ಮಂಗಳೂರು: ನಗರೀಕರಣ, ಕೈಗಾರಿಕೀಕರಣ ಮತ್ತು ಅಭಿವೃದ್ಧಿಯ ಕುಂಟು ನೆಪ ಇಟ್ಟುಕೊಂಡು ನಮ್ಮ ಸುತ್ತಲಿನ ಮರ ಗಿಡಗಳನ್ನು ನಾಶ ಮಾಡಿ ಪರಿಸರವನ್ನು ಹಾಳುಮಾಡುತ್ತಿದ್ದೇವೆ. ನೈಸರ್ಗಿಕ ಕಾಡನ್ನು ಬರಿದು ಮಾಡಿ, ಕಾಂಕ್ರೀಟ್ ಕಾಡಿನಲ್ಲಿ ಆಮ್ಲಜನಕ ಸಿಲಿಂಡರ್ ಮನೆಯಲ್ಲಿಟ್ಟುಕೊಂಡು ಉಸಿರಾಡಲು ಪಡಬಾರದ ಪಾಡು ಮನುಷ್ಯ ಇಂದು ಅನುಭವಿಸುತ್ತಿದ್ದಾನೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಮನೆ ಸುತ್ತಮುತ್ತ ಹಸಿರು ಮರಗಿಡಗಳನ್ನು ಬೆಳೆಸಿ ಶುದ್ಧ ಆಮ್ಲಜನಕಯುಕ್ತ ಗಾಳಿ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಆಮ್ಲಜನಕ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಓಡಾಡಬೇಕಾದೀತು ಎಂದು ಖ್ಯಾತ ಪರಿಸರವಾದಿ ಮತ್ತು ದ.ಕ. ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಸಕ್ರಿಯ ಸದಸ್ಯ ಮಾಧವ ಉಳ್ಳಾಲ ಅಭಿಪ್ರಾಯಪಟ್ಟರು.
ದ.ಕ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆಯ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಮೇರಿಹಿಲ್ನಲ್ಲಿರುವ ದ.ಕ. ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ಶುಕ್ರವಾರದಂದು ವನಮಹೋತ್ಸವ ಜರುಗಿತು. ನೇರಳೆ, ಮಾವು, ಹಲಸು. ಬಾದಾಮಿ ಮುಂತಾದ ಹತ್ತು ಹಣ್ಣಿನ ಗಿಡಗಳನ್ನು ಈ ಸಂದರ್ಭದಲ್ಲಿ ಕಛೇರಿಯ ಆವರಣದೊಳಗೆ ನೆಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ರವರು ಈ ಸಂದರ್ಭದಲ್ಲಿ ಮಾತನಾಡಿ ಕಳೆದ ೯ ವರ್ಷಗಳಿಂದ ನಿರಂತರವಾಗಿ ಗೃಹರಕ್ಷಕದಳದ ವತಿಯಿಂದ ವನಮಹೋತ್ಸವ ದಿನದಂದು ನಗರದೆಲ್ಲೆಡೆ ಗಿಡನೆಟ್ಟು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ನೀಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ‘ಪ್ರತಿ ಗೃಹರಕ್ಷಕರಿಗೆ ಒಂದು ಗಿಡ’ ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ಉಳಿಸಿ, ನಾಡು ಉಳಿಸುವ ಮಹತ್ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ. ಮಾಧವ ಉಳ್ಳಾಲ ಅವರು ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪರಿಸರವಾದಿ ಕ್ರಷ್ಣಪ್ಪ, ರಾಮಚಂದ್ರ ಭಟ್, ಕಛೇರಿ ಅಧೀಕ್ಷಕ ಶ್ರೀ ಗೋಪಿವಾಥ್ , ಮಂಗಳೂರು ಘಟಕದ ಸಾರ್ಜೆಂಟ್ ಸುನಿಲ್, ಗೃಹರಕ್ಷಕರಾದ ದಿವಾಕರ್, ಸುನಿಲ್, , ರಾಜೇಶ್ ಗಟ್ಟಿ,ಧನಂಜಯ್ ಸಂಜಯ್,ಜ್ಞಾನೇಶ್,ಜೀವನ್ ರಾಜ್,ಕೇಶವ ಶೆಟ್ಟಿಗಾರ್,ರಾಹುಲ್ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ