ಹಾಸನ: ಶಿಕ್ಷಕರು ನಿರಂತರವಾಗಿ ಕಲಿಯುತ್ತಿರಬೇಕು ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಸದಾ ಪ್ರೇರಕರಾಗಿರಬೇಕು. ಇಂದಿನ ದಿನಮಾನಗಳಲ್ಲಿ ನಮ್ಮ ಮಾತೃಭಾಷೆಯ ಜೊತೆ ಜೊತೆಗೆ ಇಂಗ್ಲಿಷ್ ಭಾಷೆಯ ಅವಶ್ಯಕತೆಯೂ ಶಿಕ್ಷಕರಿಗೆ ಇದೆ ಅಲ್ಲದೇ ಸಂಪರ್ಕ ಭಾಷೆಯಾದ ಇಂಗ್ಲಿಷ್ ಕಲಿಕೆ ಅನಿವಾರ್ಯ ಹಾಗೂ ಅಗತ್ಯವೆನಿಸಿದೆ ಎಂದು ಹಾಸನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಆದ ಹೆಚ್.ಕೆ. ಪುಷ್ಪಲತಾ ಹೇಳಿದರು.
ಸರಿಸುಮಾರು ಎರಡೂವರೆ ವರ್ಷಗಳಿಂದ ಪ್ರತಿ ಶನಿವಾರ ಡಯಟ್ ವತಿಯಿಂದ ನಡೆಸಲಾಗುತ್ತಿರುವ ಆನ್ಲೈನ್ ವಿಶೇಷ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಮಾರ್ಗದರ್ಶಕ ರಾಗಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಇಂಗ್ಲಿಷ್ ಭಾಷೆಯ ಬಳಕೆಯನ್ನು ಕಲಿಕೆಯನ್ನು ಅರ್ಥಸಹಿತ ರೂಪಿಸಿಕೊಳ್ಳ ಬೇಕು. ಆಗ ಭಾಷೆಯ ಸರಳತೆ ನಮಗೆ ಅರ್ಥವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಇಂದಿನ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎನ್. ಚಿದಾನಂದ ರವರು ಅತ್ಯುತ್ತಮವಾಗಿ ಸರಣಿ ತರಗತಿಗಳನ್ನು ನಿರ್ವಹಣೆ ಮಾಡಿದ್ದು ಇಂಗ್ಲಿಷ್ ಭಾಷಾ ಕಲಿಕೆಯನ್ನು ಅತ್ಯಂತ ಸರಳವಾಗಿ ಸುಲಭವಾಗಿ ಕಲಿಸುವ ವಿಧಾನಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಿಕೊಡುತ್ತಾರೆ ಎಂದು ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಸಂಪನ್ಮೂಲ ವ್ಯಕ್ತಿಯಾಗಿ ಆನ್ ಲೈನ್ ಕ್ಲಾಸ್ ನ್ನು ನಿರ್ವಹಣೆ ಮಾಡುತ್ತ ಶಿಕ್ಷಕರನ್ನು ಕುರಿತು ತರಗತಿ ಕೋಣೆಯೊಂದು ವಿಶ್ವದ ಮಾದರಿಯಾಗಿದ್ದು ಇಲ್ಲಿ ಪ್ರತೀ ಮಗುವೂ ವಿಭಿನ್ನತೆಯಿಂದ ಕೂಡಿರುತ್ತದೆ. ಪ್ರತೀ ಮಗವಿನಲ್ಲಿಯೂ ಕಲಿಕಾ ಸಾಮರ್ಥ್ಯ ವಿಶಿಷ್ಠವಾಗಿಯೇ ಇರುತ್ತದೆ. ಪ್ರತೀ ಮಗುವೂ ವೈವಿಧ್ಯಮಯ ಆಲೋಚನೆಗನ್ನು ಮಾಡುತ್ತದೆ. ಇದನ್ನೆಲ್ಲಾ ಅರ್ಥಮಾಡಿಕೊಂಡು ಶಿಕ್ಷಕರಾದ ನಾವು ಮಕ್ಕಳಿಗೆ ಅನುಕೂಲಿಸಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯ ಕಲಿಕೆಯಲ್ಲಿ ಮತ್ತು ಬಳಕೆಯಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಇಂಗ್ಲಿಷ್ ಭಾಷಾ ಕಲಿಕೆಗೆ ಸಂಬಂಧಿಸಿದಂತೆ ವ್ಯಾಕರಣಾಂಶಗಳನ್ನು ಅನುಕೂಲಿಸಿ ಕಲಿಸಬೇಕು. ಇಂದಿನ ತರಗತಿಯಲ್ಲಿ ವಿವಿಧ ಕಾಲಗಳಲ್ಲಿ ಯಸ್ ಅಥವಾ ನೋ ( YES OR NO ) ಪ್ರಶ್ನೆಗಳನ್ನು ಅರ್ಥಗರ್ಭಿತವಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಉದಾಹರಣೆಗಳೊಂದಿಗೆ ತಿಳಿಸಿದರು. ಭಾಷೆಯ ಪರಿಶುದ್ಧತೆಯನ್ನು ಮಗು ಕಲಿಯಲು ಇಂಗ್ಲಿಷ್ ನ ಈ ಅಧ್ಯಾಯಗಳು ಬಹಳ ಪ್ರಮುಖವಾಗಿದೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟತೆ, ನಿರ್ದಿಷ್ಟತೆ ಹಾಗೂ ನಿರರ್ಗಳತೆಯು ಹೆಚ್ಚು ಪರಿಣಾಮಕಾರಿ ಕಲಿಕೆಯನ್ನು ಉಂಟು ಮಾಡುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಲೋಕೇಶ್ ರವರು ತಾಂತ್ರಿಕವಾಗಿ ಆಯೋಜನೆ ಮಾಡುತ್ತಾ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ನಲಿಕಲಿ ತರಗತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳ ನಿರ್ವಹಣೆ ಮತ್ತು ಮೌಲ್ಯಮಾಪನ ವಿಧಾನಗಳನ್ನು ಕುರಿತು ತಿಳಿಸಿದರು. ಶಿಕ್ಷಕಿ ಭವ್ಯ ರವರು ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕರಾದ ಮಮತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಶಿಕ್ಷಕಿ ಹೊನ್ನಾಂಬಿಕಾ ರವರು ಪ್ರಾರ್ಥಿಸಿದರು ಮತ್ತು ಶಿಕ್ಷಕಿ ಮಮತಾ ಎಲ್ಲರನ್ನು ವಂದಿಸಿದರು. ರಾಜ್ಯದ ವಿವಿಧ ತಾಲ್ಲೂಕುಗಳು ಹಾಗೂ ಜಿಲ್ಲೆಗಳಿಂದ ಶಿಕ್ಷಕರು ಆನ್ ಲೈನ್ ಟೆಲಿಗ್ರಾಂ ಗ್ರೂಪ್ ನಲ್ಲಿ ಭಾಗವಹಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ