ತಾಯಿನಾಡಿಗೆ ಹಣ ರವಾನೆ- ಸಾಗರೋತ್ತರ ಭಾರತೀಯರ ಮಹತ್ಸಾಧನೆ: ಹೆಚ್ಚಿದ ನಿರೀಕ್ಷೆಗಳು

Upayuktha
0

 



ದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋದ ಭಾರತೀಯರಿಂದ 2022 ರ ವರ್ಷಕ್ಕೆ ಬರೋಬ್ಬರಿ 9.26 ಲಕ್ಷ ಕೋಟಿ ರೂ. (111 ಬಿಲಿಯನ್ ಡಾಲರ್) ಹಣ ಹರಿದುಬಂದಿದ್ದು, ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ರವಾನೆಯಾಗಿರುವ ಮೊತ್ತವೇ ಅತ್ಯಧಿಕ ಎಂದು ವಿಶ್ವ ಸಂಸ್ಥೆಯ ವರದಿ ತಿಳಿಸಿದೆ. ಅಷ್ಟೇ ಅಲ್ಲದೆ, ರೆಮಿಟೆನ್ಸ್(ವಿದೇಶದಿಂದ ಹಣ ರವಾನೆ) ಲೆಕ್ಕಾಚಾರದಲ್ಲಿ 100 ಶತಕೋಟಿ ಡಾಲರ್ ಗಡುವು ದಾಟಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. 2010ರಲ್ಲಿ ಭಾರತಕ್ಕೆ 4.46 ಲಕ್ಷ ಕೋಟಿ ರೂ., 2015ರಲ್ಲಿ 5.75 ಲಕ್ಷ ಕೋಟಿ., 2020 ರಲ್ಲಿ 6.94 `ಕೋಟಿ ರೂ. ಗಳನ್ನು ಇತರ ದೇಶಗಳಲ್ಲಿರುವ ಭಾರತೀಯರು ಸ್ವದೇಶಕ್ಕೆ ಕಳುಹಿಸಿದ್ದರು ಎಂದು ವರದಿ ತಿಳಿಸಿದೆ.


ಕೊರೋನಾ ನಂತರದ ಒಂದು ವರ್ಷದೊಳಗೆ ಭಾರತೀಯ ಕಾರ್ಮಿಕರು ಮತ್ತೆ ವಿದೇಶಕ್ಕೆ ಮರಳುವುದಿಲ್ಲ ಎಂದು ಭಾವಿಸಲಾಗಿತ್ತು. ಅವರು ವಿದೇಶಕ್ಕೆ ಮರಳಿದ್ದಾರೆ ಮಾತ್ರವಲ್ಲದೆ ಹೆಚ್ಚು ಉಪಯುಕ್ತ ಉದ್ಯೋಗಕ್ಕೆ ತೆರಳಿದ್ದಾರೆ ಮತ್ತು ಒಂದು ವರ್ಷದೊಳಗೆ ರವಾನೆ ಪ್ರಮಾಣ 2021 ಕ್ಕೆ ಹೋಲಿಸಿದರೆ ಶೇ.12 ರಷ್ಟು ಹೆಚ್ಚಾಗಿದೆ.


ಮೆಕ್ಸಿಕೊ ಮತ್ತು ಚೀನಾವನ್ನು ಹಿಂದಿಕ್ಕಿ ದೊಡ್ಡ ಪ್ರಮಾಣದಲ್ಲಿ ತಾಯಿನಾಡಿಗೆ ಹಣ ರವಾನಿಸುವ ದೊಡ್ಡ ದೇಶವಾಗಿ ಭಾರತ ಪ್ರಗತಿ ಸಾಧಿಸಿದೆ. ಅಮೇರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮುಂತಾದ ವಿವಿಧ ದಶಗಳಲ್ಲಿ ಸುಮಾರು ಒಂದು ಕೋಟಿ ಎಂಭತ್ತು ಲಕ್ಷ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡತ್ತಿದ್ದಾರೆ. ಹೀಗ ವಿದೇಶಗಳಲ್ಲಿ ವಾಸಿಸುವ ಜನರು ತಮ್ಮ ದೇಶಗಳಿಗೆ ವಾರ್ಷಿಕವಾಗಿ ಕಳುಹಿಸುವ ಹಣದ ಬಗ್ಗೆ ವಿಶ್ವ ಸಂಸ್ಥೆ ವಾರ್ಷಿಕವಾಗಿ “ವಿಶ್ವ ವಲಸೆ ವರದಿ”ಯನ್ನು ಪ್ರಕಟಿಸುತ್ತದೆ. ಈ ವರ್ಷದ(2024) ವರದಿಯಲ್ಲಿ ಶ್ರೇಯಾಂಕದಲ್ಲಿ ಭಾರತ, ಮೆಕ್ಸಿಕೊ, ಚೀನಾ, ಪಿಲಿಫೈನ್ಸ್ ಮತ್ತು ಫ್ರಾನ್ಸ್ ಮೊದಲ 5 ಸ್ಥಾನಗಳನ್ನು ಪಡೆದುಕೊಂಡಿದೆ.


ದಕ್ಷಿಣ ಏಷ್ಯಾವು ಈ ಪ್ರದೇಶದಿಂದ ಗಮನಾರ್ಹ ಸಂಖ್ಯೆಯ ವಲಸೆ ಕಾರ್ಮಿಕರನ್ನು ಹೊಂದಿರುವುದರಿಂದ ಜಾಗತಿಕವಾಗಿ ರವಾನೆಗಳ ದೊಡ್ಡ ಒಳಹರಿವುಗಳನ್ನು ಪಡೆಯುತ್ತದೆ ಎಂದು ವರದಿಯು ಗಮನಿಸಿದೆ. ಮೂರು ದೇಶಗಳು, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ವಿಶ್ವದಲ್ಲಿ ಅಂತರರಾಷ್ಟ್ರೀಯ ಹಣ ರವಾನೆಯ ಮೊದಲ ಹತ್ತು ಸ್ವೀಕರಿಸುವವರಲ್ಲಿ ಸ್ಥಾನ ಪಡೆದಿವೆ.



ವಿದೇಶಿ ವಿನಿಮಯ ಮೀಸಲು ಹೆಚ್ಚಳ

ಭಾರತದ ಆರ್ಥಿಕತೆಯನ್ನು ವಿಶೇಷವಾಗಿ ತಮ್ಮ ರವಾನೆಗಳ ಮೂಲಕ ಬಲಪಡಿಸುವಲ್ಲಿ ಅನಿವಾಸಿ ಭಾರತೀಯರ (NRIs) ಕೊಡುಗೆ ಅಮೂಲ್ಯವಾದುದು. ಈ ಹಣಕಾಸಿನ ವರ್ಗಾವಣೆಗಳು ಕುಟುಂಬಗಳಿಗೆ ನೀಡುವ ವಿತ್ತೀಯ ಬೆಂಬಲಕ್ಕಿಂತ ಹೆಚ್ಚಾಗಿ ದೇಶದ ವಿದೇಶಿ ವಿನಿಮಯ ಮೀಸಲುಗೆ ನೀಡುವ ಕೊಡುಗೆಯು ಗಮನಾರ್ಹವಾದುದು.


ಇದು ವಿದೇಶಿ ಕರೆನ್ಸಿ ಒಳಹರಿವಿನ ಪ್ರಮುಖ ಮೂಲವಾಗಿದೆ. ಆರ್ಥಿಕ ಅನಿಶ್ಚಿತತೆಗಳು ಮತ್ತು ಜಾಗತಿಕ ಆರ್ಥಿಕ ಚಂಚಲತೆಯ ಸಮಯದಲ್ಲಿ ಈ ಮೀಸಲುಗಳು ಭಾರತದ ಸ್ಥೂಲ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಷ್ಟ್ರದ ವಿದೇಶಿ ವಿನಿಮಯ ಮೀಸಲುಗಳಿಗೆ ಸುಮಾರು 22% ರಿಂದ 23% ರಷ್ಟು ಕೊಡುಗೆ ನೀಡುವ ಮೂಲಕ ಭಾರತಕ್ಕೆ ಆಮದು ಮಾಡಲು ಹಣದ ಒಳಹರಿವು ಸಹಾಯ ಮಾಡುತ್ತಿದೆ.


ಹಣದ ಒಳಹರಿವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಾಹ್ಯ ಹಣಕಾಸಿನ ಪ್ರಮುಖ ಮೂಲವಾಗಿದೆ. ಸಾಮಾನ್ಯವಾಗಿ ನೇರ ಹೂಡಿಕೆ (FDI) ಮತ್ತು ಸ್ಟಾಕ್ ಮಾರುಕಟ್ಟೆ ಹೂಡಿಕೆಯ ಮೂಲಕ ಉತ್ಪತ್ತಿಯಾಗುವ ನಿಧಿಗಿಂತ ಹೆಚ್ಚಿನ ಬಂಡವಾಳದ ಸ್ಥಿರ ಮೂಲವನ್ನು ರವಾನೆಗಳ ಒಳಹರಿವು ಒದಗಿಸುತ್ತದೆ.

ಭಾರತದಲ್ಲಿ ವ್ಯಾಪಾರದ ವ್ಯಾಪಾರ ಖಾತೆಯ ಕೊರತೆಯ ಮಟ್ಟವನ್ನು ತಗ್ಗಿಸಲು ರವಾನೆಗಳು ಬಾಹ್ಯ ಹಣಕಾಸಿನ ಪ್ರಮುಖ ಮತ್ತು ಸ್ಥಿರ ಮೂಲವೆಂದು ಸಾಬೀತಾಗಿದೆ. ಭಾರತಕ್ಕೆ, ವ್ಯಾಪಾರದ ಕೊರತೆಯನ್ನು (2017-18 ರಲ್ಲಿ 43 ಪ್ರತಿಶತ) ಹಣಕಾಸು ಒದಗಿಸುವಲ್ಲಿ ಆಂತರಿಕ ಹಣದ ಹರಿವುಗಳು ಪ್ರಮುಖವಾಗಿವೆ. ಹೀಗಾಗಿ, ರವಾನೆಗಳ ಒಟ್ಟಾರೆ ಅಭಿವೃದ್ಧಿಯ ಪ್ರಭಾವವು ಸಾಕಷ್ಟು ಮಹತ್ವದ್ದಾಗಿದೆ.


ಬಳಕೆ ಮತ್ತು ಹೂಡಿಕೆಗೆ ಉತ್ತೇಜನ

ರವಾನೆಯಿಂದ ಉಂಟಾಗುವ ಹೆಚ್ಚಿದ ಕೊಳ್ಳುವ ಶಕ್ತಿಯು ಭಾರತೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಗ್ರಾಹಕರ ಖರ್ಚು ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ. ಎನ್‌ಆರ್‌ಐ ರವಾನೆಗಳು ಅನೇಕ ಕೈಗಾರಿಕೆಗಳಿಗೆ ಶಕ್ತಿ ತುಂಬಿ ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವ ಮೂಲಕ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.


ಅನಿವಾಸಿ ಭಾರತೀಯರ ಹಣದ ರವಾನೆ ಮತ್ತು ಆರ್ಥಿಕ ಬೆಳವಣಿಗೆಯ ನಡುವೆ ಧನಾತ್ಮಕವಾದ ಸಂಬಂಧಗಳನ್ನು ಅಧ್ಯಯನಗಳು ನಿರೂಪಿಸಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ರವಾನೆಯಲ್ಲಿ ಶೇಕಡಾ ಒಂದು ಹೆಚ್ಚಳವು ದೀರ್ಘಾವಧಿಯಲ್ಲಿ ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) ದಲ್ಲಿ ಶೇ. 0.22 ಹೆಚ್ಚಳಕ್ಕೆ ಕಾರಣವಾಗುತ್ತದೆ. ಒಂದು ದೇಶದ GDP ಯ ಪಾಲು ಅಂತರಾಷ್ಟ್ರೀಯ ರವಾನೆಯಲ್ಲಿ 10% ಹೆಚ್ಚಳವು ಬಡತನ ದರಗಳಲ್ಲಿ 1.6% ಇಳಿಕೆಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.


ನಿಜವಾದ ವಿನಿಮಯ ದರದ ಹೆಚ್ಚಳಕ್ಕೆ ಕಾರಣವಾಗುವ ಒಳಹರಿವಿನ ಗಮನಾರ್ಹ ಏರಿಕೆಯ ನಂತರ ದೇಶದ ರಫ್ತು ವಲಯದ ಸ್ಪರ್ಧಾತ್ಮಕತೆಯನ್ನು ಕಡಿಮೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಆಮದಿನ ಬೇಡಿಕೆಯನ್ನು ತಗ್ಗಿಸುವ ಹಾಗೂ ರಪ್ತಿನ್ನು ಉತ್ತೇಜಿಸುವ ಉಪಕ್ರಮಗಳ ಬಗ್ಗೆ ಗಮನ ನೀಡಬೇಕಾಗಿದೆ.


ಬಿಕ್ಕಟ್ಟಿನ ಸಮಯದಲ್ಲಿ ರವಾನೆ

ಆರ್ಥಿಕ ಬಿಕ್ಕಟ್ಟು ಅಥವಾ ಜಾಗತಿಕ ಕುಸಿತದ ಸಮಯದಲ್ಲಿ, ರವಾನೆಗಳ ಸ್ಥಿರ ಹರಿವು ಭಾರತಕ್ಕೆ ಆರ್ಥಿಕ ರಕ್ಷಣೆಯಾಗಿ ಕಾರ್ಯನಿರ್ವಹಿಸಿದೆ. ಇದು ವಿದೇಶಿ ಕರೆನ್ಸಿಯ ಹೆಚ್ಚು ಅಗತ್ಯವಿರುವ ಸ್ಥಿರ ಮೂಲವನ್ನು ಒದಗಿಸುವ ಮೂಲಕ ಭಾರತೀಯ ಆರ್ಥಿಕತೆಯ ಮೇಲೆ ಬಾಹ್ಯ ಆಘಾತಗಳ ಪರಿಣಾಮಗಳನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.


ಭಾರತೀಯ ಆರ್ಥಿಕತೆಯ ಮೇಲೆ ಪರಿಣಾಮ

ಎನ್‌ಆರ್‌ಐ ರವಾನೆಗಳು ಹಣಕಾಸಿನ ಪುಸ್ತಕದಲ್ಲಿ ಕೇವಲ ಸಂಖ್ಯೆಗಳಲ್ಲ; ಅವುಗಳ ಪ್ರಭಾವ ಭಾರತದ ಆರ್ಥಿಕತೆಯಾದ್ಯಂತ ಪ್ರತಿಧ್ವನಿಸುತ್ತದೆ. ಅದು ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಗಣನೀಯವಾಗಿ ಕೊಡುಗೆ ನೀಡುತ್ತದೆ. ಹಣದ ಒಳಹರಿವು ಜನಸಂಖ್ಯೆಯ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಬೇಡಿಕೆ ಮತ್ತು ಪೂರೈಕೆ ಎರಡಕ್ಕೂ ಉತ್ತೇಜನ ನೀಡುತ್ತದೆ. ಅನಿವಾಸಿ ಭಾರತೀಯರು ಭಾರತದ ಜನಸಂಖ್ಯೆಯ ಕೇವಲ 1% ರಷ್ಟಿದ್ದಾರೆ, ಅವರು ದೇಶದಲ್ಲಿ ವಾಸಿಸದೆ ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) 3.4% ಕೊಡುಗೆ ನೀಡುತ್ತಾರೆ.


ದೇಶದ ಜಿಡಿಪಿ ಪ್ರಗತಿ ದರದ ಅಂದಾಜು ಶೇ. 6.9ಕ್ಕೆ

ಭಾರತವು ಅತ್ಯಂತ ವೇಗ ದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿದ್ದು, ಪಾಶ್ಚಾತ್ಯ ಕಂಪೆನಿಗಳಿಗೆ ಪರ್ಯಾಯ ಹೂಡಿಕೆ ಕೇಂದ್ರವಾಗಿ ಬದಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಚೀನದ ಕಡೆಗೆ ಹೋಗುತ್ತಿದ್ದ ವಿದೇಶಿ ಬಂಡವಾಳ ಭಾರತದಂಥ ದೇಶಗಳತ್ತ ಹರಿದುಬರುತ್ತಿದೆ ಎಂದಿದೆ. ಅಲ್ಲದೆ 2024ರಲ್ಲಿ ಭಾರತದ ಜಿಡಿಪಿ ಪ್ರಗತಿ ದರದ ಅಂದಾಜನ್ನು ಪರಿಷ್ಕರಿಸಿ, ಶೇ. 6.9ಕ್ಕೆ ಹೆಚ್ಚಿಸಿದೆ. ಈ ಹಿಂದೆ ಜನವರಿಯಲ್ಲಿ ದೇಶದ ಆರ್ಥಿಕ ಪ್ರಗತಿ ದರವನ್ನು ಶೇ. 6.2 ಎಂದು ಅಂದಾಜಿಸಲಾಗಿತ್ತು. ಇದೇ ವೇಳೆ 2025ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 6.6 ಇರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.


2031ಕ್ಕೆ ಗ್ರಾಹಕ ಮಾರುಕಟ್ಟೆ ದ್ವಿಗುಣ

2031ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವಾರ ಜರುಗಿದ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ವ್ಯಾಪಾರ ಶೃಂಗಸಭೆ 2024ರಲ್ಲಿ ಹೇಳಿದ್ದಾರೆ. ಸ್ಥಿರವಾದ ಆರ್ಥಿಕ ಬೆಳವಣಿಗೆ ಕಾಪಾಡಿಕೊಳ್ಳಲು ಮತ್ತು ಸ್ವಾವಲಂಬನೆ ಸಾಧಿಸಲು ಧೃಡವಾದ ಉತ್ಪಾದನೆಯು ನಿರ್ಣಾಯಕವಾಗಿದೆ. ಉತ್ಪಾದನೆ ಬಲಪಡಿಸುವ ಮೂಲಕ ಭಾರತವು ದೇಶೀಯ ಬೇಡಿಕೆಯನ್ನು ಉತ್ತಮವಾಗಿ ಪೂರೈಸಬಹುದು ಮತ್ತು ಅಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು.


ಹಣಕಾಸಿನ ಕೊಡುಗೆಗಳನ್ನು ಮೀರಿ, ಅನಿವಾಸಿ ಭಾರತೀಯರು ತಮ್ಮ ಉದ್ಯಮಶೀಲತೆ, ಜ್ಞಾನ ವರ್ಗಾವಣೆ ಮತ್ತು ಸಾಮಾಜಿಕ ಪ್ರಭಾವದ ಮೂಲಕ ಭಾರತದ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜಾಗತಿಕ ರಾಯಭಾರಿಗಳಾಗಿ ಆರ್ಥಿಕ ವೈವಿಧ್ಯೀಕರಣ, ನಾವೀನ್ಯತೆ ಮತ್ತು ಜಾಗತಿಕ ಸಂಪರ್ಕಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅನನ್ಯ.


ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ

ಮಾರುಕಟ್ಟೆಯ ಮೇಲಿನ ಪ್ರಭಾವದ ದೃಷ್ಟಿಯಿಂದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಬಲವಾದ ಜನಾದೇಶವು ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯವನ್ನು ಪ್ರಸ್ತುತ ಐದು ಟ್ರಿಲಿಯನ್‌ ಡಾಲರಿನಿಂದ ದ್ವಿಗುಣಗೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸ್‌ನ ಅಧ್ಯಕ್ಷ ರಾಮದೇವ್ ಅಗರ್ವಾಲ್ ಅಭಿಪ್ರಾಯಪಡುತ್ತಾರೆ. ಅಂಶವಾಗಿದೆ. ಅಗರ್ವಾಲ್ ಪ್ರಕಾರ ಇಲ್ಲಿ ವಿದೇಶಿ ಹೂಡಿಕೆದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ವಿದೇಶಿ ಖಾಸಗಿ ಹೂಡಿಕೆದಾರರು ಖರೀದಿಸಲು ಪ್ರಾರಂಭಿಸಿದರೆ ಭಾರತೀಯ ಮಾರುಕಟ್ಟೆಯು ಬೃಹತ್ ಮತ್ತು ತ್ವರಿತ ಲಾಭವನ್ನು ದಾಖಲಿಸಬಹುದು.


ಜಾಗತಿಕ ಅನಿಶ್ಚಿತತೆಯ ಏರಿಕೆಯು ಜಾಗತಿಕ ಉತ್ಪಾದನೆಯನ್ನು ನಿಧಾನಗೊಳಿಸಿದಾಗಲೂ ಸಹ ತನ್ನ ದೇಶೀಯ ಬೇಡಿಕೆಯ ದೃಡತೆಯ ಮೇಲೆ ಬೆಳೆಯುವ ಭಾರತೀಯ ಆರ್ಥಿಕತೆಯ ಸಾಮರ್ಥ್ಯವನ್ನು ಜಿಡಿಪಿ ಪ್ರಗತಿ ದರದ ಅಂದಾಜು, ಗ್ರಾಹಕ ಮಾರುಕಟ್ಟೆ ದ್ವಿಗುಣದ ನಿರೀಕ್ಷೆ ಹಾಗೂ ಏರುತ್ತಿರುವ ಹಣದ ಒಳಹರಿವು ಪುನರುಚ್ಚರಿಸುತ್ತವೆ. ಜನಸಂಖ್ಯಾ ಪರಿವರ್ತನೆಯು ಕಡಿಮೆ ಶಿಶು ಮರಣ ಪ್ರಮಾಣ ಮತ್ತು ಸಾಕ್ಷರತೆಯ ದರಗಳಲ್ಲಿ ಸ್ಥಿರವಾದ ಬೆಳವಣಿಗೆಯಿಂದ ಗುರುತಿಸಲ್ಪಟ್ಟಿದೆ. ಇದು ಭಾರತದ ಅನುಕೂಲಕರ ಸ್ಥಾನವನ್ನು ಇನ್ನಷ್ಟು ಹೆಚ್ಚಿಸಲಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top