ಪುತ್ತೂರು: ವಿದುಷಿ ಮುಂಜಳ ಸುಬ್ರಮಣ್ಯ ಅವರ ಸಾರಥ್ಯದಲ್ಲಿ ಪುತ್ತೂರಿನಲ್ಲಿ ಪ್ರವರ್ತಿತ ನಾಟ್ಯರಂಗ ನೃತ್ಯ ಕಲಾ ಶಾಲೆಯ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ವಿಶ್ವ ನೃತ್ಯ ದಿನದ ಅಂಗವಾಗಿ ಗುರುವಂನಾ ವಿಶಿಷ್ಟ ಕಾರ್ಯಕ್ರಮ ನೆರವೇರಿತು.
ಹಿರಿಯ ನೃತ್ಯ ಗುರುಗಳಾದ ದೇವಸ್ಯ ಶಿವರಾಮ ಭಟ್ ಇವರ ವಿಟ್ಲದ ಸ್ವಗೃಹ ವನಸಿರಿಗೆ ತೆರಳಿ ಗುರುವಂದನೆ ಸಮರ್ಪಿಸಲಾಯಿತು.
74ರ ಹರೆಯದ ಶಿವರಾಮ ಭಟ್ ಇವರು ತಮ್ಮ ಆರನೇ ವಯಸ್ಸಿನಿಂದಲೇ ನೃತ್ಯವನ್ನು ಅಭ್ಯಸಿಸಿದವರು. ಗುರುಗಳಾದ ರಾಜನ್ ಅಯ್ಯರ್, ರಾಜರತ್ನಂ ಪಿಳ್ಳೆಯವರ ಬಳಿ ಪ್ರಾರಂಭದ ಹೆಜ್ಜೆಗಳನ್ನು ಕಲಿತು ಬಳಿಕ ಗುರುಗಳಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಇವರಲ್ಲಿ ಸುದೀರ್ಘವಾಗಿ ನೃತ್ಯವನ್ನು ಅಭ್ಯಸಿಸಿದರು.
ಸುಮಾರು 37 ವರ್ಷಗಳ ಕಾಲ ನೃತ್ಯ ತರಗತಿಗಳನ್ನು ನಡೆಸಿದ ಶ್ರೀಯುತರು ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಯೋಗ, ನೃತ್ಯ, ಚಿತ್ರಕಲೆ ಇತ್ಯಾದಿಗಳಲ್ಲಿ ಆಸಕ್ತಿಯುತವಾಗಿ ತೊಡಗಿಕೊಂಡಿದ್ದಾರೆ.
ತಮ್ಮ ವಯಸ್ಸನ್ನು ಮರೆತು, 'ಬಾಗಿಲನ್ನು ತೆರೆದು ಸೇವೆಯನ್ನು ಕೊಡು ಹರಿಯೇ' ಸಾಲಿಗೆ ಹೆಜ್ಜೆ ಹಾಕಿದ ಇವರು ಭರತನಾಟ್ಯ ಕಲಿಕೆ ನೀಡಿದ ಖುಷಿ, ಆರೋಗ್ಯ, ಸಮಾಧಾನದ ಬದುಕಿನ ಅನುಭವಗಳನ್ನು ಕಲಾಶಾಲೆಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕಲೆ ಅವರಲ್ಲಿ ತುಂಬಿದ ಚೈತನ್ಯದೊಂದಿಗೆ ಮನತುಂಬಿ ಹಾರೈಸಿ ಬೀಳ್ಕೊಟ್ಟ ಸಂದರ್ಭ ತೆರಳಿದವರ ನೆನಪಿನಂಗಳದಲ್ಲಿ ಸದಾ ಸ್ಮರಣೀಯವಾಗಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ