊಂಡು ಆಗಾಗ್ಗೆ ಮಡಿಯಾಗುವುದೂ ಉಂಟು. ಹೀಗೆ ಮಡಿ ಮೈಲಿಗೆಯ ಮಟ್ಟ ಎಂದೆನ್ನುವುದು ಅವರವರ ಅಭಿರುಚಿಗೆ ಅನುಸಾರವಾಗಿ ಬದಲಾಗುವುದೂ ಉಂಟು. ಒಬ್ಬರಿಗೆ ಒಂದು ಮಟ್ಟ ಮಡಿ ಎನ್ನಿಸಿದ್ದು ಇನ್ನೊಬ್ಬರಿಗೆ ಇನ್ನೊಂದು ಮಟ್ಟದಲ್ಲಿ ಮೈಲಿಗೆ ಎನಿಸಬಹುದು ಮತ್ತು ಇದರ vice versa ಸಹ ಸತ್ಯವಾಗಿಹುದೆಂದೆನಿಸಬಹುದು...!
ಇನ್ನೊಂದು ಅರ್ಥದಲ್ಲಿ, ಒಳಗಿರುವ ತನಕ ಎಲ್ಲ ಮಡಿಯೇ, ಹೊರಬಂದಾಕ್ಷಣ ಮೈಲಿಗೆಯೇ...! ಆಹಾರ ನಮ್ಮ ದೇಹದಲ್ಲಿರುವ ತನಕ ಮಡಿ, ಹೊರಬಿದ್ದಾಕ್ಷಣ - ವಿಸರ್ಜನೆಯಾದಾಕ್ಷಣ - ಮೈಲಿಗೆ; ಜೀವ ದೇಹದಲ್ಲಿರುವ ತನಕ ದೇಹ ಮಡಿ, ಅದು ಹೊರಗೆ ಹೋದಾಕ್ಷಣ ದೇಹ ಮೈಲಿಗೆ...! ಭಾವನೆಗಳು ನಿಮ್ಮಲ್ಲಿಯೇ ಒಳಗಿರುವಾಗ ನೀವು ಮಡಿ, ಆವುಗಳನ್ನು ಹೊರಸೂಸಿದಾಕ್ಷಣವೇ ಅವುಗಳು ಮೈಲಿಗೆಯಾಗುತ್ತವೋ ಅಥವಾ ನೀವೇ ಮೈಲಿಗೆಯಾಗುತ್ತೀರೋ ಎಂಬುದನ್ನು ನೀವೇ ನಿರ್ಧರಿಸಿದಂತೆ, ಆ ಭಾವನೆಗಳಿಂದ ಪರಿಣಮಿತರಾದವರೂ ನಿರ್ಧರಿಸುತ್ತಾರೆ, ಅವರವರ ಭಾವಗಳ ಮಟ್ಟಕ್ಕೆ ತಕ್ಕಂತೆ...! ಹೀಗಾಗಿ ಈ ಮಡಿ-ಮೈಲಿಗೆಗಳನ್ನು ಐನಸ್ಟೈನ್ ನ ಸಾಪೇಕ್ಷತಾವಾದಕ್ಕೆ ತೊಡಗಿಸಿ, ವಿಶ್ರಮಿಸುವಾ...! ಯಾವಾಗಲೂ ನಮ್ಮಲ್ಲೊಂದಿಷ್ಟು ಮಡಿ ಇರುವಂತೆ ಮೈಲಿಗೆಯೂ ಇರುತ್ತದೆಂಬುದನ್ನು ಪರಿಗಣಿಸಿ ಸದಾ ನಿಶ್ಚಿಂತರಾಗಿ ನಿರಾಮಯರಾಗಿರುವಾ...! ಸೌಹಾರ್ದತೆಯಿಂದ ಸಹಕರಿಸಿಕೊಂಡಿರುವಾ...!
-ಕುರಾಜನ್
(ಕುಮಾರ್ ಜಂತಲಿ)
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ