ಅಮರೇಶ್ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ತಮ್ಮ ತೋಟದ ದೊಡ್ಡ ಬೇವಿನ ಮರದ ನೆರಳಿನಲ್ಲಿ ಕುಳಿತುಕೊಂಡು ಅಳುಗಳ ಕೆಲಸವನ್ನು ವೀಕ್ಷಿಸತೊಡಗಿದರು. ಜೇಬಿನಲ್ಲಿಟ್ಟ ಅವರ ಮೊಬೈಲ್ ಗೆ ಬಂದು ಬಿದ್ದ ಸಂದೇಶ ಟಿಂಗ್ ಎಂಬ ಶಬ್ದದಿಂದ ಇವರನ್ನು ಎಚ್ಚರಿಸಿತು. ಸಂದೇಶವನ್ನು ತೆರೆದು ನೋಡಿದ ಅಮರೇಶರಿಗೆ ಅಚ್ಚರಿಯಾಯಿತು.
ನೆನ್ನೆ ತಾನೆ ಸಿಟಿಯ ಕಾಲೇಜಿನಲ್ಲಿ ಓದುತ್ತಿದ್ದ ಮಗಳಿಗೆ ಕರೆ ಮಾಡಿ ತನ್ನ ಅಕೌಂಟಿಗೆ ಮಗಳ ಕಾಲೇಜಿನವರು ಕೊಡುತ್ತಿದ್ದ ಸ್ಕಾಲರ್ಶಿಪ್ನ ಹಣ ಜಮೆಯಾಗಿರುವುದನ್ನು ಹೇಳಿ ಸಂತಸ ವ್ಯಕ್ತಪಡಿಸಿದ್ದ ಅಮರೇಶರಿಗೆ ಮಗಳು ಕವನ ಆ ಸ್ಕಾಲರ್ಶಿಪ್ನ ಹಣದಲ್ಲಿ ಲ್ಯಾಪ್ಟಾಪ್ ತೆಗೆದುಕೊಳ್ಳುವುದಾಗಿಯೂ ಈ ಬಾರಿ ತನ್ನನ್ನು ನೋಡಲು ಬಂದಾಗ ತನಗೆ ಇನ್ನಷ್ಟು ಹಣ ಹಾಕಿ ಹೊಸ ಲ್ಯಾಪ್ಟಾಪ್ ಕೊಡಿಸಲು ಫರ್ಮಾನು ಹೊರಡಿಸಿದ್ದಳು. ಸಂತಸದಿಂದಲೇ ಮಗಳ ಮಾತುಗಳನ್ನು ಆಲಿಸಿ ಈ ಬಾರಿಯ ಬೆಳೆ ಕೈಗೆ ಬಂದ ಕೂಡಲೇ ಆಕೆಗೆ ಲ್ಯಾಪ್ಟಾಪ್ ಕೊಡಿಸುವುದಾಗಿ ಒಪ್ಪಿಕೊಂಡಿದ್ದರು.
ಅಮರೇಶಪ್ಪ ಮತ್ತು ಪ್ರಭ ದಂಪತಿಗಳು ಪುಟ್ಟ ಹಳ್ಳಿಯೊಂದರಲ್ಲಿ ವಾಸವಾಗಿದ್ದ ಸಣ್ಣ ಹಿಡುವಳಿದಾರರಾಗಿದ್ದರು. ಅಷ್ಟೇನೂ ಉತ್ತಮ ಅಲ್ಲದಿದ್ದರೂ ಮಧ್ಯಮವರ್ಗದ ರೈತಾಪಿ ಜೀವನ ಅವರದಾಗಿತ್ತು. ಪತ್ನಿ ಪ್ರಭ ಒಳ್ಳೆಯ ಗೃಹಿಣಿಯಾಗಿದ್ದು ಮನೆಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಗಂಡನಿಗೆ ಒಕ್ಕಲುತನದಲ್ಲಿ ಕೂಡ ಸಹಾಯ ಮಾಡುತ್ತಿದ್ದಳು. ಆದರೂ ಒಕ್ಕಲುತನದ ಅನಿರೀಕ್ಷಿತತೆಗಳು ತಮ್ಮ ಮಕ್ಕಳ ಜೀವನಕ್ಕೆ ಹೊಡೆತ ತರಬಾರದು ಎಂಬ ಭಾವದಿಂದ ಮಕ್ಕಳಿಬ್ಬರ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದ್ದರು.
ಮಕ್ಕಳಿಬ್ಬರು ಒಳ್ಳೆಯ ವಿದ್ಯಾವಂತರಾಗಿದ್ದು ಮಗಳು ಕವನ ಮತ್ತು ಮಗ ಪ್ರತೀಕ್ ಇಬ್ಬರೂ ಹತ್ತಿರದ ನಗರದಲ್ಲಿ ಕ್ರಮವಾಗಿ ಇಂಜಿನಿಯರಿಂಗ್ ಮತ್ತು ಪಿಯು ವಿದ್ಯಾಭ್ಯಾಸಗಳಲ್ಲಿ ತೊಡಗಿಕೊಂಡಿದ್ದರು. ಅದರಲ್ಲೂ ಮಗಳು ಕವನ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಸಿಇಟಿಯಲ್ಲಿ ಮೆರಿಟ್ ಆಧಾರದ ಮೇಲೆ ದೊರೆತ ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಆಯ್ದುಕೊಂಡು ಇಂಜಿನಿಯರಿಂಗ್ ಕಾಲೇಜು ಸೇರಿದ್ದು ದಂಪತಿಗಳಿಗೆ ಸಂತಸದ ಜೊತೆಗೆ ಹೆಮ್ಮೆಯನ್ನು ಮೂಡಿಸಿತ್ತು.
ಕಾಲೇಜು ಪ್ರಾರಂಭವಾಗಿ ಕೇವಲ ನಾಲ್ಕು ತಿಂಗಳಾಗಿತ್ತು... ಈ ಮುನ್ನ ಪಿಯು ಓದುವಾಗ ಮಗಳಿಗೆ ಫೋನ್ ಕೊಡಿಸದೇ ಇದ್ದ ಕಾರಣ ಮಗಳ ಬ್ಯಾಂಕ್ ಖಾತೆಗೆ ಇವರ ಫೋನ್ ನಂಬರ್ ನೋಂದಣಿಯಾಗಿತ್ತು. ಇಂಜಿನಿಯರಿಂಗ್ ಕಾಲೇಜಿಗೆ ಹೋಗುವಾಗ ಅವಶ್ಯಕತೆ ಬಿದ್ದಾಗ ಹಣ ತೆಗೆದುಕೊಳ್ಳಲಿ ಎಂದು ಆಕೆಗೆ ಒಂದು ಎಟಿಎಂ ಕಾರ್ಡ್ ಮಾಡಿಸಿ ಕೊಟ್ಟಿದ್ದರು ಅಮರೇಶಪ್ಪ.
ನಿನ್ನೆ ತಾನೆ ಸ್ಕಾಲರ್ಶಿಪ್ ಹಣ ಮಗಳಿಗೆ ಬಂದದ್ದನ್ನು ಆಕೆಗೆ ಫೋನ್ ಮಾಡಿ ಹೇಳಿದ ತಂದೆ ಇದೀಗ ಮಗಳ ಖಾತೆಯಿಂದ ಸುಮಾರು 30,000 ದಷ್ಟು ಹಣ ತೆಗೆಯಲ್ಪಟ್ಟಿದೆ ಎಂಬ ಸಂದೇಶವನ್ನು ಓದಿ ಅವರ ಹಣೆಯ ಮೇಲಿನ ನೆರಿಗೆಗಳು ಹೆಚ್ಚಾದವು. ಕಟ್ಟಿದ ಕೈ ಗಡಿಯಾರದಲ್ಲಿ ಸಮಯ ನೋಡಿಕೊಂಡ ಅವರು ಮಗಳು ಈಗ ತಾನೆ ಕಾಲೇಜಿಗೆ ಹೋಗುತ್ತಿರುವವಳು ಅಂತದರಲ್ಲಿ ಇಷ್ಟೊಂದು ಹಣವನ್ನು ಏಕೆ ತೆಗೆದಿದ್ದಾಳೆ ಎಂಬ ಅನುಮಾನದಿಂದ ಆಕೆಗೆ ಕರೆ ಮಾಡಿ ಎಲ್ಲಿರುವೆ ಎಂದು ಕೇಳಿದರು. ತಾನಿನ್ನೂ ಮೆಸ್ ನಲ್ಲಿ ತಿಂಡಿ ತಿನ್ನುತ್ತಿರುವುದಾಗಿಯೂ ನಂತರ ಕಾಲೇಜಿಗೆ ಹೋಗುತ್ತೇನೆ ಎಂದು ಮಗಳು ಉತ್ತರಿಸಿದಳು.
ಆಗ ಅಮರೇಶರು ಮಗಳಿಗೆ ಆಕೆಯ ಖಾತೆಯಿಂದ ಅಷ್ಟೊಂದು ಹಣವನ್ನು ತೆಗೆದಿರುವುದೇಕೆ ಎಂದು ಕೇಳಿದರು. ಗಾಬರಿಯಾದ ಕವನ ಇಲ್ಲಪ್ಪ, ನಾನು ಹಾಸ್ಟೆಲ್ ಬಿಟ್ಟು ಹೊರಗೆಲ್ಲೂ ಹೋಗಿಲ್ಲ ಎಂದು ಕೂಡಲೇ ತನ್ನ ಪರ್ಸಿನಲ್ಲಿದ್ದ ಎಟಿಎಂ ಕಾರ್ಡನ್ನು ಹುಡುಕಿದಳು. ಅದು ಆಕೆಯ ಪರ್ಸ್ ನಲ್ಲಿ ಇರಲಿಲ್ಲವಾಗಿ ತಂದೆಗೆ ಹೇಳಿದಳು. ಕೂಡಲೇ ಆಕೆಯ ತಂದೆ "ನೀನು ಕಾಲೇಜಿಗೆ ಹೋಗಬೇಡ... ಈ ಕೂಡಲೇ ನಾನು ಅಲ್ಲಿಗೆ ಬರುವೆ" ಎಂದು ಹೇಳಿದರು. ಮುಂದಿನ ಒಂದೂವರೆ ಗಂಟೆಯಲ್ಲಿ ಬೈಕ್ ನಲ್ಲಿ ನಗರ ತಲುಪಿದ ಮಗಳ ಅಕೌಂಟ್ ನಿಂದ ಹಣ ತೆಗೆದ ಎಟಿಎಂಗೆ ಮಗಳೊಂದಿಗೆ ಬಂದು ತಲುಪಿದರು ಅಮರೇಶ್.
ಆ ಎಟಿಎಂನ ಸಿಬ್ಬಂದಿಗೆ ತಮ್ಮ ಫೋನ್ನಲ್ಲಿ ತಮ್ಮ ಮಗಳ ಖಾತೆಯಿಂದ ಹಣ ತೆಗೆಯಲ್ಪಟ್ಟ ವಿಷಯದ ಕುರಿತ ಮೆಸೇಜ್ ಅನ್ನು ಸೆಕ್ಯೂರಿಟಿಗೆ ತೋರಿಸಿದರು. ಕೂಡಲೇ ತನ್ನ ಮೇಲಧಿಕಾರಿಗಳಿಗೆ ಫೋನಾಯಿಸಿದ ಆ ಸೆಕ್ಯೂರಿಟಿ ಗಾರ್ಡ್ ಸಿ ಸಿ ಟಿವಿ ಕ್ಯಾಮೆರಾದಲ್ಲಿ ಆ ಸಮಯದಲ್ಲಿ ದಾಖಲಾದ ಫೂಟೇಜನ್ನು ವೀಕ್ಷಿಸಲು ಮಗಳ ಬಾಯಿಂದ 'ಅಯ್ಯೋ' ಎಂಬ ಚೀತ್ಕಾರ ಕೇಳಿಸಲು ಆಕೆಯ ತಂದೆಯಾದಿಯಾಗಿ ಎಲ್ಲರೂ ಆಕೆಯತ್ತ ತಿರುಗಿ ನೋಡಿದರು.
ಆಕೆ ನನ್ನ ರೂಮ್ ಮೇಟ್ ಎಂದು ಬಿಕ್ಕಳಿಸತೊಡಗಿದಳು ಕವನ. ಮುಂದಿನ ಎಲ್ಲಾ ಕಾರ್ಯಾಚರಣೆಗಳು ತ್ವರಿತವಾಗಿ ನಡೆದು ಎಲ್ಲರೂ ಹಾಸ್ಟೆಲ್ ಗೆ ತೆರಳಿ ಕವನಳ ರೂಮ್ ಮೇಟ್ ವಿದ್ಯಾರ್ಥಿನಿಯನ್ನು ಕರೆಸಿ ವಿಚಾರಿಸಲಾಗಿ ಮೊದಮೊದಲು ಜೋರಾಗಿ ವಾದ ಮಾಡಿದ ಆಕೆ ಸಿ ಸಿ ಟಿವಿ ಫೂಟೇಜ್ ತೋರಿಸಿದ ನಂತರ ತನ್ನ ತಪ್ಪು ಒಪ್ಪಿಕೊಂಡಳು. ಈ ಮೊದಲೇ ಕವನಳ ಜೊತೆ ಹೊರಗೆ ಹೋಗಿದ್ದಾಗ ಆಕೆಯ ಎಟಿಎಂ ಪಿನ್ ಅನ್ನು ಆಕೆಯ ಅರಿವಿಗೆ ಬಾರದಂತೆ ಗಮನಿಸಿದ್ದ ಕವನಳ ರೂಮ್ ಮೇಟ್ ಸಮಯ ನೋಡಿ ಆಕೆಯ ಪರ್ಸ್ ನಿಂದ ಆಕೆಯ ಎಟಿಎಂ ಕಾರ್ಡನ್ನು ಎತ್ತಿಟ್ಟುಕೊಂಡು ಮರುದಿನ ಮುಂಜಾನೆ ಕಾಲೇಜಿಗೆ ಎಂದಿನಂತೆ ತಯಾರಾಗಿ ಹೊರಟು ಕಾಲೇಜಿಗೆ ಹತ್ತಿರದಲ್ಲಿದ್ದ ಆ ಎಟಿಎಂ ಸೆಂಟರ್ಗೆ ಬಂದು ಹಣ ಡ್ರಾ ಮಾಡಿದ್ದಳು. ಹಾಸ್ಟೆಲ್ ವಾರ್ಡನ್ ಆದಿಯಾಗಿ ಎಲ್ಲರೂ ಆಕೆಗೆ ಛೀಮಾರಿ ಹಾಕಿದರು. ಆದರೆ ಅಮರೇಶ ಮಾತ್ರ ಆಕೆಯ ಮೇಲೆ ಯಾವುದೇ ದೂರನ್ನು ಪೊಲೀಸ್ ಸ್ಟೇಷನ್ ಗೆ ಸಲ್ಲಿಸದೆ ಆಕೆ ಡ್ರಾ ಮಾಡಿದ್ದ ಹಣವನ್ನು ಮಾತ್ರ ಪಡೆದುಕೊಂಡು ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಎಚ್ಚರಿಸಿದರು.
ಆಗ ಪೊಲೀಸ್ ಅಧಿಕಾರಿಗಳು ದಿನಕ್ಕೆ ಹಲವಾರು ಬಾರಿ ಜಾಹೀರಾತುಗಳ ಮೂಲಕ ಸರ್ಕಾರ ನಿಮ್ಮ ಖಾತೆಯ ನಂಬರ್, ಎಟಿಎಂ ಪೇಟಿಎಂ, ಫೋನ್ ಪೇ ಗಳ ಪಿನ್ ನಂಬರ್ ಯಾರಿಗೂ ಕೊಡಬೇಡಿ ಎಂದು ಯಾವಾಗಲೂ ತಿಳಿ ಹೇಳುತ್ತದೆ ಇನ್ನಾದರೂ ಜಾಗೃತರಾಗಿರಿ ಎಂದು ಹೇಳಿದರು. ಹಾಸ್ಟೆಲ್ನ ವಾರ್ಡನ್ ಕೂಡ ಕವನಳ ಸ್ನೇಹಿತೆಗೆ ಇದೊಂದು ಬಾರಿ ಸುಮ್ಮನಿರುವ ಕಾರಣ ನೀನು ಚಿಕ್ಕವಳು ಎಂದು, ಇದರಿಂದ ನಿನ್ನ ತಂದೆ ತಾಯಿಯರಿಗೆ ಕೆಟ್ಟ ಹೆಸರು ಮತ್ತು ನಿನ್ನ ಭವಿಷ್ಯಕ್ಕೆ ಕಲ್ಲು ಬೀಳುತ್ತದೆ ಎಂದು ತಿಳಿ ಹೇಳಿದರು.
ಅಂತೆಯೇ ತಪ್ಪೊಪ್ಪಿಕೊಂಡ ಕವನಳ ರೂಮ್ ಮೇಟ್ ಅಮರೇಶ್ ಮತ್ತು ಕವನಳ ಬಳಿ ಕ್ಷಮೆ ಯಾಚಿಸಿ, ಇನ್ನೆಂದೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದಳು.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ