ತುಳುನಾಡು ಎಂದಾಕ್ಷಣ ಮನಸ್ಸಿಗೆ ಬರುವುದು ಭೂತ ಕೋಲ, ತಂಬಿಲ, ಯಕ್ಷಗಾನಗಳೇ ಮೊದಲಾದ ವಿಶಿಷ್ಟ ಆಚರಣೆಗಳು. ಕೇರಳ, ಕರ್ನಾಟಕಗಳ ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ಆಚರಿಸುವ ಹಬ್ಬಗಳಲ್ಲಿ ಪತ್ತನಾಜೆ ಕೂಡಾ ಒಂದು.
ಪತ್ತನಾಜೆ ಅಂದರೆ ತುಳುವಿನಲ್ಲಿ, ಹತ್ತನೇ ಅವಧಿ ಎಂದರ್ಥ. ಅಂದರೆ ವೃಷಭ ಮಾಸದ ಹತ್ತನೇ ದಿನ. ಬಿಸು(ವಿಷು) ಎಂಬ ಹಬ್ಬದೊಂದಿಗೆ ಸೌರಮಾನ ಯುಗಾದಿಯಂದು ಆರಂಭವಾಗುವ ಹೊಸ ವರ್ಷದ ಅನಂತರದ ಹಬ್ಬವೇ ಪತ್ತನಾಜೆ. ಇದು ಕೃಷಿ ಪ್ರಧಾನವಾದ ಈ ತುಳುನಾಡಿನ ಪ್ರಮುಖ ಹಬ್ಬವಾಗಿದೆ.
ಭೂತಾರಾಧನೆ ತುಳುನಾಡಿನ ಮಹತ್ವದ ಆಚರಣೆಗಳಲ್ಲೊಂದು. ದೈವವನ್ನು ನಂಬುತ್ತಾ, ಆರಾಧಿಸುತ್ತಾ ಸುಖವಾಗಿ ಬಾಳುವವರನೇಕರು. ಅಂತೆಯೇ ಭೂತಕೋಲ, ಒತ್ತೆ ಕೋಲ, ನೇಮಾದಿಗಳನ್ನು ಮಾಡುತ್ತಾ ಬಂದರೂ, ಈ ದಿನದ ನಂತರದಲ್ಲಿ ಅವುಗಳನ್ನು ಮಾಡುವಂತಿಲ್ಲ. ಮಾಡಿದರೂ ದೈವವು ಸ್ವೀಕರಿಸಲಾರದೆಂಬುದು ತುಳುವರ ನಂಬಿಕೆ. ಪತ್ತನಾಜೆಯ ಮುಂದಿನ ದಿನಗಳಲ್ಲಿ ದೈವಗಳು ಭೂಲೋಕದ ಸವಾರಿ ಮುಗಿಸಿ ತಮ್ಮ ಲೋಕಗಳಿಗೆ ತೆರಳುತ್ತವೆಯೆಂದೂ, ಮತ್ತೆ ಸೋಣ ಸಂಕ್ರಾಂತಿಯ ದಿನ ಧರೆಗಿಳಿಯುವವೆಂದೂ ವದಂತಿಯಿದೆ.
ಪತ್ತನಾಜೆ ಅಂದರೆ ಬೇಸಿಗೆ ಮತ್ತು ಮಳೆಗಾಲಗಳು ಸಂಧಿಸುವ ಕಾಲ. ಅಂದರೆ, ಬೇಸಿಗೆಯ ಬೇಗೆ ಮುಗಿದು ಮಳೆಗಾಲದ ತಂಪು ಭುವಿಯನ್ನಾವರಿಸುವ ಕಾಲ. ಒಣಗಿದ್ದ ಸಸ್ಯಗಳು ಮತ್ತೆ ಚಿಗುರೊಡೆದು ಹಸುರಾಗಿ ಕಂಗೊಳಿಸೆ ದಿನಗಣನೆಯಾದರೂ, ಬಿಸಿಲ ಝಳವನ್ನನುಭವಿಸಿದ ನಮಗೆ ಕ್ಷಣಗಣನೆಯೆಂಬಂತೆ ಭಾಸವಾಗುವ ಕಾಲ. ಸಂಭ್ರಮಿಸುವ, ಬೇಸಿಗೆಯ ಬೀಳ್ಕೊಟ್ಟು, ಮಳೆಗಾಲವ ಸ್ವಾಗತಿಸುವ ದಿನವೇ ಪತ್ತನಾಜೆ.
ವರ್ಷದ ಮೊದಲ ಬೆಳೆ ಏಣೆಲು ಕೃಷಿ. ಅದು ಸಂಪೂರ್ಣವಾಗಿ ಮಳೆಯ ಆಧಾರಿತ. ವಿಷು ಹಬ್ಬದ ಅನಂತರದಲ್ಲಿ ಬರುವ ಮಳೆಯನ್ನಾಧರಿಸಿ ಗದ್ದೆ ಬೇಸಾಯಗಳ ಪ್ರಾರಂಭ. ವಿಷು ಹಬ್ಬದ ಮಳೆಯ ನಂತರ ಪತ್ತನಾಜೆಯ ದಿನವೇ ಮಳೆ. ಇಂತಹ ಪತ್ತನಾಜೆಯ ದಿನ ಹತ್ತು ಹನಿಗಳಾದರೂ ಮಳೆ ಬಿದ್ದರೆ ಆ ವರ್ಷ ಉತ್ತಮ ಮಳೆಯಾಗುತ್ತದೆ ಎಂದು ಜನಪದರ ನಂಬುಗೆ.
ದೇವರು, ನಾಗರುಗಳ ಆರಾಧನೆ ಮಾಡುವ ತುಳುವರು, ವರ್ಷಂಪ್ರತಿ ಜಾತ್ರೆ, ತಂಬಿಲಗಳನ್ನೊಪ್ಪಿಸುವುದು ರೂಢಿ. ಆದರದು ಪತ್ತನಾಜೆಯಂದು ಮುಕ್ತಾಯ. ಅಂದರೆ ಪತ್ತನಾಜೆಯ ಮುನ್ನ ಎಲ್ಲಾ ಉತ್ಸವ, ತಂಬಿಲ ಸೇವೆಗಳೂ ಶ್ರೀ ದೇವರಿಗೆ ಸಂದಿರುತ್ತವೆ. ಕೆಲವೆಡೆ ಪತ್ತನಾಜೆಯ ಅದೇ ದಿನದಂದು ಸಲ್ಲಿಸುವುದೂ ಉಂಟು.
ತುಳುನಾಡಿನ ಕೀರ್ತಿಯನ್ನು ಎಲ್ಲೆಡೆಯಲ್ಲಿಯೂ ಹಬ್ಬಿಸಿದ, ಗಂಡುಕಲೆಯೆಂದೇ ಪ್ರಸಿದ್ಧಿ ಪಡೆದಂತಹ ಕಲೆ ಯಕ್ಷಗಾನ. ಪ್ರಸಿದ್ಧ ದೇವಾಲಯಗಳಿಂದ ಹೊರಡುವ, ಮೇಳಗಳದೆಷ್ಟೋ. ಅವುಗಳ ಕಲಾವಿದರು ಗೆಜ್ಜೆ ಬಿಚ್ಚುವ ದಿನ. ಮೇಳದ ತಿರುಗಾಟಕ್ಕೆ ತಾತ್ಕಾಲಿಕ ಮಂಗಳಾಚರಣೆಗೈಯುವ ದಿನ. ಈ ಪತ್ತನಾಜೆಯಂದು, ಮೇಳಗಳನ್ನು ಹೊಂದಿರುವ ದೇವಾಲಯಗಳಲ್ಲಿ ಆಯಾ ಮೇಳದವರು ಒಂದು ಪ್ರದರ್ಶನವನ್ನಿತ್ತು, ಆ ವರ್ಷದ ಕೊನೆಯ ಕಲಾ ಸೇವೆಯನ್ನು, ಪಾಲಿಸುವ ದೇವರಿಗೆ ಸೇವಾರೂಪವಾಗಿ ಭಕ್ತಿಯಿಂದ ಅರ್ಪಿಸಿ ಗೆಜ್ಜೆ ಬಿಚ್ಚುತ್ತಾರೆ. ಮುಂದೆ ದೀಪಾವಳಿಯ ನಂತರವೇ ಮತ್ತೆ ಮೇಳದ ತಿರುಗಾಟ ಆರಂಭ.
ಹೀಗೆ ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ತುಳುನಾಡಿನ ಜನಜೀವನ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ತೋರಿಸುವ ಹಬ್ಬವಿದೆಂದರೆ ತಪ್ಪಾಗಲಾರದು. ಇಂತು ತುಳುನಾಡ ಸಂಭ್ರಮದ ಪರ್ಬ ಪತ್ತನಾಜೆ.
-ಶ್ರೀಜಾ ಉದನೇಶ್, ಪಳ್ಳತ್ತಡ್ಕ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ