ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಐ.ಕ್ಯೂ.ಎ.ಸಿ. ಮತ್ತು ರಾಜ್ಯಶಾಸ್ತ್ರವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿ.ವಿ.ಯ ನೂತನ ಶಿಕ್ಷಣ ನೀತಿ 2020ರ ಭಾರತ ಮತ್ತು ಭಾರತ ಸಂವಿಧಾನದ ನೂತನ ಪಠ್ಯಕ್ರಮದ ಕುರಿತಾದ ಕಾರ್ಯಾಗಾರ ನಡೆಸಲಾಯಿತು.
ಕಾರ್ಯಾಗಾರಕ್ಕೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಚಾಲನೆಯಿತ್ತ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಪ್ರತಿಯೊಬ್ಬ ಭಾರತೀಯನೂ ತನ್ನ ಬದುಕಿನಲ್ಲಿ ಅರ್ಥೈಸಿಕೊಳ್ಳಬೇಕಾದ ಮತ್ತು ಅದರಂತೆ ನಡೆದುಕೊಳ್ಳಬೇಕಾದ ಮಹಾನ್ ಗ್ರಂಥವೇ ಸಂವಿಧಾನ ಮತ್ತು ಸಂವಿಧಾನ ಸಮಾಜದ ಸಮಸ್ತ ಜನವರ್ಗಗಳನ್ನು ಪ್ರತಿನಿಧಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಶಕೀಲಾ ಹೆಗ್ಡೆ ಮತ್ತು ಪ್ರಶಾಂತ್ ನೀಲಾವರ ಬರೆದ ಭಾರತ ಮತ್ತು ಭಾರತ ಸಂವಿಧಾನ ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಂ ತೋಳ್ಪಾಡಿ ಭಾರತ ಸಂವಿಧಾನ ರೂಪುಗೊಳ್ಳುವಲ್ಲಿ ಪ್ರಭಾವ ಬೀರಿದ ಸಮಾಜ ಸುಧಾರಣಾ ಚಳುವಳಿ, ರಾಷ್ಟ್ರೀಯ ಚಳುವಳಿ, ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಮಹತ್ವವನ್ನು ತಿಳಿಸುತ್ತಾ ಸಂವಿಧಾನ ಕೇವಲ ನಿಯಮಗಳ ಚೌಕಟ್ಟಷ್ಟೇ ಅಲ್ಲದೆ ಅದು ಆಧುನಿಕ ಸೆಕ್ಯುಲರ್ ಧರ್ಮಶಾಸ್ತ್ರ ಅಂದರೆ ಸರ್ವಧರ್ಮ ಸಮಭಾವದ ಧರ್ಮಗ್ರಂಥ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಪ್ರೊ. ಪ್ರವೀಣ್ ಕೆ. ಸಂವಿಧಾನ ಕುರಿತಾಗಿ ಇನ್ನಷ್ಟು ಕಾರ್ಯಾಗಾರಗಳನ್ನು ನಡೆಸುವ ಅವಶ್ಯಕತೆಯಿದೆ ಎಂದರು. ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ಶೈಕ್ಷಣಿಕ ಸಲಹೆಗಾರರಾದ ಡಾ. ಪ್ರಸಾದ್ ರಾವ್ ಎಂ., ಪುಸ್ತಕ ಪ್ರಕಟಿಸಿದ ಯುನೈಟೆಡ್ ಏಜನ್ಸೀಸ್ನ ಕೃಷ್ಣನ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಉಪನ್ಯಾಸಕರಾದ ಆರತಿ, ಮಲ್ಲಿಕಾ ಉಪಸ್ಥಿತರಿದ್ದರೆ ಕಾರ್ಯಾಗಾರ ಅಯೋಜಿಸಿದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ ಕಾರ್ಯಾಗಾರದ ಔಚಿತ್ಯ ತಿಳಿಸುತ್ತಾ ಅತಿಥಿಗಳನ್ನು ಸ್ವಾಗತಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ. ಗಣೇಶ್ ಶೆಟ್ಟಿ ವಂದನಾರ್ಪಣೆಗೈದರೆ, ಕಾರ್ಯಕಾರಿ ಸಮಿತಿ ಸದಸ್ಯ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯ ಹಾಗೂ ವಿವಿಧ ಕಾಲೇಜುಗಳಿಂದ ಭಾರತ ಸಂವಿಧಾನ ಬೋಧಿಸುವ ಉಪನ್ಯಾಸಕರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ