ಮೂಡುಬಿದರೆ: ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸಂಕೋಚ ಸ್ವಭಾವ ಹಾಗೂ ಸ್ವಯಂ ಜಾಗೃತಿಯ ಕೊರತೆಯಿಂದಾಗಿ ಮಹಿಳೆಯರಲ್ಲಿ ಕ್ಯಾನ್ಸರ್ನ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇಂತಹ ಜಾಗೃತಿ ಕ್ಯಾಂಪ್ಗಳು ಒಂದು ದಿನಕ್ಕೆ ಸೀಮಿತವಾಗದೇ, ಹಂತ ಹಂತವಾಗಿ ಮುಂದುವರಿಯಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಆಳ್ವಾಸ್ ಹೆಲ್ತ್ ಸೆಂಟರ್ನ ಸಹಯೋಗದಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರವು ಆಳ್ವಾಸ್ನ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು.
ಕ್ಯಾನ್ಸರ್ನ ರೋಗಲಕ್ಷಣಗಳು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಬೇಕು. ಆಗ ಮಾತ್ರ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಬೇಕಾದ ಚಿಕಿತ್ಸೆಗಳು ಲಭ್ಯವಿದ್ದು, ಆರಂಭಿಕ ಹಂತದಲ್ಲಿ ಚಿಕಿತ್ಸೆಯನ್ನು ನೀಡಿದರೆ, ಪ್ರಾಣಾಪಾಯದಿಂದ ತಪ್ಪಿಸಬಹುದು ಎಂದರು.
ಎಜೆ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಕವಿತಾ ಡಿಸೋಜ ಮಾತನಾಡಿ, ಅತೀ ಹೆಚ್ಚು ಮಹಿಳೆಯರು ಸ್ತನದ ಕ್ಯಾನ್ಸರ್ನಿಂದ ಬಳಲುತ್ತಿದ್ದರೆ, ಗರ್ಭಕಂಠದ ಕ್ಯಾನ್ಸರ್ಗೆ ತುತ್ತಾದವರು ಎರಡನೇ ಸ್ಥಾನದಲ್ಲಿದ್ದಾರೆ. ಇಂತಹ ಮಾರಕ ರೋಗಗಳ ತಪಾಸಣೆಗೆ ನಗರ ಭಾಗಗಳಲ್ಲಿ ವ್ಯವಸ್ಥೆ ಲಭ್ಯವಿದ್ದರೆ, ಗ್ರಾಮೀಣ ಭಾಗದಲ್ಲಿ ಕಂಡುಬರುವುದಿಲ್ಲ. ಕ್ಯಾನ್ಸರ್ಗೆ ತುತ್ತಾದವರಲ್ಲಿ ಆರಂಭದ ಹಂತದಲ್ಲಿ ಯಾವುದೇ ರೀತಿಯ ರೋಗಲಕ್ಷಣ ಕಂಡು ಬರುವುದಿಲ್ಲ. ಆದರೆ ರೋಗ ಲಕ್ಷಣಗಳು ಉಲ್ಬಣವಾದಾಗ ಪ್ರಾಣ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಿಂದಿನ ಕಾಲದಲ್ಲಿ ಚಿಕಿತ್ಸೆಗೆ ಹಣ ಹೆಚ್ಚಾಗಿತ್ತು, ಆದರೆ ಈಗ ಪರಿಣಾಮಕಾರಿಯಾದ ಚಿಕಿತ್ಸೆಗಳು ಕಡಿಮೆ ಮೊತ್ತದಲ್ಲಿ ಲಭಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್ನ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ ಉಪಸ್ಥಿತರಿದ್ದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ಎಂ.ಡಿ ವಿದ್ಯಾರ್ಥಿನಿ ಡಾ.ನಮ್ರತ ಎನ್. ಕುಲಾಲ್ ನಿರೂಪಿಸಿದರು.
ಇಂದಿನ ಶಿಬಿರದಲ್ಲಿ ಒಟ್ಟು 128 ಜನ ಪಾಲ್ಗೊಂಡು, 49 ಜನರು ಪ್ಯಾಪ್ಸ್ಮೀಯರ್ ಟೆಸ್ಟ್ಗೆ ಒಳಗಾದರು. ಶಿಬಿರದಲ್ಲಿ ಅರ್ಬುದ ಖಾಯಿಲೆಯ ತಪಾಸಣೆ, ಸ್ತನ ತಪಾಸಣೆ, ಚುಚ್ಚು ಮದ್ದಿನ ಕುರಿತು ಮಾಹಿತಿ ನೀಡಲಾಯಿತು.
ನಂತರ ಮಂಗಳೂರಿನ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ.ಸಹನಾ, ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ನ ಕುರಿತು ಉಪನ್ಯಾಸ ನೀಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ