ಹರಿಭಕ್ತಿ ಸಾಹಿತ್ಯದ ವಿಶಿಷ್ಟ ಸಂಪುಟ: 'ಬೆಟ್ಟದೊಡೆಯನ ಭಕ್ತಾಗ್ರೇಸರ ತಾಳ್ಲಪಾಕ ಅನ್ನಮಾಚಾರ್ಯರು'

Upayuktha
0

ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ನೂತನ ಕೃತಿ 

ಪ್ರಕಾಶಕರು: ಶ್ರೀವಾರಿ ಫೌಂಡೇಶನ್, ಬೆಂಗಳೂರು 

ವೈಶಾಖ ಶುದ್ಧ ಹುಣ್ಣಿಮೆ ಮೇ 23 ಅನ್ನಮಾಚಾರ್ಯರ ಜಯಂತಿ 




ತಿರುಮಲ ಒಡೆಯ ಶ್ರೀನಿವಾಸನ ಮಹಿಮೆಯನ್ನು ಕೊಂಡಾಡದ ಭಕ್ತರಿಲ್ಲ. ತಮಿಳು ಆಳ್ವಾರರು ಕನ್ನಡದ ಹರಿದಾಸರು  ಅಂತೆಯೇ ತಿರುಪತಿ ವೆಂಕಟರಮಣನ ಅನನ್ಯ ಭಕ್ತರಾಗಿ ಸಾವಿರಾರು ಕೀರ್ತನೆಗಳನ್ನು ರಚಿಸಿ ಸುವಿಖ್ಯಾತರಾಗಿರುವ ತಾಳ್ಳಪಾಕಂ ಅನ್ನಮಾಚಾರ್ಯರು ತೆಲುಗು ಭಾಷೆಯಲ್ಲಿ ಪ್ರಮುಖರು.


ಭಕ್ತಿ ಪರವಶತೆಯಿಂದ ಅವರು ತಾರುಣ್ಯದಲ್ಲೇ ತಿರುಪತಿಯಲ್ಲಿ ನೆಲೆಸಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕೀರ್ತನೆಗಳನ್ನು ರಚಿಸುತ್ತ ಜೀವಮಾನವಿಡಿ ಸಂಕೀರ್ತನೆಯಲ್ಲಿ ತೊಡಗಿದ ಭಕ್ತಾ ಗ್ರೇಸರರು.


ಇವರ ಮನೆತನದ ವಿವರಗಳು ತಿರುಪತಿಯಲ್ಲಿ ಲಭ್ಯವಿರುವ ತಾಮ್ರದ ಶಾಸನಗಳಿಂದ ತಿಳಿದು ಬರುತ್ತದೆ. ವೆಂಕಟೇಶ್ವರನ ಅಂಕಿತದಲ್ಲೇ ಅವರೆಲ್ಲ ಕೀರ್ತನೆಗಳು ರಚನೆಯಾಗಿವೆ. ನಾಲಾಯರ ದಿವ್ಯ ಪ್ರಬಂಧಗಳಲ್ಲಿ ಅದ್ವಿತೀಯ ಪಾಂಡಿತ್ಯ ಹೊಂದಿದ್ದ ಅನ್ನಮಾಚಾರ್ಯರು ಸಾಹಿತ್ಯ ಮತ್ತು ಸಂಗೀತದಲ್ಲಿ ಅನುಪಮ ಪರಿಶ್ರಮ ಹೊಂದಿದ್ದ ವರಕವಿ, ಶ್ರೇಷ್ಠ ವಾಗ್ಗೇಯಕಾರರು. ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯ ತಾಳಪಾಕಂ ಗ್ರಾಮದವರು. 


ಅನ್ನಮಾಚಾರ್ಯರು ಭಜನಾ ಪದ್ಧತಿಗೆ ಮೂಲಪುರುಷರೆನ್ನಬಹುದು. ತಾವು ರಚಿಸಿದ ಕೀರ್ತನೆಗಳನ್ನು ಸಮೂಹದಲ್ಲಿ ಹಾಡುವ ಕ್ರಮವನ್ನು, ವೆಂಕಟೇಶ್ವರನನ್ನು ಭಕ್ತಿಯಿಂದ ಸ್ತುತಿಸಿ, ಅವನ ಲೀಲೆಗಳನ್ನು ಪರಿಪರಿಯಾಗಿ ವರ್ಣಿಸಿರುವ ಹಾಡಿನ ರೂಪದ ಕೀರ್ತನೆಗಳನ್ನು ವೆಂಕಟೇಶ್ವರನ ಸನ್ನಿಧಿಯಲ್ಲಿ ವೃಂದಗಾನದಲ್ಲಿ ಸಮರ್ಪಿಸುವ ಪದ್ಧತಿಯನ್ನು ಆರಂಭಿಸಿದ್ದು ಇಂದಿಗೂ ನಡೆದು ಬಂದಿದೆ.


ದಿನಕ್ಕೊಂದು ಕೀರ್ತನೆ ರಚಿಸುವುವನೆಂದು ಕಂಕಣತೊಟ್ಟು ಸದಾ ಹರೀಸ್ಮರಣೆ ಯಲ್ಲಿ ಭಕ್ತಿ ಸಾಮ್ರಾಜ್ಯದಲ್ಲಿ ವಿಹರಿಸುತ್ತಿದ್ದ ಅನ್ನಮಾಚಾರ್ಯರು, ಕಾಲಿಗೆ ಗೆಜ್ಜೆ ಕಟ್ಟಿ ನಡೆಯುತ್ತಾ ಹಾಡು ಕಟ್ಟಿ ಹಾಡುತ್ತಾ ದೂರದ ಊರುಗಳಿಂದ ಮನದ ಕಾಮನೆಗಳ ಹೊರೆಹೊತ್ತು ದಣಿವಾಗಿ ಆಯಾಸಗೊಂಡು ಗುಡಿಗೆ ಆಗಮಿಸುತ್ತಿದ್ದ, ಚಂಚಲವಾದ ಮನಸ್ಸನ್ನು ಸ್ಥಿರಗೊಳಿಸಲು ಮಂತ್ರಮಯವನ್ನಾಗಿಸಲು ದೈವೀಕರಿಸಲು ಬಂದ ಭಕ್ತರುಗಳಿಗೆ ಭಜನೆ ಪ್ರಕಾರದ ಸ್ತುತಿ- ಕೀರ್ತನೆಗಳನ್ನು ಹೇಳಿಕೊಡುವುದರ ಮೂಲಕ ದೇವಾಲಯದಲ್ಲಿ ದೈವಿಕ ವಾತಾವರಣವನ್ನು ನೆಲೆಗಳಿಸುತ್ತಿದ್ದರು.



ಧಾರ್ಮಿಕ ಉನ್ಮಾದವು ಆಧ್ಯಾತ್ಮಿಕ ಹರ್ಷಾ ವೇಷ ಹಾಗೂ ಕಾವ್ಯದ ಗುಣೋತ್ಕರ್ಷ ಗಳೆಲ್ಲವೂ ಸಮ್ಮಿಳಿತವಾಗಿ ಭಕ್ತಿಗೀತೆಗಳ ಸ್ವರೂಪದಲ್ಲಿ ಸಂಕೀರ್ತನೆಗಳ ರೂಪದಲ್ಲಿ ಆನಂದಾಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತದೆ. ಧಾರ್ಮಿಕ ಅನುಭಾವದ ಪರಧಿಗಳಾದ ಭಗವಂತನಲ್ಲಿ ಅನುರಕ್ತಿ ಅವನನ್ನು ಅಗಲಲಾರದ ವಿರಹ ವೇದನೆ ಹಾಗೂ ಅಂತ್ಯದಲ್ಲಿ ಪುನರ್ ಮಿಲನದ ತಲ್ಲಿನತೆಗಳು ಈ ಸಂಕೀರ್ತನೆಗಳಲ್ಲಿ ತೋರಿಕೊಳ್ಳುತ್ತದೆ.


ವಾಕ್ ಮತ್ತು ಗೇಯ ಹಾಡಲು ಅನುವಾಗುವ ಸಾಹಿತ್ಯ ರಚನೆಕಾರನೇ ವಾಗ್ಗೇಯಕಾರ. ಅನ್ನಮಾಚಾರ್ಯರು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಕಂಡಷ್ಟು ತಣಿಯದ ತೃಪ್ತಿ ಬಣ್ಣಿಸಿದಷ್ಟು ತೀರದ ಚಪಲ, ಅಸಂಖ್ಯಾ ಕೀರ್ತನೆಗಳಲ್ಲಿ ವಿಷ್ಣುವಿನ ಮಹಾತ್ಮವನ್ನು ಹಾಡುತ್ತ ಆತನ ಹಿರಿಮೆಯನ್ನು ಹೊಗಳುತ್ತ ಪೂರ್ಣ ಶರಣಾಗತಿ ಸಿದ್ದಾಂತವನ್ನು ಬೋಧಿಸಿರುತ್ತಾರೆ.


ಕೃತಿ ಪರಿಚಯ 


ಜಗತ್ತಿನ ಅತ್ಯಂತ ಶ್ರೀಮಂತ ದೇವಸ್ಥಾನವಾದ ತಿರುಮಲ ತಿರುಪತಿ ದೇವಸ್ಥಾನವನ್ನು ತಿಳಿಯದವರೆ ಇಲ್ಲ. ಪರಬ್ರಹ್ಮನ  ಅತಿ ಪ್ರಖ್ಯಾತಿ ಪಡೆದ ರೂಪ ಶ್ರೀನಿವಾಸ ಭೂಲೋಕದ ವೈಕುಂಠ ಪುಣ್ಯ ತಮ ಏಳು ಬೆಟ್ಟಗಳಲ್ಲಿ ಒಂದಾದ ತಿರುಮಲ ದಲ್ಲಿ ನೆಲೆಸಿರುವ ವೆಂಕಟೇಶ್ವರನ ವಕ್ಷ ಸ್ಥಳದಲ್ಲಿ ಲಕ್ಷ್ಮಿಯನ್ನು ಧರಿಸುವುದರಿಂದ ಅವನು 'ಶ್ರೀನಿವಾಸ'. ಭವಿಷ್ಯೋತರ ಪುರಾಣದಲ್ಲಿ ಶ್ರೀನಿವಾಸನ ಕುರಿತಾದ ಮಾಹಿತಿ ಉಪಲಬ್ದವಿದ್ದು ಪದ್ಮಾವತಿಯೊಡನೆ ವಿವಾಹ ಮಾಡಿಕೊಂಡ ಸುಪ್ರಸಿದ್ಧವಾದ' ಶ್ರೀನಿವಾಸ ಕಲ್ಯಾಣ'ದ ಕಥಾನಕ ಕುರಿತು ಆರಂಭದಲ್ಲಿ ಬೆಳಕು ಚೆಲ್ಲಿದ್ದಾರೆ.


ಅನ್ನಮಾಚಾರ್ಯರು ಬಿಟ್ಟು ಹೋದ ಸಂಕೀರ್ತನ ಭಂಡಾರವನ್ನು ಅಮೂಲ್ಯ ಆಸ್ತಿಯೆಂದು ಬರೆದಿರುವುದು ಅತ್ಯಂತ ಅರ್ಥಗರ್ಭಿತ ಹಾಗೂ ಸಾರ್ವಕಾಲಿಕ ಸತ್ಯ. ಅನ್ನಮಾಚಾರ್ಯರು ಬರೆದಿರುವುದು  32 ಸಾವಿರ ಸಂಕೀರ್ತನೆಗಳು ಆದರೆ ನಮಗೆ ದೊರೆತದ್ದು 14,358 ಕೀರ್ತನೆಗಳು ಮಾತ್ರ ಎಂದು ತಿಳಿಸುತ್ತಾ ನಾವು ಎಷ್ಟು ಕೃತಿಗಳನ್ನು ಕಳೆದುಕೊಂಡಿದ್ದೇವೆ ಎಂಬ ಕಟು ಸತ್ಯವನ್ನು ನಮ್ಮ ಗಮನಕ್ಕೆ ತಂದಿದ್ದಾರೆ.


ಕಡಿಮೆ ಪುಟವಿದ್ದರೂ ಇಲ್ಲಿ ಅಡಕವಾಗಿರುವ ಪ್ರತಿಪುಟದಲ್ಲೂ ವಿಶ್ವದ ಮೂಲೆ ಮೂಲೆಗಳಿಂದ ಕೋಟ್ಯಾಂತರ ಭಕ್ತ ಬೃಂದವನ್ನು ತನ್ನ ಸನ್ನಿಧಿಗೆ ಬರಮಾಡಿಕೊಳ್ಳುವ ವೆಂಕಟೇಶ್ವರ ಸ್ವಾಮಿಯ ದೈವಿಕ ಲೀಲೆಗಳನ್ನು ಕನ್ನಡದ ಓದುಗರೊಂದಿಗೆ ಹಂಚಿಕೊಳ್ಳುವ ಹಾಗೂ ಬಾಲಾಜಿಯ ಪರಮ ಭಕ್ತರಾದ ಆದ್ಯ ತೆಲುಗು ಕವಿ ಎನಿಸಿಕೊಂಡಿರುವ ಅನ್ನಮಾಚಾರ್ಯರ ಅಪಾರ ಸಾಹಿತ್ಯ ರಾಶಿಯ ರಮಣೀಯತೆಯ ಸಾರವನ್ನು ಉಣಬಡಿಸುವ ಧಾರ್ಮಿಕ ಜಗತ್ತಿನ ಹಲವಾರು ಮಜಲುಗಳ ದರ್ಶನವನ್ನು ಮನೋಜ್ಞ ರೀತಿಯಲ್ಲಿ ಲೇಖಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರು ಮಾಡಿ ಕೊಟ್ಟಿರುತ್ತಾರೆ. ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಕಾರದೊಡನೆ ಶ್ರೀವಾರಿ ಫೌಂಡೇಶನ್ ಎಸ್ ವೆಂಕಟೇಶಮೂರ್ತಿರವರ ಪ್ರೇರಣೆಯಂತೆ ಹೊರ ಬಂದಿರುವ ಈ ಕೃತಿಯಲ್ಲಿ ಸಾಂದರ್ಭಿಕ ಚಿತ್ರಗಳ ಅಳವಡಿಕೆ, ಉತ್ತಮ ಪುಟ ವಿನ್ಯಾಸ ಆಧ್ಯಾತ್ಮಿಕ ಜಿಜ್ಞಾಸೆಯ ನಡುವೆಯೂ ಸರಾಗ ಓದಿಸಿಕೊಂಡು ಹೋಗುವ ಶೈಲಿಗಳಿಂದಾಗಿ ಈ ಕಿರು ಕೈಪಿಡಿ ಗಮನ ಸೆಳೆಯುತ್ತದೆ.

ಪ್ರತಿಗಳಿಗೆ ಸಂಪರ್ಕಿಸಿ 9739369621 


-ಪದ್ಮಾವತಿ ಕೆ ವಿ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top