ಹಿಂದೂ ಕಾರ್ಯಕರ್ತರ ಹತ್ತಿಕ್ಕುವ ಯತ್ನ ಮುಂದುವರಿದರೆ ತೀವ್ರ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಹ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರ ಮೇಲೆ ಕೇಸು ದಾಖಲಿಸಿದ್ದು, ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಕೃತ್ಯವನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಹಿಂದದೂ ಯುವಕರ ಮೇಲೆ, ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವ ಯತ್ನ ನಡೆದಿದೆ. ಹಿಂದೂ ಯುವಕರ ಮೇಲೆ ಗಡೀಪಾರು ಆದೇಶ, ಹಿಂದುತ್ವದ ಪರವಾಗಿ ನಿಂತ ಬಿಜೆಪಿ ಶಾಸಕರ ಮೇಲೆ ಕೇಸುಗಳನ್ನು ದಾಖಲಿಸಿರುವುದು, ಸಣ್ಣಪುಟ್ಟ ಘಟನೆಗಳಿಗೂ ಸಹ ಹಿಂದೂ ಕಾರ್ಯಕರ್ತರನ್ನು ಕೇಸಿನಲ್ಲಿ ಫಿಕ್ಸ್ ಮಾಡುವ ಯತ್ನಗಳು ನಡೆದಿವೆ ಎಂದು ಹೇಳಿದರು.
ದ.ಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ನಿರಂತರವಾಗಿ ವಿಫಲವಾಗುತ್ತಿದೆ. ಪೊಲೀಸರ ಮೇಲೆ ಕಾಂಗ್ರೆಸ್ ಸರಕಾರದ ನಿರಂತರ ಒತ್ತಡ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡದಿರುವುದೇ ಇದಕ್ಕೆ ಕಾರಣ. ರಸ್ತೆಯಲ್ಲಿ ನಮಾಜು ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದವರ ಮೇಲೆ ಸುಮೊಟೊ (ಸ್ವಯಂಪ್ರೇರಿತ) ಕೇಸು ದಾಖಲಿಸಿದ ಪೊಲೀಸ್ ಅಧಿಕಾರಿಯನ್ನು ರಜೆಯ ಮೇಲೆ ತೆರಳುವಂತೆ ಸೂಚಿಸಲಾಗುತ್ತದೆ, ಸಾರ್ವಜನಿಕ ಶಾಂತಿ ಭಂಗದ ಬಗ್ಗೆ ದೂರು ನೀಡಿದ ಮತ್ತು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ ಮಾತ್ರಕ್ಕೆ ವಿಹಿಂಪ ನಾಯಕ ಶರಣ್ ಪಂಪ್ವೆಲ್ ಅವರ ಮೇಲೆ ಕೇಸು ದಾಖಲಾಗುತ್ತದೆ. ಅದೇ ಹೊತ್ತಿಗೆ ಸುಮೊಟೊ ಕೇಸನ್ನು ಅಷ್ಟೇ ವೇಗದಲ್ಲಿ ತನಿಖೆಯಿಲ್ಲದೆ ರದ್ದುಪಡಿಸಲಾಗುತ್ತದೆ ಎಂದು ಸತೀಶ್ ಕುಂಪಲ ಟೀಕಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಕದಡುವ ಪ್ರಯತ್ನಗಳಿಗೆ ಕಾಂಗ್ರೆಸ್ ಸರಕಾರವೇ ಕುಮ್ಮಕ್ಕು ನೀಡುತ್ತಿದೆ. ಕಂಕನಾಡಿಯಲ್ಲಿ ರಸ್ತೆಯಲ್ಲಿ ನಮಾಜು ಮಾಡಿದ ಘಟನೆಯನ್ನು ಆ ಮಸೀದಿಯ ಮುಖ್ಯಸ್ಥರೇ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಹಾಗಿದ್ದರೂ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರಕಾರ ಕೇಸು ಹಾಕಿಸುತ್ತಿದೆ. ರಸ್ತೆಯಲ್ಲಿ ನಮಾಜ್ ಮಾಡುವ ಘಟನೆಗಳು ಮುಂದುವರಿದರೆ ಅದಕ್ಕೆ ಪ್ರತಿಯಾಗಿ ಹಿಂದೂ ಕಾರ್ಯಕರ್ತರು ಕೂಡ ರಸ್ತೆಗಳಲ್ಲಿ ಪ್ರತಿಭಟನಾತ್ಮಕ ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತದೆ ಎಂದು ಕೇವಲ ಹೇಳಿಕೆ ನೀಡಿದ್ದನ್ನೇ ಅಪರಾಧ ಎಂದು ಬಿಂಬಿಸಿ ಶರಣ್ ಪಂಪ್ವೆಲ್ ಅವರ ಮೇಲೆ ಕೇಸು ದಾಖಲಿಸಲಾಗಿದೆ.
ಪರಿವಾರ ಸಂಘಟನೆಗಳ ಮೇಲೆ ಕೇಸು ದಾಖಲಿಸಿ, ನಾನಾ ರೀತಿಯಲ್ಲಿ ಕಿರುಕುಳ ನೀಡಿ ಹತ್ತಿಕ್ಕುವ ಪ್ರಯತ್ನ ಮುಂದುವರಿಸಿದರೆ ಬಿಜೆಪಿ ಪಕ್ಷದ ಎಲ್ಲ ಹಿರಿಯರ ಮಾರ್ಗದರ್ಶನ ಪಡೆದು ದೊಡ್ಡ ಮಟ್ಟದಲ್ಲೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸತೀಶ್ ಕುಂಪಲ ಎಚ್ಚರಿಕೆ ನೀಡಿದರು.
ನಮಾಜು ಮಾಡಿದವರ ಮೇಲೆ ಹಾಕಿದ ಕೇಸನ್ನು ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆದಂತೆ ಶರಣ್ ಪಂಪ್ವೆಲ್ ಅವರ ಮೇಲೆ ಹಾಕಿದ ಕೇಸನ್ನೂ ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಸರಕಾರ ಬದಲಾಗಬಹುದು, ಆದರೆ ಪೊಲೀಸ್ ಇಲಾಖೆಯಲ್ಲಿ ಇರುವ ಅಧಿಕಾರಿಗಳು ಬದಲಾಗುವುದಿಲ್ಲ. ಹಾಗಾಗಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕಾನೂನಿನ ಅವಕಾಶಗಳನ್ನು ದುರ್ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ಎಚ್ಚರಿಸಿದರು.
ಚುನಾವಣೆ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರೇಮಾನಂದ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ನಿಕಟಪೂರ್ವ ಜಿಲ್ಲಾ ವಕ್ತಾರರಾಗಿದ್ದ ಜಗದೀಶ್ ಶೇಣವ ಹಾಗೂ ಪಕ್ಷದ ಹಾಲಿ ವಕ್ತಾರರಾಗಿರುವ ಅರುಣ್ ಶೇಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ