2024-25 ನೆ ಸಾಲಿನಲ್ಲಿ 5 ಲಕ್ಷ ಗಿಡ ನೆಡುವ ಯೋಜನೆ
ಮಂಗಳೂರು: ಜನ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಗಿಡ ನೆಟ್ಟು ಬೆಳೆಸುವುದಕ್ಕೆ ಹಾಗೂ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಮೂಲಕ ಗಿಡಗಳ ವಿತರಣೆ ಆರ್ಥಿಕ ನೆರವನ್ನು ಕೃಷಿಕರಿಗೆ ನೀಡಲಾ ಗುತ್ತಿದೆ. 2024-25ನೆ ಸಾಲಿನಲ್ಲಿ ರೈತರಿಗೆ 1,63,000 ಗಿಡಗಳನ್ನು ವಿತರಿಸುವ ಗುರಿಹೊಂದಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ ತಿಳಿಸಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದದಲ್ಲಿ ವಿವರಿಸಿದರು.
ರೈತರಿಗೆ ತಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ 9 ನರ್ಸರಿಗಳಲ್ಲಿ ಮತ್ತು ಸಾಮಾಜಿಕ ಅರಣ್ಯ ವಿಭಾಗದ 5 ನರ್ಸರಿಗಳ ಮೂಲಕ ಸುಮಾರು 30 ವಿವಿಧ ರೀತಿಯ ಸಸ್ಯಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಒಬ್ಬ ರೈತನಿಗೆ ಗರಿಷ್ಠ ಒಂದು ಹೆಕ್ಟೇರ್ ಗೆ 400 ಸಸಿ ವಿತರಿಸುವ ಯೋಜನೆ ಇದೆ.ಕೃಷಿ ಅರಣ್ಯ ವಿಕಾಸ ಯೋಜನೆಯಲ್ಲಿ ಪ್ರತಿ ಗಿಡ ನೆಟ್ಟು ಸಂರಕ್ಷಣೆ ಮಾಡಲು 125 ರೂಪಾಯಿ ಆರ್ಥಿಕ ನೆರವು ರೈತರಿಗೆ ನೀಡಲಾಗುತ್ತದೆ. ನರೇಗಾದಲ್ಲೂ ಗಿಡ ನೆಡಲು ಸಹಾಯ ನೀಡಲಾಗುತ್ತದೆ. ಕಳೆದ ವರ್ಷ 7,79,000 ಗಿಡಗಳನ್ನು ಅರಣ್ಯದಲ್ಲಿ, 35,600 ಗಿಡಗಳನ್ನು ಅರಣ್ಯೇತರ ಕಡೆಗಳಲ್ಲಿ ನೆಡಲಾಗಿದೆ. 4,41,000 ಗಿಡಗಳನ್ನು ರೈತರಿಗೆ ನೀಡಲಾಗಿದೆ. 2024-25 ರಲ್ಲಿ 5ಲಕ್ಷ ಸಸಿ ನೆಡುವ ಯೋಜನೆ ಇದೆ. ಈ ರೀತಿಯ ಪ್ರತಿ ವರ್ಷ ಸುಮಾರು 7ಲಕ್ಷ ಗಿಡಗಳನ್ನು ನೆಡಲಾಗುತ್ತಿದೆ. ಆದರೆ ರಸ್ತೆ ಕಟ್ಟಡ ಇನ್ನಿತರ ಅಭಿವೃದ್ಧಿ ಯೋಜನೆಗಳ ಸಂದರ್ಭದಲ್ಲಿ ಪ್ರತಿ ವರ್ಷ ಸಾಕಷ್ಟು ಮರಗಳ ನಾಶವಾಗುತ್ತದೆ. ಕಳೆದ ವರ್ಷ ಈ ರೀತಿ 1,70,000 ಸಾವಿರ ಮರಗಳನ್ನು ತೆರವುಗೊಳಿಸಬೇಕಾಯಿತು. ಸುಮಾರು 3ಸಾವಿರ ಮರಗಳನ್ನು ಅಪಾಯವನ್ನು ತಪ್ಪಿಸಲು ತೆರವುಗೊಳಿಸ ಬೇಕಾಯಿತು. ಆದರೂ ಶೇ 33ರಷ್ಟು ಅರಣ್ಯವನ್ನು ಸಂರಕ್ಷಿಸುವುದು ಅನಿವಾರ್ಯ ವಾಗಿದೆ ಎಂದು ಮರಿಯಪ್ಪ ಹೇಳಿದರು.
ಕಾಡು ಪ್ರಾಣಿ ಗಳ ಹಾವಳಿ ತಡೆಗೆ ಹಣ್ಣಿನ ಮರಗಳ ತೋಪು:-ಕಾಡು ಪ್ರಾಣಿಗಳು ಮುಖ್ಯವಾಗಿ ಆನೆಗಳ ಹಾವಳಿ ತಡೆಯಲು ಕಾಡಿನಲ್ಲಿ ಅಕೇಶಿಯ ಮರಗಳನ್ನು ತೆರವುಗೊಳಿಸಿ ಹಣ್ಣಿನ ಮರಗಳನ್ನು ಬೆಳೆಸಲಾಗುತ್ತಿದೆ. ಇದುವರೆಗೆ ಸುಮಾರು 900 ಹೆಕ್ಟೇರ್ ಅಕೇಶಿಯ ಮರಗಳ ತೋಪು ತೆರವುಗೊಳಿಸಿ ಮರಗಳನ್ನು ಬೆಳೆಸಲಾಗಿದೆ. ಆನೆಗಳ ತಡೆಗೆ ಸೋಲಾರ್ ಬೇಲಿ ಸೇರಿದಂತೆ ಜನವಸತಿಗೆ ನುಗ್ಗದಂತೆ ತಡೆಗಳನ್ನು ನಿರ್ಮಿಸಲಾಗಿದೆ. ಆನೆಗಳ ಪಥ ಹಲವಾರು ವರ್ಷಗಳಿಂದ ಒಂದೆ ಆಗಿರುತ್ತದೆ. ರಸ್ತೆ ಇತರ ಕಾಮಗಾರಿಯ ಸಂದರ್ಬದಲ್ಲಿ ಈ ಪಥ ಬದಲಾದರೆ ಆನೆಗಳು ಗೊಂದಲಕ್ಕೆ ಒಳಗಾಗಿ ಹೊಸ ದಾರಿ ಹುಡುಕುತ್ತವೆ. ಇದರಿಂದ ಸಾಕಷ್ಟು ಬಾರಿ ಅವುಗಳು ನಾಡಿಗೆ ನುಗ್ಗಿದ ಉದಾಹರಣೆಗಳಿವೆ.ಕಳೆದ 2023-24ರಲ್ಲಿ ಆನೆ ದಾಳಿಯಿಂದ ನಾಲ್ಕು ಜೀವ ಹಾನಿಯಾಗಿದೆ. 2024-25ರಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಆನೆ, ಕಡವೆ, ಮಂಗಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಅವರಿಗೆ ಪರಿಹಾರ ನೀಡುವ ಯೋಜನೆ ಇದೆ ಎಂದು ಡಿಸಿಎಫ್ ತಿಳಿಸಿದರು.
ಚಾರಣ ಪ್ರಿಯರಿಗೆ ಆನ್ ಲೈನ್ ಮೂಲಕ ಬುಕ್ ಮಾಡಿ ಹೋಗಲು ಅವಕಾಶವಿದೆ. ಅರಣ್ಯದ ಕಾನೂನಿನಲ್ಲಿ ನೀಡಲಾದ ವಿನಾಯಿತಿಗಳ ಹೊರತಾಗಿ ಇನ್ನಿತರ ಚಟುವಟಿಕೆಗಳಿಗೆ ಮಾತ್ರ ಇಲಾಖೆ ಅನುಮತಿ ನೀಡುವುದಿಲ್ಲ. ಅರಣ್ಯ ಸಂರಕ್ಷಣೆಯ ಹಿನ್ನೆಲೆಯಲ್ಲಿ ಈ ನಿಯಮ ರೂಪಿಸಲಾಗಿದೆ ಎಂದು ಡಿಸಿಎಫ್ ಎ. ಮರಿಯಪ್ಪ ವಿವರಿಸಿದರು.
ಮಾಧ್ಯಮ ಸಂವಾದದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಪ್ರೊಬೆಷನರಿ ಐಎಫ್ ಎಸ್ ಅಧಿಕಾರಿ ಅಕ್ಷಯ್ ಪ್ರಕಾಶ್ಕರ್, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತ ರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಸಾಂಕೇತಿಕವಾಗಿ ಗಿಡಗಳನ್ನು ವಿತರಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ