ಪ್ರಾಚೀನ ಭಾರತದ ಸಾಂಸ್ಕ್ರತಿಕ ಇತಿಹಾಸದ ಕಾಲಘಟ್ಟದಲ್ಲಿ ಕ್ರಿ. ಪೂ. ಐದು- ಆರನೇ ಶತಮಾನವು ವಿಭಿನ್ನ, ವೈಶಿಷ್ಟ್ಯ ಪೂರ್ಣ ಮತ್ತು ವೈವಿಧ್ಯಮಯವಾಗಿ ಗುರುತಿಸಲ್ಪಟ್ಟಿದೆ. ಅಂತಹ ಕಾಲಘಟ್ಟದಲ್ಲಿ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಅನಿಷ್ಟ ಪದ್ಧತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಇದೇ ಸಮಕಾಲೀನ ಜಗತ್ತಿನಲ್ಲಿಯೂ ಸಾಮಾಜಿಕ - ಧಾರ್ಮಿಕ ವ್ಯವಸ್ಥೆಯಲ್ಲಿ ದುರಾಚರಣೆಗಳು, ದುಷ್ಟ ಪದ್ಧತಿಗಳು ಇದ್ದವು. ಇಂತಹ ಸಾಮಾಜಿಕ-ಧಾರ್ಮಿಕ ವ್ಯವಸ್ಥೆಗಳ ಸುಧಾರಣೆಗಾಗಿ ಹಲವು ದೇಶಗಳಲ್ಲಿ ಹಲವು ಧಾರ್ಮಿಕ ಸುಧಾರಕರು ಕಂಡು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿಯೂ ಧಾರ್ಮಿಕ ಸುಧಾರಣಾ ವಿಚಾರವಾಗಿ ಹೊಸ ಧರ್ಮಗಳು ಪ್ರಾರಂಭವಾದವು. ವರ್ಧಮಾನ ಮಹಾವೀರನು ಜೈನ ಧರ್ಮವನ್ನು, ಗೌತಮ ಬುದ್ಧನು ಬೌದ್ಧ ಧರ್ಮವನ್ನು ಸ್ಥಾಪಿಸಿದರು. ಇವರು ಸಮಾಜ ಮತ್ತು ಧರ್ಮವನ್ನು ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ಅವಲೋಕಿಸಿದಾಗ ಕೆಲವೊಂದು ನ್ಯೂನ್ಯತೆಗಳು ಇರುವುದು ಕಂಡು ಬಂದವು. ಸಾಮಾಜಿಕ-ಧಾರ್ಮಿಕ ಅನಿಷ್ಟಗಳನ್ನು ಈ ಸುಧಾರಕರು ಖಂಡಿಸಿದರು. ಯಾಗಗಳಲ್ಲಿ ನಡೆಸುತ್ತಿದ್ದ ಪ್ರಾಣಿಬಲಿ, ನರಬಲಿ ಮುಂತಾದ ಕರ್ಮಕಾಂಡಗಳನ್ನು ಈ ಸುಧಾರಕರು ವಿರೋಧಿಸಿದರು. ಸರಳವಾದ ಮಾರ್ಗದಲ್ಲಿ ಜೀವನದಲ್ಲಿ ಮುಕ್ತಿ ಪಡೆಯುವುದು ಹೇಗೆಂದು ತಿಳಿಸಿಕೊಟ್ಟರು. ಜ್ಞಾನಮಾರ್ಗ ಮತ್ತು ಅಹಿಂಸಾ ಮಾರ್ಗಗಳ ಮೂಲಕ ಮೋಕ್ಷವನ್ನು ಸಂಪಾದಿಸುವ ಸರಳ ಮಾರ್ಗಗಳನ್ನು ತಿಳಿಸುವ ಮೂಲಕ ಹೊಸ ಧಾರ್ಮಿಕ ವ್ಯವಸ್ಥೆಯಲ್ಲಿ ನವ ಚೈತನ್ಯವನ್ನು ಉಂಟು ಮಾಡಲು ಕಾರಣಕರ್ತರಾದರು. ಅಂತಹ ಧಾರ್ಮಿಕ ಸುಧಾರಕರಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಗೌತಮ ಬುದ್ಧ ಪ್ರಮುಖರೆನಿಸಿದ್ದಾರೆ.
ಏಷ್ಯಾದ ಬೆಳಕು, ಜ್ಞಾನದ ಜ್ಯೋತಿ, ಜ್ಞಾನ ಸಿಂಧು ಎಂದು ಗೌತಮ ಬುದ್ಧನನ್ನು ಕರೆಯಲಾಗುತ್ತದೆ. ಪ್ರತೀ ವರ್ಷವೂ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮೆಯೆಂದು ಆಚರಿಸಲಾಗುತ್ತದೆ. ಗೌತಮ ಬುದ್ಧನು ನೇಪಾಳದ ಕಪಿಲವಸ್ತುವಿನ ದೊರೆ ಶುದ್ಧೋಧನ ಮತ್ತು ಮಾಯಾದೇವಿಯವರ ಮಗನಾಗಿ ಲುಂಬಿನಿ ವನದಲ್ಲಿ ಕ್ರಿ. ಪೂ.563 ರಲ್ಲಿ ಜನಿಸಿದನು. ಇವನ ಮೊದಲ ಹೆಸರು ಸಿದ್ಧಾರ್ಥ ಎಂಬುದಾಗಿತ್ತು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಸಿದ್ಧಾರ್ಥನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ 'ಗೌತಮ'ನೆಂದು ಕರೆಯಲ್ಪಡುತ್ತಾನೆ. ತಂದೆ ಶುದ್ಧೋಧನನು ತನ್ನ ಮಗ ಸಿದ್ಧಾರ್ಥನು ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾನೆ. ತಂದೆಯಾದ ರಾಜ ಶುದ್ದೋಧನನು ಸಿದ್ಧಾರ್ಥನಿಗೆ ಅಗತ್ಯವಾದ ಶಿಕ್ಷಣವನ್ನು ಮನೆಯಲ್ಲಿಯೇ ವ್ಯವಸ್ಥೆಗೊಳಿಸಿದನು. ಕಾಲಗಳಿಗನುಗುಣವಾಗಿ ಅರಮನೆಗಳನ್ನು ಕಟ್ಟಿಸಿ ಸಿದ್ಧಾರ್ಥನ ಬಾಲ್ಯ, ಯೌವನದ ಜೀವನ ಸಾಗಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದನು. ಇದಕ್ಕೆ ಕಾರಣವೇನೆಂದರೆ ಸಿದ್ಧಾರ್ಥನು ಹೊರ ಜಗತ್ತನ್ನು ನೋಡಬಾರದು, ಒಂದುವೇಳೆ ಹೊರ ಜಗತ್ತನ್ನು ನೋಡಿದರೆ, ಆತನ ಮನಸ್ಸು ಪರಿವರ್ತನೆಯಾಗಿ ಓರ್ವ ಜ್ಯೋತಿಷ್ಯಿಯ ಹೇಳಿಕೆಯಂತೆ ಎಲ್ಲಿ ತನ್ನ ಮಗನು ಸಂನ್ಯಾಸಿಯಾಗಿಬಿಡುವನೋ ಎಂಬ ಭಯದಿಂದ ವಿವಿಧ ಅರಮನೆಗಳನ್ನು ನಿರ್ಮಾಣ ಮಾಡಿಸಿದ್ದನು. ತಂದೆಗೆ ಮಗನಾದ ಸಿದ್ಧಾರ್ಥನು ಸಂನ್ಯಾಸಿಯಾಗುವುದು ಇಷ್ಟವಿರಲಿಲ್ಲ ಬದಲಿಗೆ ರಾಜನಾಗಬೇಕೆಂದು ಬಯಸಿದನು. ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಅದೊಂದು ದಿನ ವಿಹಾರಕ್ಕೆಂದು ತನ್ನ ಸೇವಕ ಚೆನ್ನನೊಂದಿಗೆ ಹೊರಟಾಗ, ಒಬ್ಬ ರೋಗಿ, ಒಬ್ಬ ವೃದ್ಧ ಒಂದು ಶವ, ಸನ್ಯಾಸಿಯನ್ನು ನೋಡಿ ಜೀವನದ ಬಗ್ಗೆ ಜಿಗುಪ್ಸೆಗೊಂಡು ಬಹಳ ಕಾಲ ಚಿಂತಿತನಾದನು. ಸಿದ್ಧಾರ್ಥನ ಚಿಂತೆಯನ್ನು ದೂರ ಮಾಡುವ ಸಲುವಾಗಿ ತಂದೆ ಶುದ್ಧೋಧನನು ಸಿದ್ಧಾರ್ಥನಿಗೆ ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ವಿವಾಹವನ್ನು ಮಾಡಿಸುತ್ತಾನೆ. ಗೌತಮನಿಗೆ 'ರಾಹುಲ' ಎಂಬ ಮಗನು ಹುಟ್ಟಿದನು. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ಅರಿವಾಗುವಾಗುತ್ತದೆ. ಈ ದುಃಖಕ್ಕೆ ಕಾರಣವೇನು? ದುಃಖದ ಮೂಲ ಯಾವುದು? ದುಃಖ ಮನುಷ್ಯನಿಗೆ ಏಕೆ ಬರುತ್ತದೆ ? ದುಃಖ ನಿವಾರಣೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಗಳು ಅನೇಕ ದಿನರಾತ್ರಿಗಳ ಕಾಲ ಕಾಡುತ್ತಲಿತ್ತು. ಎಷ್ಟೇ ಚಿಂತಿಸಿದರೂ ಉತ್ತರವಂತೂ ಸಿಗುವುದೇ ಇಲ್ಲ. ಅಷ್ಟಲ್ಲದೇ ಸಿದ್ಧಾರ್ಥನಿಗೆ ಸಂಸಾರ ಬಂಧನ ಬೇಕಾಗಿರಲಿಲ್ಲ. ಜೀವನದ ಬಗ್ಗೆ ಜಿಗುಪ್ಸೆಗೊಂಡ ಸಿದ್ಧಾರ್ಥನು ಹೆಂಡತಿ ಮಗನನ್ನು ಬಿಟ್ಟು ಗಯಾ ಎಂಬಲ್ಲಿಗೆ ಬಂದು ಅಲ್ಲಿ ಬೋಧಿವೃಕ್ಷದ ಕೆಳಗೆ ಸತತ ಆರು ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ಬೋದೀ ವೃಕ್ಷದ ಕೆಳಗೆ ತಪಸ್ಸು ಮಾಡುವಾಗ ಬುದ್ಧನಿಗೆ ಜ್ಞಾನೋದಯವಾಯಿತು. ಆದ್ದರಿಂದಲೇ ಸಿದ್ಧಾರ್ಥನನ್ನು ಅಂದಿನಿಂದ ಬುದ್ಧ ಎಂದು ಸಂಬೋಧಿಸಲಾಗಿದೆ. ಆಸೆಯೇ ದುಃಖದ ಮೂಲ ಎಂದು ಅರಿತನು ಮತ್ತು ಅದನ್ನೇ ಪ್ರತಿ ಪಾದಿಸಿದನು. ಮುಂದೆ ಗೌತಮ ಬುದ್ಧನೆಂದೆನಿಸಿ, ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಗೌತಮ ಬುದ್ಧನು 'ಬೌದ್ಧ ಧರ್ಮದ ಸ್ಥಾಪಕ' ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು ಪಾಲಿ ಭಾಷೆಯಲ್ಲಿ "ಧಮ್ಮ" ಎಂದು ಕರೆದನು.
ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು - ಇದುವೇ ಬುದ್ಧ ಧಮ್ಮ ಆಗಿದೆ. ತನ್ನ ಬೋಧನೆಯಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡು ಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಎಂದಿದ್ದಾನೆ. ತನ್ನಂತೆ ಎಚ್ಚರದ ಸ್ಥಿತಿಯನ್ನು ಅಂದರೆ ಜ್ಞಾನೋದಯವನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನವನ್ನಂತೂ ಮಾಡುತ್ತಾ ಸಾಧನೆ ಮಾಡಬೇಕು ಎಂದಿದ್ದಾನೆ. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನೂ ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ ಶಿಷ್ಯರಿಗೆ ಸೂಚಿಸಿದ. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧ ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. "ಆಸೆಯೇ ದುಃಖಕ್ಕೆ ಮೂಲ" ಎಂಬುದು ಅವನ ಪ್ರಸಿದ್ಧ ತತ್ವವಾಗಿದೆ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ ಈ ಗೌತಮ ಬುದ್ಧ. ಗೌತಮ ಬುದ್ಧನು ಮುಂದಿನ ನಲವತ್ತೈದು ವರ್ಷಗಳ ಕಾಲ ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು. ಇವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತಸದಿಂದಿರು ವುದು. ಅವುಗಳೆಂದರೆ,
ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೇನೆ.)
ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೇನೆ.)
ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೇನೆ.)
ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುವುದು ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.
ಪರಿಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಟಕಗಳನ್ನು ಬೋಧಿಸಿ ದ್ದಾರೆ. ಅವುಗಳೆಂದರೆ: 1. ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾದ ಗ್ರಂಥವಾಗಿದೆ. 2. ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ , ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ. 3. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು , ಮೂಲ ತತ್ವಗಳನ್ನು ವಿಶದೀಕರಿಸಿದ ಗ್ರಂಥವಾಗಿದೆ.
ಉತ್ತಮ ನಡೆ, ಉತ್ತಮ ನುಡಿ, ಉತ್ತಮ ನೋಟ, ಉತ್ತಮ ನಿರ್ಧಾರ, ಉತ್ತಮ ಕೆಲಸ, ಉತ್ತಮ ಜ್ಞಾನ, ಉತ್ತಮ ಚಿಂತನೆ ಇವುಗಳೇ ಬುದ್ದ ನೀಡಿದ ಅಷ್ಠಾಂಗ ಮಾರ್ಗಗಳು. ಇವುಗಳನ್ನು ಆಜೀವ ಪರ್ಯಂತ ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯ ದುಃಖ ತೊರೆದು ‘ನಿರ್ವಾಣ’ ಸ್ಥಿತಿಗೆ ತಲುಪುತ್ತಾನೆ ಎಂಬುದು ಬುದ್ದನ ಸಂದೇಶವಾಗಿದೆ. ತನ್ನ ಕಾಲಘಟ್ಟದಲ್ಲಿದ್ದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿವ್ಯವಸ್ಥೆಯ ನಿರ್ಮೂಲನೆ ಹಾಗೂ ಸ್ತ್ರೀ ವಿಮೋಚನೆಗಾಗಿ ಬುದ್ಧನು ಬಹಳಷ್ಟು ಪ್ರಯತ್ನಿಸಿದನು. ಈ ಎರಡು ಪ್ರಮುಖ ವಿಚಾರಗಳನ್ನು ಕುರಿತು ಮನುಷ್ಯ ಚಿಂತನೆಯಲ್ಲಿ ಕ್ರಾಂತಿಯಾಗಬೇಕೆಂದು ತಿಳಿಸಿದನು. ಆ ಕಾಲದಲ್ಲಿದ್ದ ಪೂರ್ವಗ್ರಹ ಪೀಡಿತ ಕಲ್ಪನೆಗಳು, ಕಂದಾಚಾರ, ಮೂಢನಂಬಿಕೆಗಳು ಮುಂತಾದವುಗಳಿಂದ ಬಳಲುತ್ತಿದ್ದ ಸಮಾಜವೊಂದನ್ನು ನೈತಿಕ ಬಲ ಹಾಗೂ ಮೌಲ್ಯ ಪರಿಶುದ್ಧತೆಯ ಸಮಾಜವನ್ನಾಗಿ ಪರಿವರ್ತಿಸಲು ಶ್ರಮಿಸಿದ ಬುದ್ದ ಮಾನವೀಯ ಅಂತಃಕರಣವುಳ್ಳ ಚೇತನವಾಗಿದ್ದಾನೆ. ಬುದ್ಧನು ದೇವನಲ್ಲ, ದೇವದೂತನೂ ಅಲ್ಲ, ಮತ್ತು ಈತನು ದೈವಾಂಶ ಸಂಭೂತನೂ ಅಲ್ಲ ಆದರೆ ತನ್ನ ಸ್ವಸಾಮಾರ್ಥ್ಯದಿಂದ, ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು. ಮದ್ಯಮ ಮಾರ್ಗದ ಮೂಲಕ ಮಿತ್ರತ್ವ, ಕರುಣೆ, ದಯೇ , ಸಮಾನತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು. ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ಸಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು.
ಬುದ್ಧನು 'ಧಮ್ಮ'ವನ್ನು ಜೀವನ ಮಾರ್ಗವೆಂದು ಹೇಳಿದ್ದಾನೆ. ಜೀವನವನ್ನು ಪರಿಶುದ್ದವಾಗಿ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾದ್ಯ. ಧಮ್ಮ ವೆಂದರೆ ಇತರೆ ಧರ್ಮಗಳಲ್ಲಿರುವಂತೆ ಅದು ತತ್ವಶಾಸ್ತ್ರವಲ್ಲ. ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ಸತ್ಯದ ಬೆಳಕು ಚೆಲ್ಲುತ್ತದೆ. ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿರ್ವಾಣ ಹೊಂದಬಹುದು. ಬುದ್ಧನ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಧಮ್ಮ ಮಾರ್ಗವನ್ನು ಉಪಾಸಕರು ಮತ್ತು ಬೌದ್ಧ ಭಿಕ್ಕುಗಳು ಇಬ್ಬರೂ ಅನುಸರಿಸಲು ತಿಳಿಸಿದನು. ಈ ರೀತಿಯಲ್ಲಿ ಧರ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿ ತತ್ವೋಪದೇಶಗಳನ್ನು ಜಗತ್ತಿಗೆ ಸಾರಿದನು. ದರೋಡೆಕೋರನಾದ ಅಂಗುಲಿಮಾಲ ನಂಥವರೂ ಬುದ್ಧನ ಶಿಷ್ಯರಾದರು. ಮಗುವನ್ನು ಕಳೆದುಕೊಂಡಿದ್ದ ಕಿಸಾಗೋತಮಿಗೆ ಸಾವು ಅನಿವಾರ್ಯ ಎಂಬ ಅರಿವು ಮೂಡಿಸಿದನು. ಶಾಂತಿ ಮತ್ತು ಅಹಿಂಸೆಗಳು ಬೌದ್ಧ ಧರ್ಮದ ಪ್ರಮುಖ ವಿಚಾರಗಳಾಗಿವೆ. ಬೌದ್ಧ ಧರ್ಮವು ಇಂದಿಗೂ ವಿಶ್ವದ್ಯಾಂತ ಸಂಘಟಿತವಾಗಿ ಬರ್ಮಾ, ಥೈಲ್ಯಾಂಡ್, ಶ್ರೀಲಂಕಾ, ಕಾಂಬೋಡಿಯಾ, ಲಾವೋಸ್, ಚಿತ್ತಗಾಂಗ್, ಜಪಾನ್, ಚೀನಾ, ಟಿಬೆಟ್ ದೇಶಗಳಲ್ಲಿ, ಇಂದಿಗೂ ತನ್ನ ಮೂಲ ಸ್ವರೂಪದಲ್ಲಿ ಇದೆ. ಬೌದ್ಧ ಭಿಕ್ಕು ಮತ್ತು ಭಿಕ್ಕಿಣಿ ಸಂಘಗಳು ಅಮೆರಿಕಾ, ರಷ್ಯ, ಕೆನಡ, ಫ್ರಾನ್ಸ್ , ಜರ್ಮನಿ ಮುಂತಾದ ರಾಷ್ಟ್ರಗಳಲ್ಲಿ ಧಮ್ಮದ ಉನ್ನತಿಗಾಗಿ ಸೇವೆ ಮಾಡುತ್ತಿವೆ. ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದಲ್ಲಿ ಉಂಟಾದ ಸಾವುನೋವುಗಳನ್ನು ಕಂಡು ದುಃಖ ತಪ್ತನಾಗಿ ಬೌದ್ದಮತಾವಲಂಬಿಯಾದ. ಅಹಿಂಸೆಯೇ ಪರಮಧರ್ಮ ಎಂದು ಇಡೀ ಜಗತ್ತಿಗೆ ಸಾರುವ ಮೂಲಕ ಬೌದ್ಧ ಧರ್ಮ ಪ್ರಸಾರ ಮಾಡಿದನು. ಭಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರರೂ ತಮ್ಮ ಜೀವಿತದ ಕೊನೆಗಾಲದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಇಂತಹ ಮಹಾನ್ ಮಾನವತಾವಾದಿ, ಮಹಾನ್ ಚೇತನ ಭಗವಾನ್ ಬುದ್ಧ ಜನಿಸಿದ್ದು, ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಪಡೆದದ್ದು ಮತ್ತು ತನ್ನ ಎಂಭತ್ತನೇ ವಯಸ್ಸಿನಲ್ಲಿ ಕುಶಿನಾರದಲ್ಲಿ ಪರಿನಿರ್ವಾಣ ಹೊಂದಿದ್ದು ಈ ಮೂರು ಘಟನೆಗಳು ವೈಶಾಖ ಶುಕ್ಲ ಪೂರ್ಣಿಮೆಯಂದೇ ಆಗಿರುವುದು ವಿಶೇಷ. ಗೌತಮ ಬುದ್ಧನು ವಿಷ್ಣುವಿನ ಅವತಾರ ಗಳಲ್ಲೊಂದು ಎಂಬ ನಂಬಿಕೆಯೂ ಇದೆ. ಗೌತಮ ಬುದ್ಧನ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳೋಣ. ಸ್ವಾಸ್ಥ್ಯ ಸಮಾಜದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳೋಣ. ವೈಚಾರಿಕತೆಯನ್ನು ಮೈಗೂಡಿಸಿಕೊಂಡು ಉತ್ತಮ ಸಾಧಕರಾಗೋಣ. ಬುದ್ಧ ಪೂರ್ಣಿಮೆಯ ಆಚರಣೆಯ ಮೂಲಕ ವಿಶ್ವದ ಸಂದಿಗ್ಧ ಮತ್ತು ಸಂಕಷ್ಟದ ಪರಿಸ್ಥಿತಿಗಳ ನಿವಾರಣೆಗೆ ಸರ್ವರೂ ಪ್ರಾರ್ಥಿಸೋಣ.
ಕೆ.ಎನ್.ಚಿದಾನಂದ. ಹಾಸನ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ