ಮಂಗಳೂರು: ರಾಮೋಜಿ ರಾವ್ ಅವರು ದೂರದೃಷ್ಟಿತ್ವವುಳ್ಳವರು. ಉಪ್ಪಿನಕಾಯಿ ಮೂಲಕ ಒಂದು ಬೃಹತ್ ಉದ್ಯಮ ಆರಂಭಿಸಬಹುದು ಎಂದು ಬಹಳಷ್ಟು ವರ್ಷಗಳ ಹಿಂದಯೇ ಆಲೋಚನೆ ಮಾಡಿದವರು ಎಂದು ವಿಜಯಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ, ಹಿರಿಯ ಪತ್ರಕರ್ತ ಕುಮಾರನಾಥ್ ಹೇಳಿದರು.
ನಗರದ ಎ.ಬಿ. ಶೆಟ್ಟಿ ವೃತ್ತದ ಬಳಿಯಿರುವ ಮಾರ್ಗದರ್ಶಿ ಚಿಟ್ಸ್ ಫ್ರೈ. ಲಿಮಿಟೆಡ್ ಕಚೇರಿಯಲ್ಲಿ ನಡೆದ ರಾಮೋಜಿ ರಾವ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ರಾಮೋಜಿ ರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಮಾತನಾಡಿದ ಅವರು ಆ ಬಳಿಕ ಅವರು ಈನಾಡು ಪತ್ರಿಕೆಯನ್ನು ಆರಂಭಿಸಿದರು. ಈನಾಡು ಪತ್ರಿಕೆ ಆಂಧ್ರಪ್ರದೇಶದ ಮೇಲ್ಮನೆಯನ್ನೇ ರದ್ದುಮಾಡುವ ಮಟ್ಟಿಗೆ ಸುದ್ದಿ ಮಾಡಿ ಗಮನಸೆಳೆದಿತ್ತು. ಆ ಬಳಿಕ ರಾಮೋಜಿ ರಾವ್ 13 ಚ್ಯಾನೆಲ್ ಅನ್ನು ಕಟ್ಟಿದವರು. ಅವರು ಆರಂಭಿಸಿದ ಮಾರ್ಗದರ್ಶಿ ಚಿಟ್ಸ್ ಫಂಡ್ 60 ವರ್ಷಗಳ ಬಳಿಕವೂ ಇದೆಯೆಂದರೆ ನಂಬಿಕೆ ವಿಶ್ವಾಸಾರ್ಹತೆಯೇ ಕಾರಣ ಎಂದರು.
ಚಿತ್ರನಟ ಮೈಮ್ ರಾಮದಾಸ್ ಮಾತನಾಡಿ, ರಾಮೋಜಿ ರಾವ್ ಅವರು ನಮ್ಮ ಅನ್ನದಾತರು. ನಮ್ಮ ಭವಿಷ್ಯ ರೂಪಿಸಿದವರು. ಅವರು ಬದುಕಿದ್ದಾಗಲೇ ದಂತಕತೆಯಾದವರು. ಬಹಳ ಹಿಂದೆಯೇ ಅವರು ರಾಮೋಜಿ ಫಿಲ್ಮ್ ಸಿಟಿ ಎಂಬ ಬೃಹತ್ ವಿಸ್ಮಯವೊಂದನ್ನು ಕಟ್ಟುವ ಧೈರ್ಯ ಮಾಡಿದವರು. ಕನ್ನಡ ಚ್ಯಾನೆಲ್ ಬಗ್ಗೆ ನಿರೀಕ್ಷೆಯಿತ್ತು. ಅಂದು ಈಟಿವಿಯಲ್ಲಿ 120 ಮಂದಿಯ ಡೆಸ್ಕ್ ನಲ್ಲಿ 40 ಮಂದಿ ಕರಾವಳಿಯವರಿದ್ದರು. ಯಾರೆಲ್ಲಾ ಅಂದು ಈಟಿವಿಯಲ್ಲಿ ದುಡಿದವರು ಈಗ ಎಲ್ಲರಿಗೂ ಮಾರ್ಗದರ್ಶಿಗಳಾದವರು. ಇಲ್ಲಿ ಕೆಲಸ ಮಾಡಿದವರು ಪ್ರಬುದ್ಧರು ಎಂಬ ಭಾವನೆ ಇದೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಪ್ಯಾನೆಲ್ ಅಡ್ವೋಕೇಟ್ ಸುಕೇಶ್ ಕುಮಾರ್ ಶೆಟ್ಟಿ ಮಾತನಾಡಿ, ರಾಮೋಜಿ ರಾವ್ ಕರ್ನಾಟಕದ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದವರು. ಪತ್ರಿಕೋದ್ಯಮದಲ್ಲಿ ಪ್ರೊಫೆಷನಲ್ ಆಗಿ ದುಡಿಯಲು ಅವಕಾಶ ನೀಡಿದವರು. ಅವರು ಪತ್ರಕರ್ತರ ಧ್ವನಿಯಾಗಿದ್ದರು. ಜರ್ನಲಿಸಂಗೆ ಹೊಸ ಹೊಳಪು ಹುರುಪು ಕೊಟ್ಟವರು. ಈಟಿವಿಯಂತಹ ನಿಖರವಾದ ವೇತನ ಪಾವತಿ ವ್ಯವಸ್ಥೆ ಬೇರೆಲ್ಲೂ ಕಂಡಿಲ್ಲ. ಪತ್ರಿಕೋದ್ಯಮ ಹೊರತುಪಡಿಸಿ ಹಲವಾರು ವಿಚಾರಗಳಲ್ಲಿ ಅವರು ಕಣ್ಣಾಡಿಸಿದವರು. ಅವರ ಕೊಡುಗೆ ಬೇರೆ ಬೇರೆ ಕಡೆಗೆ ಪಸರಿಸಿದೆ ಎಂದರು.
ಉದ್ಯಮಿ ಗೋಪಿನಾಥ್ ಭಟ್ ಮುನಿಯಾಲು ಮಾತನಾಡಿ, ಮಾರ್ಗದರ್ಶಿ ವಿಶ್ವಾಸಾರ್ಹ ಸಂಸ್ಥೆ. ಈ ಸಂಸ್ಥೆಯನ್ನು 60 ವರ್ಷಗಳ ಹಿಂದೆಯೆ ಕಟ್ಟಿ ಬೆಳೆಸಿದ ರಾಮೋಜಿ ರಾವ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಯಶಸ್ವಿಯಾದವರು ಎಂದರು.
ಈಟಿವಿ ಭಾರತ ಹಿರಿಯ ವರದಿಗಾರ ವಿನೋದ್ ಪುದು ಅವರು ಚೇರ್ ಮೆನ್ ಸಂದೇಶವನ್ನು ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಚಿಟ್ ಪ್ರೈ ಲಿಮಿಟೆಡ್ ನ ಮಂಗಳೂರು ವಿಭಾಗದ ಮ್ಯಾನೇಜರ್ ನಿತಿನ್ ಕುಮಾರ್, ಮಾರ್ಗದರ್ಶಿ ಸಂಸ್ಥೆಯ ಪ್ಯಾನೆಲ್ ಅಡ್ವೋಕೇಟ್ ಪ್ರಫುಲ್ಲ ಪ್ರೇಮ್ ಉಪಸ್ಥಿತರಿದ್ದರು. ಮಾರ್ಗದರ್ಶಿ ಸಿಬ್ಬಂದಿ ಸ್ವಪ್ನ ಸ್ವಾಗತಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

