ಯೋಗ ದಿನಾಚರಣೆ ಸಂದೇಶ
ಉಡುಪಿ: ಇವತ್ತು ಸಮಾಜದಲ್ಲಿ ಸಮತ್ವ ಸಮಾನತೆ ಇತ್ಯಾದಿಗಳ ವಿಚಾರದಲ್ಲಿ ಅನಗತ್ಯ ಗೊಂದಲಕ್ಕೊಳಗಾಗಿದ್ದೇವೆ. ಆದರೆ ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಸಮತ್ವದ ಸೂತ್ರ ಅತ್ಯಂತ ಅರ್ಥಪೂರ್ಣ ಮತ್ತು ಪ್ರಾಯೋಗಿಕವಾಗಿದೆ.
ಸಮತ್ವ ಎಂದರೆ ಪ್ರಮಾಣತ್ವೇನ ಸಮತೆ ಎಂದರ್ಥವಲ್ಲ; ಸಾಮರ್ಥ್ಯತ್ವೇನ ಸಮತೆಯೇ ಆಗಿದೆ. ತಾಯಿಯಾದವಳು ತಾನುಮಾಡಿದ ಅಡುಗೆಯನ್ನು ಮನೆಯಲ್ಲಿರುವ ಪುಟ್ಟ ಮಗು, ಬಾಲಕ, ಯುವಕ, ವೃದ್ಧರಿಗೆಲ್ಲ ಬಡಿಸುವಾಗ ಸಮಪ್ರಮಾಣದಲ್ಲಿ ಬಡಿಸಿದರೆ ಸಮರ್ಪಕವಾಗಲ್ಲ. ಕೆಲವರಿಗೆ ಅರ್ಧಹೊಟ್ಟೆ ಕೆಲವರಿಗೆ ಅಜೀರ್ಣವಾಗುಷ್ಟು ಬಡಿಸಿದಂತಾಗುತ್ತದೆ. ಅದೇ ಆಕೆ ಎಲ್ಲರಿಗೂ ಅವರವರ ಜೀರ್ಣ ಸಾಮರ್ಥ್ಯಕ್ಕನುಸಾರವಾಗಿ ಬಡಿಸಿದರೆ ಎಲ್ಲರ ಹೊಟ್ಟೆಯೂ ತುಂಬುತ್ತದೆ. ಇದೇ ನಿಜವಾದ ಸಮಾನತೆ ಅಥವಾ ಸಮತ್ವವಾಗಿದೆ.
ಆದ್ದರಿಂದ ಯೋಗಾಚಾರ್ಯ ಕೃಷ್ಣನ ಯೋಗ ಸಂದೇಶಗಳು ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಮತ್ತು ಸಾಮಾಜಿಕ ಪ್ರತಿಕೂಲತೆಗಳಿಗೆ ಅತ್ಯಂತ ಸರಿಯಾದ ಔಷಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳಬಲ್ಲವರೇ ಪಂಡಿತರು. ಇದು ಶ್ರೀ ಕೃಷ್ಣನ ಯೋಗಸಂದೇಶ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿದರು.
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಡೆದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಗವದ್ಗೀತೆಯ ಹಿನ್ನೆಲೆಯಲ್ಲಿ ಯೋಗ ಸೂತ್ರಗಳನ್ನು ವಿಶಿಷ್ಟವಾಗಿ ವಿಶ್ಲೇಷಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಧರ್ಮಸ್ಥಳ ಮಹಾಲಿಂಗೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ "ಸೌಖ್ಯ ಮನೆ" ಇದರ ಸಹಯೋಗದೊಂದಿಗೆ ಹತ್ತನೇ ಯೋಗ ದಿನಾಚರಣೆಯ ಪ್ರಯುಕ್ತ "ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ" ಮಣಿಪಾಲದಿಂದ ಶ್ರೀ ಕೃಷ್ಣ ಮಠದ ವರೆಗೆ ನಡೆದು ಬಂದು ಇದರ ಸಮಾರೋಪ ಸಮಾರಂಭ ಗೀತಾಮಂದಿರದಲ್ಲಿ ಪರಮಪೂಜ್ಯ ಪರ್ಯಾಯ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

