ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಹೆಮ್ಮೆಯ ಅಂಗಸಂಸ್ಥೆಯಾದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇದೀಗ ತನ್ನ 5ನೇ ವರ್ಷದತ್ತ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ, ತನ್ನ ಮುಡಿಗೆ ಇನ್ನೊಂದು ಹಿರಿಮೆಯ ಗರಿಯನ್ನು ಸೇರಿಸಿಕೊಂಡಿದೆ. ತನ್ನ ಹಲವಾರು ಚಟುವಟಿಕೆಗಳಿಂದ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದು, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಕೀರ್ತಿ ಪತಾಕೆಯನ್ನು ಹಾರಿಸುವುದರಲ್ಲಿ ಯಶಸ್ವಿಯಾಗಿದೆ.
ನಮ್ಮ ಈ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ (ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ಮುಳಿಯ ದಂಪತಿ ಪುತ್ರಿ) ಇವರು ಆಫ್ರಿಕಾದ ಟುನಿಷಿಯದ "ಟುನಿಷಿಯ ಅಸೋಸಿಯೇಷನ್ ಫಾರ್ ದಿ ಫ್ಯೂಚರ್ ಆಫ್ ಸೈನ್ಸ್ & ಟೆಕ್ನಾಲಜಿ (ATAST- Tunisia Association for the future of Science & Technology)" ಇವರಿಂದ ನಡೆಸಲ್ಪಡುವ I-FEST² ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ, ತನ್ನ "ಕಿಡ್ಡಿ ಸೇಫ್ ಕನೆಕ್ಟ್ (Kiddi Safe Connect)" ಎಂಬ ಯೋಜನೆಯ ಮೂಲಕ 'ಟಾಪ್ ಟೆನ್ ಪ್ರೆಸೆಂಟೇಷನ್ ಗೆ ಅವಕಾಶ ಪಡೆದು, ಗ್ರಾಂಡ್ ಚಿನ್ನದ ಪದಕ (Grand gold medal) ಬಹುಮಾನಕ್ಕೆ ಇವರು ಭಾಜನರಾಗಿರುತ್ತಾರೆ.
ಇವರು ವಿವೇಕಾನಂದ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಪ್ರಯೋಗಾಲಯದ ಬೋಧಕರಾದ ವೆಂಕಟೇಶ್ ಮತ್ತು ಮಂಗಳೂರಿನ ಟೆಕ್ನೋಮಸ್ ಸಂಸ್ಥೆಯ ಸ್ಥಾಪಕರಾದ ಅಶ್ವಿನ್ ಕಲ್ಲಾಜೆ ಹಾಗೂ ಶಾಲಾ ವಿಜ್ಞಾನ ಶಿಕ್ಷಕಿ ರಂಜಿತ ಇವರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಸಿದ್ಧಪಡಿಸಿರುತ್ತಾರೆ ಎಂಬುದಾಗಿ ಶಾಲಾ ಪ್ರಕಟಣೆ ತಿಳಿಸಿರುತ್ತದೆ.
ಅತ್ಯುತ್ತಮ ಶ್ರೇಣಿಯಲ್ಲಿ ಚಿನ್ನದ ಪದಕವನ್ನು ಪಡೆದು ತನ್ನ ಶಾಲೆಯ ಹಾಗೂ ನಾಡಿನ ಕೀರ್ತಿಯನ್ನು ಎಲ್ಲೆಡೆ ಹರಡಿ ಹಿಂತಿರುಗಿದ ಇವರನ್ನು ಶಾಲಾ ಆಡಳಿತ ಮಂಡಳಿಯವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ವಿದ್ಯಾಸಂಸ್ಥೆಯ ವತಿಯಿಂದ ಶಾಲೆಯಲ್ಲಿ, ಪೋಷಕರೊಂದಿಗೆ ಮೆರವಣಿಗೆಯಲ್ಲಿ ಕರೆ ತಂದು ಸಾಂಪ್ರದಾಯಿಕ ರೀತಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ, ಸಂಚಾಲಕರಾದ ಭರತ್ ಪೈ, ಸದಸ್ಯೆ ಶಂಕರಿ ಶರ್ಮ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಂಧು ವಿ.ಜಿ, ಬೋಧಕ ಮತ್ತು ಬೋಧಕೇತರ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ