ಬೆಂಗಳೂರು: ಕನ್ನಡ ಸಾರಸ್ವತ ಲೋಕದಲ್ಲೇ ಅತ್ಯಂತ ವಿಶಿಷ್ಟ ಎನಿಸಿದ, ಬಿಡುಗಡೆಗೆ ಮುನ್ನವೇ ಆರು ಮರು ಮುದ್ರಣಗಳನ್ನು ಕಂಡ ಭಾವರಾಮಾಯಣ ರಾಮಾವತರಣ ಕೃತಿಯ ಲೋಕಾರ್ಪಣೆ ಈ ತಿಂಗಳ 29ರಂದು ನಗರದ ಹೊಸಕೆರೆಹಳ್ಳಿ ಪಿಇಎಸ್ ವಿವಿ ಕ್ಯಾಂಪಸ್ ಸಭಾಂಗಣದಲ್ಲಿ ನೆರವೇರಲಿದೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು, ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆ ಹಿಡಿಯುವ ಜತೆಗೆ ಅತ್ಯಂತ ಸರಳ ಭಾಷೆಯಲ್ಲಿ ಎಳೆ ಎಳೆಯಾಗಿ ವಿಶ್ಲೇಷಿಸುವ ಮೂಲಕ, ರಾಮಾಯಣದ ಹೊಸ ಹೊಳಹುಗಳನ್ನು ಪರಿಚಯಿಸಿದ್ದಾರೆ. ಜನಸಾಮಾನ್ಯರು ರಾಮಾಯಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಜ ಅರ್ಥದ ರಾಮರಾಜ್ಯ ಸ್ಥಾಪನೆಯಾಗಬೇಕು ಎನ್ನುವುದು ಕೃತಿಯ ಮೂಲ ಆಶಯ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಸಾವಣ್ಣ ಪ್ರಕಾಶನ ಸಂಸ್ಥೆ ಮುಖ್ಯಸ್ಥ ಜಮೀಲ್ ಸಾವಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೀವನದುದ್ದಕ್ಕೂ ರಾಮಾಯಣ ಅನುಸಂಧಾನದಲ್ಲಿ ತೊಡಗಿರುವ ಪರಮಪೂಜ್ಯರ ಧಾರಾ ರಾಮಾಯಣ, ರಾಮಕಥೆಯಂಥ ಪ್ರವಚನ ಮಾಲಿಕೆಯ ಬಳಿಕ, ಇದೀಗ ಭಾವ ರಾಮಾಯಣ ಕೃತಿ ಸರಣಿ ಅಕ್ಷರಪ್ರೇಮಿಗಳಿಗೆ ರಾಮಾಯಣದ ಅಮರಕೋಶವಾಗಲಿದೆ. ವಾಲ್ಮೀಕಿ ರಾಮಾಯಣದ ಮೂಲಸ್ವರೂಪಕ್ಕೆ ಎಳ್ಳಷ್ಟೂ ಧಕ್ಕೆಯಾಗದಂತೆ, ಮಕ್ಕಳೂ ಅರ್ಥ ಮಾಡಿಕೊಳ್ಳುವಷ್ಟು ಸರಳ, ಸುಂದರ ನಿರೂಪಣೆ ಬೆರಗುಗೊಳಿಸುವಂಥದ್ದು. ಸಾಹಿತ್ಯ ಅಭಿರುಚಿ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃತಿ ಲೋಕಾರ್ಪಣೆಗೆ ಮುನ್ನವೇ ಆರು ಸಾವಿರ ಪ್ರತಿಗಳು ಮಾರಾಟವಾಗಿರುವುದು ಈ ಅಮೂಲ್ಯ ಗ್ರಂಥದ ಮಹತಿಯನ್ನು ಸಾರುತ್ತದೆ.
ಈ ವಾರಾಂತ್ಯದಲ್ಲಿ ಅಂದರೆ ಶನಿವಾರ ಸಂಜೆ 5 ಗಂಟೆಗೆ ನಡೆಯುವ ಲೋಕಾರ್ಪಣೆ ಸಮಾರಂಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮತ್ತು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹಾಗೂ ಪಿಇಎಸ್ ವಿವಿ ಕುಲಾಧಿಪತಿ ಡಾ.ಎಂಆರ್.ದೊರೆಸ್ವಾಮಿ ಉಪಸ್ಥಿತರಿರುತ್ತಾರೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108ಕ್ಕೂ ಹೆಚ್ಚು ಗಣ್ಯರು ಏಕಕಾಲದಲ್ಲಿ ಕೃತಿ ಲೋಕಾರ್ಪಣೆ ಮಾಡುವರು.
ಕಾರ್ಯಕ್ರಮದಲ್ಲಿ ಕಲಾಸ್ನೇಹಿ ಮತ್ತು ನರ್ತನಯೋಗ ಸಂಸ್ಥೆಯ ನಿರ್ದೇಶಕರಾದ ಸ್ನೇಹಾ ನಾರಾಯಣ ಮತ್ತು ಯೋಗೀಶ್ ಕುಮಾರ್ ಅವರಿಂದ ಭರತನಾಟ್ಯ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಮಂತ್ರಾಲಯ ಶ್ರೀಗಳ ಆಶೀರ್ವಚನ ಇರುತ್ತದೆ. ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಎರಡು ಸಾವಿರಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವರು.
ಈ ಕೃತಿಯನ್ನು ಪ್ರಕಟಿಸಿದ ಸಾವಣ್ಣ ಪಬ್ಲಿಕೇಶನ್ಸ್ನ ಜಮೀಲ್ ಸಾವಣ್ಣ ಮಾತನಾಡಿ, ಈ ಅಮೂಲ್ಯ ಕೃತಿಯಲ್ಲಿ ಪರಮಪೂಜ್ಯರು ಸಾರಿರುವ ಮೌಲ್ಯಗಳು ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿದ್ದು. ಇಡೀ ಸಮಾಜಕ್ಕೆ ಇದರ ಲಾಭ ಸಿಗಬೇಕು ಎಂಬ ಮಹದುದ್ದೇಶದಿಂದ ಈ ಕೃತಿಯನ್ನು ನಮ್ಮ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ ಎಂದು ಹೇಳಿದರು. ಕೃತಿ ಲೋಕಾರ್ಪಣೆಗೆ ಮುನ್ನವೇ ಅದ್ಭುತ ಸ್ಪಂದನೆ ದೊರಕಿದ್ದು, ಆರು ಮುದ್ರಣಗಳನ್ನು ಕಂಡ ಪುಸ್ತಕದ ಏಳನೇ ಮುದ್ರಣಕ್ಕೆ ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
ಖ್ಯಾತ ಲೇಖಕ ಜಗದೀಶ್ ಶರ್ಮಾ ಸಂಪ, ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಉದಯಶಂಕರ ಭಟ್ ಮಿತ್ತೂರು, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ರಾಮಾಶ್ರಮ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


