ಡೆಂಬಳ ಬಾಲಕೃಷ್ಣ ಭಟ್ ನುಡಿನಮನ ಕಾರ್ಯಕ್ರಮ
ಮಾಣಿಲ: ಬದುಕಿನಲ್ಲಿ ಪ್ರತಿಯೊಂದಕ್ಕೂ ಕೊರಗುತ್ತಾ ಕುಳಿತುಕೊಳ್ಳದೇ ವೃತ್ತಿಬದ್ಧತೆಯಿಂದ, ಜನರನ್ನು ಪ್ರೀತಿಸುತ್ತಾ ಬದುಕುವುದೇ ನಿಜವಾದ ಸಾರ್ಥಕ್ಯ. ಡೆಂಬಳ ಬಾಲಕೃಷ್ಣ ಭಟ್ ಇವರು ಹಾಗೆ ಬದುಕಿ ಆದರ್ಶ ಅಧ್ಯಾಪಕರಾಗಿ, ಮಕ್ಕಳಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿದ ಧೀಮಂತ ವ್ಯಕ್ತಿತ್ವದವರು ಎಂದು ಸಾಮಾಜಿಕ ಮುಖಂಡ ಮುರುವ ನಡುಮನೆ ಮಹಾಬಲ ಭಟ್ ಹೇಳಿದರು.
ಅವರು ಭಾನುವಾರ ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ಆವರಣದಲ್ಲಿ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಡೆಂಬಳ ಬಾಲಕೃಷ್ಣ ಭಟ್ ಇವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.
ಸಭೆಯಲ್ಲಿ ಯಕ್ಷಗಾನ ಅರ್ಥಧಾರಿ ಹರೀಶ್ ಬಳಂತಿಮೊಗರು ಮಾತನಾಡಿ ಸಮಾಜಕ್ಕೆ ಡೆಂಬಳ ಮನೆತನದ ಕೊಡುಗೆ ಅಪಾರ. ಯಕ್ಷಗಾನ ಕ್ಷೇತ್ರಕ್ಕೆ ಡೆಂಬಳ ಮನೆ ಪೋಷಕ ಕೇಂದ್ರವಾಗಿತ್ತು. ಡೆಂಬಳ ಬಾಲಕೃಷ್ಣ ಭಟ್ಟರು ವಿಷ್ಣುಮೂರ್ತಿ ಮಕ್ಕಳ ಮೇಳವನ್ನು ರೂಪಿಸಿ ಶಾಲಾ ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿಯನ್ನು ದೀರ್ಘಕಾಲ ಉಳಿಸಿದರು ಎಂದರು.
ಸಾಮಾಜಿಕ ಮುಖಂಡರಾದ ವಿಷ್ಣು ಕನ್ನಡಗುಳಿ ಮಾತನಾಡಿ ಶಿಸ್ತು ಮತ್ತು ಪ್ರೀತಿ ಶಿಕ್ಷಕರಲ್ಲಿರಬೇಕಾದ ಗುಣ. ಬಾಲಕೃಷ್ಣ ಮಾಸ್ಟ್ರು ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ಪ್ರೀತಿಸಿದರು ಎಂದರು. ಮುಖಂಡ ಎಸ್. ನಾರಾಯಣ ಅವರು ದೈನ್ಯತೆಯಿಲ್ಲದ ಬದುಕು ಅನಾಯಾಸದ ಮರಣ ಶ್ರೇಷ್ಟ ಎನ್ನುತ್ತಾರೆ. ಬಾಲಕೃಷ್ಣ ಮಾಸ್ಟ್ರು ಆ ಮಾತಿಗೆ ಗೌರವ ಬರುವಂತೆ ಬದುಕಿದರು ಎಂದರು. ಮಾಣಿಲ ಶಾಲೆಯ ಮುಖ್ಯ ಶಿಕ್ಷಕ ನರಸಿಂಹ ಭಟ್ ಮತ್ತಿತರರು ನುಡಿನಮನ ಸಲ್ಲಿಸಿದರು.
ಬಾಲಕೃಷ್ಣ ಭಟ್ ಇವರ ಮಗಳು ಡಾ. ದಿವ್ಯಶ್ರೀ ಡೆಂಬಳ ಮಾತನಾಡಿ ಅಪ್ಪ ಸ್ವಾಭಿಮಾನದ ಬದುಕನ್ನು ಬಾಳಿದವರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು. ಸಮಾಜದಲ್ಲಿನ ಅಪ್ರಾಮಾಣಿಕತೆ, ಕೃತಘ್ನತೆಯನ್ನು ಕಂಡಾಗ ಬೇಸರಿಸುತ್ತಿದ್ದರು. ಶಿಕ್ಷಕರಾಗಿ ಅವರು ಶಿಸ್ತಿನ ಸಿಪಾಯಿಯಾಗಿದ್ದರು. ತನಗೆ ಶಿಕ್ಷಕಿಯಾಗಲು ಅಪ್ಪನೇ ಪ್ರೇರಣೆ ಮಾದರಿ ಎಂದರು.
ಸಭೆಯನ್ನು ಹಿರಿಯ ಧಾರ್ಮಿಕ, ಸಾಮಾಜಿಕ ಮುಖಂಡ ದೇಲಂತಮಜಲು ಗಣೇಶ್ ಭಟ್ ಸಂಯೋಜಿಸಿದ್ದರು. ಮುರುವ ಬಾಲಕೃಷ್ಣ ಮಾಣಿಲ್ತಾಯ, ಡೆಂಬಳ ಶಂಭುಶರ್ಮ, ಮಹೇಶ್, ನವ್ಯಶ್ರೀ ಡೆಂಬಳ, ಧನಂಜಯ ಕುಂಬ್ಳೆ, ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment