ಶ್ರೀರಾಮ ಕಥಾ ಲೇಖನ ಅಭಿಯಾನ-145: ರಾಮಾಯಣದಿಂದ ನಾವು ಕಲಿಯಬೇಕಾದ ಮುಖ್ಯಪಾಠಗಳು

Upayuktha
0


- ಸುದರ್ಶನ ಕಂಬಾಲೂರು


‘ರಾಮಮಂದಿರದಿಂದ ರಾಮರಾಜ್ಯದೆಡೆಗೆ’- ಇದು ಪ್ರಸ್ತುತ ಎಲ್ಲ ಸಜ್ಜನರ ಘೋಷವಾಕ್ಯ. ರಾಮರಾಜ್ಯವನ್ನು ಕಾಣಬೇಕೆಂದರೆ- ಈ ದೇಶದ ಸಿಂಹಾಸನದಲ್ಲಿ ಹಾಗೂ ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ- ರಾಮನನ್ನೇ ರಾಜನನ್ನಾಗಿ ಮಾಡಬೇಕು. ರಾಮ, ಹನುಮಂತ ಮೊದಲಾದ ಪಾತ್ರಗಳ ಉದಾತ್ತಗುಣಗಳನ್ನು ಯಥಾಯೋಗ್ಯವಾಗಿ ನಮ್ಮದನ್ನಾಗಿಸಿಕೊಳ್ಳಬೇಕು. ಆಗ ಮಾತ್ರ ರಾಮರಾಜ್ಯದ ಸ್ಥಾಪನೆ ಸಾಧ್ಯ ಎಂಬುದನ್ನು ಮರೆಯಬಾರದು. 

ರಾಮ, ಸೀತೆ, ಹನುಮಂತ, ಲಕ್ಷ್ಮಣ, ಭರತ ಮುಂತಾದ ರಾಮಾಯಣದ ಪ್ರತಿಯೊಂದು ಪಾತ್ರದಿಂದಲೂ, ಪ್ರತಿಯೊಂದ ಪ್ರಸಂಗದಿಂದಲೂ ನಾವು ಕಲಿಯಬೇಕಾದ ಅನೇಕ ಪಾಠಗಳಿವೆ. ಈ ಬಗ್ಗೆ ಒಂದು ಕಿರುಚಿಂತನೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ.


ಯಾರನ್ನೂ ಉಪೇಕ್ಷಿಸಬಾರದು:

ರಾವಣ ಮೊದಲಾದ ದೈತ್ಯರಿಂದಾಗುತ್ತಿದ್ದ ಲೋಕಕಂಟಕವನ್ನು ತಪ್ಪಿಸಲೆಂದು ಬ್ರಹ್ಮರುದ್ರಾದಿ ದೇವತೆಗಳು ಶ್ರೀಹರಿಯನ್ನು ಶರಣು ಹೋಗುತ್ತಾರೆ. ಆಗ ಶ್ರೀಹರಿಯು ತಾನು ದಶರಥನ ಪುತ್ರನಾಗಿ ಅವತರಿಸುವುದಾಗಿ ಅವರಿಗೆ ತಿಳಿಸಿ, ಭಗವತ್ಸೇವೆಗೆಂದು ದೇವತೆಗಳನ್ನು ನರ, ವಾನರ, ಕರಡಿ ಮೊದಲಾದ ಯೋನಿಗಳಲ್ಲಿ ಅವತರಿಸಲು ಆದೇಶಿಸುತ್ತಾನೆ. ಹಾಗೆ ಮಹಾಬಲಿಷ್ಠರಾದ ದೇವತೆಗಳು ಹನುಮಂತ, ವಾಲಿ, ಸುಗ್ರೀವ ಮೊದಲಾದ ಕಪಿಯೋನಿಯಲ್ಲೂ, ಲಕ್ಷ್ಮಣ, ಭರತ ಮೊದಲಾದ ಮನುಷ್ಯಯೋನಿಯಲ್ಲೂ ಅವತರಿಸುತ್ತಾರೆ. ದೇವತೆಗಳಿಂದಲೂ ಸಾವಿಲ್ಲದ ತನಗೆ ಈ ನರ-ವಾನರರಿಂದೇನಾದೀತು ಎಂಬ ಉಪೇಕ್ಷೆಯ ಸ್ವಭಾವವನ್ನು ರಾವಣನದು. ಆದರೆ ಆ ನರ-ವಾನರರಿಂದಲೇ ಅವನ ಹಾಗೂ ಅವನ ಅನುಯಾಯಿಗಳ ನಾಶವಾಯಿತು ಎಂಬುದನ್ನು ಮರೆಯಬಾರದು, ಈ ಸೃಷ್ಟಿಯಲ್ಲಿ ಮಹಾತ್ಮರಾದವರು ಯಾವ ಯೋನಿಯಲ್ಲಾದರೂ ಇರಬಹುದು; ಯಾವ ಜಾತಿಯಲ್ಲಾದರೂ ಇರಬಹುದು. ಹಾಗಾಗಿ ಯಾರನ್ನೂ ಉಪೇಕ್ಷಿಸಬಾರದು, ಕೀಳಾಗಿ ಕಾಣಬಾರದೆಂಬ ಎಂಬ ದೊಡ್ಡಪಾಠವನ್ನು ನಮಗೆ ರಾಮಾಯಣವು ತಿಳಿಸುತ್ತಿದೆ.


ಋಷ್ಯಶೃಂಗರಿಂದ ಮಳೆ:

ವಿಭಾಂಡಕ ಎಂಬ ಋಷಿಯ ಮಗ ಋಷ್ಯಶೃಂಗ. ಮಹಾತಪಸ್ವಿ. ವೇದಾದಿಸರ್ವಶಾಸ್ತ್ರಪಾರಂಗತ. ಯಾವ ಸ್ತ್ರೀಯನ್ನೂ ಕಣ್ಣೆತ್ತಿ ನೋಡದ ಅಪ್ರತಿಮ ಬ್ರಹ್ಮಚರ್ಯ ಅವರದು. ಆ ಸಮಯದಲ್ಲಿ ಅಂಗದೇಶದಲ್ಲಿ ಅನಾವೃಷ್ಟಿಯಿಂದ ತೀವ್ರತರವಾದ ಬರಗಾಲ ಬಂದಿತ್ತು. ರಾಜನಾದ ರೋಮಪಾದನು ಹಿರಿಯರನ್ನು ಪ್ರಶ್ನಿಸಿದ. ಅವರೆಲ್ಲ ಹೇಳಿದರು- “ರಾಜ! ಋಷ್ಯಶೃಂಗರನ್ನು ಇಲ್ಲಿಗೆ ಕರೆದು ತಾ. ಅವರೊಂದಿಗೆ ನಿನ್ನ ಮಗಳಾದ ಶಾಂತೆಯ ವಿವಾಹವನ್ನು ಮಾಡಿಸು. ಇದರಿಂದ ಮಳೆಯಾಗುವುದು”. ಅವರ ಮಾತಿನಂತೆಯೇ ರಾಜ ನಡೆದುಕೊಂಡ. ಕೂಡಲೇ ಧಾರಾಕಾರದ ಮಳೆ ಬಂತು. ದೇಶ ಸುಭಿಕ್ಷವಾಯಿತು. ರಾಜನಾದವನು ಪ್ರಜೆಗಳ ಹಿತಕ್ಕಾಗಿ ತನ್ನ ಮಗಳನ್ನೇ ಒಬ್ಬ ತಪಸ್ವಿಗೆ ನೀಡಿದ. ತಮ್ಮ ಮಗಳ ವಿವಾಹವೇನಿದ್ದರೂ ಲಕ್ಷಗಟ್ಟಲೆ ಸಂಪಾದಿಸುವವನೊಂದಿಗೇ ಹೊರತು ವೇದವೇದಾಂತ ಓದಿದವನಿಗಲ್ಲ ಎಂಬ ಮನಃಸ್ಥಿತಿ ಇಂದಿನ ಅನೇಕ ಕನ್ಯಾಪಿತೃಗಳದ್ದು! ವಿದ್ಯೆಯು ಕೊಡುವ ರಕ್ಷಣೆಯನ್ನು ಹಣವು ಕೊಡಲಾರದು ಎಂಬ ಅರಿವನ್ನು ನಾವು ತಂದುಕೊಳ್ಳಬೇಕಿದೆ.

 

ಗುರುಸೇವೆ - ಶಿಷ್ಯವಾತ್ಸಲ್ಯ:

ರಾಮ-ಲಕ್ಷ್ಮಣರನ್ನು ಯಜ್ಞದ ರಕ್ಷಣೆಗೆಂದು ವಿಶ್ವಾಮಿತ್ರರು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಸರ್ವೋತ್ತಮನಾದ ರಾಮನಿಗೆ ಅಸ್ತ್ರಗಳ ಆವಶ್ಯಕತೆ ಇಲ್ಲದಿದ್ದರೂ, ಲೋಕದ ದೃಷ್ಟಿಯಲ್ಲಿ ವಿಶ್ವಾಮಿತ್ರರಿಂದ ದಿವ್ಯವಾದ ಅಸ್ತ್ರಗಳ ಮಂತ್ರವನ್ನು ರಾಮನು ಸ್ವೀಕರಿಸುತ್ತಾನೆ. ಗುರುಗಳ ಸೇವೆಯನ್ನು ಚೆನ್ನಾಗಿ ಮಾಡಿ, ಅವರಿಂದ ಉಪದೇಶದ ಮೂಲಕ ಸ್ವೀಕರಿಸುವ ವಿದ್ಯೆ ಮಾತ್ರ ಫಲಪ್ರದವಾಗುತ್ತದೆ ಎಂಬ ಸಂದೇಶವನ್ನು ಈ ಪ್ರಸಂಗದಿಂದ ಶ್ರೀರಾಮನು ನಮಗೆಲ್ಲ ನೀಡಿದ್ದಾನೆ.


ಯಜ್ಞದ ರಕ್ಷಣೆಯನ್ನು ಮಾಡಿದ ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ಸೀತಾ ಸ್ವಯಂವರಕ್ಕೆಂದು ಮಿಥಿಲೆಗೆ ಕರೆದುಕೊಂಡು ಹೋಗುತ್ತಾರೆ. ಸ್ವಯಂವರದ ನಿಯಮದಂತೆ ಶಿವಧನುರ್ಭಂಗವನ್ನು ರಾಮನಿಂದ ಮಾಡಿಸುತ್ತಾರೆ. ನಂತರ ಸೀತಾರಾಮರ ವಿವಾಹವಾಗುತ್ತದೆ. ನಿತ್ಯದಂಪತಿಗಳಾದ ಸೀತಾ-ರಾಮರು ಲೋಕದ ದೃಷ್ಟಿಯಲ್ಲಿ ದಂಪತಿಗಳಾಗುತ್ತಾರೆ.


ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ತಮ್ಮೊಡನೆ ಕರೆದುಕೊಂಡುಬಂದಿದ್ದರ ಉದ್ದೇಶ ಯಜ್ಞರಕ್ಷಣೆಗಾಗಿ. ಯಜ್ಞವು ಪೂರೈಸಿದ ಮೇಲೆ ರಾಮಲಕ್ಷ್ಮಣರನ್ನು ಅಯೋಧ್ಯೆಗೆ ಕಳುಹಿಸದ್ದರೆ ಅವರ ಕೆಲಸ ಮುಗಿಯುತ್ತಿತ್ತು, ಆದರೆ ಅಷ್ಟಕ್ಕೇ ಸುಮ್ಮನಾಗದ ವಿಶ್ವಾಮಿತ್ರರು ನಿತ್ಯದಂಪತಿಗಳಾದ ಸೀತಾರಾಮರ ವಿವಾಹವನ್ನು ಮಾಡಿಸಿದರು. ತನ್ನನ್ನು ನಂಬಿ ಬಂದ ಶಿಷ್ಯರನ್ನು ಗುರುವಾದವನು ಕೈಬಿಡಬಾರದೆಂಬ ಉದಾತ್ತ ಸಂದೇಶವನ್ನು ವಿಶ್ವಾಮಿತ್ರರು ಈ ಮೂಲಕ ನೀಡುತ್ತಿರುವರು.


ಪತಿಪತ್ನಿಯರನ್ನು ಒಂದುಗೂಡಿಸಬೇಕು:

ಗೌತಮರ ಪತ್ನಿಯಾದ ಅಹಲ್ಯೆಯು ತನ್ನ ಪತಿಯ ಶಾಪದಿಂದಾಗಿ ಶಿಲೆಯಂತೆ ಜಡವಾಗಿ ಬಿದ್ದಿದ್ದಳು. ಸೀತಾ ಸ್ವಯಂವರಕ್ಕೆಂದು ರಾಮನು ಮಿಥಿಲೆಗೆ ಹೋಗುತ್ತಿರುವಾಗ ಮಾರ್ಗಮಧ್ಯದಲ್ಲಿ ಹಾಗೆ ಜಡವಾಗಿ ಬಿದ್ದಿದ್ದ ಅಹಲ್ಯೆಗೆ ಆಕೆಯ ಮೊದಲಿನ ರೂಪವನ್ನೂ, ಜ್ಞಾನವನ್ನೂ ನೀಡಿದ. ಅಷ್ಟು ಮಾತ್ರವಲ್ಲದೆ, ಅವಳ ಪತಿಯಾದ ಗೌತಮರೊಂದಿಗೆ ಅವಳನ್ನು ಸೇರಿಸಿದ. ಪತಿಪತ್ನಿಯರು ಪರಸ್ಪರ ಒಂದಾಗಿರುವಂತೆ ಮಾಡುವುದು ರಾಮನ ಉದ್ದೇಶ. ಪತಿಪತ್ನಿಯರಲ್ಲಿ ಯಾವುದೋ ಕಾರಣಕ್ಕೆ ಪರಸ್ಪರ ವೈಮನಸ್ಯ ಏರ್ಪಟ್ಟರೂ, ಅದನ್ನು ಪರಿಹರಿಸಿ ಅವರನ್ನು ಒಂದುಗೂಡಿಸಬೇಕು ಎಂಬ ಪಾಠವನ್ನು ಇದರಿಂದ ಇಂದಿನ ಸಮಾಜ ಅರಿತುಕೊಳ್ಳಬೇಕಿದೆ.


ಕೊಟ್ಟಮಾತನ್ನು ಎಂದಿಗೂ ಮೀರಬಾರದು:

ಕೈಕೇಯಿಯ ಗೃಹದಲ್ಲಿದ್ದ ದಶರಥನನ್ನು ಕಾಣಲು ರಾಮನು ಬರುತ್ತಾನೆ. ತಾನು ಸರ್ವರಿಂದ ವಂದ್ಯನೂ, ದೇವದೇವೋತ್ತಮನಾಗಿದ್ದರೂ ಸಹ ಶ್ರೀರಾಮನು ಈ ನಿಮಿತ್ತಮಾತ್ರರಾದ ತಂದೆತಾಯಿಗಳ ಪಾದಕ್ಕೆ ಎರಗುತ್ತಾನೆ. ದುಃಖದಿಂದ ಏನನ್ನೂ ಮಾತನಾಡದ ತನ್ನ ತಂದೆಯ ಚಿಂತೆಗೆ ಕಾರಣವೇನೆಂದು ತಾಯಿಯಾದ ಕೈಕೇಯಿಯನ್ನು ರಾಮನು ಪ್ರಶ್ನಿಸುತ್ತಾನೆ. ಆಗ ಕೈಕೇಯಿಯು ರಾಮನನ್ನು ಕುರಿತು ‘ರಾಮ! ಹಿಂದೆ ನಿನ್ನ ತಂದೆಯು ನನಗೆ ವರವನ್ನು ನೀಡಿ, ಅದನ್ನು ಈಗ ಹೇಗೆ ನಡೆಸುವುದೆಂದು ಪರಿತಪಿಸುತ್ತಿದ್ದಾನೆ. ನಿನ್ನ ತಂದೆಯ ಮಾತನ್ನು- ಅದು ಶುಭವೇ ಆಗಿರಲಿ, ಅಶುಭವೇ ಆಗಿರಲಿ- ನೀನು ನಡೆಸುವೆಯಾದಲ್ಲಿ ನಾನು ನಿನಗೆ ಹೇಳುತ್ತೇನೆ’ ಎಂದು ತಿಳಿಸುತ್ತಾಳೆ. ಆಗ ರಾಮನು ಕೈಕೇಯಿಯನ್ನು ಕುರಿತು ಹೇಳುವ ಮಾತು ಹೀಗಿದೆ- “ರಾಜನ ಆಜ್ಞೆಯನ್ನು ನಾನು ನಿಶ್ಚಯವಾಗಿಯೂ ನಡೆಸುವೆ. ಬೆಂಕಿಗೆ ಬೀಳಬೇಕೇ? ಅವಶ್ಯವಾಗಿ ಬೀಳುವೆ. ತೀಕ್ಷ್ಣವಾದ ವಿಷವನ್ನು ಸೇವಿಸಬೇಕೇ? ಸಮುದ್ರಕ್ಕೆ ಹಾರಬೇಕೆ? ಅದೇನೇ ಆಗಲಿ, ನನ್ನ ಗುರುವಾದ ತಂದೆಯ ಮಾತನ್ನು ಅವಶ್ಯ ನಡೆಸುವೆ. ಅಮ್ಮ! ಈ ರಾಮನು ಕೊಟ್ಟ ಮಾತನ್ನು ತಪ್ಪುವುದಿಲ್ಲ (‘ರಾಮೋ ದ್ವಿರ್ನಾಭಿಭಾಷತೇ’)”


ಇಂದು ತಂದೆತಾಯಿಯರ ಮಾತನ್ನು ನಡೆಸುವುದಿರಲಿ, ಅವರನ್ನು ನಿಂದಿಸುವ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸುವ ಮಕ್ಕಳೇ ಅಧಿಕರಾಗಿರುವರು. ತಂದೆತಾಯಿಯರಿಗೆ ಹಾಗೂ ಗುರುಹಿರಿಯರಿಗೆ ತಲೆಬಾಗಿ ನಮಸ್ಕರಿಸುವ ಸಂಸ್ಕೃತಿಯು ಅಳಿಯುತ್ತಿದೆ. ಇನ್ನು ಅವರ ಮಾತನ್ನು ನಡೆಸುವುದೆಂತು? ಹಿರಿಯರೊಂದಿಗೆ ಮಾತನಾಡುವಾಗ ತಲೆಬಾಗಿ ಮಾತನಾಡಬೇಕೆಂಬ ಕನಿಷ್ಠ ಸೌಜನ್ಯವನ್ನು ಕಾಣಲು ಸಾಧ್ಯವೇ ಇಲ್ಲವೆಂಬಂತಾಗಿದೆ. 

ಯಾರಿಗಾದರೂ ಒಮ್ಮೆ ಮಾತು ಕೊಟ್ಟ ಮೇಲೆ ಅದಕ್ಕೆ ತಪ್ಪಿ ನಡೆಯುವ ಪ್ರಸಂಗಗಳು ನಮಗೆ ಎದುರಾಗುತ್ತವೆ. ಅದರಲ್ಲೂ ಚುನಾವಣೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ಆಶ್ವಾಸನೆಯನ್ನು ನೀಡುವ ಧಾರಾಳಿಗಳಾದ ರಾಜಕಾರಣಿಗಳೂ ನಮಗೆ ಅಲ್ಲಲ್ಲಿ ಕಂಡುಬರುತ್ತಾರೆ. ‘ಆಶ್ವಾಸನೆ ಕೊಡುವುದಕ್ಕೇ ಹೊರತು ಈಡೇರಿಸುವುದಕ್ಕಲ್ಲ’ ಎಂಬ ಧೋರಣೆ ಅಂತಹವರದು.


ಒಟ್ಟಿನಲ್ಲಿ ರಾಮಾಯಣದ ಈ ಪ್ರಸಂಗವು ನಮಗೆ ಮೂರು ಪಾಠಗಳನ್ನು ಮುಖ್ಯವಾಗಿ ತಿಳಿಸಿಕೊಡುತ್ತಿದೆ. 1) ತಂದೆತಾಯಿಗಳಿಗೆ ಹಾಗೂ ಹಿರಿಯರಿಗೆ ಪ್ರತಿನಿತ್ಯ ವಂದಿಸಬೇಕು, 2) ಧರ್ಮಕ್ಕೆ ವಿರುದ್ಧವಲ್ಲದ ಹಿರಿಯರ ಮಾತನ್ನು ನಡೆಸಲೇಬೇಕು. 3) ಕೊಟ್ಟ ಮಾತಿನಂತೆ ನಡೆಯಲೇಬೇಕು.

 

ಪತಿಸೇವೆ ಪತ್ನಿಗೆ ಕಡ್ಡಾಯ:

ರಾಮನು ವನವಸಕ್ಕೆಂದು ಹೊರಟುನಿಂತಾಗ, ಅವನ ತಾಯಿಯಾದ ಕೌಸಲ್ಯೆಯು ತಾನೂ ಸಹ ರಾಮನೊಂದಿಗೆ ಬರುವುದಾಗಿ ಹಟಹಿಡಿಯುತ್ತಾಳೆ. ಆಗ ತನ್ನ ತಾಯಿಗೆ ಧರ್ಮಬೋಧನೆಯನ್ನು ಮಾಡುತ್ತಾ ಪತಿಯ ಸೇವೆಯನ್ನು ಮಾಡುವುದು ಪತ್ನಿಯ ಆದ್ಯಕರ್ತವ್ಯವೆಂಬುದನ್ನು ಬಹುವಿಧದಲ್ಲಿ ತಿಳಿಸಿಹೇಳುತ್ತಾನೆ.


ಗುರುವಿನ ಸೇವೆಯನ್ನು ಶಿಷ್ಯ, ತಂದೆತಾಯಿಯರ ಸೇವೆಯನ್ನು ಮಕ್ಕಳು, ಅಣ್ಣ-ಅಕ್ಕಂದಿರ ಸೇವೆಯನ್ನು ತಮ್ಮ-ತಂಗಿಯರು, ಗಂಡನ ಸೇವೆಯನ್ನು ಪತ್ನಿ- ಹೀಗೆ ತನಗಿಂತ ಹಿರಿಯರಾದ ಎಲ್ಲರ ಸೇವೆಯನ್ನು ಕಿರಿಯರಾದವರು ಮಾಡಲೇಬೇಕು. ಇದು ಶಾಸ್ತ್ರ ವಿಧಿಸಿದ ನಿಯಮ. ಇದನ್ನು ಎಲ್ಲರೂ ಪಾಲಿಸಿದಲ್ಲಿ ಸಮಾಜದಲ್ಲಿ ಪರಸ್ಪರ ದ್ವೇಷ-ಅಸೂಯೆಗಳಿಗೆ ಅವಕಾಶವೇ ಇರದು.


ಪ್ರಜಾಪ್ರಭುತ್ವಕ್ಕಿಂತ ಧರ್ಮಪ್ರಭುತ್ವ ದೊಡ್ಡದು:

ಪಿತೃವಾಕ್ಯ ಪರಿಪಾಲನೆಗಾಗಿ ವನಕ್ಕೆ ತೆರಳುತ್ತಿರುವ ತಮ್ಮ ಪ್ರಭುವಾದ ರಾಮನನ್ನು ಅಯೋಧ್ಯೆಯ ಜನರೆಲ್ಲ ಅನುಸರಿಸಿ ಬಂದರು. ರಾಮನೇ ಪಟ್ಟಾಭಿಷಿಕ್ತನಾಗಬೇಕೆಂಬುದು ಅವರೆಲ್ಲರ ಒಮ್ಮತದ ಅಭಿಪ್ರಾಯವೂ ಆಗಿತ್ತು. ಅಂದಿನ ಅಸಂಖ್ಯ ಪ್ರಜೆಗಳಲ್ಲಿ ಕೈಕೇಯೀ ಹಾಗೂ ಮಂಥರೆಯನ್ನು ಹೊರತುಪಡಿಸಿ ಮಿಕ್ಕವರೆಲ್ಲರ ಮತವೂ ರಾಮನೇ ಪಟ್ಟಾಭಿಷಿಕ್ತನಾಗಬೇಕೆಂಬುದಾಗಿತ್ತು. ರಾಮನ ಪರವಾಗಿ ಚಲಾವಣೆಯಾಗದಿದ್ದ ಮತಗಳು ಎರಡು ಮಾತ್ರ. ಪ್ರಜಾಪ್ರಭುತ್ವದ ಇಂದಿನ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದರೂ ಗೆದ್ದಂತೆ. ಒಂದು ಮತವಿಲ್ಲದಿದ್ದರೂ ಒಲ್ಲೆ ಎಂಬುದು ರಾಮನ ನಿಲುವು! ಇದರ ಆಂತರ್ಯ ಇಷ್ಟು. ರಾಮನ ಪಟ್ಟಾಭಿಷೇಕಕ್ಕೆ ಅಸಂಖ್ಯ ಪ್ರಜೆಗಳ ಒಮ್ಮತವೇನೋ ಇದ್ದೇ ಇದೆ. ಇದನ್ನು ಮೀರಿ ತನ್ನ ತಂದೆಯ ಮಾತನ್ನು ನಡೆಸಬೇಕಿದೆ. ಕೊಟ್ಟಮಾತನ್ನು ತಪ್ಪದಿರುವುದೇ ಧರ್ಮ. ಪ್ರಜಾಪ್ರಭುತ್ವಕ್ಕೆ ಗೌರವವನ್ನು ಕೊಡಬೇಕು. ಆದರೆ ಅದಕ್ಕೂ ಮಿಗಿಲಾದದ್ದು ಧರ್ಮಪ್ರಭುತ್ವ ಎಂಬುದನ್ನು ಮರೆಯಬಾರದು ಎಂಬುದನ್ನು ರಾಮನು ಸ್ವತಃ ನಡೆದು ತೋರಿಸಿದ.

 

ತಾನೊಬ್ಬನೇ ಊಟ ಮಾಡಬಾರದು:

ರಾಮನನ್ನು ಮರಳಿ ರಾಜ್ಯಕ್ಕೆ ಕರೆತರಬೇಕೆಂದು ಭರತನು ರಾಮನ ಬಳಿಗೆ ಬಂದ. ಆಗ ರಾಮನು ಭರತನಿಗೆ ವಿವಿಧರೀತಿಯಲ್ಲಿ ರಾಜನೀತಿಯನ್ನು ಉಪದೇಶಿಸಿದ. ಆಗ ರಾಮನು ಹೇಳುವ ಒಂದು ಮಾತು ಹೀಗಿದೆ - ‘ಕಚ್ಚಿತ್ ಸ್ವಾದುಕೃತಂ ಭೋಜ್ಯಮೇಕೋ ನಾಶ್ನಾಸಿ ರಾಘವ’- “ಎಲೈ ಭರತ! ನೀನು ರುಚಿಕರವಾದದ್ದನ್ನು ನೀನೊಬ್ಬನೇ ಉಣ್ಣುತ್ತಿಲ್ಲ ತಾನೆ?”.


ಯಾರೂ ಸಹ ತಾನೊಬ್ಬನೇ ಉಣ್ಣಬಾರದು. ಮತ್ತೊಬ್ಬರಿಗೆ ಉಣಬಡಿಸಿ, ತಾನು ಉಣ್ಣಬೇಕು. ಅಥವಾ ಪಂಕ್ತಿಯಲ್ಲಿ ಇತರರೊಂದಿಗೆ ಸೇರಿ ಉಣ್ಣಬೇಕು. ತನಗೊಬ್ಬನಿಗೇ ಅಡುಗೆ ಮಾಡಿಕೊಳ್ಳುವುದು ಸಹ ಸರಿಯಲ್ಲ. ಅಥವಾ ತಾನೊಬ್ಬನೇ ಏಕಾಂತದಲ್ಲಿ ಉಣ್ಣುವುದು ಸಹ ಸರಿಯಲ್ಲ. ಗೀತೆಯಲ್ಲಿ ಕೃಷ್ಣ ಹೇಳಿದ್ದೂ ಇದನ್ನೇ- ‘ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್’- “ತನಗೊಬ್ಬನಿಗಾಗಿ ಮಾತ್ರವೇ ಅಡುಗೆ ಮಾಡಿಕೊಳ್ಳುವವನು ಪಾಪವನ್ನೇ ಉಣ್ಣುತ್ತಾನೆ”.


ಹಾಗಾಗಿ, ಅತಿಥಿ-ಅಭ್ಯಾಗತರೊಂದಿಗೆ ಉಣ್ಣಬೇಕು. ಅದೂ ಆಗದಿದ್ದಲ್ಲಿ ಬಂಧು-ಮಿತ್ರರೊಂದಿಗಾದರೂ ಉಣ್ಣಬೇಕು. ತಾನೊಬ್ಬನೇ ಎಂದಿಗೂ ಉಣ್ಣಬಾರದು. ಸರಕಾರಕ್ಕೆ ಕರವನ್ನು ಸಲ್ಲಿಸಿ, ಉಳಿದ ಹಣವನ್ನು ತನಗಾಗಿ ವ್ಯಯಿಸಬೇಕು. ಆಗ ಮಾತ್ರ ಆ ಹಣಕ್ಕೆ ಪಾವಿತ್ರ್ಯ ಬರುತ್ತದೆ. ಅದರಂತೆ ಮತ್ತೊಬ್ಬರೊಂದಿಗೆ ಸೇರಿ ಉಂಡಾಗ ಮಾತ್ರ ಆ ಅನ್ನಕ್ಕೆ ಪಾವಿತ್ರ್ಯ ಬರುತ್ತದೆ.


ಪರಸ್ತ್ರೀಯರಲ್ಲಿ ಭಕ್ತಿಗೌರವಗಳು:

ಲಕ್ಷ್ಮಣನಿಂದ ಕಲಿಯಬೇಕಾದ ಬಹುದೊಡ್ಡ ಪಾಠವೆಂದರೆ- ಬ್ರಹ್ಮಚರ್ಯ, ಹಿರಿಯರ ಸೇವೆ, ಪರಸ್ತ್ರೀಯರಲ್ಲಿ ಮಾತೃಸದೃಶಭಕ್ತಿ ಇತ್ಯಾದಿ. 

ಸೀತೆಯನ್ನು ಅಪಹರಿಸಿದ ರಾವಣನು ಪುಷ್ಪಕವಿಮಾನದಲ್ಲಿ ಲಂಕೆಗೆ ಹೋಗುತ್ತಿದ್ದಾಗ, ಮಾರ್ಗಮಧ್ಯದಲ್ಲಿ ಸೀತೆಯು ತನ್ನ ಆಭರಣಗಳನ್ನು ಒಂದು ಗಂಟು ಮಾಡಿ ಕೆಳಗೆ ಹಾಕುತ್ತಾಳೆ. ಅದು ಸುಗ್ರೀವನ ಕೈಸೇರುತ್ತದೆ. ಮುಂದೆ ಸೀತಾನ್ವೇಷಣೆ ಮಾಡುತ್ತಾ ಪಂಪಾಕ್ಷೇತ್ರಕ್ಕೆ ಬಂದ ರಾಮನೊಂದಿಗೆ ಸುಗ್ರೀವನ ಸಖ್ಯವಾಗುತ್ತದೆ. ಆ ಸಂದರ್ಭದಲ್ಲಿ ಸೀತೆಯು ಕೆಳಗೆ ಹಾಕಿದ್ದ ಆಭರಣದ ಗಂಟನ್ನು ಸುಗ್ರೀವನು ರಾಮನಿಗೆ ನೀಡುತ್ತಾನೆ. ಅದು ಸೀತೆಯದ್ದೇ ಎಂಬುದನ್ನು ನಿಶ್ಚಯಿಸಿಕೊಳ್ಳಲೆಂದು ರಾಮನು ಲಕ್ಷ್ಮಣನನ್ನು ಕೇಳಿದಾಗ, ಲಕ್ಷ್ಮಣನು ಹೀಗೆ ನುಡಿಯುತ್ತಾನೆ - 

ನಾಹಂ ಜಾನಾಮಿ ಕೇಯೂರೇ ನಾಹಂ ಜಾನಾಮಿ ಕುಂಡಲೇ | 

ನೂಪುರೇ ತ್ವಭಿಜಾನಾಮಿ ನಿತ್ಯಂ ಪಾದಾಭಿವಂದನಾತ್ ||

“ನಾನು ನನ್ನ ಅತ್ತಿಗೆಯ ತೋಳ್ಬಳೆಯನ್ನಾಗಲೀ, ಓಲೆಯನ್ನಾಗಲೀ ಅರಿಯೆ. ಆದರೆ ನಿತ್ಯವೂ ನಾನು ನನ್ನ ಅತ್ತಿಗೆಯ ಪಾದಕ್ಕೆ ಎರಗುತ್ತಿದ್ದುದರಿಂದ ಆಕೆಯ ಕಾಲುಂಗರವನ್ನು ಮಾತ್ರ ಬಲ್ಲೆ”.


ತನ್ನ ಅತ್ತಿಗೆಯ ಮೇಲೆ ಎಂತಹ ಉದಾತ್ತಭಕ್ತಿ ಲಕ್ಷ್ಮಣನದು ಎಂಬುದು ಇದರಿಂದ ತಿಳಿಯುತ್ತದೆ. ನಮಗಿಂತ ಹಿರಿಯರಾದ ಪರಸ್ತ್ರೀಯರಲ್ಲಿ ಮಾತೃ ಸದೃಶಭಕ್ತಿಯನ್ನೂ, ಕಿರಿಯರಲ್ಲಿ ಪುತ್ರಿ ಸದೃಶ ಬುದ್ಧಿಯನ್ನೂ ಹೊಂದಬೇಕಾದ್ದು ಎಲ್ಲ ಪುರುಷರ ಕರ್ತವ್ಯ. ಅದರಂತೆ ಸ್ತ್ರೀಯರೂ ಸಹ ಪರಪುರುಷರಲ್ಲಿ ಯಥಾಯೋಗ್ಯವಾದ ಬುದ್ಧಿಯನ್ನು ಹೊಂದಬೇಕು. ಸಾಧಕ ಸ್ತ್ರೀಪುರುಷರಿಗೆ ಲಕ್ಷ್ಮಣನ ಈ ಮಾತು ಮಂತ್ರದಂತೆ ಅನುಗ್ರಹಿಸುವುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.


ಪತಿ-ಪತ್ನಿಯರನ್ನು ಅಗಲಿಸಬಾರದು:

ವಾಲಿಯು ತನ್ನ ತಮ್ಮನಾದ ಸುಗ್ರೀವನನ್ನು ದೂರ ಮಾಡಿ, ಆತನ ಪತ್ನಿಯನ್ನು ತಾನು ಕೂಡಿದ್ದನು. ಪತಿ-ಪತ್ನಿಯರನ್ನು ದೂರ ಮಾಡಿದ್ದೇ ಒಂದು ಮಹಾಪಾಪ. ತಮ್ಮನ ಪತ್ನಿಯೆಂದರೆ ತಂಗಿ ಅಥವಾ ಪುತ್ರಿಯಂತೆ. ಅಂತಹ ಪುತ್ರಿ ಸದೃಶಳಾದವಳ ಸಂಗ ಮಾಡಿದ್ದು ಸಹ ಮತ್ತೊಂದು ಘೋರ ಅಪರಾಧ.


ಪತಿ-ಪತ್ನಿಯರನ್ನು ಅಗಲಿಸುವವರನ್ನು ರಾಮನು ಎಂದಿಗೂ ಕ್ಷಮಿಸಲಾರ. ಅಂತಹ ಅಪರಾಧ ಮಾಡಿದವರು ಅವನ ಶಿಕ್ಷೆಗೆ ಅವರು ಒಂದಲ್ಲ ಒಂದು ದಿನ ಗುರಿಯಾಗಲೇಬೇಕು. ಒಂದು ವೇಳೆ ಪತಿ-ಪತ್ನಿಯರಲ್ಲಿ ಯಾರೊಬ್ಬರೇ ಆಗಲಿ, ಸ್ವೇಚ್ಛೆಯಿಂದ ಹಾಗೂ ಕ್ಷುಲ್ಲಕಕಾರಣದಿಂದ ದೂರಾಗಿದ್ದರೆ, ಅವರನ್ನೂ ಸಹ ತಾನು ಕ್ಷಮಿಸುವುದಿಲ್ಲ ಎಂಬ ದೊಡ್ಡ ಸಂದೇಶವನ್ನು ಶ್ರೀರಾಮಚಂದ್ರ ನೀಡುತ್ತಿರುವನು.


ಅಧರ್ಮದ ಪಾಲುದಾರರಾಗಬಾರದು:

ಪರಮದುಷ್ಟನಾದವನು ರಾವಣ. ಆತನ ತಮ್ಮ ವಿಭೀಷಣನಾದರೋ ಪರಮಧಾರ್ಮಿಕ. ಸೀತೆಯನ್ನು ಮರಳಿ ರಾಮನಿಗೆ ಒಪ್ಪಿಸುವಂತೆ ತನ್ನ ಅಣ್ಣನಿಗೆ ಧರ್ಮಬೋಧನೆ ಮಾಡಿದ. ರಾವಣ ಹಾಗೂ ಇಂದ್ರಜಿತ್ ಇಬ್ಬರೂ ವಿಭೀಷಣನನ್ನು ಬಹುವಾಗಿ ನಿಂದಿಸಿದರು. ಆಗ ವಿಭೀಷಣನು ತನ್ನ ಮನೆ, ಆಸ್ತಿ, ಸಂಪತ್ತೆಲ್ಲವನ್ನೂ ತೊರೆದು ರಾಮನ ಬಳಿ ಬಂದ.


ಇಂದು ಪಿತ್ರಾರ್ಜಿತ ಆಸ್ತಿಯ ಭಾಗಕ್ಕೆ ಅಣ್ಣತಮ್ಮಂದಿರು ಹೊಡೆದಾಡುವರು. ಆದರೆ ತಮ್ಮಲ್ಲಿ ಯಾರಾದರೂ ಅಧರ್ಮದ ಕಾರ್ಯವನ್ನು ಮಾಡಿದರೆ, ಅದಕ್ಕೆ ಇತರರೂ ಜೊತೆಯಾಗುವರು. ಧರ್ಮಕ್ಕಾಗಿ ಹಾಗೂ ಧರ್ಮದ ಪ್ರಭುವಾದ ದೇವರಿಗಾಗಿ ಆಸ್ತಿಯನ್ನೂ ತ್ಯಜಿಸುವ, ಬಂಧು ವ್ಯಾಮೋಹದಿಂದ ಅಧರ್ಮದ ಪಾಲುದಾರರಾಗದ ಮನಃಸ್ಥಿತಿಯನ್ನು ನಾವು ತಾಳಬೇಕೆಂದು ವಿಭೀಷಣನಿಂದ ನಾವು ಕಲಿಯಬೇಕು.


ದಾಸ್ಯಭಾವ:

ಸಮುದ್ರೋಲ್ಲಂಘನ ಮಾಡಿ, ಲಂಕೆಗೆ ಬಂದ ಹನುಮಂತನು ರಾವಣನ ಸಭೆಯಲ್ಲಿ ತನ್ನನ್ನು ಪರಿಚಯಿಸಿಕೊಳ್ಳುವುದು ಹೀಗೆ- ‘ದಾಸೋಽಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ’- “ಲೀಲಾಜಾಲವಾಗಿ ಎಲ್ಲವನ್ನೂ ಮಾಡುವ, ಕೋಸಲಾಧಿಪತಿಯಾದ ರಾಮನ ದಾಸ ನಾನು”. 

ಶತ್ರುವಿನ ಸಭೆಯಲ್ಲೂ ಸತ್ಯವನ್ನು ಧೈರ್ಯವಾಗಿ ಹೇಳಿದ್ದು ಹನುಮಂತನ ಮತ್ತೊಂದು ಪರಾಕ್ರಮವೇ ಸರಿ. ತನ್ನನ್ನು ರಾಮನ ದಾಸನೆಂದು ಹೇಳಿಕೊಳ್ಳುವ ಮೂಲಕ ತಾನು ಎಂದಿಗೂ ಭಗವಂತನ ದಾಸನೇ ಹೊರತು, ಅವನಿಗೆ ಸಮನಾಗಲೀ, ಉತ್ತಮನಾಗಲೀ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂಬುದನ್ನು ತಿಳಿಸುತ್ತಿರುವನು. ಹನುಮಂತನಿಂದ ಶಿಕ್ಷಿತರಾದ ಎಲ್ಲ ವಾನರರೂ ಸಹ ‘ಭಗವಂತನು ಈಶ, ನಾವೆಲ್ಲ ದಾಸ’ ಎಂದೇ ಉಪಾಸನೆ ಮಾಡಿರುವರು. ಈ ಮೂಲಕ ಈಶ-ದಾಸಭಾವವೇ ತಾರಕೆ ಎಂದು ಸಿದ್ಧವಾಗುತ್ತದೆ.


ಸೀತಾರಾಮರು ವನವಾಸದಿಂದ ಹಿಂತಿರುಗಿ, ಸಿಂಹಾಸನದಲ್ಲಿ ಪಟ್ಟಾಭಿಷಿಕ್ತರಾದ ಮೇಲೆ, ಎಲ್ಲರಿಗೂ ಅವರವರಿಗೆ ಯೋಗ್ಯವಾದ, ಅವರವರು ಬಯಸಿದ ಉಡುಗೊರೆಗಳನ್ನು ರಾಮನು ನೀಡುತ್ತಾನೆ. ಪರಿಪೂರ್ಣಸೇವೆಯನ್ನು ಮಾಡಿದ, ಏನನ್ನೂ ಬಯಸದ ಹನುಮಂತನಿಗೆ ಮಾತ್ರ ಮುಂದೆ ಬ್ರಹ್ಮಪದವಿಯನ್ನು ರಾಮನು ಅನುಗ್ರಹಿಸುತ್ತಾನೆ. ಆಗ ಹನುಮಂತ ಮಾಡಿದ ಪ್ರಾರ್ಥನೆ ಹೀಗಿದೆ- ಪ್ರವರ್ಧತಾಂ ಭಕ್ತಿರಲಂ ಕ್ಷಣೇ ಕ್ಷಣೇ ತ್ವಯೀಶ ಮೇ ಹ್ರಾಸವಿವರ್ಜಿತಾ ಸದಾ-  ‘ಹೇ ಸ್ವಾಮಿ! ನಿನ್ನಲ್ಲಿ ನನ್ನ ಭಕ್ತಿಯು ಕ್ಷಣಕ್ಷಣಕ್ಕೂ ಚೆನ್ನಾಗಿ ವೃದ್ಧಿಯಾಗಲಿ. ಅದು ಎಂದಿಗೂ ಕುಗ್ಗದಿರಲಿ’. 

ತತ್ತ್ವವಾದವನ್ನು ಜಗತ್ತಿನಲ್ಲಿ ಪುನಃಸ್ಥಾಪಿಸಿದ ಜಗದ್ಗುರು ಶ್ರೀಮಧ್ವಭಗವತ್ಪಾದಾಚಾರ್ಯರು ಈ ಪ್ರಸಂಗವನ್ನು ತಮ್ಮ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಮನೋಜ್ಞವಾಗಿ ನಿರೂಪಿಸಿರುವರು. ಈ ಮೂಲಕ ನಮ್ಮಲ್ಲಿರುವ ಭಗವದ್ಭಕ್ತಿಯನ್ನು ಪ್ರತಿಕ್ಷಣವೂ ಹೆಚ್ಚು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಯಥಾಯೋಗ್ಯವಾಗಿ ಪ್ರಯತ್ನಿಸಬೇಕು. ಭಗವಂತನಿಗೂ ತಮಗೂ ಸಾಮ್ಯವನ್ನೋ, ಐಕ್ಯವನ್ನೋ, ಆಧಿಕ್ಯವನ್ನೋ ಹನುಮಂತ ಮೊದಲಾದ ಯಾವ ಸಜ್ಜೀವರೂ ಮಾಡಿರಲಿಲ್ಲ. ಬದಲಾಗಿ ಭಗವಂತನಿಗೂ ತಮಗೂ ಇರುವ ಮಹದಂತರವನ್ನು ತಿಳಿದೇ ಉಪಾಸನೆ ಮಾಡಿದ್ದರು. ಅಂತಹ ಉಪಾಸನೆಯೇ ತಾರಕ ಎನ್ನುವುದನ್ನು ಮರೆಯಬಾರದು.


*

ಹೀಗೆ ರಾಮಾಯಣದ ಪ್ರತಿಯೊಂದು ಪಾತ್ರವೂ, ಪ್ರಸಂಗವೂ ಸಹ ನಮಗೆ ಅನೇಕಾನೇಕ ಪಾಠಗಳನ್ನು ಕಲಿಸಿಕೊಡಬಲ್ಲದು. ರಾಮಾಯಣವನ್ನು ಕೇವಲ ಕಥೆಯನ್ನಾಗಿ ಕೇಳದೇ, ಅದರ ತಾತ್ತ್ವಿಕ ಅರ್ಥಗಳನ್ನು ತಿಳಿಯುವ ದೃಷ್ಟಿಕೋನ ನಮ್ಮದಾಗಬೇಕು. ತಿಳಿದು ಅನುಷ್ಠಾನಕ್ಕೆ ತಂದುಕೊಳ್ಳಬೇಕು. ಆಗಷ್ಟೇ ರಾಮರಾಜ್ಯದತ್ತ ನಮ್ಮ ಹೆಜ್ಜೆ. 

****



- ಸುದರ್ಶನ ಕಂಬಾಲೂರು


ಲೇಖಕರ ಸಂಕ್ಷಿಪ್ತ ಪರಿಚಯ:

ವಿದ್ವಾನ್ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ರಲ್ಲಿ ದ್ವೈತವೇದಾಂತ ಹಾಗೂ ವಿದ್ವಾನ್ ಶ್ರೀ ಕೇಶವ ಉಪಾಧ್ಯಾಯರಲ್ಲಿ ಸಮಗ್ರ ಋಕ್ಸಂಹಿತಾ ಅಧ್ಯಯನ ಮಾಡಿದ್ದಾರೆ, ಲೌಕಿಕವಾಗಿ ಬಿ.ಇ., ಎಂ.ಟೆಕ್, ಎಂ.ಎ (ಸಂಸ್ಕೃತ) ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ  ಸಾಫ಼್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಲ್ಲಿ ಪ್ರಾಚೀನ ಹಸ್ತಪ್ರತಿಗ್ರಂಥಗಳ ಸಂಶೋಧನೆ ಹಾಗೂ ಪ್ರಕಟಣೆಗಳನ್ನು ಮಾಡಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top